Tuesday, March 28, 2023

ಸ್ತ್ರೀಯರು ಮನುಕುಲದ ಜ್ಯೋತಿಯಾಗಿ ಪ್ರಜ್ವಲಿಸಲಿ_ರೂಪ ಕುಮಾರಸ್ವಾಮಿ


 



ಮೈಸೂರು : ಸ್ತ್ರೀಯರು ಮನುಕುಲದ ಜ್ಯೋತಿಯಾಗಿ ಪ್ರಜ್ವಲಿಸಬೇಕು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು. ನಾದಹಂಸಿನಿ ಭಜನಾಸಂಘ ಮೈಸೂರಿನ ಜೆ.ಪಿ.ನಗರದ ಪುಟ್ಟರಾಜಗವಾಯಿ ಯೋಗಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹನ್ನೊಂದನೆಯ ವರ್ಷದ ವಾರ್ಷಿಕೋತ್ಸವ ಮತ್ತು ವಿಶ್ವ ಮಹಿಳಾದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹೆಣ್ಣನ್ನು ಕೀಳಾಗಿ ಕಾಣುತ್ತಿದ್ದಂತಹ ಕಾಲಘಟ್ಟದಲ್ಲಿ ಹನ್ನೆರಡನೆಯ ಶತಮಾನ ಸ್ತ್ರೀಯರಿಗೆ ಪ್ರಥಮಬಾರಿಗೆ ಸ್ವಾತಂತ್ರ್ಯ ನೀಡುವುದರ ಮೂಲಕ ಮಹಿಳೆಯರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ವೈಚಾರಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಇಪೊತ್ತೊಂದನೆಯ ಶತಮಾನದಲ್ಲಿ ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿ  ಸಾಧನೆ ಮಾಡುವುದರ ಮೂಲಕ ಅಸಮಾನತೆಯನ್ನು ತೊಡೆದು ಹಾಕಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅನೇಕ ವಚನಕಾರರು ಮತ್ತು ಪುರುಷ ಕವಿಗಳು ತಮ್ಮ ವಚನಗಳಲ್ಲಿ, ಕವಿತೆಗಳಲ್ಲಿ ಮಹಿಳೆಯರನ್ನು ಕವಿತಾ ವಸ್ತುವನ್ನಾಗಿ ಮಾಡಿಕೊಂಡು ಅವರ ಕಾರ್ಯಚಟುವಟಿಕೆಗಳನ್ನು ಸ್ತುತಿಸಿದ್ದಾರೆ. ಸಿದ್ಧರಾಮೇಶ್ವರರು ಹೆಣ್ಣನ್ನು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದರೆ ಜಿ.ಎಸ್. ಶಿವರುದ್ರಪ್ಪರವರು ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂದಿದ್ದಾರೆ. ನಾದಹಂಸಿನಿ ಭಜನಾತಂಡ ನೂರಾರು ಮಹಿಳೆಯರಿಗೆ ಉಚಿತವಾಗಿ ವಚನಗಾಯನ, ಅಡುಗೆ ತಯಾರಿಕೆ, ಬ್ಯುಟಿಷಿಯನ್ ತರಬೇತಿ, ಕಸೂತಿ ತರಬೇತಿ ನೀಡುತ್ತಿದ್ದು ಸ್ವಾವಲಂಬಿಯಾಗಲು ಕಾರಣವಾಗುತ್ತಿರುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದಲ್ಲಿ ನಾದಹಂಸಿನಿ ಭಜನಾ ಸಂಘದ ಅಧ್ಯಕ್ಷೆ ಉಮಾ ಮಹಾದೇವಸ್ವಾಮಿ, ಜೆ.ಪಿ.ನಗರ ೬೩ನೇ ವಾರ್ಡ್ ನಗರಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್, ಸಂಸ್ಥೆಯ ನಿರ್ದೇಶಕರುಗಳಾದ ಮಂಜುಳ ಶಿವಕುಮಾರ್, ಶಿವಕುಮಾರಿ, ಶೀಲಾದೇವಿ, ಮೈನಾವತಿ ಬಸವಣ್ಣ, ಭ್ರಮರಾಂಭ, ಸುಜಯಾಂಭ, ವಿಜಯಾಂಭ, ನಂದಿನಿ, ಮಂಜುಳ ಶಶಿ ಸದಸ್ಯರುಗಳಾದ ಸುಶೀಲ ನಟರಾಜ್, ಶ್ವೇತ, ಸುಜಾತ ಪ್ರಕಾಶ್, ಕೆಂಪಮ್ಮಣ್ಣಿ, ಮಂಜುಳ ಎಸ್, ಶೋಭ, ರಾಜೇಶ್ವರಿ, ಸುನಿತಾ, ಲತಾ, ಸವಿತ, ಸುವರ್ಣ, ಶಿಲ್ಪ, ಮಮತ, ಸವಿತ, ಆಕಿಲಾ ಉಪಸ್ಥಿತರಿದ್ದರು.

No comments:

Post a Comment