Sunday, January 15, 2023

ಸಿದ್ಧೇಶ್ವರ ಶ್ರೀಗಳು

 *ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು*


 ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ. ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಎಂಬ ಹತ್ತು ಹಲವಾರು ನಾಮಾವಳಿಗಳಿಂದ ಜಗಪ್ರಸಿದ್ದರಾಗಿದ್ದರು, ಹಾಗೂ ಅಪಾರ ಭಕ್ತ ಸಾಗರವನ್ನು ಹೊಂದಿದ್ದರು. ಜೈನ ಧರ್ಮದಂತೆ ಆಹಾರ ಮತ್ತು ಜಲವನ್ನು ತ್ಯಾಗ ಮಾಡಿ ವೈಕುಂಠ ಏಕಾದಶಿಯಂದು ಇಚ್ಛಾಮರಣ ಹೊಂದಿದ್ದರು.


*ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಜನನ*

24 ಅಕ್ಟೋಬರ್ 1940

ಬಿಜ್ಜರಗಿ, ವಿಜಯಪುರ, ಕರ್ನಾಟಕ

ಮರಣ

02 ಜನವರಿ 2023

ಜ್ಞಾನಯೋಗಾಶ್ರಮ, ವಿಜಯಪುರ

ವೃತ್ತಿ

ಸ್ವಾಮೀಜಿ

ರಾಷ್ಟ್ರೀಯತೆ

ಭಾರತೀಯ


*ಜನನ*

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1940 ಅಕ್ಟೋಬರ್ 24 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. ತಂದೆ ಹೆಸರು ಓಗೆಪ್ಪಗೌಡ ಸಿದ್ದಗೊಂಡ ಪಾಟೀಲ್, ತಾಯಿ ಹೆಸರು ಸಂಗಮ್ಮ ಓಗೆಪ್ಪಗೌಡ ಪಾಟೀಲ್. 


*ವಿದ್ಯಾಭ್ಯಾಸ*

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ಏಳನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. 'ಬೆಳೆಯುವ ಪೈರು ಮೊಳಕೆಯಲ್ಲೇ' ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.


*ಅಧ್ಯಾತ್ಮ*

ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಮಹಾಬಲೇಶ್ವರ ಆರ್ ಕ್ಯಾಸನೂರು ಇವರ ಹೊಸ ಜ್ಞಾನ - ತತ್ವಗಳನ್ನ ಬಹುವಾಗಿ ಮೆಚ್ಚಿಕೊಂಡಿದ್ದರು


ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು.


*ಪ್ರವಚನ*

ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು.


ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಾರೆ. ಸೂಜಿಗಲ್ಲಿನಂತಹ ಸೆಳೆತ, ಅವರು ಭಾಷೆ,ಧಾಟಿ,ಪ್ರದಪ್ರಯೋಗ,ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುವರು. ಜೊತೆಗೆ ಕಲ್ಲು,ಮಣ್ಣು,ಗಿಡ,ಮರ,ಹೂ,ಹಕ್ಕು,ಪಕ್ಷಿ,ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂಬುದನ್ನು ಅವರು ವಿವರಿಸುವ ರೀತಿ ಅದ್ಬುತವಾದುದು. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ, ಅವರ ಹೆಸರಾಗಲಿ ಇರುವುದಿಲ್ಲ ಎಂದರೆ ಆಶ್ಚರ್ಯವಲ್ಲವೆ? ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಎಂಬ ದಾಸ ವಾಣಿಯಂತೆ ನನ್ನದೇನಿದೆ,ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು.ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತ ಇರುವ ಅಪರೂಪದ ಯೋಗಿಗಳು ಶ್ರೀ ಸಿದ್ದೇಶ್ವರರು.


*ಸಾಹಿತ್ಯ*

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು. ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ಧೇಶ್ವರರರು ಕೊಲ್ಹಾಪುರದಲ್ಲಿ ಶ್ರೀ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ "ಸಿದ್ದಾಂತ ಶಿಖಾಮಣಿ "ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು.ಆಗ ಅವರಿಗೆ ಕೇವಲ 19 ವರ್ಷ ಮಾತ್ರ ಆಗಿತ್ತೆಂಬುದು ಗಮನಾರ್ಹ. ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ದಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ವಿಜಯಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಙಾನದಿಗಂತವನ್ನು ವಿಸೃತಗೊಳಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ,ಯೋಗಸೂತ್ರ,ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಙಾನವನ್ನು ಬಳಸಿಕೊಂಡು ಬೋದಪ್ರದ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯ.


ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಸ್ವಾಮಿಜಿಯು ದೈವಭಕ್ತಿ ಎಂಬ ನೈಜ ಮತ್ತು ನೇರ ಉದಾಹರಣೆಯಾಗಿದೆ. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತವೆ ಮತ್ತು ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. ಮಾನವರು ಜೀವಾಧಾರಕರಾಗಿದ್ದು, ವಯಸ್ಸಿನ ಕೆಳಗೆ ದೈವಿಕರಾಗಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು. ಅವರ ಗುಣಗಳನ್ನು ವಿವರಿಸುವಲ್ಲಿ ಪದಗಳು ಕಡಿಮೆಯಾಗಬಹುದು. ಅವರ ಅನಿಸಿಕೆಗಳನ್ನು ಅನಕ್ಷರಸ್ಥರಿಂದಲೂ ಚೆನ್ನಾಗಿ ಅರ್ಥಪೂರ್ಣವಾಗಿ ಅರ್ಥೈಸಿಕೊಳ್ಳಬಹುದು. ಅವರು ಬಹಳ ಅರ್ಥಮಾಡಿಕೊಳ್ಳುವ ಮತ್ತು ಆನಂದಿಸುವ ರೀತಿಯಲ್ಲಿ ಬಹಳ ಕಠಿಣ ವಿಷಯಗಳನ್ನು ಬೋಧಿಸುತ್ತಾರೆ. ಉತ್ತರ ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಸ್ವಾಮೀಜಿಯವರು ವರ್ಷಾದ್ಯಂತ ಪ್ರಯಾಣಿಸಿರುವ ಸ್ಥಳಗಳಾದ್ಯಂತ ಮತ್ತು ಅವರ ವೀಡಿಯೊಗಳನ್ನು ಆನ್ಲೈನ್ನಲ್ಲಿ ಅವರು ಪ್ರಪಂಚದಾದ್ಯಂತ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ಅವನ ಉಪಸ್ಥಿತಿಯಲ್ಲಿ ಅವನ ಪ್ರಾಮುಖ್ಯತೆಯನ್ನು ಮಾತ್ರ ತಿಳಿಯಬಹುದಾಗಿದೆ. ಅವರು ಕರ್ನಾಟಕದ ವಿಜಯಜಪುರದ ಜ್ಞಾನ ಯೋಗಶ್ರಮದ ಸಂಸ್ಥಾಪಕರಾಗಿದ್ದಾರೆ. ತನ್ನ ಪದಗಳ ಮೂಲಕ ಮತ್ತು ಸಂತೋಷದಿಂದ ಸಾವಿರಾರು ಜನರ ಜೀವನವನ್ನು ಮಾಡುವ ಶ್ರೇಯ ಅವರಿಗೆ ಸಲ್ಲುತ್ತದೆ.


*ಉಪನ್ಯಾಸ*

ಅವರ ಉಪನ್ಯಾಸ ಸರಣಿಯ "ಬದುಕುವದು ಹೇಗೆ," ನಾವು ಹೇಗೆ ಬದುಕಬೇಕು / ದಾರಿ ಮಾಡಿಕೊಳ್ಳಬೇಕು "ಲಕ್ಷಾಂತರ ಭಾರತೀಯರನ್ನು ರೂಪಾಂತರಿಸಿದೆ. ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷದ ಬಗ್ಗೆ ಪ್ರಾಯೋಗಿಕ ಪಾಠಗಳನ್ನು ಜನರು ಮೆಚ್ಚಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಲಮ ಪ್ರಭುನ ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ದಾರೆ. ಅವರು ವಚನಗಳ ಬಗ್ಗೆ ಹೊಸ ಬೆಳಕನ್ನು ಎಸೆದಿದ್ದಾರೆ. ವಿಶ್ವದ ತತ್ವಜ್ಞಾನಿಗಳ ಹೋಲಿಕೆಯು ಒಂದು ನಿರ್ದಿಷ್ಟ ವಿಷಯದ ದೃಷ್ಟಿಕೋನಕ್ಕೆ ಒಳಪಡಿಸಿದಾಗ ಅವರ ಉಪನ್ಯಾಸದ ಅತ್ಯುತ್ತಮ ಹೊರಬಂದಿದೆ. ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದಾರೆ. ಲೀಡ್ನ ನೆಮ್ಮದಿಯ ಜೀವನವು ಉದಾಹರಣೆಗೆ! ತತ್ವಜ್ಞಾನಿ, ಆಲೋಚಕ ಸ್ವಾಮಿಜಿ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ವಿತರಿಸಿದ್ದಾರೆ. ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಆಧ್ಯಾತ್ಮಿಕತೆಗೆ ಮೀಸಲಿಟ್ಟಿದ್ದಾರೆ ಮತ್ತು ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳ ಮೂಲತೆ, ಚಿಂತನೆ, ಅಭಿವ್ಯಕ್ತಿ ಮತ್ತು ಚಿಂತನೆಗಾಗಿ ಹೆಸರುವಾಸಿಯಾಗಿದೆ. ಶ್ರೀ ಸ್ವಾಮೀಜಿ ಅವರು ತಮ್ಮ ಪಂಥಜಿಯವರ "ಪಥಜಲಿಯ ಯೋಗಶಾತ್ರ" ವನ್ನು ಮಹಾನ್ ಪಾಂಡಿತ್ಯಪೂರ್ಣ ಪಾಂಡಿತ್ಯದೊಂದಿಗೆ ಸಂಪಾದಿಸಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಸರಳತೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಅವರ ಹೋಲಿಸಲಾಗದ ಶಾಂತ ಮತ್ತು ಸಂಯೋಜನೆ ನಿಜವಾಗಿಯೂ ಪ್ರೇಕ್ಷಕರು ಉತ್ಸಾಹದಿಂದ ಮತ್ತು ಪ್ರಬುದ್ಧರಾಗಿದ್ದಾರೆ. ಅವರ ಪ್ರವಚನವು ಅವರ ನಿಖರತೆ ಮತ್ತು ನುಗ್ಗುವಿಕೆಗೆ ಹೆಸರುವಾಸಿಯಾಗಿದೆ.


*ಜೀವನ ಶೈಲಿ*

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದಾರೆ. ತತ್ವಜ್ಞಾನಿ, ಆಲೋಚಕ ಸ್ವಾಮಿಜಿ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನಗಳನ್ನು ವಿತರಿಸಿದ್ದಾರೆ. ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಆಧ್ಯಾತ್ಮಿಕತೆಗೆ ಮೀಸಲಿಟ್ಟಿದ್ದಾರೆ ಮತ್ತು ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವೇದಾಂತ, ಗೀತಾ, ಯೋಗಸೂತ್ರ, ವಚನಗಳ ಕುರಿತಾದ ಶ್ರೀ ಸ್ವಾಮಿಜಿಯವರ ಉಪನ್ಯಾಸಗಳು ಅವುಗಳ ಮೂಲತೆ, ಚಿಂತನೆ, ಅಭಿವ್ಯಕ್ತಿ ಮತ್ತು ಚಿಂತನೆಗಾಗಿ ಹೆಸರುವಾಸಿಯಾಗಿದೆ. ಶ್ರೀ ಸ್ವಾಮೀಜಿ ಅವರು ತಮ್ಮ ಪಂಥಜಿಯವರ "ಪಥಜಲಿಯ ಯೋಗಶಾತ್ರ" ವನ್ನು ಮಹಾನ್ ಪಾಂಡಿತ್ಯಪೂರ್ಣ ಪಾಂಡಿತ್ಯದೊಂದಿಗೆ ಸಂಪಾದಿಸಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಸರಳತೆ, ಬೇರ್ಪಡುವಿಕೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಅವರ ಹೋಲಿಸಲಾಗದ ಶಾಂತ ಮತ್ತು ಸಂಯೋಜನೆ ನಿಜವಾಗಿಯೂ ಪ್ರೇಕ್ಷಕರು ಉತ್ಸಾಹದಿಂದ ಮತ್ತು ಪ್ರಬುದ್ಧರಾಗಿದ್ದಾರೆ. ಅವರ ಪ್ರವಚನವು ಅವರ ನಿಖರತೆ ಮತ್ತು ನುಗ್ಗುವಿಕೆಗೆ ಹೆಸರುವಾಸಿಯಾಗಿದೆ. ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಪರಮ ಪೂಜ್ಯ ಮಲ್ಲಯ್ಯಮಹಾ ಸ್ವಾಮೀಜಿಯವರೊಂದಿಗೆ ಅಪಾರ ಸಂಬಂಧ ಹೊಂದಿದ್ದರು. 


*ಪ್ರಶಸ್ತಿಗಳು*

ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವ ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ ಎಂದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ


ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ, “ಅವರು ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವ ಅವರದು,” ಎಂದು ಸ್ವಾಮೀಜಿಯನ್ನು ಹತ್ತಿರದಿಂದ ಕಂಡಿರುವವರೊಬ್ಬರು ಹೇಳುತ್ತಾರೆ.

Saturday, January 14, 2023

ಶಿವಯೋಗಿ ಸಿದ್ಧರಾಮೇಶ್ವರ

 


ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿಸಿದ ಶಿವಯೋಗಿ ಸಿದ್ಧರಾಮೇಶ್ವರ


ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ

ವಚಿಸಿ ಅನುಭವಿಯಾದವ ಪಂಡಿತನಯ್ಯಾ

ವಿದ್ಯೆಯೆಂಬುದು ಅಭ್ಯಾಸಿಕನ ಕೈವಶ

ಅವಿದ್ಯೆಯೆಂಬುದು ಸರ್ವರಲ್ಲಿ ವಶ

ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ

ಮಹಾಪಂಡಿತ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.

ಪಾಂಡಿತ್ಯಕ್ಕಿಂತ ಅನುಭಾವಕ್ಕೆ ಮತ್ತು ಹೃದಯಶುದ್ಧಿಗೆ ಹೆಚ್ಚು ಮಹತ್ವ ನೀಡಿದ ಸಿದ್ಧರಾಮೇಶ್ವರರ ವಚನ ನಮ್ಮ ನಡಾವಳಿಗಳನ್ನು ತಿದ್ದಿಕೊಳ್ಳಲು ಒರೆಗಲ್ಲಾಗಿದೆ. ಒಂದು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿ ಪರಿವರ್ತಿಸುವುದರ ಮೂಲಕ ಕೇವಲ ಕನಸುಗಾರನಾಗಿರದೆ ಕರ್ತವ್ಯಶಾಲಿಯಾಗಿ ತನ್ನ ಆದರ್ಶಗಳನ್ನು ವಾಸ್ತವವಾಗಿಸಿದ ಸಿದ್ಧರಾಮೇಶ್ವರರು ಶರಣ ದಂಪತಿಗಳಾದ ಮೊರಡಿಯ ಮುದ್ದುಗೌಡ ಮತ್ತು ಸುಗ್ಗವ್ವೆ ಎಂಬ ದಂಪತಿಗಳ ಸುಪುತ್ರರಾಗಿ ಸೊನ್ನಲಿಗೆಯಲ್ಲಿ ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಜನಿಸಿದರು. ಬಾಲ್ಯದಲ್ಲಿ ತಂದೆ ತಾಯಿ ಇವರಿಗೆ ಧೂಳಿಮಾಕಾಳ ಎಂದು ಹೆಸರಿಟ್ಟರು. ದನ ಕಾಯುವ ಮುಗ್ಧ ಹುಡುಗ ಆದರ್ಶ ಶಿವಯೋಗಿಯಾದುದು ನಮಗೆ ಪವಾಡಸದೃಶದ ರೀತಿ ಗೋಚರವಾಗುತ್ತದೆ.

      ಸಿದ್ಧರಾಮೇಶ್ವರರ ಜನ್ಮಸ್ಥಳದ ಬಗ್ಗೆ ಸ್ವಲ್ಪ ಗೊಂದಲವಿದೆ. ಮಹಾರಾಷ್ಟ್ರದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ಜಿಲ್ಲಾ ಕೇಂದ್ರವಾದ ಸೊಲ್ಲಾಪುರವೇ ಸಿದ್ಧರಾಮೇಶ್ವರರ ಜನ್ಮಸ್ಥಳ ಎಂದು ಕರೆಯಲಾಗುತ್ತಿದೆ. ಆದರೆ ಬೆಲ್ದಾಳ ಶರಣರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಸೊನ್ನಲಿಗೆ ಸಿದ್ಧರಾಮೇಶ್ವರರ ಜನ್ಮಸ್ಥಳ ಎಂದು ಅನೇಕ ಆಧಾರಗಳಿಂದ ವಾದಿಸುತ್ತಾರೆ. ಆದರೆ ಚಿದಾನಂದಮೂರ್ತಿರವರು ಇದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿರುತ್ತಾರೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿ ಕೂಡಾ ಸೊಲ್ಲಾಪುರ ಎಂಬ ಗ್ರಾಮವಿದೆ. ಮೂರು ಕಡೆ ಸಿದ್ಧರಾಮೇಶ್ವರರ ದೇವಾಲಯ ಮತ್ತು ಕೆರೆಗಳಿರುವುದನ್ನು ಕಾಣಬಹುದು.

  ಸಿದ್ಧರಾಮೇಶ್ವರರ ಬದುಕು ಮತ್ತು ವ್ಯಕ್ತಿತ್ವವನ್ನು ತಿಳಿಯಲು ಅವರು ಬರೆದಿರುವ ವಚನಗಳೇ ಮೂಲ ಆಕರವಾದರೂ ಅವರ ಬದುಕಿನ ಎಲ್ಲಾ ಸಂಗತಿಗಳನ್ನು ವಚನಗಳಿಂದ ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಶರಣರ ವಚನಗಳು ಅಂದಂದಿನ ಅನುಭವ ಮತ್ತು ಅನುಭಾವಗಳಿಗೆ ವಚನಕಾರರ ಮನಸ್ಸು ಹೇಗೆ ಸ್ಪಂದಿಸಿತು ಎಂಬುದಕ್ಕೆ ಅಕ್ಷರ ಮಾಧ್ಯಮದ ಮೂಲಕ ತಿಳಿಯಪಡಿಸುತ್ತದೆ. ಈ ಇತಿಮಿತಿಯಿಂದ ಯಾವುದೇ ಶರಣರ ಸಮಗ್ರ ಬದುಕಿನ ವಿವರಗಳನ್ನು ಅವರು ಬರೆದಿರುವ ವಚನಗಳಿಂದ ಗುರುತಿಸಲಾಗದು ಎಂದು ಡಾ. ಎಸ್. ವಿದ್ಯಾಶಂಕರರವರು ಹೇಳಿರುವುದು ಸರಿಯಾಗಿದೆ. 

   ಸಿದ್ಧರಾಮೇಶ್ವರರ ಜೀವನ ಚರಿತ್ರೆಯನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಮೊದಲ ಹಂತ ಸೊನ್ನಲಿಗೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದುದು. ಎರಡನೇ ಹಂತ ಕಲ್ಯಾಣಕ್ಕೆ ಬಂದು ಶರಣರ ಜೊತೆ ಸೇರಿಕೊಂಡು ತಾನು ಹಿಂದೆ ಮಾಡಿದ ಲೌಕಿಕ, ಸಾಮಾಜಿಕ ಕಾರ್ಯಗಳ ಬಗೆಗೆ ಪಶ್ಚತ್ತಾಪವನ್ನು ಹೊಂದಿದುದು. ಮೊದಲನೆಯ ಹಂತ ಲೋಕೋಪಕಾರಿಯಾಗಿ, ಸರ್ವಜೀವ ದಯಾಪಾರಿಯಾಗಿದ್ದರೆ, ಎರಡನೇ ಹಂತ ಲೋಕವನ್ನು ನಿರಾಕರಿಸಿ ಅನುಭಾವವನ್ನು ಸಂಪಾದಿಸುವ ಕಡೆ ಲಕ್ಷ್ಯವಿರಿಸುವಂತಹದ್ದು.

   “ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು. ಅನುಗೊಂಬನಿತು ಕಾಯಕಂ ನಡೆಯುತ್ತಿರಬೇಕು” ಎನ್ನುತ್ತಾ ಸಿದ್ಧರಾಮೇಶ್ವರರು ತಾವೇ ಸ್ವತಃ ದುಡಿಯುತ್ತಾ, ತಮ್ಮ ಶಿಷ್ಯರನ್ನು ದುಡಿಸುತ್ತಾ ಸೊಲ್ಲಾಪುರದಲ್ಲಿ ಕೆರೆ, ತೊರೆ ಮತ್ತು ದೇಗುಲಗಳನ್ನು ನಿರ್ಮಾಣ ಮಾಡತೊಡಗಿದರು. ಕೆರೆ, ತೊರೆ, ದೇಗುಲಂಗಳ ಕಡೆಯಿಂದ ನಿಮ್ಮ ಕಂಡೆ ಎಂಬ ಸಿದ್ಧರಾಮೇಶ್ವರರ ಮಾತಿನಲ್ಲಿ ಲೋಕಕಲ್ಯಾಣದ ಸಂಕಲ್ಪವನ್ನು ಕಾಣಬಹುದು. ತ್ರಿಪುರಾಂತಕ ಕೆರೆಯ ನಿರ್ಮಾಣದ ಮೂಲಕ ಸಕಲ ಜೀವಾವಳಿಯ ಬಾಯಾರಿಕೆಯನ್ನು, ತೊರೆಯ ನಿರ್ಮಾಣದ ಮೂಲಕ ಜನರ ಹಸಿವನ್ನು ಮತ್ತು ದೇವಾಲಯದ ನಿರ್ಮಾಣದ ಮೂಲಕ ಜನರ ಮನಸ್ಸಿನಲ್ಲಿ ಭಕ್ತಿಯ ಬೀಜ ಬಿತ್ತಬಹುದು ಎಂಬುದು ಅವರ ಅಭಿಲಾಷೆಯಾಗಿತ್ತು. ಲೋಕದ ಜನರ ಕಲ್ಯಾಣ ಕಾರ್ಯದಲ್ಲಿ ನಿರತರಾಗಿದ್ದ ಸಿದ್ಧರಾಮೇಶ್ವರರು ಜನರಿಗೆ ಯಾವ ರೀತಿ ಅನಿವಾರ್ಯವಾಗಿದ್ದರು ಎಂದರೆ ಯಾರಾದರೂ ಹಾವು ಕಡಿದು ಸತ್ತರೆ, ಬೆಂಕಿಯಲ್ಲಿ ಸಿಕ್ಕಿ ಪ್ರಾಣ ಬಿಟ್ಟರೆ, ಯಾವುದಾದರೂ ಕಾಯಿಲೆಯಿಂದ ಜೀವ ಹೋದರೆ ಅವರನ್ನು ಹೊತ್ತುಕೊಂಡು ಬಂದು ಸಿದ್ಧರಾಮೇಶ್ವರರ ಮನೆಯ ಬಾಗಿಲಲ್ಲಿ ಬಿಟ್ಟು ಹೋಗುತ್ತಿದ್ದರು. ಅವರಿಗೆಲ್ಲಾ ಸಿದ್ಧರಾಮೇಶ್ವರರೇ ಸದ್ಗತಿ ಕಾಣಿಸುತ್ತಿದ್ದರು ಎಂದು ಸಿದ್ಧರಾಮೇಶ್ವರ ಚಾರಿತ್ರದಲ್ಲಿ ಉಲ್ಲೇಖವಾಗಿದೆ. ಹೀಗೆ ಸಿದ್ಧರಾಮೇಶ್ವರರು ಜನಸಾಮಾನ್ಯರ ನಡುವೆ ಅಸಾಮಾನ್ಯರಾಗಿ ಬೆಳೆಯುತ್ತಾ ಕಾಯಕ ಮತ್ತು ಸ್ಥಾವರಲಿಂಗಪೂಜೆಯಲ್ಲಿ ನಿರತರಾಗಿದ್ದರು.

     ಜ್ಞಾನ ಭಾಸ್ಕರರಾದ ಅಲ್ಲಮಪ್ರಭುಗಳು ಬಳ್ಳಿಗಾವೆಯಿಂದ ಹೊರಟು ಬನವಾಸಿಯನ್ನು ದಾಟಿ ಕಲ್ಯಾಣಕ್ಕೆ ಹೋಗುವ ಮಾರ್ಗದುದ್ದಕ್ಕೂ ಭೇಟಿಯಾದ ಶರಣರ ದಾರಿಯನ್ನು ನಿಚ್ಚಳಗೊಳಿಸಿ ಸೊನ್ನಲಿಗೆಗೆ ಬರುತ್ತಾರೆ. ಕೆರೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ, ಸಿದ್ಧರಾಮೇಶ್ವರರ ಶಿಷ್ಯರನ್ನು ಅಲ್ಲಮರು ಕೆಣಕಿ ‘ಒಡ್ಡರಾಮ’ ಎಂದು ಗೇಲಿ ಮಾಡುತ್ತಾರೆ. ಇದರಿಂದ ಸಿದ್ಧರಾಮೇಶ್ವರರಿಗೆ ಕ್ರೋಧಾಗ್ನಿ ಉಂಟಾದಾಗ ಅಲ್ಲಮಪ್ರಭುಗಳು ಶಾಂತಗೊಳಿಸಿ ಹೀಗೆ ಹೇಳುತ್ತಾರೆ.

                    ಅನ್ನವನಿಕ್ಕಿ ನನ್ನಿಯ ನುಡಿದು

                    ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ

                    ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ

                    ಶಿವನ ನಿಜವು ಸಾಧ್ಯವಾಗದು,

  ಗುಹೇಶ್ವರನನರಿಯದ ಶರಣಂಗೆ ಆವ ಫಲವೂ ಇಲ್ಲ.

ಅಲ್ಲಮಪ್ರಭುಗಳ ಈ ವಚನದಿಂದ ಸಿದ್ಧರಾಮೇಶ್ವರರ ಮನ ತೊಯ್ದಾಡಲಾರಂಭಿಸುತ್ತದೆ. ಜನರ ಸಂತೆಯಲ್ಲಿಯೇ ಮುಳುಗಿ, ಲೌಕಿಕ ಬಂಧನಗಳಲ್ಲಿ ಸಿಲಿಕಿದ್ದ ಸಿದ್ಧರಾಮೇಶ್ವರರ ದೃಷ್ಟಿಯನ್ನು ಮತ್ತೊಂದು ಕಡೆ ಹೊರಳಿಸುತ್ತಾರೆ. 

ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ

                     ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ

                     ಪರಮಾನಂದವೆಂಬ ಜಲವ ತುಂಬಿ

                     ಕೆರೆಯ ಕಟ್ಟಬಲ್ಲವರನಾರನೂ ಕಾಣೆ

          ನಾನು ಕಟ್ಟಿದ ಕೆರೆಯು ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ.

ಅಲ್ಲಮರ ಈ ವಚನ ಸಿದ್ಧರಾಮೇಶ್ವರರನ್ನು ಮತ್ತಷ್ಟು ಚಿಂತನೆಗೆ ಹಚ್ಚುತ್ತದೆ.

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ

                   ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ

                   ಒಡೆದು ಸಂಸಾರದ ಹೆಂಟೆಯ ಬಗಿದು

     ಬಿತ್ತಿದೆನಯ್ಯಾ ಬ್ರಹ್ಮಬೀಜವ. ಅಖಂಡಮಂಡಲವೆಂಬ ಬಾವಿ

  ಪವನವೆ ರಾಟಾಳ ಸುಷುಮ್ನನಾಳದಿಂದ ಉದಕವ ತಿದ್ದಿ

        ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ

                   ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು 

                   ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

ಅಲ್ಲಮಪ್ರಭು ಈ ವಚನದ ಮೂಲಕ ತಾವು ನಿರ್ಮಿಸಿದ ಆಧ್ಯಾತ್ಮಿಕ ತೋಟದ ಪರಿಚಯ ಮಾಡಿಕೊಡುತ್ತಾರೆ. ಸಿದ್ಧರಾಮೇಶ್ವರರನ್ನು ತಮ್ಮ ಜೊತೆ ಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಹೊಸ ಪ್ರಪಂಚವನ್ನು ಪರಿಚಯಿಸಿದರು. ಕಲ್ಯಾಣದ ಶರಣರ ಸಂಪರ್ಕದಿಂದ ಸ್ಥಾವರ ಪೂಜೆಗಳಲ್ಲಿ ಮುಳುಗಿದ್ದ ತಮ್ಮ ಬದುಕನ್ನು ಸಾಂಕೇತಿಕ ರೂಪಕ್ಕಿಳಿಸಿ ಜಂಗಮದ ಮಹತ್ವ ಅರಿಯುತ್ತಾರೆ. ಚೆನ್ನಬಸವಣ್ಣನವರ ಜ್ಞಾನಕ್ಕೆ ತಲೆದೂಗಿ ಅವರಿಂದ ಇಷ್ಟಲಿಂಗದೀಕ್ಷೆ ಪಡೆಯುತ್ತಾರೆ. ಬಸವಾದಿ ಪ್ರಮಥರ ಸಹವಾಸದಲ್ಲಿ ಅನುಭವಮಂಟಪದ ಚರ್ಚೆಗಳಲ್ಲಿ,  ಮಹಾಮನೆಯ ಕಾಯಕದಲ್ಲಿ ನಿರತರಾಗುತ್ತಾರೆ. ಶರಣರ ಅನುಭವ ಮಂಟಪದ ಅನುಭಾವದ ಸತ್ಯದ ಸಂಬಂಧದಿಂದಾಗಿ ವಚನಗಳನ್ನು ರಚಿಸುತ್ತಾ ಹೋಗುತ್ತಾರೆ. ಸಿದ್ಧರಾಮೇಶ್ವರರ ೧೯೬೬ ವಚನಗಳು ದೊರೆತಿವೆ.

ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ

                    ಸೋತಿತೆನ್ನ ಮನ ನೋಡಯ್ಯಾ

    ಹಾಡುವುದೊಂದೇ ವಚನ, ನೋಡುವುದೊಂದೇ ವಚನ

                   ವಿಷಯ ಬಿಟ್ಟು, ನಿರ್ವಿಷಯನಾಗುವುದೊಂದೆ 

                   ವಚನ ಕಪಿಲಸಿದ್ಧಮಲ್ಲೇಶನಲ್ಲಿ.

 ಈ ವಚನ  ಇವರು ಅರವತ್ತೆಂಟು ಸಾವಿರ ವಚನಗಳನ್ನು ರಚಿಸಿರಬಹುದೇ ಎಂಬ ಸಂಶೋಧನೆಗೆ ಇಂಬು ನೀಡುತ್ತದೆ. ಇವರು ವಚನಗಳ ಜೊತೆಗೆ ನಾಲ್ಕು ತ್ರಿವಿಧಿಗಳನ್ನು ರಚಿಸಿರುವುದು ಕಂಡುಬರುತ್ತದೆ. ಅವುಗಳೆಂದರೆ ೧. ಬಸವಸ್ತೋತ್ರ ತ್ರಿವಿಧಿ ೨. ಮಿಶ್ರಸ್ತೋತ್ರ ತ್ರಿವಿಧಿ ೩. ಸಂಕೀರ್ಣ ತ್ರಿವಿಧಿ ೪. ಅಷ್ಟಾವರಣ ತ್ರಿವಿಧಿ. ಇವು ಬಸವಾದಿ ಶರಣರನ್ನು ಕುರಿತು ಭಾವ ತುಂಬಿ ಬರೆದ ರಚನೆಗಳಾಗಿವೆ. 

ಸೊನ್ನಲಿಗೆಯಲ್ಲಿ ಧೂಳಿಮಾಕಾಳನಾಗಿ ಜನಿಸಿ, ಶ್ರೀಶೈಲದ ಮಲ್ಲಯ್ಯನ ಮಾರ್ಗದರ್ಶನದಲ್ಲಿ ಸಿದ್ಧರಾಮನಾಗಿ, ಸೊನ್ನಲಿಗೆಯನ್ನು ಭೂಕೈಲಾಸವನ್ನಾಗಿಸಿ, ಅಲ್ಲಮಪ್ರಭುಗಳಿಂದ ಅರಿವಿನ ಕಣ್ಣು ತೆರೆದು ಕಲ್ಯಾಣ ಪ್ರವೇಶಿಸಿ ಆಧ್ಯಾತ್ಮದ ಹಾದಿ ಹಿಡಿದು ಬದುಕಿನಲ್ಲಿ ಹೊಸ ತಿರುವನ್ನು ಪಡೆದು ಕಲ್ಯಾಣ ಕ್ರಾಂತಿಯ ನಂತರ ಚೆನ್ನಬಸವಣ್ಣ ಉಳವಿಗೆಯ ಕಡೆ ಪಯಣ ಬೆಳೆಸಿದಾಗ ಅನುಭವಮಂಟಪದಲ್ಲಿ ಕೆಲ ಕಾಲ ಅಧ್ಯಕ್ಷರಾಗಿ ಮತ್ತೆ ಸೊನ್ನಲಿಗೆಗೆ ಹಿಂದಿರುಗಿ ತಾವೇ ನಿರ್ಮಿಸಿದ ಗೋಡೆಯಲ್ಲಿ ಬಯಲಾಗುತ್ತಾರೆ. ಇವರನ್ನು ಕುರಿತು ಸೊಡ್ಡಳ ಬಾಚರಸರು “ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ” ಎಂದು ಹೊಗಳಿರುವುದು ಅರ್ಥಪೂರ್ಣವಾಗಿದೆ. 

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬

ಮೊ. ೯೯೦೧೧೩೭೯೪೮

vachanakumaraswamy@gmail.com




Wednesday, January 11, 2023

ಜಗನ್ಮಾತೆ ಅಕ್ಕಮಹಾದೇವಿ

 

ಮೈಸೂರು  : ಕನ್ನಡದ ಮಹಿಳಾ ಸಾಹಿತ್ಯ ಲೋಕವನ್ನು ಪ್ರಥಮವಾಗಿ ಬೆಳಗಿದವರು ಜಗನ್ಮಾತೆ ಅಕ್ಕಮಹಾದೇವಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿ ಶಾಶ್ವತಿ ಮಹಿಳಾ ಬಳಗದ ವತಿಯಿಂದ ಪ್ರೊ. ಶೈಲಾ ನಾಗರಾಜ್‌ರವರ ಮನೆಯಂಗಳದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಜಗವ ಬೆಳಗಿದ ಅಕ್ಕ’ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿ ಮಾತನಾಡಿದ ಅವರು ಮಹಿಳೆ ಎಂದರೆ ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಅನುಭವಮಂಟಪ ಸ್ಥಾಪಿಸಿ ಮಹಳೆಯರಿಗೆ ಸ್ಥಾನಮಾನ ಕಲ್ಪಿಸಿಕೊಡುವುದರ ಮೂಲಕ ೩೩ ಮಹಿಳೆಯರು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಲು ಸಾಧ್ಯವಾಯಿತು. ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿ ಚಿಕ್ಕಂದಿನಲ್ಲೇ ಅನೇಕ ನೋವುಗಳನ್ನು ಅನುಭವಿಸಿ, ಮದುವೆಯಾಗಲು ಬಯಸಿದ ಕೌಶಿಕ ರಾಜನನ್ನು ತಿರಸ್ಕರಿಸಿ ನಂತರ ಬಸವಕಲ್ಯಾಣಕ್ಕೆ ಹೋಗಿ ಅನುಭವಮಂಟಪದಲ್ಲಿ ಅಲ್ಲಮಪ್ರಭುಗಳ ಎಲ್ಲಾ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರಿಸಿ ವಿಶ್ವಕುಲದ ಸ್ತೀ ಜ್ಯೋತಿ ಎಂದು ಹೊಗಳಿಸಿಕೊಂಡರು. ತದನಂತರ ಆಂದ್ರಪ್ರದೇಶದ ಶ್ರೀಶೈಲ ಕದಳಿವನದಲ್ಲಿ ಐಕ್ಯರಾದರು. ಅಕ್ಕನ ವಚನಗಳು ಇಂದಿನ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಹಿಳೆಯರಿಗೆ ನಿಜವಾಗಿ ಸ್ವಾತಂತ್ರö್ಯ ಸಿಕ್ಕಿದ್ದು ಹನ್ನೆರಡನೆಯ ಶತಮಾನದಲ್ಲಿ. ಕನ್ನಡದ ಮೊಟ್ಟ ಮೊದಲ ಕವಯತ್ರಿಯಾಗಿ ಅಕ್ಕ ರಚಿಸಿದ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ. ಚಿನ್ಮಯಜ್ಞಾನಿ ಚನ್ನಬಸವಣ್ಣ ಅಕ್ಕನ ಒಂದು ವಚನ ಅಜಗಣ್ಣನ ಐದು ವಚನಕ್ಕೆ, ಪ್ರಭುದೇವರ ಹತ್ತು ವಚನಕ್ಕೆ, ಬಸವಣ್ಣನವರ ಇಪ್ಪತ್ತು ವಚನಕ್ಕೆ, ಜೇಡರ ದಾಸಿಮಯ್ಯನವರ ಅರವತ್ತು ವಚನಕ್ಕೆ ಸಮ ಎಂದು ಹೇಳಿರುವುದನ್ನು ನೋಡಿದರೆ ಅಕ್ಕನ ಪಾಂಡಿತ್ಯ ಮತ್ತು ಅನುಭಾವಿಕ ನಿಲವಿನ ಪ್ರೌಢಿಮೆ ಮಹತ್ತರವಾದುದು ಎಂದರು. ಕಾರ್ಯಕ್ರಮದಲ್ಲಿ ದಾಕ್ಷಾಯಿಣಿ ಪ್ರಾರ್ಥಿಸಿದರು. ಶಾಶ್ವತಿ ಮಹಿಳಾ ಬಳಗದ ಸಂಸ್ಥಾಪಕಿ ಪ್ರೊ. ಶೈಲಾ ನಾಗರಾಜ್ ಉಪಸ್ಥಿತರಿದ್ದರು.


Tuesday, January 10, 2023

ಶರಣ ಕ್ಷೇತ್ರಗಳ ದರ್ಶನ





*ಶರಣರ ಕ್ಷೇತ್ರಗಳ ದರ್ಶನದಿಂದ ಸಕಾರಾತ್ಮಕ ಆಲೋಚನೆಗಳು ವೃದ್ಧಿ*


ಕೊಳ್ಳೇಗಾಲ : ಶರಣರ ಕ್ಷೇತ್ರಗಳ ದರ್ಶನದಿಂದ ಸಕಾರಾತ್ಮಕ ಆಲೋಚನೆಗಳು ವೃದ್ಧಿಯಾಗುತ್ತವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಕೊಳ್ಳೇಗಾಲ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಕದಳಿ ವೇದಿಕೆ, ಅಕ್ಕನ ಬಳಗ ಮತ್ತು  ಶರಣು ವಿಶ್ವವಚನ ಫೌಂಡೇಷನ್ ತಾಲ್ಲೂಕು ಘಟಕಗಳ ಸಹಯೋಗದೊಂದಿಗೆ ನಡೆದ ಅನುಭವ ಮಂಟಪ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಚನಗಳು ಕಲ್ಪನೆಯಿಂದ ರಚಿತವಾಗದೆ ಶರಣರ ಅನುಭಾವದ ನುಡಿಗಳಾಗಿರುವುದರಿಂದ ಅಂತಹ ದಿವ್ಯ ವ್ಯಕ್ತಿತ್ವ ಹೊಂದಿದ ಶರಣರು ತಿರುಗಾಡಿದ ಸ್ಥಳಗಳಾದ ಬಸವಕಲ್ಯಾಣ, ಕೂಡಲಸಂಗಮ, ಇಂಗಳೇಶ್ವರ,. ಉಳವಿ, ಉಡುತಡಿ, ಬಳ್ಳಿಗಾವೆ, ಕದಳಿ ಮುಂತಾದ ಸ್ಥಳಗಳನ್ನು ಕನ್ನಡಿಗರಾದವರು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕು ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ನಾಟಕ ಉದ್ಘಾಟಿಸಿ ಮಾತನಾಡಿ ಶರಣರ ನಾಟಕಗಳನ್ನು ಅಭಿನಯಿಸುವುದರಿಂದ ಅವರ ವ್ಯಕ್ತಿತ್ವ ನಮ್ಮಲ್ಲಿ ಅಳವಡಿಕೆಯಾಗಿ ಸಚ್ಛಾರಿತ್ರ್ಯ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ನಾಟಕಗಳು ದೃಶ್ಯ ಮತ್ತು ಶ್ರವ್ಯ ಮಾಧ್ಯಮವಾಗಿರುವುದರಿಂದ ಶರಣರ ಸಂದೇಶಗಳನ್ನು ಸುಲಭವಾಗಿ ಅರ್ಥೈಸಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲ್ಲೂಕು ಅಧ್ಯಕ್ಷ ಮಹಾದೇವಪ್ರಸಾದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ ಸದಾಶಿವಮೂರ್ತಿ, ಕಾರ್ಯದರ್ಶಿ ನಾಗವೇಣಿ ನಾಗಣ್ಣ ಉಪಸ್ಥಿತರಿದ್ದರು.

Monday, January 9, 2023

ಶ್ರೀ ಗುರುಬಸವಲಿಂಗಾಯ ನಮಃ

 *ಶ್ರೀ ಗುರು ಬಸವಲಿಂಗಾಯ ನಮಃ*


ಇದು ಧರ್ಮಗುರು ಬಸವಣ್ಣ ಮತ್ತು ಪರಮಾತ್ಮನ ನಾಮ ಹೊಂದಿರುವ ಮಂತ್ರವಾಗಿದೆ


ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಏಕದಶಾಕ್ಷರ ಮಂತ್ರ ಆರಂಭದಲ್ಲಿ ಹೇಳಿದ ನಂತರವೇ ಸಾಹಿತ್ಯ, ಸಂಸ್ಕಾರಗಳು ಆರಂಭವಾಗುತ್ತದೆ.....


*ಪದ ಮಂತ್ರಗೋಪ್ಯ(ಇ. ಸ. ೧೧೬೦)*

*ಇದಕ್ಕೆ ಎರಡನೆಯ ಚೆನ್ನಬಸವ ಸ್ವಾಮಿಗಳು (೧೫೧೦) ಬರೆದ ಒಂದು ವಿವರಣೆಯಿದ್ದುಅದನ್ನು ಇಲ್ಲಿ ಕೊಡಲಾಗಿದೆ.*


*ಶ್ರೀ* = ಜ್ಞಾನವುಳ್ಳ;

*ಗುರು*=ಮುಕ್ತಿ ಪ್ರದಾಯಕನಾದಂಥ;

*ಬಸವ* = ಚಿನ್ನಾದ ಚಿದ್ಬಿಂದು ಚಿತ್ಕಲಾ  ಸ್ವರೂಪನಾದಂಥ  ;

*ಲಿಂಗಾಯ* = ಲಯ ಗಮನಂಗಳಿಗೆ ಕಾರಣವಾದಂಥ ವಸ್ತುವಿಗೋಸ್ಕರ; 

*ನಮಃ* = ನಮಸ್ಕಾರವೆಂದು  ಶಾಸ್ತ್ರ ಪ್ರಾರಂಭದಲ್ಲಿ ನಮಸ್ಕರಿಸುತ್ತಿರ್ದಪರೆಂಬುದೀಗ *ಶ್ರೀಗುರು ಬಸವ ಲಿಂಗಾಯನಮಃ* ಎಂಬುದರ್ಥ.

Tuesday, January 3, 2023

ಸಿದ್ಧೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

 

ಮೈಸೂರು : ಶತಮಾನ ಕಂಡ ಸದ್ಗುರು ಶ್ರೀ ಸಿದ್ಧೇಶ್ವರ ಶ್ರೀಗಳು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜ್ಞಾನಯೋಗಿ ಎಂದೇ ಹೆಸರಾದ ಸಿದ್ಧೇಶ್ವರಶ್ರೀಗಳ ಪ್ರವಚನಗಳು ಕಲ್ಲೆದೆಯಂತಹ ವ್ಯಕ್ತಿಗಳಲ್ಲೂ ಪರಿಮಳದ ಪುಷ್ಪವನ್ನು ಅರಳಿಸುತ್ತಿತ್ತು. ನಮ್ಮ ಸಂಪಾದನೆಯು ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷವನ್ನು ಕಾಣಲು ಕಾರಣವಾಗಬೇಕೆ ಹೊರತು ದುರಾಸೆಯನ್ನು ಹೆಚ್ಚಿಸಿ ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಬಾರದು ಎಂದು ತಮ್ಮ ಪ್ರವಚನದುದ್ದಕ್ಕೂ ಸರಳತೆಯ ನೀತಿಸಾರವನ್ನು ಉಣಬಡಿಸುತ್ತಿದ್ದ ಶ್ರೀಗಳು ಸ್ವತಃ ತಾವೇ  ಸರಳತೆಯ ಸಾಕಾರಮೂರ್ತಿಗಳಾಗಿ ಸದಾಕಾಲ ಬಿಳಿ ಉಡುಗೆ ಧರಿಸಿ ಇತರರಿಗೆ ಮಾದರಿಯಾಗಿದ್ದರು. ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಹೊಂದಿ, ಚಿಂತನೆಗಳನ್ನು ನಡೆಸಿ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆದ ಸಿದ್ಧೇಶ್ವರ ಸ್ವಾಮೀಜಿಗಳು ನಮ್ಮನ್ನು ಅಗಲಿರುವುದು ವಿಶ್ವದ ಆಧ್ಯಾತ್ಮಿಕ, ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಮರಣವನ್ನು ಮಹಾನವಮಿಯನ್ನಾಗಿಸಿದ ಶ್ರೀಗಳು ಬದುಕಿನಲ್ಲಿ ಸೂರ್ಯನ ಕಿರಣದಂತೆ ಇರಬೇಕು ಎಂದು ತಿಳಿಸಿದರು. ಜ್ಞಾನದ ಖಣಿಗಳಾಗಿದ್ದ ಇವರು ಜೀವನ್ಮುಕ್ತಿಯನ್ನು ಹೊಂದಿ ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಅವರು ನಡೆ, ನುಡಿ ಒಂದಾಗಿ ನೀಡಿದ ಪ್ರವಚನಗಳ ಕೀರ್ತಿಗಳನ್ನು ಶೇಷರೂಪದಲ್ಲಿ ಬಿಟ್ಟು ಹೋಗಿದ್ದು ಸಂದರ್ಭಾನುಸಾರ ಅವುಗಳನ್ನು ಆಲಿಸುತ್ತ ಹೃದಯ ಶ್ರೀಮಂತಿಕೆಯನ್ನು ಸಂಪಾದಿಸಿಕೊಳ್ಳೋಣ ಎಂದರು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಮಾತನಾಡಿ ೮೨ ವರ್ಷಗಳ ಶ್ರೀಗಳ ಬದುಕು ಅರ್ಥಪೂರ್ಣವಾದದ್ದು, ತಾವು ಧರಿಸುತ್ತಿದ್ದ ಉಡುಪಿನಲ್ಲಿ ಕಿಸೆಯನ್ನೇ ಇಟ್ಟುಕೊಳ್ಳದೇ ಬದುಕಿ ತೋರಿಸಿದ ಇವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ತಿಳಿಸಿ ಅವರು ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅನಿತಾ ನಾಗರಾಜ್, ಕೇಂದ್ರೀಯ ಸಂಚಾಲಕರಾz ವಿ. ಲಿಂಗಣ್ಣ, ಮಂಜುಳ ಶಿವಪ್ರಸಾದ್, ನಾಗರಾಜ್, ವಚನ ನುಡಿನಮನ ಸಲ್ಲಿಸಿದರು.


ಶತಮಾನ ಕಂಡ ಸದ್ಗುರು ಪೂಜ್ಯ ಸಿದ್ಧೇಶ್ವರ ಶ್ರೀಗಳು

 


*ಶತಮಾನ ಕಂಡ ಸದ್ಗುರು ಪೂಜ್ಯ ಸಿದ್ಧೇಶ್ವರ ಶ್ರೀಗಳು*

ಬಯಲು ಬಯಲನೆ ಬಿತ್ತಿ 

ಬಯಲು ಬಯಲನೆ ಬೆಳೆದು 

ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 

ಬಯಲ ಜೀವನ ಬಯಲ ಭಾವನೆ

ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು 

ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.

ಅಲ್ಲಮಪ್ರಭುಗಳ ವಚನದಂತೆ ಬಯಲಿನಲ್ಲಿ ಬಯಲಾದ ಪೂಜ್ಯ ಸಿದ್ಧೇಶ್ವರ ಶ್ರೀಗಳು ಭೌತಿಕವಾಗಿ ದೂರವಾಗಿರುವುದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ.

ಜೀವನು ದೇಹ ಭಾವವನ್ನು ಮರೆತು ದೇವನನ್ನು ನೆನೆಯುತ್ತ ಅವನಲ್ಲೇ ಬೆರೆಯಬೇಕು! ಹೀಗೆ ದೇಹವನ್ನೂ, ದೇಹ ಸಂಬಂಧಿತ ಸಕಲ ಪ್ರಪಂಚವನ್ನೂ ಒಂದು ಕ್ಷಣ ಮರೆತು ದೇವನನ್ನು ನೆನೆಯುವುದೇ ಭಕ್ತಿ! ನೆನೆದ ದೇವನಲ್ಲಿ ಮನವೊಂದಾಗುವುದೇ ಯೋಗ, ಭಕ್ತಿಯೋಗ!

ಹೀಗೆ ದಾರ್ಶನಿಕರ ವಿಚಾರಧಾರೆಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಸರಿದೂಗಿಸಿ ಹೇಳುವ ನಿರ್ಮಲ ಮನಸ್ಸಿನ ಪ್ರವಚನ ಪರಮಾಚಾರ್ಯರಾದ ಪರಮಪೂಜ್ಯರ ಸರಳ ಸುಂದರ ಉಪದೇಶಗಳು ಕೇಳುಗರ ಹೃದಯದಲ್ಲಿ ಅಚ್ಚೊತ್ತಿ ನಿಲ್ಲುತ್ತವೆ.

ಜ್ಞಾನಯೋಗಿ ಎಂದೇ ಹೆಸರಾದ ಶ್ರೀಗಳ ಪ್ರವಚನಗಳು ಕಲ್ಲೆದೆಯಂತಹ ವ್ಯಕ್ತಿಗಳಲ್ಲೂ ಪರಿಮಳದ ಪುಷ್ಪವನ್ನು ಅರಳಿಸುವಂತೆ ಪರಿಣಾಮಕಾರಿಯಾಗಿರುತ್ತಿರುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಇವರ ಪ್ರವಚನವಿದೆ ಎಂದರೆ ಸಾವಿರಾರು ಜನರು ನೆರೆದು ಅವರ ಪ್ರವಚನ ಆಲಿಸಿ ಪುನೀತರಾಗುತ್ತಿದ್ದರು. ಅವರ ನುಡಿಗಳು ನೊಂದವರಿಗೆ ಸಾಂತ್ವನ ನೀಡಿ, ಆತ್ಮಸ್ಥೈರ್ಯ ಕಳೆದುಕೊಂಡವರಿಗೆ ಸಮಾಧಾನದ ಉಸಿರು ಬಿಡುವಂತೆ ಮಾಡಿ, ಜ್ಞಾನಿಗಳಿಗೆ ಮತ್ತಷ್ಟು ಸಾಧಿಸುವ ಹಂಬಲ ಹೆಚ್ಚಿಸಿ, ಸಾಧಕರಿಗೆ ಮತ್ತು ಅನುಭಾವಿಗಳಿಗೆ ಸಾಧನೆಯ ಮೆಟ್ಟಿಲುಗಳಾಗುತ್ತಿದ್ದವು. ಎಲ್ಲರಲ್ಲಿಯೂ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತಿದ್ದ ಇವರು ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುವುದರ ಮೂಲಕ ಸಾವಿರಾರು ಜ‌ನರ ಮನ ಪರಿವರ್ತನೆಗೆ ಪ್ರೇರಕ ಶಕ್ತಿಯಾಗಿದ್ದರು.

ಸೂಜಿಗಲ್ಲಿನಂತಹ ಸೆಳೆತದ ವ್ಯಕ್ತಿತ್ವ, ಅವರ ಕನ್ನಡ ಭಾಷೆಯ ಉಚ್ಛಾರಣೆಯ ಧಾಟಿ, ಅವರು ಬಳಕೆ ಮಾಡುತ್ತಿದ್ದ ಪದಪ್ರಯೋಗ, ನೀಡುತ್ತಿದ್ದ ಉದಾಹಣೆಗಳು, ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುತ್ತಿದ್ದ ರೀತಿಗೆ ಪ್ರತಿಯೊಬ್ಬರೂ ಆಕರ್ಷಿತರಾಗಿ ಮಂತ್ರಮುಗ್ಧರಾಗುತ್ತಿದ್ದರು. ಪ್ರಕೃತಿಯ ವಿವಿಧ ಅಂಶಗಳಾದ ಕಲ್ಲು, ಮಣ್ಣು, ಮರ, ಗಿಡ, ಹೂ, ಬಳ್ಳಿ, ಪ್ರಾಣಿ, ಪಕ್ಷಿಗಳಲ್ಲಿ  ಜೀವಚೈತನ್ಯವಿದೆ ಎಂಬ ಅಂಶವನ್ನು  ಅವರು ವರ್ಣಿಸುತ್ತಿದ್ದ ರೀತಿಯನ್ನು ಕೇಳುತ್ತಿದ್ದ ಕೇಳುಗರ ಕರ್ಣಗಳು ಪಾವನವಾಗುತ್ತಿದ್ದವು.

ನಮ್ಮ ಸಂಪಾದನೆಯು ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷವನ್ನು ಕಾಣಲು ಕಾರಣವಾಗಬೇಕೆ ಹೊರತು ದುರಾಸೆಯನ್ನು ಹೆಚ್ಚಿಸಿ ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಬಾರದು ಎಂದು ತಮ್ಮ ಪ್ರವಚನದುದ್ದಕ್ಕೂ ಸರಳತೆಯ ನೀತಿಸಾರವನ್ನು ಉಣಬಡಿಸುತ್ತಿದ್ದ ಶ್ರೀಗಳು ಸ್ವತಃ ತಾವೇ  ಸರಳತೆಯ ಸಾಕಾರಮೂರ್ತಿಗಳಾಗಿ ಸದಾಕಾಲ ಬಿಳಿ ಉಡುಗೆ ಧರಿಸಿ ಇತರರಿಗೆ ಮಾದರಿಯಾಗಿದ್ದರು.

ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಹೊಂದಿ, ಚಿಂತನೆಗಳನ್ನು ನಡೆಸಿ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನಮ್ಮನ್ನು ಅಗಲಿರುವುದು ವಿಶ್ವದ ಆಧ್ಯಾತ್ಮಿಕ, ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಕುದಿಯುವವರು ಕುದಿಯಲಿ..! ಉರಿಯುವವರು ಉರಿಯಲಿ..! "ನಿನ್ನ ಪಾಡಿಗೆ ನೀನಿರು..! ಕುದಿಯುವವರು ಆವಿಯಾಗುತ್ತಾರೆ..! ಉರಿಯುವವರು ಬೂದಿಯಗುತ್ತಾರೆ..!

     ಎಂದು ನಿಂದಕರ ನಿಂದನೆಯ ಮಾತುಗಳಿಗೆ ಕುಗ್ಗದೆ ಆತ್ಮಸ್ಥೆರ್ಯ ಹೆಚ್ಚಿಸಿಕೊಳ್ಳಲು ಶ್ರೀಗಳ ಮೇಲಿನ ನುಡಿಗಳು ಪ್ರತಿಯೊಬ್ಬರಿಗೂ ಸಹಾಯಕವಾಗಿದೆ.

ವಿದ್ಯಾ, ಬುದ್ಧಿ, ಶಕ್ತಿ, ಸಾಮರ್ಥ್ಯ, ಸಿರಿ, ಸಂಪದಗಳನ್ನು ದೇವನು ಕೆಲವರಿಗೆ ಕಡಿಮೆ ಕರುಣಿಸಿರಬಹುದು. ಆದರೆ ಸಕಲ ಜೀವರಾಶಿಗಳ ಹೃದಯದಲ್ಲಿ ಪ್ರೇಮಜ್ಯೋತಿಯನ್ನು ಮಾತ್ರ ಸಮನಾಗಿ ಬೆಳಗಿಸಿರುವನು. ಜೀವನ ರಸಪೂರ್ಣವಾಗಲು ಪ್ರೇಮಜ್ಯೋತಿಯೇ ಮುಖ್ಯ ಎಂದು ತಿಳಿಸಿದ ಶ್ರೀಗಳ ನುಡಿಗಳನ್ನು ಕೇಳುವ ಪ್ರತಿಯೊಬ್ಬರ ಹೃದಯವೂ ಗೆಲ್ಲುತ್ತದೆ.

ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. 

ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.

ಕೇಳು, ಕೂಡಲಸಂಗಮದೇವಾ,

ಮರಣವೆ ಮಹಾನವಮಿ.

ವಿಶ್ವಗುರು ಬಸವಣ್ಣನವರ ವಚನದಂತೆ ಮರಣವನ್ನು ಮಹಾನವಮಿಯನ್ನಾಗಿಸಿದ ಪೂಜ್ಯ ಶ್ರೀಗಳು ಕ್ರಿಯಾಯ್ಮಕವಾಗಿ ನಮ್ಮ ನಡುವೆ ಭೌತಿಕವಾಗಿ ಇಲ್ಲದಿದ್ದರೂ ಅವರ ನುಡಿಗಳು ಮತ್ತು ಸಾಹಿತ್ಯ ರೂಪದಲ್ಲಿ ನೀಡಿದ ಕೃತಿಗಳು ನಮ್ಮಲ್ಲಿ ಜ್ಞಾನ‌ ಜ್ಯೋತಿಯನ್ನು ಬೆಳಗಿಸುತ್ತವೆ.

"ಸತ್ಯವೂ ಇಲ್ಲ, ಅಸತ್ಯವೂ ಇಲ್ಲ,

ಸಹಜವೂ ಇಲ್ಲ, ಅಸಹಜವೂ ಇಲ್ಲ,

ನಾನೂ ಇಲ್ಲ, ನೀನೂ ಇಲ್ಲ.

`ಇಲ್ಲ' `ಇಲ್ಲ' ಎಂಬುದು ತಾನಿಲ್ಲ

ಗುಹೇಶ್ವರನೆಂಬುದು ತಾ ಬಯಲು

ಎಂದು ತಮ್ಮ ಅಂತಿಮ ಅಭಿವಂದನಾ ಪತ್ರದಲ್ಲಿ ಅಂತ್ಯ ಪ್ರಣಮಾಂಜಲಿ ತಿಳಿಸಿದ ಶ್ರೀಗಳು ಜ್ಞಾನದ ಖಣಿ. 

ಜೆ.ಎಸ್.ಎಸ್ ವತಿಯಿಂದ ಸುತ್ತೂರಿನಲ್ಲಿ ಏರ್ಪಡಿಸಿದ್ದ ಅನೇಕ ಶಿಬಿರಗಳಲ್ಲಿ ಸಂಚಾಲಕನಾಗಿದ್ದ ನಾನು ಅವರನ್ನು ಹತ್ತಿರದಿಂದ ಕಂಡು ಅವರ ನುಡಿಗಳಿಂದ ಪುನೀತನಾಗಿ ನನ್ನಲ್ಲೂ ಆಧ್ಯಾತ್ಮದ ಕುಸುಮ ಅರಳಲು ಕಾರಣಕರ್ತರು.

ಗಂಗಾಜಲ, ಕೃಷ್ಣಾಜಲ, ಕಾವೇರಿ ಜಲ, ವಿದೇಶಿ ಜಲ, ಸ್ವದೇಶಿ ಜಲ ಎಲ್ಲವೂ ಬೇರೆ ಬೇರೆ ಎಂದು ನಾವು ವಾದಿಸುತ್ತೇವೆ. ಈ ನಮ್ಮ ವಾದ ಕೇಳಿದ ಜಗಭರಿತ 'ಜಲ' ನಗದೇ ಇರದು! ದೇಶಕಾಲದತ್ತ ನೋಡದೆ ಜಲದತ್ತ ನೋಡಿದರೆ ಜಗದ ಜಲವೆಲ್ಲಾ ಒಂದೇ! ಜಗತ್ತಿನ ಸಮಸ್ತ ವಸ್ತುಗಳ ಹೊರಗೆ ತೋರಿದ ನಾಮ, ರೂಪಗಳ ಬಿಟ್ಟು ಒಳಗೆ ನೋಡಿದರೆ, ಇರುವ ಸತ್ಯವೂ ಒಂದೇ! ಈ ಪರಮ ಸತ್ಯದ ಪ್ರೇಮವೇ ಸ್ವರೂಪಭಕ್ತಿ! ಆದುದರಿಂದಲೇ ಜೀವನ್ಮುಕ್ತಿ!!

ಎಂದು ಹೇಳುತ್ತಿದ್ದ ಶ್ರೀಗಳು ಅವರು ಇಂದು ಜೀವನ್ಮುಕ್ತಿಯನ್ನು ಹೊಂದಿ ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಅವರು ನಡೆ, ನುಡಿ ಒಂದಾಗಿ ನೀಡಿದ ಪ್ರವಚನಗಳ ಕೀರ್ತಿಗಳನ್ನು ಶೇಷರೂಪದಲ್ಲಿ ಬಿಟ್ಟು ಹೋಗಿದ್ದು ಸಂದರ್ಭಾನುಸಾರ ಅವುಗಳನ್ನು ಆಲಿಸುತ್ತ ಹೃದಯ ಶ್ರೀಮಂತಿಕೆಯನ್ನು ಸಂಪಾದಿಸಿಕೊಳ್ಳೋಣ.


ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - 570026

ಮೊ. 9901137948

vachanakumaraswamy@gmail.com