🌻ದಿನಕ್ಕೊಂದು ಕಥೆ🌻
*ಕ್ಷಮಾಗುಣದ ಮಹತ್ವ*
ಸಂತ ಸಮರ್ಥ ರಾಮದಾಸರು ಒಮ್ಮೆ ಪ್ರಿಯಶಿಷ್ಯ ಶಿವಾಜಿಯ ಕುಶಲ ವಿಚಾರಿಸಲು ಶಿಷ್ಯರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದರು. ಬೇಸಿಗೆಯ ಪ್ರಖರ ಬಿಸಿಲು ಸುಡುತ್ತಿತ್ತು. ಜತೆಗೆ ಬಾಯಾರಿಕೆಯಿಂದ ಬಸವಳಿದು ಬೆಂಡಾದ ಶಿಷ್ಯರಿಗೆ ಹಾದಿಯ ಅಕ್ಕಪಕ್ಕ ಸಮೃದ್ಧವಾಗಿ ಬೆಳೆದಿದ್ದ ಕಬ್ಬಿನ ಗದ್ದೆ ಕಂಡಿತು. ನಿಧಿಯೇ ಸಿಕ್ಕಂತಾಗಿ ಗದ್ದೆಗೆ ನುಗ್ಗಿ ಸಾಕಷ್ಟು ಕಬ್ಬು ಕಿತ್ತು ರಸ ಹೀರಿದರು. ಇನ್ನೇನು ಅಲ್ಲಿಂದ ಕಾಲ್ತೆಗೆಯಬೇಕು ಎನ್ನುವಾಗ, ಕಬ್ಬಿನ ಗದ್ದೆಯ ಮಾಲೀಕ ಆಗಮಿಸಿದ. ಅಪ್ಪಣೆಯಿಲ್ಲದೆ ನುಗ್ಗಿದ್ದು ಮಾತ್ರವಲ್ಲದೆ ಕಬ್ಬನ್ನು ಮನಸೋಇಚ್ಛೆ ಕಿತ್ತಿದ್ದಕ್ಕಾಗಿ ರಾಮದಾಸರೂ ಸೇರಿದಂತೆ ಎಲ್ಲ ಶಿಷ್ಯರಿಗೂ ತನ್ನ ಆಳುಗಳ ಮೂಲಕ ಥಳಿಸಿದ.
ಕೆಲ ಹೊತ್ತಿನ ನಂತರ ಅವರೆಲ್ಲ ಶಿವಾಜಿಯ ಅರಮನೆ ತಲುಪಿದರು. ಎಲ್ಲರನ್ನೂ ಸ್ವಾಗತಿಸಿದ ಶಿವಾಜಿ, ಸಮರ್ಥ ರಾಮದಾಸರಿಗೆ ಸ್ವತಃ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಲು ಮುಂದಾದಾಗ, ಅವರ ಮೈಮೇಲಿನ ಬಾಸುಂಡೆಗಳನ್ನು ಕಂಡು ದಿಗ್ಭŠಮೆಗೊಂಡ. ಶಿಷ್ಯರಿಂದ ವಿಷಯ ತಿಳಿದು ಕಬ್ಬಿನ ಗದ್ದೆಯ ಮಾಲೀಕನನ್ನು ಆಸ್ಥಾನಕ್ಕೆ ಕರೆಸಿದ. ತನ್ನಿಂದ ಥಳಿತಕ್ಕೊಳಗಾದ ಸ್ವಾಮೀಜಿ ಮತ್ತು ಶಿಷ್ಯರು ಶಿವಾಜಿಯಿಂದ ಗೌರವಿಸಲ್ಪಡುತ್ತಿರುವುದನ್ನು ಕಂಡು ಕಂಗಾಲಾದ ಆತ, ತನ್ನ ತಪ್ಪನ್ನು ಕ್ಷಮಿಸುವಂತೆ ರಾಮದಾಸರಲ್ಲಿ, ಶಿವಾಜಿಯಲ್ಲಿ ಮೊರೆಯಿಟ್ಟ. ‘ಈತನಿಗೆ ಏನು ಶಿಕ್ಷೆ ವಿಧಿಸಬೇಕೆಂಬುದನ್ನು ನೀವೇ ಹೇಳಿ ಗುರುಗಳೇ’ ಎಂದು ಶಿವಾಜಿ ಬಿನ್ನವಿಸಿಕೊಂಡಾಗ ರಾಮದಾಸರು ನಗುತ್ತ, ‘ಬಿಸಿಲಿನಿಂದ ಬಳಲಿ ಬೆಂಡಾಗಿ, ಬಾಯಾರಿಕೆಯಿಂದ ಚಡಪಡಿಸುತ್ತಿದ್ದ ನನ್ನ ಶಿಷ್ಯರಿಗೆ ಅಮೃತಸಮಾನ ಕಬ್ಬಿನರಸ ದೊರೆಯುವಂತಾಗುವುದಕ್ಕೆ ಅನುವುಮಾಡಿಕೊಟ್ಟ ಈ ಮಾಲೀಕನಿಗೆ ನೀನು ಹತ್ತು ಗ್ರಾಮಗಳನ್ನು ಉಂಬಳಿಯಾಗಿ ನೀಡಬೇಕು’ ಎಂದು ಸಲಹೆಯಿತ್ತರು. ರಾಮದಾಸರ ದಯಾಗುಣಕ್ಕೆ ಶಿವಾಜಿ ಮತ್ತು ಆಸ್ಥಾನಿಕರು ಮೂಕವಿಸ್ಮಿತರಾಗಿದ್ದರ ಜತೆಗೆ ಅವರ ನ್ಯಾಯತತ್ಪರತೆಯನ್ನೂ ಮೆಚ್ಚಿದರು. ತನ್ನ ತಪ್ಪಿಗೆ ಒದಗಬೇಕಿದ್ದ ಶಿಕ್ಷೆ ತಪ್ಪಿಸಿ, ಬದಲಿಗೆ ಉಂಬಳಿ ಗ್ರಾಮಗಳ ಬಹುಮಾನ ದೊರಕಿಸಿಕೊಟ್ಟ ರಾಮದಾಸರಿಗೆ ಕಬ್ಬಿನ ಗದ್ದೆಯ ಮಾಲೀಕ ಸಾಷ್ಟಾಂಗ ನಮಸ್ಕರಿಸಿದ. ಶಿಷ್ಯರು ಕಬ್ಬು ತಿಂದಿದ್ದಕ್ಕೆ ಗದ್ದೆಯ ಮಾಲೀಕನಿಂದ ಥಳಿತಕ್ಕೆ ಒಳಗಾಗುವಾಗಲೇ ರಾಮದಾಸರು ತಮ್ಮ ಗುರುತನ್ನು ಅವನಿಗೆ ಹೇಳಿಕೊಳ್ಳಬಹುದಿತ್ತು; ಆದರೆ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂಬುದನ್ನು ಸಾಕ್ಷೀಕರಿಸಲೆಂಬಂತೆ ಶಿಷ್ಯರೊಂದಿಗೆ ಅವರೂ ಶಿಕ್ಷೆ ಸ್ವೀಕರಿಸಿದರು. ತರುವಾಯ ಶಿವಾಜಿಯ ಆಸ್ಥಾನದಲ್ಲಿರುವಾಗ, ತಮ್ಮ ಪ್ರಭಾವ ಬಳಸಿ ಕಬ್ಬಿನ ಗದ್ದೆಯ ಮಾಲೀಕನಿಗೆ ಘೋರಶಿಕ್ಷೆಯನ್ನೇ ಕೊಡಿಸಲು ಅವರಿಗೆ ಸಾಧ್ಯವಿದ್ದರೂ, ‘ಎಂಥ ಅನಿವಾರ್ಯ ಪ್ರಸಂಗದಲ್ಲೂ ಕಳ್ಳತನ ಸಲ್ಲ’ ಎಂಬ ಜೀವನಪಾಠ ಹೇಳಿಕೊಟ್ಟ ಆತ ಬಹುಮಾನಕ್ಕೆ ಅರ್ಹನೇ ಹೊರತು ಪ್ರತೀಕಾರಕ್ಕಲ್ಲ ಎಂಬ ಉದಾತ್ತತೆ ಮೆರೆಯುವ ಮೂಲಕ ‘ಮಾನವೀಯತೆ’ ಮತ್ತು ‘ಕ್ಷಮೆ’ಯಂಥ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿದರು.
ದಯೆ, ಕರುಣೆ, ಕ್ಷಮೆ, ಮಾನವೀಯತೆಯಂಥ ಅನುಪಮ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಲ್ಲಿ, ಸ್ವಸ್ಥ ಸಮಾಜ ನಿರ್ವಣವಾಗುವುದು ಖಚಿತ ಎಂಬುದನ್ನು ಮರೆಯದಿರೋಣ.
💐🌹💐🌹💐🌹💐🌹💐
2
🌻ದಿನಕ್ಕೊಂದು ಕಥೆ🌻*
*ನಾಯಿ ಹಸಿದಿತ್ತು! ಅನ್ನ ಹಳಸಿತ್ತು! ಆದರೂ ನಾಯಿ ಸತ್ತಿತ್ತು!*
ಹಳಸಿದ ಅನ್ನವನ್ನು ತಿಂದ ಹಸಿದ ನಾಯಿಯು ಸತ್ತ ಬಗೆಗಿನ ನಿಜಜೀವನದ ಘಟನೆಯೊಂದು ಇಲ್ಲಿದೆ. ಒಮ್ಮೆ ದೂರದ ಊರಿನಿಂದ ಪ್ರಯಾಣಿಕರ ಪ್ರವಾಸಿ ಬಸ್ಸೊಂದು ಪ್ರವಾಸಿ ತಾಣವೊಂದನ್ನು ನೋಡಲು ಬಂದಾಗ ಮಧ್ಯರಾತ್ರಿಯಾಗಿತ್ತು. ಅಲ್ಲಿದ್ದ ಒಂದೇ ಒಂದು ಹೋಟೆಲ್ಲಿನ ಹೊರಗೆ ‘ಊಟ ರೆಡಿ’ ಎಂಬ ಫಲಕವಿತ್ತು. ಆದರೆ ಒಳಗೆ ಊಟ ಖಾಲಿಯಾಗಿತ್ತು. ಮಾಲೀಕರು ಈ ಮಧ್ಯರಾತ್ರಿಯಲ್ಲಿ ನಿಮ್ಮೆಲ್ಲರಿಗೂ ಬಿಸಿಬಿಸಿಯಾದ ಅಡುಗೆ ಮಾಡಿ ಊಟ ಕೊಡಲು ಸಾಧ್ಯವಿಲ್ಲ. ಬೇಕಿದ್ದರೆ ಮಧ್ಯಾಹ್ನದ ರೈಸ್ ಬಾತನ್ನೇ ಬಿಸಿ ಮಾಡಿಕೊಡುತ್ತೇವೆ ಎಂದರಂತೆ.
ಎಲ್ಲರಿಗೂ ಹೊಟ್ಟೆ ಹಸಿದಿತ್ತು. ಬೇರೇನೂ ದಾರಿಯಿಲ್ಲದೆ ಎಲ್ಲರೂ ಏನನ್ನಾದರೂ ಮಾಡಿಕೊಡಿ ಪರವಾಗಿಲ್ಲ! ಎಂದರು. ಹತ್ತು ನಿಮಿಷದಲ್ಲಿ ತಂಗಳ ಬಾತ್ ಬಿಸಿ ಬೇಳೆಬಾತಾಗಿ ಬಂದಿತ್ತು. ಎಲ್ಲರೂ ಅದನ್ನೇ ತಿಂದರು. ಆದರೆ ಕೆಲವರಿಗೆ ಮಾತ್ರ ಅದು ಹಸಿದೆಯೇನೋ ಎಂಬ ಅನುಮಾನ ಬಂತು. ಅಂತಹ ಒಬ್ಬ ಅನುಮಾನಪ್ಪ ಅದನ್ನು ಅಲ್ಲಿಯೇ ನಿಂತಿದ್ದ ಬೀದಿ ನಾಯಿಗೆ ಹಾಕಿದರು.
ಪಾಪ ನಾಯಿ ಹಸಿದಿತ್ತು. ಅನ್ನ ಹಳಸಿತ್ತು. ಅದು ಗಬಗಬನೆ ತಿಂದು ಹೊರಟು ಹೋಯಿತು. ಆನಂತರ ಪ್ರಯಾಣಿಕರೆಲ್ಲ ತಮ್ಮತಮ್ಮ ಕೊಠಡಿಗೆ ವಿಶ್ರಾಂತಿಗೆ ತೆರಳಿದರು. ರಾತ್ರಿ ನಾಯಿಗೆ ಅನ್ನ ಹಾಕಿದ್ದ ಅನುಮಾನಪ್ಪ ಮರುದಿನ ಮುಂಜಾನೆ ವಾಕಿಂಗಿಗೆ ಬಂದಾಗ ಅವರಿಗೆ ಅಲ್ಲಿದ್ದವರು ಯಾರೋ ಆ ನಾಯಿ ಸತ್ತು ಹೋಯಿತು ಎಂದು ಹೇಳಿದರು. ಇವರು ತಕ್ಷಣ ಹಳಸಿದ ಅನ್ನ ವಿಷಪೂರಿತವಾಗಿತ್ತೋ ಏನೋ? ಅದನ್ನು ತಿಂದು ನಾಯಿ ಸತ್ತಿರಬೇಕು. ನಾನು ಅದನ್ನು ತಿನ್ನಲಿಲ್ಲ. ತಿಂದಿದ್ದರೆ ನನಗೂ ಏನಾದರೂ ಆಗುತ್ತಿತ್ತು! ಅದನ್ನು ತಿನ್ನದೆ ಇದ್ದುದರಿಂದ ನಾನೀಗ ಬದುಕುಳಿದಿದ್ದೇನೆ ಎಂದು ಉಳಿದ ಪ್ರಯಾಣಿಕರಿಗೆಲ್ಲ ಹೇಳುತ್ತ ಹೋದರು. ಅಲ್ಲಿದ್ದವರಲ್ಲಿ ಅನೇಕ ಮಂದಿ ರಾತ್ರಿಯ ಬಾತ್ ತಿಂದಿದ್ದವರೂ ಇದ್ದರು.
ತಾವು ವಿಷಪೂರಿತ ಬಾತ್ ತಿಂದಿರಬಹುದು ಎನ್ನುವುದು ಗೊತ್ತಾಗುತ್ತಿದ್ದಂತೆ, ಕೆಲವರು ಹೊಟ್ಟೆ ತೊಳಿಸುತ್ತಿದೆ ಎಂದರೆ, ಇನ್ನು ಕೆಲವರು ನನಗೆ ವಾಂತಿ ಬರುವಂತಾಗುತ್ತಿದೆ ಎಂದರು. ಹೀಗೆ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತ ತಮ್ಮತಮ್ಮ ಸಂಕಟ ಹೇಳಿಕೊಳ್ಳುತ್ತ ಹೋದರು.
ಕೆಲವೇ ನಿಮಿಷಗಳಲ್ಲಿ ಅನೇಕರು ಅಸ್ವಸ್ಥರಾದರು. ಹೊಟ್ಟೆಕಿವುಚುತ್ತಿದೆ ಎಂದು ಹೇಳಿ ಬಿದ್ದವರು ಕೆಲವಾದರೆ, ವಾಂತಿ ಮಾಡಿಕೊಳ್ಳಲು ಎದ್ದು ಹೋದವರು ಮತ್ತೆ ಕೆಲವರು. ತಕ್ಷಣ ಪ್ರವಾಸದ ವ್ಯವಸ್ಥಾಪಕರು ಅಸ್ವಸ್ಥರಾಗಿದ್ದವರನ್ನೆಲ್ಲ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಪ್ರಯಾಣಿಕರಲ್ಲಿ ಅರ್ಧಕ್ಕರ್ಧ ಜನ ಆಸ್ಪತ್ರೆಗೆ ದಾಖಲಾದರು. ಎಲ್ಲರ ಬಾಯಲ್ಲೂ ರಾತ್ರಿ ತಮಗೆ ಬಡಿಸಲಾದ ಹಳಸು ಬಾತಿನ ಬಗ್ಗೆಯೇ ಮಾತು. ಎಲ್ಲರನ್ನೂ ಸಮಾಧಾನ ಮಾಡುವಷ್ಟರಲ್ಲಿ ವ್ಯವಸ್ಥಾಪಕರಿಗೆ ಸಾಕುಸಾಕಾಯಿತು. ಅಷ್ಟರಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ಸ್ಥಳೀಯರು ಹಿಂದಿನ ರಾತ್ರಿ ಬಡಿಸಿದ ಬಾತ್ ನಾಯಿ ಸತ್ತಿಲ್ಲ! ನಾಯಿ ಸತ್ತದ್ದು ಲಾರಿಗೆ ಸಿಕ್ಕಿ! ಎಂದು ಹೇಳಿದ ತಕ್ಷಣ ಅಸ್ವಸ್ಥರಾಗಿದ್ದವರೆಲ್ಲ ಚೇತರಿಸಿಕೊಂಡರು.
ಹೊಟ್ಟೆ ತೊಳಸಿದವರು, ವಾಂತಿ ಮಾಡಿಕೊಳ್ಳುವಂತಿದ್ದವರು ಎಲ್ಲೂ ನಗುನಗುತ್ತ ಮತ್ತೆ ಬಸ್ ಹತ್ತಿದರು. ಅಸ್ವಸ್ಥರಾಗಿದ್ದವರಿಗೆ ಚಿಕಿತ್ಸೆ ನೀಡಿದ ವೈದ್ಯರು, ನಿಮ್ಮೆಲ್ಲರ ಅಸ್ವಸ್ಥತೆ ನಿಮ್ಮ ಮನಸ್ಸಿನ ಕಲ್ಪನೆಯಿಂದ ಆಯಿತು ಎಂದು ಹೇಳಿದರು.
ಮೇಲಿನ ಘಟನೆಯಲ್ಲಿ ಬಹುತೇಕ ಜನ ಪ್ರಯಾಣಿಕರು ಅಸ್ವಸ್ಥರಾಗಿದ್ದುದು, ದೈಹಿಕ ಕಾರಣಗಳಿಂದಾಗಿ ಅಲ್ಲ! ಅವರೆಲ್ಲ ಅಸ್ವ್ಥರಾಗಿದ್ದುದು ಮಾನಸಿಕ ಕಾರಣಗಳಿಂದಾಗಿ! ನುರಿತ ವೈದ್ಯರ ಪ್ರಕಾರ ಅನೇಕ ರೋಗಗಳು ಬರುವುದೂ, ವಾಸಿ ಆಗುವುದೂ ಮಾನಸಿಕ ಕಾರಣಗಳಿಂದಾಗಿಯೇ ಅಂತೆ! ನಮ್ಮ ಮನಸ್ಸು ಗಟ್ಟಿಯಾಗಿದ್ದರೆ, ಸಣ್ಣ-ಪುಟ್ಟ ಕಾಯಿಲೆಗಳು ದೂರವೇ ಉಳಿಯುತ್ತವಂತೆ!
💐🌹💐🌹💐🌹💐🌹💐
3
🌻ದಿನಕ್ಕೊಂದು ಕಥೆ🌻
*ದಿವ್ಯಜೀವನದ ಮಹಾಪ್ರಸಾದ ಗುರು*
ಮಗುವಿನ ನಗೆಗೆ, ಅದರ ಬಗೆ ಬಗೆಯ ಚಟುವಟಿಕೆಗಳಿಗೆ ಸದಾ ಲವಲವಿಕೆಯಿಂದಿರುವ ಅದರ ಚೇತೋಹಾರಿ ಆಟಗಳಿಗೆ ಕಾರಣ ವಾಗಿರುವುದು ಅದರ ಹೃದಯದಲ್ಲಿನ ಪ್ರಾಣ ಸ್ಪಂದನ. ಅದಿಲ್ಲದಿರೆ ಆ ನಗುವೂ ಇಲ್ಲ. ಆದರೆ ಪ್ರಾಣಸ್ಪಂದನ ಕಣ್ಣಿಗೆ ಕಾಣದು. ಹಾಗಂತ ಹೇಳಲಾಗದು. ವಿದ್ಯುತ್ ದೀಪ ಬೆಳಗುತ್ತದೆ. ಆದರೆ ವಿದ್ಯುತ್ ಕಣ್ಣಿಗೆ ಕಾಣುವುದಿಲ್ಲ. ಹಾಗೆಯೇ ಎಣ್ಣೆ ಕಾಳಿನಲ್ಲಿ ಎಣ್ಣೆ ಇರುತ್ತದೆ. ಹಾಗೆಯೇ ದೇವರು ಎಲ್ಲೆಡೆ ಇರುತ್ತಾನೆ. ಅದ್ಭುತವಾಗಿ ಕಾಣುವ ಮಾನವ ಜೀವನ ಒಂದಲ್ಲ ಒಂದು ದಿನ ಕೊನೆಯಾಗುವುದು ನಿಜ. ಇಂತಿಷ್ಟು ವರ್ಷಗಳ ಈ ಜೀವನ ಚೆನ್ನಾಗಿರಬೇಕು. ಅಂಗಡಿಯೊಂದರಿಂದ ತರುವ ಬ್ಯಾಟರಿ ಷೆಲ್ ಚೆನ್ನಾಗಿದೆಯೇ? ಇಲ್ಲವೇ? ಎಂದು ಪರೀಕ್ಷಿಸಿ ತರುತ್ತೇವೆ. ಅದರ ಬಾಳಿಕೆ ಬಗ್ಗೆ ಚೆನ್ನಾಗಿ ಯೋಚಿಸುತ್ತೇವೆ. ಅಪರೂಪವಾಗಿ ಪಡೆದಿರುವ ಈ ಪವಿತ್ರವಾದ ನಶ್ವರವಾದ ಮಾನವ ಜೀವನ ವನ್ನು ಇರುವಷ್ಟು ಕಾಲವಾದರೂ ಉತ್ತಮ ಗೊಳಿಸಬೇಕೆಂದು ಯೋಚಿಸಬೇಕು. ಇದಕ್ಕಾಗಿ ಗುರು ಗಳು ತಿಳಿದವರ ನೆರವು ಪಡೆದುಕೊಳ್ಳಬೇಕು.
ರಾಜನಿರಲಿ, ರೈತನಿರಲಿ, ಸ್ವಾಮಿ ಇರಲಿ, ಸೇವಕನಿರಲಿ ತನ್ನ ಪ್ರದೇಶದಲ್ಲಿದ್ದರೆ ಗೌರವಾದರ. ಬೇರೆಡೆ ಹೋದರೆ ಆತನ ಕೀರ್ತಿ ಕಡಿಮೆಯಾಗುತ್ತದೆ. ಒಂದು ದೇಶದಲ್ಲಿ ಪೂಜಿಸಲ್ಪಡುವ ದೇವರಿಗೆ ಇನ್ನೊಂದು ದೇಶದಲ್ಲಿ ಮಹತ್ವವಿರುವುದಿಲ್ಲ. ವಿಷಯ ಹೀಗಿರುವಾಗ ನಾವು ಸುಮ್ಮನೆ ಇಲ್ಲದ ಆಸೆ, ಆಕಾಂಕ್ಷೆಗಳನ್ನು ಬೆಳೆಸಿಕೊಂಡರೆ ನಿರಾಸೆ ಕಟ್ಟಿಟ್ಟ ಬುತ್ತಿ. ನಮಗೆ ಜೀವನವೇ ಅರ್ಥವಾಗಿಲ್ಲದಾಗ ನಂತರ ಏನಾಗಬಹುದೆಂದು ಖಂಡಿತ ಗೊತ್ತಿಲ್ಲ. ಅಶಾಶ್ವತವಾದ ಜೀವನದ ಅವಧಿ ಸುಂದರ ಗೊಳಿಸಿಕೊಳ್ಳಲು ಗುರುವೊಬ್ಬರ ಮಾರ್ಗದರ್ಶನ ಪಡೆದರೆ ಜೀವನಕ್ಕೆ ಅರ್ಥ ಬರುತ್ತದೆ.
ಒಂದು ದಿನ ಅಲೆಗ್ಝಾಂಡರ್ ಮಹಾರಾಜನು ದಾರಿಯಲ್ಲಿ ಬರುತ್ತಿದ್ದಾಗ ಆತನ ಪರಮಗುರು ಅರಿಸ್ಟಾಟಲ್ ಭೇಟಿಯಾಗುತ್ತಾರೆ.
ತಕ್ಷಣವೇ ಸೋಲನ್ನೇ ಕಂಡಿರದ ಈ ಮಹಾರಾಜ ಅರಿಸ್ಟಾಟಲ್ಗೆ ಮಂಡಿಯೂರಿ, ತಲೆ ಬಾಗಿ ನಮಸ್ಕರಿಸುತ್ತಾನೆ. ರಾಜನ ವಿನಯವನ್ನು, ಆತನ ನಮಸ್ಕಾರವನ್ನು ಸೌಜನ್ಯದಿಂದಲೇ ಸ್ವೀಕರಿಸಿದ ಗುರು ಅಲ್ಲಿಂದ ತೆರಳಿದ ನಂತರ ಅಲೆಗ್ಝಾಂಡರ್ನಿಗೆ ಮಂತ್ರಿ ಕೇಳುತ್ತಾನೆ, ‘ಮಹಾಪ್ರಭು, ಅಜೇಯರು. ನಿಮ್ಮ ತಂದೆ ಸುಂದರ ದೇಹವನ್ನಿತ್ತು ನಿಮಗೆ ಯುದ್ಧ ಕಲೆಯನ್ನು ಕಲಿಸಿದರು. ಸಮಸ್ತ ಐಶ್ವರ್ಯವನ್ನು ಕೊಟ್ಟು ತಮ್ಮನ್ನು ಏಕಚಕ್ರಾಧಿಪತಿಯನ್ನಾಗಿ ಮಾಡಿದರು. ಇಂಥ ಜನ್ಮ ಕೊಟ್ಟ ತಂದೆಗಿಂತಲೂ ಹೆಚ್ಚಿನ ಗೌರವವನ್ನು ಈ ಭಿಕ್ಷುಕನಂತಿರುವ ಬಡ ಗುರುವಿಗೆ ಕೊಡುವಿರಲ್ಲ. ಏಕೆ?’
ಆಗ ಮಹಾರಾಜ ತನ್ನ ಮಂತ್ರಿಗೆ ನೀಡುವ ಉತ್ತರ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು ಅಂಥದ್ದು. ‘ನನ್ನ ತಂದೆ ನನ್ನನ್ನು ಸ್ವರ್ಗದಿಂದ ಈ ಭೂಮಿಗೆ ತಂದ. ಗುರುವು ನನ್ನನ್ನು ಈ ಭೂಮಿಯಿಂದ ಸ್ವರ್ಗದೆತ್ತರಕ್ಕೆ ಏರಿಸಿದ. ತಂದೆ ನನಗೆ ನಾಶವಾಗುವ ದೇಹವನ್ನು, ಸಂಪತ್ತನ್ನು ಕೊಟ್ಟ. ನನ್ನ ಗುರುವು ನನಗೆ ಅಮರಸಿರಿಯನ್ನು, ದಿವ್ಯವಾದ ಜೀವನವನ್ನು ಕರುಣಿಸಿದ. ಅಂಥ ಮಹಾಗುರುವನ್ನು ನಾನು ಹೇಗೆ ಗೌರವಿಸದೇ ಇರಬೇಕು?’ ಎಂದ. ಗುರುವು ಯಾವುದೇ ರೂಪದಲ್ಲಿರಬಹುದು. ಕೆಲವು ಸಂದರ್ಭ ಗಳಲ್ಲಿ ಪ್ರಕೃತಿಯು ನಮಗೆ ಅನೇಕ ತರಹದ ಸತ್ಯಗಳನ್ನು ತಿಳಿಸಿ ಗುರುಸ್ಥಾನ ಪಡೆಯುತ್ತದೆ. ಪ್ರಕೃತಿಯ ಹಾಗೆಯೇ ತಾಯಿಯು ನಮಗೆ ಹಲವಾರು ಸಂದರ್ಭಗಳಲ್ಲಿ ದಾರಿ ತೋರಿಸಿ ಕಾಪಾಡುತ್ತಾಳೆ.
ಬಲ್ಲವರಿಂದ ಜೀವನದ ಅರ್ಥ ತಿಳಿದು, ಇಲ್ಲಿ ಜೀವಿಸುವ ಪ್ರತಿ ಜೀವಿಯೊಡನೆಯೂ ಸ್ಪಂದಿಸುತ್ತಾ ಬಾಳಿದರೆ ಜೀವನವೇ ಸ್ವರ್ಗವಾಗ್ತುದೆ. ಅಂದು ಮುಂದೆ ಗುರಿಯಿತ್ತು. ಹಿಂದೆ ಗುರುವಿದ್ದ. ಸಾಗುತ್ತಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ. ಹಿಂದೆ ಗುರುವಿಲ್ಲ. ಸಾಗುತ್ತಿದೆ ರಣ ಹೇಡಿಗಳ ಹಿಂಡು ಎಂಬಂತೆ ಆಗಿದೆ. ಬಾಳಿಗೆ ಗುರಿಯೊಂದನ್ನು ಇಟ್ಟುಕೊಂಡು, ಗುರುವನ್ನು ಪಡೆದುಕೊಂಡು ಸಾಗೋಣ.
ಸಂಗ್ರಹ
🌎ಶರಣು ವಿಶ್ವವಚನ ಫೌಂಡೇಷನ್🌎
💐🌹💐🌹💐🌹💐🌹💐
4
*ದಿನಕ್ಕೊಂದು ಕಥೆ🌻🌻
💐 *ಮೊಟ್ಟೆ ಮೊದಲಾ ಕೋಳಿ ಮೊದಲಾ?*💐
ಒಂದೂರಿನಲ್ಲಿ ಅಗಧ ಎಂಬ ಮುಂಗೋಪಿ ಮಹಾರಾಜನಿದ್ದ. ಅವನ ರಾಜ್ಯದಲ್ಲಿ ಎಲ್ಲರೂ ಸುಖದಿಂದ ಬಾಳುತ್ತಿದ್ದರು. ಒಂದು ದಿನ ಭೋಜನ ತಯಾರಿಸುವ ಮನೆಯಲ್ಲಿ ಮಾಧ ಎಂಬ ಒಬ್ಬ ಅಡುಗೆ ಭಟ್ಟ ಎರಡು ಮೊಟ್ಟೆಗಳನ್ನು ಕದ್ದ. ಅದ್ಹೇಗೊ ಭೋಜನ ಕೂಟದ ಮೇಲ್ವಿಚಾರಕನಿಗೆ ತಿಳಿಯಿತು. ನಂತರ ಅವನನ್ನು ಸಭೆಯಲ್ಲಿ ಮಹಾರಾಜನ ಮುಂದೆ ವಿಚಾರಣೆಗೆ ಹಾಜರು ಪಡಿಸಿದರು.
ಮಹಾರಾಜನು ಅವನನ್ನು, ನೀನು ಮೊಟ್ಟೆ ಕದ್ದದ್ದು ನಿಜವಾ ಎಂದು ಪ್ರಶ್ನಿಸಿದನು. ಮಾಧ ತಾನು ಕದ್ದದ್ದು ನಿಜ ಎಂದು ಒಪ್ಪಿಕೊಂಡ. ರಾಜ ಅವನನ್ನು ಪರೀಕ್ಷಿಸಿ ಒಂದು ಸವಾಲನ್ನು ಕದ್ದ ಭಟನಿಗೆ ಹಾಕಿದ. 'ಮೊಟ್ಟೆ ಮೊದಲಾ ಕೋಳಿ ಮೊದಲಾ ಎಂಬುದನ್ನು ಹೇಳಬೇಕು, ಇಲ್ಲದಿದ್ದರೆ ನಿನಗೆ ಶಿರಚ್ಛೇದನದ ಶಿಕ್ಷೆ ನೀಡಲಾಗುತ್ತದೆ' ಎಂದನು ರಾಜ.
ಮಾಧನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ತಲೆ ತಗ್ಗಿಸಿದ. ಆ ಆಸ್ಥಾನದಲ್ಲಿ ಒಬ್ಬ ಚತುರ ಮಂತ್ರಿ ಇದ್ದ. ಅವನ ಹೆಸರು ಮಾಣಿಕ್ಯ ಎಂದು. ಅವನು ಎದ್ದು ಎರಡು ಕೈಗಳನ್ನು ಜೋಡಿಸಿ, 'ಮಹಾಪ್ರಭು, ಅವನಿಗೆ ಸ್ವಲ್ಪ ಕಾಲಾವಕಾಶ ನೀಡಿದರೆ ಒಳ್ಳೆಯದು' ಎಂದು ಗೋಗರೆದ. ಅದಕ್ಕೆ ಮಹಾರಾಜ, 'ಆಗಲಿ, ಅವನು ಒಂದು ವೇಳೆ ಉತ್ತರಿಸದಿದ್ದರೆ ನಿನಗೆ ಆ ಶಿಕ್ಷೆಯನ್ನು ವರ್ಗಾಯಿಸುತ್ತೇವೆ. ಇದಕ್ಕೆ ನಿನ್ನ ಸಮ್ಮತಿ ಇದೆಯಾ' ಎಂದು ಕೇಳಿದ. ಮಾಣಿಕ್ಯ ಮಂತ್ರಿ ಯೋಚಿಸದೆ ಆಗಲಿ ಮಹಾಸ್ವಾಮಿ ಎಂದು ಅವರ ಸವಾಲನ್ನು ಸ್ವೀಕರಿಸಿದ.
ಮರುದಿನ ಅದೇ ಸಮಯಕ್ಕೆ ಮಾಣಿಕ್ಯನನ್ನು ಬಿಟ್ಟು ಎಲ್ಲರೂ ಸಭೆಯಲ್ಲಿ ಹಾಜರಿದ್ದರು. ಹತ್ತು ನಿಮಿಷವಾಯಿತು. ಅರ್ಧ ಗಂಟೆ ಕಳೆಯಿತು, ಮಂತ್ರಿಯ ಸುಳಿವಿಲ್ಲ. ಅಲ್ಲಿ ನೆರೆದಿದ್ದ ಜನರೆಲ್ಲರೂ ಅವನಿಗೆ ಉತ್ತರ ದೊರೆತಿಲ್ಲ, ಪ್ರಾಣಭಯದಿಂದ ಸಭೆಗೆ ಹಾಜರಾಗಿಲ್ಲ ಎಂದು ತಿಳಿದುಕೊಂಡು ಕುಚೇಷ್ಟೆ ಮಾಡಿದರು. ರಾಜನು ಹಾಗೆ ಭಾವಿಸಿ ಭಟನಿಗೆ ಶಿಕ್ಷೆ ವಿಧಿಸಿ ಸಭೆಯನ್ನು ವಿಸರ್ಜಿಸಲು ತೀರ್ಮಾನಿಸಿದ.
ಅಷ್ಟರಲ್ಲಿ ಮಂತ್ರಿ ಸಭೆಗೆ ಬಂದ. ಅವನ ಜೊತೆ ಒಬ್ಬ ಅಪರಿಚಿತ ವ್ಯಕ್ತಿಯಿದ್ದ. ಮಹಾರಾಜ ಸಿಟ್ಟಾಗಿ 'ಇದೇನು ನೀನು ಸಭೆಗೆ ನೀಡುವ ಮರ್ಯಾದೆ? ಇಷ್ಟು ತಡವಾಗಿ ಬಂದದಕ್ಕೆ ನಿನಗೆ ಶಿಕ್ಷೆ ವಿಧಿಸಲಾಗುತ್ತದೆ' ಎಂದ. ದಯವಿಟ್ಟು ನಾನು ಹೇಳುವುದನ್ನು ಸಾವಧಾನವಾಗಿ ಕೇಳಬೇಕು ಎಂದು, 'ನಾನು ಸರಿಯಾದ ಸಮಯಕ್ಕೆ ಬರುತ್ತಿದ್ದೆ. ದಾರಿಯಲ್ಲಿ ನಡೆದು ಬರುತ್ತಿರಬೇಕಾದರೆ ಈ ವ್ಯಕ್ತಿ(ಅಪರಿಚಿತನೆಡೆಗೆ ಕೈ ತೋರಿಸಿ) ಎದುರಾಗಿ ಒಂದು ಪ್ರಶ್ನೆಯನ್ನು ಕೇಳಿದ. ಎಷ್ಟು ಹೊತ್ತು ಕುಳಿತು ಯೋಚಿಸಿದರೂ ನನಗೆ ಉತ್ತರ ದೊರೆಯಲಿಲ್ಲ. ನಮ್ಮ ಮಹಾರಾಜರು ಬುದ್ಧಿವಂತರು ಉತ್ತರಿಸುತ್ತಾರೆ ಎಂದು ಕರೆ ತಂದೆ. ಅದಕ್ಕೆ ತಡವಾಯಿತು ಕ್ಷಮಿಸಿ' ಎಂದ ಮಂತ್ರಿ.
ರಾಜ ಆಗಲಿ ಅದೇನು ಪ್ರಶ್ನೆ ಕೇಳು ಎನ್ನುವಂತೆ ಕೈ ಆಡಿಸಿದ. 'ರಾಜರೇ, ಸೂರ್ಯ ಉದಯಿಸಿದಾಗ ಹಗಲು, ನಿರ್ಗಮಿಸಿದಾಗ ರಾತ್ರಿ ಎನ್ನುತ್ತೇವೆ. ಹಾಗಾದರೆ ಹಗಲು ಮೊದಲಾ? ಇರುಳು ಮೊದಲಾ?' ಎಂದ. ನಂತರ ರಾಜ ಯೋಚಿಸಿದ. ನಿಧಾನವಾಗಿ ಅರ್ಥವಾದ ಮೇಲೆ ಕೋಪ ಕಡಿಮೆಯಾಗಿ 'ಭಲೇ ಮಂತ್ರಿ, ಇದು ನೀನು ಹೂಡಿರುವ ಉಪಾಯವೇ ಸರಿ. ಈಗ ಹೇಳು ನಾನೇನು ಮಾಡಬೇಕು. ಆ ಭಟನನ್ನು ಶಿಕ್ಷೆಯಿಂದ ಮುಕ್ತಿಗೊಳಿಸಿದ್ದೇನೆ' ಎಂದನು.
'ಮಹಾರಾಜರೆ, ನೀವು ಊಹಿಸಿದಂತೆ ನಾನು ಹೂಡಿದ್ದು ಉಪಾಯವೇ. ರಾಜರಿಗೆ ಪ್ರಜೆಗಳ ಸುಖ- ದುಃಖ ಎರಡೂ ತಿಳಿಯುವಂತಿರಬೇಕು. ಕದ್ದವನನ್ನು ಶಿಕ್ಷಿಸುವ ಮೊದಲು ಸಕಾರಣವನ್ನು ತಿಳಿಯಬೇಕು. ಅವನು ಕದ್ದದ್ದು ಚಿನ್ನವನ್ನೋ ವಜ್ರವನ್ನೋ ಅಲ್ಲವಲ್ಲ? ಹೊಟ್ಟೆ ತುಂಬುವ ಸಲುವಾಗಿ ಮೊಟ್ಟೆ ಕದ್ದನೆಂದರೆ ಅದು ಅವನ ಬಡತನವನ್ನು ಸೂಚಿಸುತ್ತದೆ' ಎಂದ.
ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಮಾಧನನ್ನು ಅವನ ಹೆಂಡತಿ ಮಕ್ಕಳನ್ನು ಕರೆಸಿ ಬೇಕಾದ ಆಹಾರ ಸಾಮಗ್ರಿಗಳನ್ನು ನೀಡಿ ಕಳುಹಿಸಿದ. ನಂತರ ಮಂತ್ರಿಯನ್ನು ಕರೆದು, 'ನೀನು ನನಗೆ ಬುದ್ಧಿ ಹೇಳುವ ಹಾಗೆ ನಡೆದುಕೊಂಡಿದ್ದಕ್ಕೆ ಇಂದಿನಿಂದ ಪ್ರತಿದಿನ ನೂರೊಂದು ಮೊಟ್ಟೆಯನ್ನು ತಿನ್ನಬೇಕು' ಎಂದ. ರಾಜನ ಈ ವಿನೋದವನ್ನು ಕೇಳಿ ಸಭೆಯಲ್ಲಿ ನೆರೆದಿದ್ದವರೆಲ್ಲ ಗೊಳ್ಳೆಂದು ನಕ್ಕರು.
ಸಂಗ್ರಹ
🌎ಶರಣು ವಿಶ್ವವಚನ ಫೌಂಡೇಷನ್🌎
💐🌹💐🌹💐🌹💐🌹💐
5
🌻ದಿನಕ್ಕೊಂದು ಕಥೆ🌻
*ಹಂತಕರನ್ನು ಮರೆಯುವುದಿಲ್ಲ ! ಬದುಕಿಸಿದವರ ನೆನಪು ಇರುವುದಿಲ್ಲ*
ನಿಜಜೀವನದ ಎರಡು ಘಟನೆಗಳು
1864ರಲ್ಲಿ ಅಮೇರಿಕಾದ ನ್ಯೂಜೆರ್ಸೀ ರಾಜ್ಯದ ಜೆರ್ಸೀ ನಗರದ ರೈಲ್ವೇ ನಿಲ್ದಾಣದಲ್ಲಿ ನಡೆದ ಘಟನೆ. ಅಂದು ನಿಲ್ದಾಣ ಪ್ರಯಾಣಿಕರಿಂದ ತುಂಬಿತುಳುಕುತ್ತಿತ್ತು. ರೈಲಿನಿಂದ ಇಳಿಯುವವರ ಮತ್ತು ಹತ್ತುವವರ ನೂಕುನುಗ್ಗುಲು. ಆ ನೂಕುನುಗ್ಗಲಿಗೆ ಸಿಕ್ಕಿದ ರಾಬರ್ಟ್ ಎಂಬ ಯುವಕ ಕಾಲು ಜಾರಿ ರೈಲ್ವೇ ಕಂಬಿಗಳ ಮೇಲೆ ಬಿದ್ದರು. ಅಲ್ಲಿದ್ದ ಮತ್ತೊಬ್ಬ ಯುವಕ ತಮಗೆ ಒದಗಬಹುದಾದ ಪ್ರಾಣಾಪಾಯವನ್ನೂ ಲೆಕ್ಕಿಸದೆ ಕೆಳಗೆ ಧುಮುಕಿ ರಾಬರ್ಟ್ ಅವರ ಕಾರ್ಲ ಹಿಡಿದು ಮೇಲಕ್ಕೆತ್ತಿ ತಂದರು. ಅವರ ಪ್ರಾಣವನ್ನು ಉಳಿಸಿದರು.
ರಾಬರ್ಟ್ ಅವರು ತಮ್ಮನ್ನು ರಕ್ಷಿಸಿದ ಯುವಕನ ಉಪಕಾರವನ್ನು ತುಂಬು ಹೃದಯದಿಂದ ವಂದಿಸಿದರು. ಹಾಗೆ ವಂದಿಸುವಾಗ ಆ ಯುವಕನ ಮುಖ ನೋಡಿದರು. ತಕ್ಷಣ ಅವರನ್ನು ಗುರುತಿಸಿದರು. ಏಕೆಂದರೆ ಆ ಯುವಕ ಬಹಳಷ್ಟು ಜನರಿಗೆ ಪರಿಚಿತರಾಗಿದ್ದ ಪ್ರಖ್ಯಾತ ನಟ. ಅವರು ಶೇಕ್ಸ್ ಪಿರ್ಯ ರಚಿತ ನಾಟಕಗಳಲ್ಲಿ ನಾಯಕ ನಟನಾಗಿ ನಟಿಸಿ ಜನಪ್ರಿಯರಾದ ಎಡ್ವಿನ್ ಬೂತ್! ರಾಬರ್ಟ್ ಅವರು ಕೂಡ ಸಾಮಾನ್ಯರಲ್ಲ. ಅವರು ಆಗ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಮ್ ಲಿಂಕನ್ ಅವರ ಪುತ್ರ!
ಮುಂದಿನ ವರ್ಷ ಅಂದರೆ 1865ರಲ್ಲಿ ನಡೆದ ಮತ್ತೊಂದು ಮಹತ್ವದ ಘಟನೆ. ಆಗ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಮ್ ಲಿಂಕನ್ ಅವರು ಪುರೋಗಾಮೀ ಚಿಂತಕರು. ಅವರು ಅಮೇರಿಕಾದಲ್ಲಿ ನೆಲೆಸಿದ್ದ, ಗುಲಾಮಗಿರಿಯಲ್ಲಿ ನರಳುತ್ತಿದ್ದ, ಆಫ್ರಿಕಾ ಮೂಲದ ಕರಿಯ ಜನಾಂಗದ ವ್ಯಕ್ತಿಗಳಿಗೆ ಮತದಾನದ ಹಕ್ಕನ್ನು ಕೊಡುವ ಕಾನೂನನ್ನು ಜಾರಿಗೆ ತಂದಿದ್ದರು.
ಇದು ಕೆಲವು ಬಿಳಿಯ ಜನಾಂಗದ ವ್ಯಕ್ತಿಗಳಿಗೆ ಅಸಮಾಧಾನ ಉಂಟುಮಾಡಿತ್ತು. ಅನೇಕರು ಅಬ್ರಹಾಮ್ ಲಿಂಕನ್ನರ ವಿರುದ್ಧ ಏನನ್ನಾದರೂ ಮಾಡಬೇಕೆಂದು ಚಿಂತಿಸುತ್ತಿದ್ದರು. ಅವರಲ್ಲಿ ಒಬ್ಬ ಯುವಕ ಇಬ್ಬರು ಸಂಗಡಿಗರೊಂದಿಗೆ ಸಂಚು ಹೂಡಿ ಅಬ್ರಹಾಮ್ ಲಿಂಕನ್ ಅವರನ್ನು ಗುಂಡಿಟ್ಟು ಕೊಂದುಬಿಟ್ಟ. ಆ ಯುವಕನ ಹೆಸರು ಜಾನ್ ವಿಲ್ಕೀಸ್ ಬೂತ್! ಆತ ಎಡ್ವಿನ್ ಬೂತ್ ಅವರ ಸ್ವಂತ ತಮ್ಮ!
ಇಲ್ಲಿನ ವಿಚಿತ್ರವೆಂದರೆ ಅಣ್ಣ ಎಡ್ವಿನ್ ಅವರು ಅಬ್ರಹಾಮ್ ಲಿಂಕನ್ನರ ಮಗನ ಪ್ರಾಣವನ್ನು ಉಳಿಸಿದ್ದರು. ಆದರೆ ಅವರ ತಮ್ಮ ಜಾನ್ ಬೂತ್ ಅವರು ಅಬ್ರಹಾಮ್ ಲಿಂಕನ್ನರ ಪ್ರಾಣವನ್ನು ತೆಗೆದಿದ್ದರು. ಇದಾದ ನಂತರ ಎಡ್ವಿನ್ ಬೂತ್ ಅವರನ್ನು ನಾಟಕಗಳ ನಾಯಕ ನಟ ಯಾರೂ ಗುರುತಿಸುತ್ತಿರಲಿಲ್ಲ. ಅವರನ್ನು ನೋಡಿದ ತಕ್ಷಣ ಎಲ್ಲರೂ ಅವರನ್ನು ಅಬ್ರಹಾಮ್ ಲಿಂಕನ್ನರ ಹಂತಕನ ಅಣ್ಣ ಎಂದೇ ಗುರುತಿಸುತ್ತಿದ್ದರು. ಬಹಳ ವರ್ಷಗಳವರೆಗೆ ಅಲ್ಲಿನ ಜನರು ಎಡ್ವಿನ್ ಬೂತ್ ಎಂದ ತಕ್ಷಣ ಓಹ್! ಅಬ್ರಹಾಮ್ ಲಿಂಕನ್ನರನ್ನು ಹತ್ಯೆ ಮಾಡಿದ ಜಾನ್ ವಿಲ್ಕೀಸ್ ಬೂತ್ ಅವರ ಅಣ್ಣ ಎಂದೇ ನೆನಪಿಸಿಕೊಳ್ಳುತ್ತಿದ್ದರಂತೆ! ಅಬ್ರಹಾಂ ಲಿಂಕನ್ನರ ಮಗನನ್ನು ಬದುಕಿಸಿದಾತನೆಂದು ಯಾರೂ ನೆನಪಿಸಿಕೊಳ್ಳುತ್ತಿರಲಿಲ್ಲವಂತೆ!
ಈಗ ಮನುಷ್ಯರ ವಿಚಿತ್ರ ಸ್ವಭಾವ ಏನೆಂದು ನೀವು ಊಹಿಸಿರಬಹುದು. ಅದೇನೆಂದರೆ ಯಾರಿಗಾದರೂ ಒಳ್ಳೆಯದು ಅದನ್ನು ಅವರು ಒಂದೆರಡು ದಿನಗಳಲ್ಲೇ ಮರೆತು ಬಿಡುತ್ತಾರೆ! ಕೆಟ್ಟದ್ದನ್ನು ಮಾಡಿದ್ದರೆ, ಅದನ್ನು ಅವರು ಎಂದಿಗೂ ಮರೆಯುವುದಿಲ್ಲ! ದೀರ್ಘಕಾಲ ಮಾಡಿದ ಕೆಡುಕನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ! ಹಂತಕರನ್ನು ಯಾರೂ ಮರೆಯುವುದಿಲ್ಲ! ಆದರೆ ಬದುಕಿಸಿದವರು ಬಹಳ ಬೇಗ ನೆನಪಿನಿಂದ ಮರೆಯಾಗುತ್ತಾರೆ!
ಈಗ ಇದು ನಮಗೆ ತೀರ್ಮಾನದ ಸಮಯ! ನಾವು ಹಂತಕರಾಗುವುದು ಒಳ್ಳೆಯದೋ, ಬದುಕಲು ನೆರವಾಗುವುದು ಒಳ್ಳೆಯದೋ?
ಯಾರು ಏನೇ ಹೇಳಲಿ ಬದುಕಲು ನೆರವಾಗಿ ಮಾನವೀಯತೆ ಮೆರೆಯೋಣ
ಸಂಗ್ರಹ
ಶರಣು ವಿಶ್ವವಚನ ಫೌಂಡೇಷನ್
💐🌹💐🌹💐🌹💐🌹💐
6
🌻ದಿನಕ್ಕೊಂದು ಕಥೆ🌻
*ಎಲ್ಲಿದೆ ಸ್ವರ್ಗ? ಎಲ್ಲಿದೆ ನರಕ? ನಿಮಗೆ ಗೊತ್ತೇನು?*
‘ನಿಮಗೊಂದು ಪ್ರಶ್ನೆ! ಸ್ವರ್ಗ-ನರಕಗಳೆಂಬುವುದು ಇವೆಯಾ? ಎಲ್ಲಿವೆ? ಹೇಗಿವೆ?’ಈ ಪ್ರಶ್ನೆಯನ್ನು ನಮ್ಮ ಸ್ವಾಮೀಜಿಯವರಿಗೆ ಕೇಳಿದಾಗ ಅವರು ಜೋರಾಗಿ ನಕ್ಕು ‘ಸ್ವರ್ಗ-ನರಕಗಳ ಬಗ್ಗೆ ಕೇಳಿದ್ದೇನೆ. ಸತ್ತವರು ಮಾತ್ರ ಅಲ್ಲಿಗೆ ಹೋಗುತ್ತಾರಲ್ಲವೇ? ನಾನಿನ್ನೂ ಸತ್ತಿಲ್ಲ. ಅಲ್ಲಿಗೆ ಹೋಗಿಲ್ಲ. ನನಗೆ ಗೊತ್ತಿರುವ ಅನೇಕರು ಸತ್ತಿದ್ದಾರೆ. ಆದರೆ ಅವರು ಯಾರೂ ತಿರುಗಿ ಬಂದಿಲ್ಲ. ವರದಿ ತಂದಿಲ್ಲ. ಆದ್ದರಿಂದಾಗಿ ಸ್ವರ್ಗ-ನರಕಗಳ ಬಗ್ಗೆ ಏನು ಹೇಳಲಿ?’ಎಂದರು.
‘ಅವುಗಳ ಬಗ್ಗೆ ಎಲ್ಲ ದೇಶಗಳವರೂ, ಧರ್ಮಗಳವರೂ ಮಾತನಾಡುತ್ತಾರಲ್ಲ? ಅದರಲ್ಲೂ ನರಕದ ವಿಧ ವಿಧವಾದ ವರ್ಣನೆಗಳನ್ನು ಮಾಡುತ್ತಾರೆ. ಏಳು ಬಗೆಯ ನರಕಗಳಂತೆ. ಒಂದಕ್ಕಿಂತ ಒಂದು ಘೋರವಂತೆ. ಪಾಪ ಮಾಡಿದವರ ಪಾಪಗಳ ಪ್ರಮಾಣಕ್ಕೆ ಅನುಸಾರವಾಗಿ ಬೇರೆ ಬೇರೆ ನರಕಗಳ ಶಿಕ್ಷೆ ಸಿಗುತ್ತದಂತೆ’ಎಂದು ಮತ್ತೆ ಕೇಳಲಾಯಿತು.
ಸ್ವಾಮೀಜಿಯವರು ‘ಒಳ್ಳೆಯದನ್ನು ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರೆ ಜನ ನಂಬದಿರಬಹುದು. ಆದರೆ ಕೆಟ್ಟದ್ದು ಮಾಡಿದರೆ ನರಕಕ್ಕೆ ಹೋಗುತ್ತೀರೆಂದರೆ ಅದನ್ನು ಹೆದರಿಕೆಯಿಂದ ನಂಬುತ್ತಾರೆ. ಜನ ಕೆಟ್ಟ ಪರಿಣಾಮಗಳಿಗೆ ಬೆಲೆ ಕೊಡುತ್ತಾರೆಯೇ ಹೊರತು ಒಳ್ಳೆಯ ಪರಿಣಾಮಗಳಿಗೆ ಬೆಲೆ ಕೊಡುವುದಿಲ್ಲ’ಎಂದರು. ಈ ಕುರಿತು ಅವರೇ ಒಂದು ಕತೆ ಹೇಳಿದರು. ರಾಜನ ಸೇವಕನೊಬ್ಬ ಒಮ್ಮೆ ದೂರದೂರಿಗೆ ಹೋದನಂತೆ. ಆ ಊರಿನವರು ಅವನನ್ನೇ ರಾಜನಂತೆ ಕಂಡರು. ಆದರದಿಂದ ಸ್ವಾಗತಿಸಿದರು.
ಬಿಡಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದರು. ಮಲಗುವುದಕ್ಕೆ ಮುಂಚೆ ಅವರೆಲ್ಲ, ‘ನಿಮಗೇನಾದರು ಬೇಕಾದರೆ ನಮ್ಮನ್ನು ಕರೆಯಿರಿ. ನಾವು ನಿಮ್ಮ ಸೇವೆಗೆ ಸಿದ್ಧ’ಎಂದು ಆಶ್ವಾಸನೆ ನೀಡಿದರು. ಅವರು ತೋರಿದ ಆದರಾತಿಥ್ಯ ಗಳಿಗೆ ಸೇವಕ ಉಬ್ಬಿ ಹೋದ. ಮಧ್ಯರಾತ್ರಿಯವರೆಗೆ ನಿದ್ದೆಯೇ ಬರಲಿಲ್ಲ. ಬಾಯಾರಿಕೆ ಎನಿಸಿತು. ‘ನೀರು! ನೀರು!’ಎಂದು ಕೂಗಿದ. ಜನ ಗಾಢನಿದ್ದೆಯಲ್ಲಿದ್ದರು. ಇವನ ಕೂಗು ಅವರಿಗೆ ಕೇಳಿಸಲಿಲ್ಲ. ನಾಲ್ಕಾರು ಬಾರಿ ನೀರು ಎಂದು ಕೂಗಿದಾಗಲೂ ಯಾರೂ ಬರಲಿಲ್ಲ. ಸೇವಕನಿಗೆ ಸಿಟ್ಟು ಬಂತು. ‘ನೀರು! ನೀರು!’ಎಂದು ಪದೇ ಪದೆ ಗಟ್ಟಿಯಾಗಿ ಕಿರುಚಿದರೂ ಯಾರೂ ಎದ್ದು ಬರಲಿಲ್ಲ. ಆತ ಸ್ವಲ್ಪ ಯೋಚಿಸಿ ‘ಬೆಂಕಿ! ಬೆಂಕಿ!’ ಎಂದು ಜೋರಾಗಿ ಕಿರುಚತೊಡಗಿದ.
ಎಲ್ಲರೂ ದಡಬಡಿಸಿ ಎದ್ದು ತಮ್ಮ ಕೈಗೆ ಸಿಕ್ಕ ಚೆಂಬು, ಬಿಂದಿಗೆ, ಬಕೆಟ್ಗಳಲ್ಲಿ ನೀರು ತುಂಬಿಕೊಂಡು ಬೆಂಕಿ ಆರಿಸಲು ಓಡಿ ಬಂದರು. ಎಲ್ಲರ ಕೈಯಲ್ಲೂ ನೀರು ತುಂಬಿದ ಪಾತ್ರೆಗಳು. ಆದರೆ ಬೆಂಕಿ ಕಾಣಿಸಲಿಲ್ಲ. ಅವರು ‘ಎಲ್ಲಿದೆ ಬೆಂಕಿ’ಎಂದು ಕೇಳಿದರು. ಸೇವಕ ಶಾಂತವಾಗಿ ‘ಇಲ್ಲಿದೆ ಬೆಂಕಿ!’ಎಂದು ತನ್ನ ಗಂಟಲನ್ನು ತೋರಿಸಿ, ‘ಇದನ್ನು ನಂದಿಸಲು ಒಂದು ಚೆಂಬು ನೀರು ಸಾಕು! ಉಳಿದವರು ಹೋಗಬಹುದು’ಎಂದ. ಎಲ್ಲರೂ ತಮ್ಮ ನಿದ್ದೆ ಕೆಟ್ಟಿದ್ದಕ್ಕಾಗಿ ಮನಸ್ಸಿನಲ್ಲಿಯೇ ಬಯ್ದುಕೊಳ್ಳುತ್ತಾ ಹಿಂತಿರುಗಿ ಹೋದರು. ಸ್ವಾಮೀಜಿಯವರು, ‘ನೀರು-ನೀರು ಎಂದಾಗ ಯಾರೂ ಬರಲಿಲ್ಲ. ಬೆಂಕಿ-ಬೆಂಕಿ ಎಂದಾಗ ಊರೇ ಓಡಿ ಬಂತು. ಹಾಗೆಯೇ ಒಳ್ಳೆಯದನ್ನು ಮಾಡಿ ಸ್ವರ್ಗಕ್ಕೆ ಹೋಗುತ್ತೀರೆಂದರೆ ಜನ ಸುಮ್ಮನಿರಬಹುದು. ಆದರೆ ಕೆಟ್ಟದ್ದನ್ನು ಮಾಡಿದರೆ ನರಕಕ್ಕೆ ಹೋಗುತ್ತೀರಿ ಎಂದರೆ ಹೆದರುತ್ತಾರೆ.
ಅಷ್ಟರ ಮಟ್ಟಿಗೆ ಸ್ವರ್ಗ- ನರಕಗಳು ಉಪಯೋಗಕಾರಿ!’ಎಂದರು. ನಾವು ಯಾರಾದರೂ ಬಾಯಾರಿಕೆ ಎಂದಾಗ ನೀರು ತಂದು ಕೊಡುವ ಜನರೋ ಅಥವಾ ಬೆಂಕಿ-ಬೆಂಕಿ ಎಂದಾಗ ಬೆದರಿ ನೀರು ತರುವ ಜನರೋ? ಸ್ವರ್ಗದಾಸೆಗೆ ಒಳ್ಳೆಯದನ್ನು ಮಾಡುವ ಜನರೋ ಅಥವಾ ನರಕಕ್ಕೆ ಹೆದರಿ ಕೆಟ್ಟದ್ದನ್ನು ಮಾಡಲು ಹಿಂಜರಿಯುವ ಜನರೋ? ಉತ್ತರವನ್ನು ನಮಗೆ ನಾವೇ ಮೆಲ್ಲಗೆ ಹೇಳಿಕೊಳ್ಳಬಹುದು!
✍ಸಂಗ್ರಹ✍
🌎ಶರಣು ವಿಶ್ವವಚನ ಫೌಂಡೇಷನ್🌎
💐🌹💐🌹💐🌹💐🌹💐
7
✍ನಾವು ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಹೇಳುವ ಮೊದಲು ಸಾಕ್ರೆಟಿಸ್ ನ ಈ ಅಮೂಲ್ಯ ಸಲಹೆಗಳನ್ನು ಪಾಲಿಸಿ ನಂತರ ಹೇಳಿ ✍
ಒಂದು ದಿನ ಸಾಕ್ರಟಿಸ್
ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ,
‘ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ,
ಆ ಸಂಗತಿ ನಿನಗೆ ಗೊತ್ತಿದೆಯಾ?’ ಎಂದು ಕೇಳಿದ.
ಅದಕ್ಕೆ ಸಾಕ್ರಟಿಸ್,
"ಒಂದು ನಿಮಿಷ ತಾಳು,
ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ.
ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ.
ಅದಕ್ಕೆ ಆತ ಒಪ್ಪಿಕೊಂಡ.
‘ಮೊದಲ ಹಂತ ಅಂದ್ರೆ ಸತ್ಯ.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?’ ಎಂದ ಸಾಕ್ರಟೀಸ್.
ಅದಕ್ಕೆ ಸ್ನೇಹಿತ
‘ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ.
ನನಗೆ ಯಾರೋ ಹೇಳಿದರು.
ನಾನು ಅದನ್ನು ಕೇಳಿದೆ ಅಷ್ಟೆ’ ಎಂದ.
ಅವನ ಮಾತಿಗೆ ಸಾಕ್ರಟಿಸ್,
‘ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು.
ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ.
ಇದು goodness ಪರೀಕ್ಷೆ.
ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?’ ಎಂದು ಕೇಳಿದ.
ಅದಕ್ಕೆ ಸ್ನೇಹಿತ,
‘ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ’ ಎಂದ.
‘ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು.
ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ.
ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು’ ಎಂದ ಸಾಕ್ರಟಿಸ್.
ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ.
ಸಾಕ್ರಟಿಸ್ ಮುಂದುವರಿಸಿದ
‘ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ. ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ, ಉಪಯೋಗವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?’
ಅದಕ್ಕೆ ಸ್ನೇಹಿತ,
ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ’ ಎಂದ.
ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ನುಡಿದ-‘ಅಯ್ಯಾ, ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ?
ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು"
ಎಂದು ಹೇಳಿದರು.
*ಈ ದೃಷ್ಟಾಂತದ ಮೂಲಕ ಹೇಳಬಯಸುವುದೇನೆಂದರೆ
ಸ್ನೇಹಿತರೆ, ಪ್ರತಿ ನಿತ್ಯ ಸಾಕ್ರೆಟಿಸ್ನಿಗೆ ಅವನ ಸ್ನೇಹಿತ ಹೇಳಲು ಬಂದಂತೆ ನಮಗೆಲ್ಲರಿಗೂ ನಮ್ಮ ಸ್ನೇಹಿತರು ಹಲವಾರು ವಿಷವಾಗುವ ವಿಷಯವನ್ನು ತರುತ್ತಿರುತ್ತಾರೆ. ಅದು ಎಷ್ಟು ಅವಶ್ಯಕ ಎಂಬುದನ್ನು ಅರಿತು ಆಲಿಸಬೇಕು.ಹಾಗೆಯೇ ನೀವು ಇನ್ನೊಬ್ಬರಿಗೆ ಮುಟ್ಟಿಸಬೇಕೆನ್ನುವ 'ವಿಷ'ಯ 'ವಿಷ'ವಾಗದಂತಿರಲಿ*
ಅದಕ್ಕೆ ಸಿದ್ಧರಾಮೇಶ್ವರರ ಈ ವಚನ ನಮ್ಮನ್ನು ಎಚ್ಚರಿಸಿ ಸಂಸ್ಕಾರ ಮೂಡಿಸುತ್ತದೆ.
ಒಬ್ಬರ ಮನವ ನೋಯಿಸಿ,
ಒಬ್ಬರ ಮನವ ಘಾತವ ಮಾಡಿ,
ಗಂಗೆಯ ಮುಳುಗಿದಡೇನಾಗುವುದಯ್ಯ?
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತ್ತಯ್ಯಾ.
ಅದು ಕಾರಣ, ಮನವ ನೋಯಿಸದವನೆ, ಒಬ್ಬರ ಘಾತವ
ಮಾಡದವನೆ,ಪರಮಪಾವನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
🌹ಸಂಗ್ರಹ🌹
🌏ಶರಣು ವಿಶ್ವವಚನ ಫೌಂಡೇಷನ್🌏
8
*🌻ದಿನಕ್ಕೊಂದು ಕಥೆ🌻
*ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಹೋಗಿದ್ದಾರಾ?*
ಛೇ! ಇದೆಂತಹ ಪ್ರಶ್ನೆ? ಹೀಗೆ ಕೇಳಬಹುದೇ? ಗಾಬರಿ ಆಗಬೇಡಿ! ಈ ಪ್ರಶ್ನೆಯನ್ನು ಕೇಳಿದವರು ಪ್ರಖ್ಯಾತ ಲೇಖಕ ನಾರ್ಮನ್ ವಿನ್ಸೆಂಟ್ ಪೀಲೆ (೧೮೯೮ – ೧೯೯೩). ಸಕಾರಾತ್ಮಕ ಚಿಂತನೆಯ ಪ್ರಯೋಜನಗಳ ಬಗ್ಗೆ ಅನೇಕ ಗ್ರಂಥಗಳನ್ನು ಬರೆದಿದ್ದ ಅವರು ಉತ್ತಮ ಪ್ರವಚನಕಾರರೂ ಆಗಿದ್ದರು. ಅಸಂಖ್ಯಾತ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಒಮ್ಮೆ ಅವರ ಬಳಿ ಯುವಕನೊಬ್ಬ ಬಂದನು. ಬಹಳ ಚಿಂತಾಕ್ರಾಂತನಾಗಿದ್ದನು. ಏಕೆಂದು ಕೇಳಿದಾಗ ‘ನಾನು ನನ್ನ ವ್ಯವಹಾರದಲ್ಲಿ ಸೋತಿದ್ದೇನೆ. ಹಣವನ್ನು ಕಳೆದುಕೊಂಡುಬಿಟ್ಟಿದ್ದೇನೆ. ಬರಿಗೈಯವನಾಗಿಬಿಟ್ಟಿದ್ದೇನೆ. ಮುಂದೇನು ಮಾಡಲೂ ತೋಚಲಿಲ್ಲ. ದೇಶಾಂತರ ಹೋಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಸ್ಥಿತಿಯಲ್ಲಿದ್ದೇನೆ. ದಿಕ್ಕು ತೋಚದಂತಾಗಿದೆ. ಏನು ಮಾಡಲಿ?’ ಎಂದು ಗೋಳಾಡಿದನು. ನಾರಮನ್ನರು ನಗುನಗುತ್ತಲೇ ಆತನ ವ್ಯವಹಾರದ ಬಗ್ಗೆ ವಿಚಾರಿಸಿದರು. ವಿದ್ಯಾವಂತನಂತೆ, ಬುದ್ಧಿವಂತನಂತೆ ಕಾಣುತ್ತಿದ್ದ ಆತ ಪ್ರಶ್ನೆಗಳಿಗೆಲ್ಲ ಉತ್ತರಿಸಿದನು. ಆನಂತರ ನಾರಮನ್ನರು ‘ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತಿದೆ. ನೀವು ವ್ಯವಹಾರಸ್ಥರು. ವ್ಯವಹಾರದಲ್ಲಿ ಬ್ಯಾಲೆನ್ಸ ಶೀಟ್ ತಯಾರಿಸುತ್ತೀರಲ್ಲವೇ? ನೀವು ಕಳೆದುಕೊಂಡಿರುವ ಮತ್ತು ಉಳಿಸಿಕೊಂಡಿರುವ ವಿಷಯಗಳ ಪಟ್ಟಿ ಮಾಡೋಣ. ಆನಂತರ ದೇಶಾಂತರವೋ, ಆತ್ಮಹತ್ಯೆಯೋ ಎಂಬುದನ್ನು ತೀರ್ಮಾ ನಿಸಿದರಾಯಿತು. ಒಪ್ಪಿಗೆಯೇ?’ ಎಂದು ಕೇಳಿದರು. ಯುವಕ ಒಪ್ಪಿಕೊಂಡ.
ನಾರಾಮನ್ನರು ಕಾಗದವೊಂದನ್ನು ಯುವಕನ ಕೈಗಿತ್ತರು. ಕಾಗ ದದ ಮಧ್ಯೆ ಗೆರೆಯೊಂದನ್ನು ಎಳೆಸಿದರು. ಆನಂತರ ಆತ ಕಳೆದುಕೊಂಡಿರುವುದನ್ನೆಲ್ಲ ಎಡ ಭಾಗದಲ್ಲಿ ಬರೆಯಲು ಹೇಳಿದರು.
ಆತ ತನ್ನ ಮೂಲ ಬಂಡವಾಳ, ಬ್ಯಾಂಕ್ ಸಾಲದ ಹಣ, ತಯಾರಿಕೆಯಲ್ಲಿನ ನಷ್ಟ ಮುಂತಾದವನ್ನೆಲ್ಲ ಬರೆಯುವಂತೆ ನಾರ್ಮನ್ನರು ಹೇಳಿದಾಗ, ಆತ ಇಲ್ಲಿ ಬರೆಯಲು ಏನೂ ಉಳಿದಿಲ್ಲ ಎಂದುಬಿಟ್ಟ. ಆತನ ಉತ್ತರವನ್ನು ನಿರೀಕ್ಷಿಸಿದ್ದವರಂತೆ ಕಂಡ ನಾರಾಮನ್ನರು ಮುಗುಳ್ನಕ್ಕು ‘ಚಿಂತೆಯಿಲ್ಲ! ಈಗ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಪ್ರತಿ, ಸರಿ ಉತ್ತರಕ್ಕೂ ಪ್ಲಸ್ ಎಂದು ಬಲಗಡೆ ಬರೆಯಿರಿ.
ಮೊದಲನೆಯದಾಗಿ ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಓಡಿಹೋಗಿದ್ದಾರೆಯೇ?’ ಎಂದು ಕೇಳಿದರು. ಯುವಕ ತಕ್ಷಣ ‘ಇಲ್ಲ ಆಕೆ ನನ್ನೊಂದಿಗೆ ಇದ್ದಾಳೆ’ ಎಂದರು. ನಾರಾಮನ್ನರು
‘ಹಾಗಿದ್ದರೆ ಬಲಗಡೆ ಪ್ಲಸ್ ಒಂದನ್ನು ಬರೆಯಿರಿ. ನಿಮ್ಮ ಮಕ್ಕಳು ಸೆರೆಮನೆಯಲ್ಲಿದ್ದಾರೆಯೇ? ಇಲ್ಲದಿದ್ದರೆ ಮತ್ತೆ ಪ್ಲಸ್ಸನ್ನು ಬರೆಯಿರಿ. ನಿಮ್ಮ ವಿದ್ಯಾಭ್ಯಾಸದ ಡಿಗ್ರಿ ಮುಂತಾದ ಅರ್ಹತಾ ಪತ್ರಗಳನ್ನು ಕಳೆದುಕೊಂಡಿದ್ದೀರಾ ಅಥವಾ ಅವು ಉಳಿದಿವೆಯೇ? ನಿಮ್ಮ ಅನುಭವ ಕಳೆದುಹೋಗಿದೆಯೇ? ಉಳಿದಿದೆಯೇ? ಉಳಿದಿದ್ದರೆ ಪ್ಲಸ್ ಬರೆಯಿರಿ’ ಎನ್ನುತ್ತ ಕೇಳತೊಡಗಿದರು. ಯುವಕ ಬರೆ ಯುತ್ತ ಹೋದ. ಕೆಲವೇ ನಿಮಿಷಗಳಲ್ಲಿ ಆತನ ಮುಖ ಹೊಳೆ ಯತೊಡಗಿತು. ಸ್ವಲ್ಪ ಹೊತ್ತಿನ ನಂತರ ಆತನೇ ಬರೆಯುವುದನ್ನು ನಿಲ್ಲಿಸಿ ‘ಸರ್! ನಿಮ್ಮ ಮಾತು ನನಗೆ ಅರ್ಥವಾಗುತ್ತಿದೆ. ನಾನು ಕೇವಲ ಹಣವನ್ನು ಕಳೆದುಕೊಂಡಿದ್ದೇನೆ. ಆದರೆ ಹಣದಿಂದ ಅಳೆ ಯಲಾಗದ ಎಷ್ಟೋ ವಿಷಯಗಳು ನನ್ನಲ್ಲಿನ್ನೂ ಉಳಿದಿವೆ.
ಆರೋಗ್ಯವಿದೆ, ಉತ್ಸಾಹವಿದೆ, ಪ್ರೋತ್ಸಾಹಿಸುವ ಸಂಸಾರವಿದೆ. ಗೆಳೆಯರಿದ್ದಾರೆ. ನಾನು ಅವನ್ನೆಲ್ಲ ಮರೆತುಬಿಟ್ಟಿದೆ. ಕಷ್ಟನಷ್ಟಗಳೇ ದೊಡ್ಡದಾಗಿ ಕಾಣುತ್ತಿದ್ದವು. ಈಗ ನನ್ನ ಕಣ್ಣು ಸ್ಪಷ್ಟವಾಗಿ ಕಾಣತೊಡಗಿದೆ. ಮತ್ತೆ ಹೊಸ ಪ್ರಾರಂಭವನ್ನು ಮಾಡುತ್ತೇನೆ’ ಎಂದು ಹೇಳಿಹೋದನಂತೆ.
ನಾವೀಗ ನಾರ್ಮನ್ ವಿನ್ಸೆಂಟ್ ಪೀಲೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಬಹುದು. ನಮ್ಮೆಲ್ಲರ ಬದುಕಿನಲ್ಲೂ ಆ ಯುವಕ ಎದುರಿಸಿದ್ದಂತಹ ಪರಿಸ್ಥಿತಿ ಎದುರಾಗಿರಬಹುದಲ್ಲವೇ? ಆಗ ನಾವು ಪೀಲೆ ಮಾಡಿದಂತೆ ಬದುಕಿನ ಲೆಕ್ಕಾಚಾರ ಹಾಕಬಹುದೇ? ನಮ್ಮ ಬದುಕಿನಲ್ಲಿ ಪ್ಲಸ್, ಮೈನಸ್ಸುಗಳನ್ನು ಲೆಕ್ಕ ಹಾಕಿಕೊಂಡು ಬದುಕನ್ನು ಬದಲಾಯಿಸಿಕೊಳ್ಳಬಹುದೇ?
ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ!ರಾಮನಾಥ.
ಎಂಬ ಜೇಡರ ದಾಸಿಮಯ್ಯನವರ ವಚನದಂತೆ ನಮ್ಮ ಕಷ್ಟಸುಖ ಅರಿತು ನಡೆಯುವ ಹೆಂಡತಿ ಇದ್ದರೆ ಅಂತಹ ವ್ಯಕ್ತಿಯ ಜನ್ಮ ಪಾವನ ಆ ಮನೆ ಮಹಾಮನೆ ಆಗುವುದರಲ್ಲಿ ಸಂದೇಹವಿಲ್ಲ
🌹ಸಂಗ್ರಹ🌹
🌎ಶರಣು ವಿಶ್ವವಚನ ಫೌಂಡೇಷನ್🌎
💐🌹💐🌹💐🌹💐🌹💐
9
✍1947 ಆಗಸ್ಟ್ 15 ರಂದು ಮೈಸೂರಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ✍
👌🇮🇳ಮೈಸೂರಿನ ರಾಮಸ್ವಾಮಿ ಸರ್ಕಲ್ ನಾಮಕರಣದ ಹಿಂದೆ ಮೈನವಿರೇಳಿಸುವ ದೇಶಪ್ರೇಮದ ಕಥೆ🇮🇳👌
👇ಬಿಡುವು ಮಾಡಿಕೊಂಡು ಓದಿ👇
ಐತಿಹಾಸಿಕ ಘಟನೆ ನಡೆದ ಆ ದಿನ- 13 ಸೆಪ್ಟೆಂಬರ್ 1947: ಭಾರತಕ್ಕೆ ಸ್ವಾತಂತ್ರೃ ಸಿಕ್ಕಿ ಕೆಲವೇ ದಿನಗಳು ಕಳೆದಿತ್ತು. ಆದರೆ ಅಂದಿನ ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ ಇನ್ನೂ ಅರಸೊತ್ತಿಗೆ ಬಿಟ್ಟಿರಲಿಲ್ಲ. ಗಣತಂತ್ರ ವ್ಯವಸ್ಥೆಗಾಗಿ ರಾಜ್ಯಾದ್ಯಂತ ಒಂದು ದೊಡ್ಡ ಆಂದೋಲನವೇ ನಡೆದಿತ್ತು. ಈ ಆಂದೋಲನ 3 ಸೆಪ್ಟೆಂಬರ್ 1947ರಿಂದ 24 ಅಕ್ಟೋಬರ್ 1947ರವರೆಗೆ ನಡೆಯಿತು.
ಗಣತಂತ್ರಕ್ಕೆ ಒತ್ತಾಯಿಸಿ `ಅರಮನೆಗೆ ಮುತ್ತಿಗೆ’, `ಮೈಸೂರು ಚಲೋ’, `ಜವಾಬ್ದಾರಿ ಸರ್ಕಾರ’ಕ್ಕೆ ಒತ್ತಾಯ ಎಂಬ ವಿವಿಧ ಹೆಸರಿನಲ್ಲಿ ಮೈಸೂರಿನಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು. ಈ ಆಂದೋಲನದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನರ ದಂಡು ಬರುತ್ತಿತ್ತು. ಇಂತಹ ದಿನಗಳಲ್ಲಿ ನಗರದ ವಿವಿಧ ಕಾಲೇಜು ಹಾಗೂ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಮಹಾರಾಜ ಕಾಲೇಜು ಕಡೆಯಿಂದ ವಿದ್ಯಾರ್ಥಿಗಳ ಒಂದು ಗುಂಪು, ಹಾರ್ಡ್ವೀಕ್ ಶಾಲೆ ಕಡೆಯಿಂದ ಮತ್ತೊಂದು ವಿದ್ಯಾರ್ಥಿಗಳ ಗುಂಪು, ಬನುಮಯ್ಯ ಕಾಲೇಜು ಕಡೆಯಿಂದ ವಿದ್ಯಾರ್ಥಿಗಳ ಒಂದು ಗುಂಪು ಮೆರವಣಿಗೆ ಮೂಲಕ ಸಾಗಿ ಜವಾಬ್ದಾರಿ ಸರ್ಕಾರ ಆಡಳಿತಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿಗದಿಯಾಗಿದ್ದ ಐದು ದೀಪಗಳ ವೃತ್ತದಲ್ಲಿ ಜಮಾವಣೆಗೊಂಡರು.
ಇಂತಹ ಪರಿಸ್ಥಿತಿಯಲ್ಲಿ ನಗರದ ಹಾರ್ಡ್ವಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರದ ನಿವಾಸಿ ತಮ್ಮಯ್ಯ ಅವರ ಪುತ್ರ ರಾಮಸ್ವಾಮಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಗರ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ನಗರದ ಐದು ದೀಪಗಳ ವೃತ್ತದಲ್ಲಿ(ಈಗಿನ ರಾಮಸ್ವಾಮಿ ವೃತ್ತ) ಪ್ರತಿಭಟನೆ ನಡೆಸುತ್ತಿದ್ದರು.

ಅಂದಿನ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ನಾಗರಾಜರಾವ್ ವಿದ್ಯಾರ್ಥಿ ಹೋರಾಟ ಹತ್ತಿಕ್ಕುವ ಸಲುವಾಗಿ ಐದು ದೀಪಗಳ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಧ್ವನಿ ಜೋರಾಗಿದ್ದ ಕಾರಣ ಹಾಗೂ ವಿದ್ಯಾರ್ಥಿ ಮುಖಂಡನಾಗಿ ಗುರುತಿಸಿಕೊಂಡಿದ್ದ ರಾಮಸ್ವಾಮಿ ರಾಜ ಪ್ರಭುತ್ವ ಕೊನೆಗಾಣಿಸಿ ಗಣತಂತ್ರ ವ್ಯವಸ್ಥೆ ನೀಡುವಂತೆ ಹತ್ತಿರದಲ್ಲಿದ್ದ ಕಂಬವೇರಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದ.
ಹೋರಾಟ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೇ ಜಿಲ್ಲಾಧಿಕಾರಿ ನಾಗರಾಜರಾವ್ ಗೋಲಿಬಾರ್ಗೆ ಆದೇಶ ನೀಡಿದ್ದರು. ಈ ಆದೇಶವನ್ನೂ ಉಲ್ಲಂಘಿಸಿ ರಾಮಸ್ವಾಮಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದುದ್ದನ್ನು ಸಹಿಸದ ಜಿಲ್ಲಾಧಿಕಾರಿ ವಿದ್ಯಾರ್ಥಿ ಮುಖಂಡ ರಾಮಸ್ವಾಮಿ ಹಿಡಿದಿದ್ದ ಭಾರತದ ಬಾವುಟವನ್ನು ಕೆಳಗೆ ಹಾಕುವಂತೆ ಸೂಚನೆ ನೀಡಿದರು.
ವಿದ್ಯಾರ್ಥಿ ಮುಖಂಡ ರಾಮಸ್ವಾಮಿಗೆ ಜಿಲ್ಲಾಧಿಕಾರಿ ಆದೇಶ ಸ್ವಾಭಿಮಾನವನ್ನು ಕೆಣಕಿತ್ತು. ಕೂಡಲೇ ಜಿಲ್ಲಾಧಿಕಾರಿ ಹಿಡಿದಿದ್ದ ರಿವಾಲ್ವರ್ ಅನ್ನು ಕೆಳಗೆ ಹಾಕುವಂತೆ ರಾಮಸ್ವಾಮಿ ಪ್ರತಿಕ್ರಿಯೆ ನೀಡಿದ. ಇದನ್ನು ಸಹಿಸದ ಜಿಲ್ಲಾಧಿಕಾರಿ ನಾಗರಾಜ್ರಾವ್ ರಾಮಸ್ವಾಮಿ ಮೇಲೆ ಗುಂಡು ಹಾರಿಸಿದ. ಗುಂಡು ದೇಹ ತಗುಲುತ್ತಿದ್ದಂತೆ ರಾಮಸ್ವಾಮಿ ಸ್ಥಳದಲ್ಲೇ ಮೃತಪಟ್ಟ. ಈ ಹೋರಾಟದಲ್ಲಿ ರಾಮಸ್ವಾಮಿ ಮಾತ್ರವಲ್ಲದೇ ಕಡಕೊಳದಿಂದ ಚಾಪೆ ಮಾರಲು ಬಂದಿದ್ದ ತೋರನಾಯ್ಕ ಹಾಗೂ ರಂಗ ಎಂಬುವರಿಗೂ ಗುಂಡು ತಗುಲಿ ಮೃತಪಟ್ಟರು ಎಂಬುದಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಸಾರಾಂಗ ಪ್ರಕಟಿಸಿರುವ ಮೈಸೂರು ದರ್ಶನ ಪುಸ್ತಕದ ಪುಟ ಸಂಖ್ಯೆ 183-92ರಲ್ಲಿ ದಾಖಲಾಗಿದೆ.
ಇದೇ ದಿನ ರಾಜ್ಯದ ವಿವಿಧೆಡೆ ಅರಸೊತ್ತಿಗೆ ಬಿಟ್ಟು ಕೊಡುವಂತೆ ಗಣತಂತ್ರಕ್ಕಾಗಿ ನಡೆದ ಹೋರಾಟದಲ್ಲಿ 37ಮಂದಿ ಮೃತರಾಗುತ್ತಾರೆ. ಈ ಘಟನೆ ನಡೆದ ಕೆಲವು ದಿನಗಳಲ್ಲೇ ಜಯಚಾಮರಾಜ ಒಡೆಯರ್ ತಮ್ಮ ಅರಸೊತ್ತಿಗೆಯನ್ನು ಗಣತಂತ್ರ ವ್ಯವಸ್ಥೆಗೆ ಬಿಟ್ಟುಕೊಡುತ್ತಾರೆ. ನಂತರ 24 ಸೆಪ್ಟೆಂಬರ್ 1947ರ ವಿಜಯದಶಮಿಯಂದು ಜವಾಬ್ದಾರಿ ಸರ್ಕಾರ ರಚನೆಯಾಗುತ್ತದೆ. ಅಂದಿಗೆ ಆ ಹೋರಾಟ ಮುಕ್ತಾಯಗೊಳ್ಳುತ್ತದೆ.
ಅಧಿಕಾರ ವಿಕೇಂದ್ರೀಕರಣಕ್ಕಾಗಿ ನಡೆದ ಹೋರಾಟ ಮೈಸೂರು ಇತಿಹಾಸದಲ್ಲಿ ಒಂದು ಮರೆಯಲಾಗದ ಘಟನೆಯಾಗಿದೆ. ವಿಪರ್ಯಾಸ ಎಂದರೆ ಹೋರಾಟ ಮಾಡಿದ ನೆನಪನ್ನು ಉಳಿಸುವ ಸಲುವಾಗಿ ಈ ವೃತ್ತದಲ್ಲಿ ಸ್ಮಾರಕ ನಿರ್ಮಿಸುವಂತೆ ಆಗ್ರಹಿಸಿ ಕನ್ನಡ ಚಳವಳಿಗಾರ ನಾಗಲಿಂಗಸ್ವಾಮಿ ನೇತೃತ್ವದಲ್ಲಿ ಇದೇ ಸ್ಥಳದಲ್ಲಿ ಮತ್ತೊಮ್ಮೆ ಪ್ರತಿಭಟನಾ ಕಾರ್ಯಕ್ರಮ ನಡೆಯುತ್ತದೆ.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಮೃತ `ರಾಮಸ್ವಾಮಿ’ ಕುಟುಂಬದ ಸದಸ್ಯರನ್ನು ಮೈಸೂರಿಗೆ ಕರೆತಂದು ಇದೇ ಸ್ಥಳದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಹೋರಾಟದ ನೆನಪಿಗಾಗಿ ಮತ್ತೊಂದು ಹೋರಾಟ ನಡೆಯಬಾರದೆಂಬ ಉದ್ದೇಶದಿಂದ ಎಚ್ಚೆತ್ತ ನಗರಪಾಲಿಕೆ ಈ ವೃತ್ತಕ್ಕೆ `ರಾಮಸ್ವಾಮಿ ವೃತ್ತ’ ಎಂದು ನಾಮಕರಣ ಮಾಡುತ್ತದೆ.
🌹ಸಂಗ್ರಹ🌹
🌎ಶರಣು ವಿಶ್ವವಚನ ಫೌಂಡೇಷನ್🌎
10
🌻ದಿನಕ್ಕೊಂದು ಕಥೆ🌻
*ಎಲ್ಲ ವೃತ್ತಿಗಳೂ ಸಮಾನ.*
ಈ ಜಗತ್ತಿನಲ್ಲಿ ಜನಿಸಿದ ಮಾನವನು ಅನೇಕ ತರದ ವೃತ್ತಿ, ಕಸುಬು, ಉದ್ಯೋಗಗಳನ್ನು ಮಾಡುತ್ತಾನೆ. ಇಂತಹ ಉದ್ಯೋಗಗಳ ಪೈಕಿ ಕೆಲವು ಮೇಲ್ಮಟ್ಟದವು ಎಂದು ಗೌರವ ಪಡೆದರೆ, ಕೆಲವು ಕೆಳಮಟ್ಟದವು- ಎಂಬ ಕಾರಣಕ್ಕಾಗಿ ಗೌರವವನ್ನು ಪಡೆಯುವುದಿಲ್ಲ. ಆದರೆ ಮಾನವನು ಮಾಡುವ ಕಾರ್ಯಗಳಲ್ಲಿ ಮೇಲು-ಕೀಳು ಎಂಬ ಭಾವವಿಲ್ಲದೆ ಸರ್ವರೂ ವೃತ್ತಿ ಗೌರವದಿಂದ ತಮ್ಮ-ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ನೀಡುವ ಹೃದಯ ಸ್ಪರ್ಶಿ ಪ್ರಸಂಗವು ಇಲ್ಲಿದೆ.
ಒಂದು ಹಳ್ಳಿಯಲ್ಲಿ ಒಬ್ಬ ಜಮೀನ್ದಾರ ಮತ್ತು ಅವನ ನೌಕರ ಇಬ್ಬರೂ ಜತೆ-ಜತೆಯಾಗಿಯೇ ತೀರಿಕೊಂಡರು. ಇಬ್ಬರೂ ಯಮಲೋಕಕ್ಕೆ ತಲಪಿದಾಗ ಯಮಧರ್ಮರಾಜನು ಜಮೀನ್ದಾರನೊಡನೆ, ನಾಳೆಯಿಂದ ನೀವು ನೌಕರನ ಕೆಲಸ ಮಾಡಬೇಕು. ನೌಕರ ಕೆಲಸವಿಲ್ಲದೆ ಆರಾಮವಾಗಿರಲಿ ಎಂದಾಗ ಒಪ್ಪಿಕೊಂಡರೂ, ಜಮೀನ್ದಾರನಿಗೆ ತಲೆಬಿಸಿಯಾಯಿತು. ಆತ ''ಹೇ ಧರ್ಮರಾಜ, ನನಗೇಕೆ ಇಂಥ ಶಿಕ್ಷೆ? ನಾನು ಪ್ರತಿನಿತ್ಯ ದೇವಪೂಜೆ ಮೊದಲಾದ ಕರ್ತವ್ಯಗಳನ್ನು ಮಾಡುತ್ತಿದ್ದೇನೆ,'' ಎಂದು ಹೇಳಿದ.
ಯಮಧರ್ಮರಾಜನು ನೌಕರನೊಡನೆ, ''ನೀನೇನು ಮಾಡುತ್ತಿದ್ದೀಯಾ?,''ಎಂದು ಕೇಳಿದಾಗ ಆತ, ''ಸ್ವಾಮಿ, ನಾನೋ ಬಡ ನೌಕರ. ದಿನವಿಡೀ ಧಣಿಗಳ ಗದ್ದೆಯಲ್ಲಿ ದುಡಿದು, ದೊರೆತ ಮಜೂರಿಯಲ್ಲಿ ಬದುಕುತ್ತಿದ್ದೆ. ಪುರುಸೊತ್ತು ದೊರೆತಾಗ ದೇವರ ಸ್ಮರಣೆ ಮಾಡಿದೆ. ಸ್ವಂತಕ್ಕೆ ಏನೂ ಬೇಡಲಿಲ್ಲ. ಬಡತನದಿಂದಾಗಿ ಆರತಿ ಮಾಡಲಿಲ್ಲ. ಮನೆಯಲ್ಲಿ ಎಣ್ಣೆಯಿದ್ದಾಗ ದೀಪವುರಿಸಿ ದಾರಿಹೋಕರಿಗೆ ಬೆಳಕು ನೀಡುತ್ತೇನೆ,'' ಎಂದು ಹೇಳಿದ. ಆಗ ಧರ್ಮರಾಜನು ಜಮೀನ್ದಾರನೊಡನೆ, ''ಈ ನೌಕರನ ಕರ್ಮ ಪ್ರಜ್ಞೆ ಗಮನಿಸಿದೆಯೋ? ಭಗವಂತ ಧನ ಸಂಪತ್ತಿನಿಂದಲ್ಲ, ಪ್ರಾಮಾಣಿಕ ಕರ್ಮ ನಿಷ್ಠೆಯನ್ನು ಮೆಚ್ಚುತ್ತಾನೆ. ಅವನ ಕರ್ಮ ನಿಷ್ಠೆಯನ್ನು ಕಲಿಯಲೆಂದೇ ನಿನ್ನನ್ನು ನೌಕರನಾಗಿ ಮಾಡಿದೆ,'' ಎಂದು ಹೇಳಿದ. ಇದನ್ನು ಕೇಳಿದ ಜಮೀನ್ದಾರನ ವಿವೇಕದ ಕಂಗಳು ತೆರೆದುಕೊಂಡವು.
ಒಬ್ಬ ವ್ಯಕ್ತಿಯ ಬದುಕಿನಲ್ಲಿ ಸ್ಥಾನ, ಮಾನ, ವೈಭವಗಳು ಮುಖ್ಯವಲ್ಲ. ಆತ ಮಾಡುವ ಕರ್ಮದ ಫಲ ಮುಖ್ಯ. ಒಬ್ಬ ವ್ಯಕ್ತಿಯು ಮಾಡುವ ಕರ್ಮಗಳಿಂದಾಗಿ ಯಾರ ಮೇಲೆ ಎಂಥ ಫಲ ಬೀರುತ್ತದೆ? ಎಂಬುದು ಬಹು ಮುಖ್ಯವಾಗಿರುತ್ತದೆ. ಇದನ್ನು ಅರ್ಥಮಾಡಿಕೊಂಡಾಗ ನಮ್ಮ ಜೀವನ ಸಾರ್ಥಕ
ಅದಕ್ಕೆ ಕಾಯಕದ ಮಹತ್ವದ ಬಗ್ಗೆ ಆಯ್ದಕ್ಕಿ ಮಾರಯ್ಯ ಎಂಬ ಶರಣರು ಹೀಗೆ ಹೇಳಿದ್ದಾರೆ
ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು.
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.
ಎಂದು ಹೇಳಿದ್ದಾರೆ ಈ ವಚನದ ಮಹತ್ವ ಅರಿತು ಕಾಯಕದ ಗೌರವ ಎತ್ತಿ ಹಿಡಿದು ಸದೃಢ ದೇಶವನ್ನು ನಿರ್ಮಾಣ ಮಾಡೋಣ.
🌹ಸಂಗ್ರಹ🌹
🌎ಶರಣು ವಿಶ್ವವಚನ ಫೌಂಡೇಷನ್🌎
💐🌹💐🌹💐🌹💐🌹💐
11
🌻ದಿನಕ್ಕೊಂದು ಕಥೆ🌻
*ಇರುವ ಕೆಲಸವ ಮಾಡು ಕಿರಿದೆನ್ನದೆ ಮನಸಿಟ್ಟು!*
ನಮಗೆ ಈಗಿರುವ ಕೆಲಸಕ್ಕಿಂತ ದೊಡ್ಡ ಕೆಲಸವಿದ್ದರೆ, ಇನ್ನೂ ಏನೇನೋ ಸಾಧಿಸಿಬಿಡುತ್ತಿದ್ದೆವು ಅಂತ ಆಗಾಗ ಅನಿಸುತ್ತದಲ್ಲವೇ? ಆದರೆ ಕೈಯಲ್ಲಿದ್ದ ಕಡಲೇಕಾಯಿ ಬೀಜವನ್ನು ಉಪಯೋಗಿಸಿ ಹಿರಿಯ ಸಾಧನೆ ಮಾಡಿದ ಗಣ್ಯರೊಬ್ಬರ ಬದುಕಿನ ಕುತೂಹಲಕಾರಿ ಕತೆ ಇಲ್ಲಿದೆ.
ಮನೆಯಲ್ಲಿ, ಗುಲಾಮಗಿರಿಯಲ್ಲಿ ನರಳುತ್ತಿದ್ದ ಕುಟುಂಬದಲ್ಲಿ, ಹುಟ್ಟಿ ಬೆಳೆದರೂ ಸ್ವಪ್ರಯತ್ನದಿಂದ ಮೇಲಕ್ಕೆ ಬಂದು ವಿಜ್ಞಾನಿ, ಸಂಶೋಧಕ, ಸಸ್ಯಶಾಸ್ತ್ರಜ್ಞ ಎಂಬಿತ್ಯಾದಿಯಾಗಿ ಹೆಸರುವಾಸಿಯಾದರು. ಅವರ ಹೆಸರು ಡಾ.ಜಾರ್ಜ್ ವಾಷಿಂಗ್ಟನ್ ಕಾವರ್ರ. ಅವರು ವಿಶೇಷ ಬಗೆಯ ವಿಜ್ಞಾನಿ ಮತ್ತು ಸಂಶೋಧಕ ಏಕೆಂದರೆ ಅವರು ಕಡಲೇಕಾಯಿ ಬೀಜವನ್ನುಪಯೋಗಿಸಿ ಮುನ್ನೂರಕ್ಕು ಹೆಚ್ಚು ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿದರು. ಅವುಗಳಲ್ಲಿ ನೂರೈದು ತಿನ್ನುವ ಪದಾರ್ಥಗಳು! ಅವರು ಕಡಲೇಕಾಯಿ ಬೀಜದಿಂದ ಇನ್ನೂರಕ್ಕೂ ಹೆಚ್ಚು ಸೌಂದರ್ಯ ಪ್ರಸಾದನ ವಸ್ತುಗಳು, ಪೇಯಿಂಟುಗಳು, ಡೈಗಳು, ವಸ್ತುಗಳು, ನೈಟ್ರೋಗ್ಲಿಸ ಮುಂತಾದವುಗಳನ್ನು ತಯಾರು ಮಾಡುವ ವಿಧಾನಗಳನ್ನು ಕಂಡುಹಿಡಿದರು.
ಸಿಹಿಗೆಣಸನ್ನು ಉಪಯೋಗಿಸಿ ನೂರಾರು ಬಗೆಯ ಉತ್ಪನ್ನಗಳನ್ನು ಕಂಡುಹಿಡಿದರು. ವ್ಯವಸಾಯ ಕ್ಷೇತ್ರದಲ್ಲಿನ ಸಂಶೋಧನೆಯಿಂದ ಅಲ್ಲಿನ ರೈತರಿಗೆ ಲಾಭ ತರುವ ವಿವಿಧ ಬೆಳೆಗಳನ್ನು ಪರಿಚಯಿಸಿದರು. ಇವುಗಳಿಂದಾಗಿ ಅವರು ಎಷ್ಟು ಪ್ರಖ್ಯಾತಿ ಹೊಂದಿದರೆಂದರೆ ಪ್ರತಿ ವರ್ಷ ಜನವರಿ 5ನೇ ತಾರೀಖನ್ನು ಅಮೇರಿಕಾದಲ್ಲಿ ’ಜಾರ್ಜ್ ವಾಷಿಂಗ್ಟನ್ ಕಾವರ್ರ್ ದಿನ’ ಎಂದು ಆಚರಿಸುತ್ತಾರೆ!
ಕಡಲೇಕಾಯಿ ಮತ್ತದರ ಬೀಜದ ಬಗ್ಗೆ ಅವರು ಮುನ್ನೂರಕ್ಕೂ ಹೆಚ್ಚು ಬಗೆಯ ಉತ್ಪನ್ನಗಳನ್ನು ಕಾರಣವೇನೆಂದು ಅವರನ್ನು ಯಾರಾದರೂ ಕೇಳಿದರೆ, ಅವರು ಹೇಳುತ್ತಿದ್ದ ವಿನೋದಮಯ ಕತೆ ಹೀಗಿದೆ.
ನನಗೆ ದೇವರಲ್ಲಿ ಅಪಾರವಾದ ನಂಬಿಕೆ ಮತ್ತು ಭಕ್ತಿ. ಒಮ್ಮೆ ನಾನು ಪ್ರಾರ್ಥನೆ ಮಾಡುವಾಗ ದೇವರನ್ನು ಕುರಿತು ಓ ದೇವರೇ! ಇಷ್ಟೊಂದು ವಿಶಾಲವಾದ ಜಗತ್ತನ್ನು ನೀನೇಕೆ ಸೃಷ್ಟಿಸಿದೆ? ಅದನ್ನು ಹೇಗೆ ನಿರ್ವಹಿಸುತ್ತೀಯೆ? ಎಂದು ಕೇಳಿದೆ. ಆಗ ದೇವರು ಗಟ್ಟಿಯಾಗಿ ನಕ್ಕು ಜಾರ್ಜ್! ಈ ಜಗತ್ತು ಎಷ್ಟು ವಿಶಾಲವಾಗಿದೆಯೆಂದರೆ ಅದನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವನು ನೀನಲ್ಲ. ಅದರ ಯೋಗಕ್ಷೇಮವನ್ನು ಬಿಟ್ಟುಬಿಡು ಎಂದರಂತೆ.
ಈ ಸಂಭಾಷಣೆ ನಡೆಯುವಾಗ ನನ್ನ ಕೈಯ್ಯಲ್ಲೊಂದು ಕಡಲೇಕಾಯಿ ಇತ್ತು. ನಾನು ವಿನಯಪೂರ್ವಕವಾಗಿ ಓ ಭಗವಂತ! ಜಗತ್ತು ನನಗೆ ಅರ್ಥವಾಗದಿರುವಷ್ಟು ದೊಡ್ಡದಿರುವುದಾದರೆ, ಈ ಕಡಲೇಕಾಯಿಯನ್ನಾದರೂ ನಾನು ಅರ್ಥ ಮಾಡಿಕೊಳ್ಳಬಹುದೇ? ಎಂದು ಕೇಳಿದೆ.
ಆಗ ಭಗವಂತ ಮತ್ತೊಮ್ಮೆ ಜೋರಾಗಿ ನಕ್ಕು ಹಾ ಜಾರ್ಜ್! ನಿನ್ನ ಗಾತ್ರಕ್ಕೆ ಹೊಂದುವಂತಹುದು ಈಗ ನಿನ್ನ ಬಳಿ ಇದೆ. ನೀನು ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡು. ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ.
ಅದರಂತೆಯೇ ನಾನು ವಿಶಾಲವಾದ ಜಗತ್ತನ್ನು ಭಗವಂತನ ಕೈಗೊಪ್ಪಿಸಿದೆ. ನನ್ನ ಕೈಯ್ಯಲ್ಲಿದ್ದ ಕಡಲೇಕಾಯಿ ಕಡೆ ಗಮನ ಹರಿಸಿದೆ. ಅದನ್ನು ಬೆಳೆಯುವ, ಅದನ್ನು ಬಳಸುವತ್ತ ಗಮನ ಹರಿಸಿದೆ. ಆತನ ಆಶ್ವಾಸನೆಯಂತೆ ಭಗವಂತನೂ ಸಹಾಯ ಮಾಡಿದ. ಕಡಲೇಕಾಯಿಯ ರಹಸ್ಯವನ್ನೆಲ್ಲ ನನಗೆ ತೋರಿಸಿಕೊಟ್ಟ. ಹಾಗಾಗಿ ನಾನು ಕಡಲೇಕಾಯಿಯಿಂದ 300ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಯಿತು ಎನ್ನುತ್ತಿದ್ದರಂತೆ.
ನಮಗೂ ಯಾವಾಗಲಾದರು ನನ್ನ ಕೈಯಲ್ಲಿರುವ ಕೆಲಸ ಬಹಳ ಚಿಕ್ಕದು, ನನಗೆ ದೊಡ್ಡ ಕೆಲಸವೇನಾದರೂ ಇದ್ದಿದ್ದರೆ ದೊಡ್ಡ ಸಾಧನೆ ಎಂಬ ಭಾವನೆ ಬಂದರೆ ಆಗ ನಾವು ಡಾ.ಜಾರ್ಜ್ ಕಾವರ್ರ್ ಅವರನ್ನೂ, ಅವರ ಕೈಯಲ್ಲಿದ್ದ ಕಡಲೇಕಾಯಿ ಬೀಜವನ್ನು ನೆನಪು ಮಾಡಿಕೊಳ್ಳಬಹುದು. ಅವರನ್ನು ಅನುಸರಿಸಬಹುದು. ಯಶಸ್ಸನ್ನೂ ಪಡೆಯಬಹುದು!
ಯಾವುದೇ ಕಾಯಕ ಮಾಡಿದರೂ ಚಿತ್ತಶುದ್ಧಿಯಿಂದ ಮಾಡಿದಾಗ ಯಶಸ್ಸನ್ನು ಗಳಿಸಬಹುದು ಎಂಬುದಕ್ಕೆ ಡಾ.ಜಾರ್ಜ್ ಕಾವರ್ರ್ ರವರೇ ಮಾದರಿ.
ಇದಕ್ಕೆ ಆಯ್ದಕ್ಕಿ ಲಕ್ಕಮ್ಮನವರ ಒಂದು ವಚನ ನೆನಪಾಗುತ್ತದೆ.
ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ,
ಚಿತ್ತ ಶುದ್ಧದಲ್ಲಿ ಕಾಯಕ ಮಾಡುವಲ್ಲಿ, ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
🌹ಸಂಗ್ರಹ🌹
🌎ಶರಣು ವಿಶ್ವವಚನ ಫೌಂಡೇಷನ್🌎
💐🌹💐🌹💐🌹💐🌹💐
12
🌻ದಿನಕ್ಕೊಂದು ಕಥೆ🌻
*ಹೊರಗೆಲ್ಲ ಕುಡುಕರು! ಒಬ್ಬ ಸಾಧಕರು!*
ಕೆಲವು ತಾಯ್ತಂದೆಯರು ನಮ್ಮ ಹುಡುಗ ಒಳ್ಳೆಯವನು. ಆದರೆ ಅವರ ಸುತ್ತಲ ವಾತಾವರಣ ಒಳ್ಳೆಯದಿರಲಿಲ್ಲ. ಹಾಗಾಗಿ ಅವನು ಕೆಟ್ಟುಹೋದ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಸುತ್ತಲೂ ಕೆಟ್ಟದು ಎನ್ನಬಹುದಾದ ವಾತಾವರಣ ಇದ್ದರೂ ಸಾಧನೆಯನ್ನು ಕೈಬಿಡದ ಮಹನೀಯರ ಬಗೆಗಿನ ಎರಡು ಪುಟ್ಟ ಘಟನೆಗಳು ಇಲ್ಲಿವೆ.
*ಮೊದಲನೆಯ ಘಟನೆ:* ಅದೊಂದು ಹೆಂಡದಂಗಡಿ. ಅಂಗಡಿಯ ತುಂಬೆಲ್ಲ ಗ್ರಾಹಕರು. ಕುಡಿಯುವವರು ಕುಡಿಯುತ್ತಿದ್ದರು. ತಿನ್ನುವವರು ತಿನ್ನುತ್ತಿದ್ದರು. ಹರಟೆ ಹೊಡೆಯುವವರು ಹರಟೆ ಹೊಡೆಯುತ್ತಿದ್ದರು. ಅವರಿಗೆ ಆಹಾರ-ಪಾನೀಯಗಳನ್ನು ಸರಬರಾಜು ಮಾಡುತ್ತಿದ್ದ ಕೆಲಸಗಾರರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಭರಭರ ಓಡಾಡುತ್ತ ಕೆಲಸ ಮಾಡುತ್ತಿದ್ದರು. ಅಂಗಡಿಯ ತುಂಬೆಲ್ಲ ಗದ್ದಲವೋ ಗದ್ದಲ.
ಮೂಲೆಯಲ್ಲಿ ಒಂದು ಕುರ್ಚಿ-ಮೇಜಿತ್ತು. ಅಲ್ಲೊಬ್ಬ ಕ್ಯಾಷಿಯರ್ ಕುಳಿತಿದ್ದರು. ಹತ್ತು ಹದಿನೈದು ನಿಮಿಷಕ್ಕೊಮ್ಮೆ ಕೆಲಸಗಾರರು ತಂದು ಕೊಡುತ್ತಿದ್ದ ಬಿಲ್ಲಿಗೆ ಸರಿಯಾಗಿ ಲೆಕ್ಕ ಮಾಡಿ ಹಣ ತೆಗೆದುಕೊಳ್ಳುತ್ತಿದ್ದರು. ಉಳಿದ ಚಿಲ್ಲರೆ ಅವರಿಗೆ ವಾಪಸ್ಸು ಕೊಡುತ್ತಿದ್ದರು. ಮತ್ತೆ ಮುಂದಿನ ಬಿಲ್ ಬರುವವರೆಗೆ ತಮ್ಮ ಪಾಡಿಗೆ ತಾವು ಆದರೆ ಸುಮ್ಮನೆ ಕುಳಿತಿರುತ್ತಿರಲಿಲ್ಲ. ಅವರ ಕೈಯ್ಯಲ್ಲಿ ‘ವಿಶ್ವವಿಜೇತ ಸ್ವಾಮಿ ವಿವೇಕಾನಂದ’ ಪುಸ್ತಕವಿತ್ತು. ಅದನ್ನೋದುತ್ತಾ ಕುಳಿತಿರುತ್ತಿದ್ದರು.
ಅದನ್ನು ಗಮನಿಸಿದ ಒಬ್ಬರು ಅಯ್ಯಾ ಪುಣ್ಯಾತ್ಮರೇ! ಹೆಂಡದಂಗಡಿಯಲ್ಲಿ, ಗದ್ದಲದ ವಾತಾವರಣದಲ್ಲಿ ಕ್ಯಾಷಿರ್ಯ ಕೆಲಸ ಮಾಡುತ್ತಿದ್ದೀರಿ. ಹೊರಗೆ ಜನ ಕುಡಿಯುತ್ತ ಕುಳಿದ್ದಾರೆ. ಮತ್ತು ಹೊರಗೆಲ್ಲ ಹೆಂಡದ ಬಾಟಲುಗಳು ತುಂಬಿವೆ. ಆದರೆ ನೀವು ಕೊಂಚ ಬಿಡುವು ಸಿಕ್ಕರೆ ಸಾಕು, ವಿವೇಕಾನಂದರ ಪುಸ್ತಕವನ್ನು ಓದುತ್ತೀರಿ! ನಿಮಗಿದು ಹೇಗೆ ಸಾಧ್ಯ? ಎಂದರು. ಆತ ಹೊರಗಿರುವವರು ಕುಡಿಯುತ್ತಿದ್ದಾರೆ. ಆದರೆ ನನ್ನೊಳಗಿರುವವನು ಹೆಂಡ ನನ್ನ ಹೊರಗೆ ತುಂಬಿದೆ. ಆದರೆ ನನ್ನೊಳಗೆ ಹೆಂಡವಿಲ್ಲ. ಆದುದರಿಂದ ಇದು ಸಾಧ್ಯವಾಗುತ್ತಿದೆ! ಎಂದು ಹೇಳಿದಾಗ, ಕೇಳಿದವರು ವಾರ್ರೆವ್ಹಾ! ಎಂದು ಮೆಚ್ಚುಗೆ ಸೂಚಿಸಿದರು.
*ಮತ್ತೊಂದು ಘಟನೆ:* ಎರಡನೆಯ ವಿಶ್ವಯುದ್ಧದ ಸಮಯ. ಅಮೆರಿಕಾದ ಸೈನಿಕರು ಇಟಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಅಲ್ಲೊಂದು ಹಳ್ಳಿಯಿತ್ತು. ಅದನ್ನು ಶತೃಸೈನ್ಯದಿಂದ ಬಿಡಿಸಿೊಳ್ಳಬೇಕಾಗಿತ್ತು. ಭೀಕರ ಕಾಳಗ ನಡೆಯುತ್ತಿತ್ತು. ಎಲ್ಲೆಲ್ಲೂ ಗುಂಡು-ಫಿರಂಗಿಗಳ ಸದ್ದು ಗದ್ದಲ, ಗೊಂದಲದ ಪರಿಸ್ಥಿತಿ. ತೀವ್ರ ಹೋರಾಟದ ನಂತರ ಆ ಹಳ್ಳಿ ಅಮೆರಿಕನ್ ಸೈನ್ಯದ ವಶವಾಯಿತು.
ಸೈನಿಕರು ಹಳ್ಳಿಯನ್ನು ಪ್ರವೇಶಿಸಿ ಅಡಗಿ ಕುಳಿತಿರಬಹುದಾದ ಶತೃಗಳನ್ನು ಹುಡುಕುತ್ತ ಪ್ರತಿಯೊಂದು ಮನೆಯನ್ನು ಶೋಧಿಸುತ್ತಿದ್ದರು. ಆಗ ಅವರಿಗೊಂದು ಆಶ್ಚರ್ಯ ಕಾದಿತ್ತು.
ಒಂದು ಮನೆಯ ಬಾಗಿಲನ್ನು ತಳ್ಳಿ ಒಳಗೆ ಹೋದಾಗ, ಅಲ್ಲೊಬ್ಬ ವೃದ್ಧರು ಕುಳಿತಿದ್ದರು. ಏನನ್ನೋ ಬರೆಯುತ್ತಿದ್ದರು. ಕೈಯ್ಯಲ್ಲಿ ಬಂದೂಕಿದ್ದ ಸೈನಿಕ ಹೈಯ್! ಯಾರು ನೀವು? ಇಲ್ಲೇನು ಮಾಡುತ್ತಿದ್ದೀರಿ? ಎಂದು ಗಡುಸಾದ ದನಿಯಲ್ಲಿ ಕೇಳಿದರು. ಆ ವೃದ್ಧರು ಸೈನಿಕನನ್ನು ನೋಡಿ ಸ್ವಲ್ಪವೂ ಗಲಿಬಿಲಿಗೊಳ್ಳಲಿಲ್ಲ. ಶಾಂತವಾಗಿ ತಲೆಯೆತ್ತಿ ನೋಡಿ ನನ್ನ ಹೆಸರು ಜಾರ್ಜ್ ನಾನೊಬ್ಬ ತತ್ವಚಿಂತಕ. ನಾನು ಕುಳಿತು ಒಂದು ಕವಿತೆ ಬರೆಯುತ್ತಿದ್ದೇನೆ ಎಂದರು. ಅಮೇರಿಕನ್ ಸೈನಿಕ ಹೊರಗೆಲ್ಲ ಭೀಕರ ಯುದ್ಧ ನಡೆಯುತ್ತಿದೆ. ಗುಂಡುಗಳು ಹಾರಾಡುತ್ತಿವೆ. ಅಂತಹುದರಲ್ಲಿ ನೀವಿಲ್ಲಿ ಕುಳಿತು ಕವಿತೆ ಬರೆಯಲು ಹೇಗೆ ಸಾಧ್ಯ? ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಸಾಂತಾಯನರು ಹೊರಗೆಲ್ಲ ಯುದ್ಧ ನಡೆಯುತ್ತಿರಬಹುದು. ನನ್ನೊಳಗೆ ಯಾವ ಯುದ್ಧವೂ ನಡೆಯುತ್ತಿಲ್ಲ. ಅಲ್ಲಿ ಎಲ್ಲವೂ ಪ್ರಶಾಂತವಾಗಿದೆ. ಹಾಗಾಗಿ ನನಗೆ ಕವಿತೆ ಬರೆಯಲು ಸಾಧ್ಯವಾಗುತ್ತಿದೆ ಎಂದರು.
ಅಮೇರಿಕಾದ ಸೈನಿಕ ಏನೂ ಮಾತನಾಡಲಿಲ್ಲ. ಅವರಿಗೆ ನಮಸ್ಕರಿಸಿ, ಕವಿತೆ ಬರೆಯುವುದನ್ನು ಮುಂದುವರೆಸಿ. ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ ಎಂದು ಹೇಳಿಹೋದರಂತೆ.
ಇವನ್ನು ಓದಿದ ಮೇಲೆ ಹೊರಗಿನ ವಾತಾವರಣಕ್ಕೂ, ಯಾರಾದರೂ ಕೆಡುವುದಕ್ಕೂ ಏನಾದರೂ ಸಂಬಂಧವಿದೆ ಎನಿಸುತ್ತದೆಯೇ? ಇಲ್ಲ ಅಲ್ಲವೇ?
ಈ ಕಥೆ ಓದಿದಾಗ ಅಲ್ಲಮಪ್ರಭುಗಳ ಈ ವಚನ ನೆನಪಾಗುತ್ತದೆ. ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ
ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು.
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ ಎಂಬಂತೆ ನಾವು ಯಾವುದೇ ವಾತಾವರಣದಲ್ಲಿ ಇದ್ದರೂ ನಮ್ಮ ಮನಸ್ಸು ಒಳ್ಳೆಯದರ ಕಡೆ ಮಾತ್ರ. ತಿರುಗುವಂತೆ ನೋಡಿಕೊಂಡಾಗ ಸಾಧಕರ ಸಾಲನ್ನು ಸೇರಿ ನಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳಬಹುದು.
🌹ಸಂಗ್ರಹ🌹
🌎ಶರಣು ವಿಶ್ವವಚನ ಫೌಂಡೇಷನ್🌎
💐🌹💐🌹💐🌹💐🌹💐
13
🌻🌻 *ದಿನಕ್ಕೊಂದು ಕಥೆ* 🌻🌻
💐*ಐದು ಅಮೂಲ್ಯ ಪ್ರಶ್ನೆಗಳು*💐
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಆಸ್ಥಾನಕ್ಕೆ ಒಮ್ಮೆ ಸುಜ್ಞಾನಿ ಎಂಬ ಪಂಡಿತ ಬಂದ. ಅವನು ರಾಜನನ್ನು ಕುರಿತು, "ಮಹಾರಾಜರೇ, ನಿಮ್ಮ ಆಸ್ಥಾನದ ಪಂಡಿತರು ಕೇಳಿದ ಯಾವುದೇ ಪ್ರಶ್ನೆಗೆ ತೃಪ್ತಿಕರ ಉತ್ತರ ನೀಡುವೆ. ನಿಮಗೆ ಸರಿ ಎನಿಸಿದರೆ ತಕ್ಕ ಕಾಣಿಕೆ ನೀಡಿರಿ" ಎಂದು ಬೇಡಿಕೊಂಡನು.
ರಾಜನ ಒಪ್ಪಿಗೆಯ ಮೇರೆಗೆ ಸಭೆ ಕರೆಯಲಾಯಿತು. ಒಬ್ಬ ಆಸ್ಥಾನದ ಪಂಡಿತನು ಸುಜ್ಞಾನಿಯನ್ನು ಕುರಿತು. "ಸಕಲ ಮಾನವ, ಪಕ್ಷಿ, ಪ್ರಾಣಿ, ಕ್ರಿಮಿ ಕೀಟಗಳು ಹಾಗೂ ಗಿಡ ಮರಗಳನ್ನು ಕಾಪಾಡುವ ಕರುಣಾಮ ತಾಯಿ ಯಾರು? ಎಂದು ಕೇಳಿದನು. ಸುಜ್ಞಾನಿ ಪಂಡಿತನು. "ಭೂಮಿ ತಾಯಿ. ಮಾನವನಿಗೆ ಮನೆ ಕಟ್ಟಲು ಕಲ್ಲು - ಮಣ್ಣು, ಕಟ್ಟಿಗೆ ಕೊಡುವವಳು ಭೂಮಿತಾಯಿ. ಜೋಳ - ಗೋಧಿ ಮುಂತಾದ ಆಹಾರ ಧಾನ್ಯ ಬೆಳೆಯುವವಳು ಅವಳು. ಗಿಡಗಳ ಮೂಲಕ ಹಣ್ಣು, ಕಾಯಿ ನೀಡುವಳು. ಹೊಳೆ, ಕೆರೆ, ಸರೋವರ ಮೂಲಕ ನೀರು ಕೊಡುವವಳು ಭೂಮಿ ತಾಯಿಯೇ" ಎಂದು ಉತ್ತರಿಸಿದನು.
ಎರಡನೆಯ ಪಂಡಿತನು, "ಸಕಲ ಜೀವಿಗಳನ್ನು ರಕ್ಷಣೆ ಮಾಡುವ ನಿಜವಾದ ರಾಜನು ಯಾರು" ಎಂದು ಪ್ರಶ್ನಿಸಿದನು. ಸುಜ್ಞಾನಿ ಪಂಡಿತನು "ನಿಜವಾದ ರಾಜನೆಂದರೆ ಮಳೆರಾಜನೆ. ಮಳೆರಾಜನು ಸುರಿಸುವ ಮಳೆ ನೀರಿನಿಂದಲೇ ರೈತ ಆಹಾರ ಧಾನ್ಯ ಬೆಳೆಯುತ್ತಾನೆ. ಲತೆಗಳು ಹೂ ಕೊಡುವವು. ಗಿಡಗಳು ಹಣ್ಣು ಕೊಡುವವು. ಹೊಳೆ ಕೆರೆಗಳು ನೀರು ಕೊಡುವುದು ಮಳೆ ರಾಜನ ಕೃಪೆಯಿಂದಲೇ. ಈ ರೀತಿಯಲ್ಲಿ ಸಕಲ ಜೀವಿಗಳನ್ನು ರಕ್ಷಿಸುವ ರಾಜನೆಂದರೆ ಮಳೆರಾಜನೆ" ಎಂದು ಉತ್ತರಿಸಿದನು.
ಮೂರನೆಯ ಪಂಡಿತನು. "ಮಾನವ ಶರೀರವನ್ನು ಆರೋಗ್ಯಪೂರ್ಣವಾಗಿ ಬೆಳವಣಿಗೆ ಮಾಡುವ ಎರಡು ಮುಖ್ಯ ವಸ್ತುಗಳು ಯಾವುವು?" ಎಂದು ಪ್ರಶ್ನಿಸಿದನು. ಸುಜ್ಞಾನಿ ಪಂಡಿತನು. "ನಮ್ಮ ಶಾರೀರಿಕ ಆರೋಗ್ಯ ಚೆನ್ನಾಗಿರಲು ಒಳ್ಳೆಯ ಶುಚಿಯಾದ ಆಹಾರ ಹಾಗೂ ಸ್ವಚ್ಛ ನೀರೆ ಬೇಕು. ಅನುಭವಿಗಳು ಇದನ್ನೇ "ಕೂಳು ಕುತ್ತು, ನೀರು ಪಿತ್ತು" ಅಂದಿದ್ದಾರೆ. ಅಂದರೆ ಅಶುದ್ಧ ಆಹಾರ ಹಾಗೂ ಹೊಲಸು ನೀರು ನಮ್ಮ ಶರೀರವನ್ನು ರೋಗಮಾಯ ಮಾಡುತ್ತವೆ. ಸತ್ವಯುತ ಬಿಸಿ ಬಿಸಿ ಹಿತಮಿತವಾದ ಆಹಾರ ಹಾಗೂ ಪರಿಶುದ್ಧವಾದ ನೀರು ಆರೋಗ್ಯಪೂರ್ಣ ಬೆಳವಣಿಗೆಯ ಎರಡು ಮುಖ್ಯ ವಸ್ತುಗಳಾಗಿವೆ" ಎಂದು ಉತ್ತರಿಸಿದನು.
ನಾಲ್ಕನೆಯ ಆಸ್ಥಾನ ಪಂಡಿತನು, "ನಿಸರ್ಗದಲ್ಲಿ ಜೀವಿಸುವ ಪಕ್ಷಿ, ಪ್ರಾಣಿ, ಮನುಷ್ಯ, ಸಸ್ಯ, ಕ್ರಿಮಿ ಕಿಟಾದಿಗಳು ನಿಜವಾದ ದೇವರು ಯಾರು? ಎಂದು ಕೇಳಿದನು. ಸುಜ್ಞಾನಿಯು, "ಆಹಾರವಿಲ್ಲದೆ - ನೀರಿಲ್ಲದೆ ಯಾವು ಜೀವಿಯು ಬದುಕಲಾರದು. ಆಹಾರ ಧಾನ್ಯಗಳು ಹುಲುಸಾಗಿ ಬೆಳೆಯಲು ಸೂರ್ಯನ ಬಿಸಿಲು, ಬೆಳಕು ಅವಶ್ಯಕ. ಸೂರ್ಯನ ಪ್ರಖರ ಕಿರಣಗಳಿಂದ ಸಮುದ್ರದ ನೀರು ಕಾಯ್ದು ಉಗಿಯಾಗಿ, ಅದ್ರವಾಗಿ ಮೇಲೆ ಹೋಗುತ್ತದೆ. ಆ ಉಗಿಗೆ ತಂಪು ತಗುಲಿದಾಗ, ಮೋಡಗಳಿಂದ ಮಳೆ ಸುರಿಯುತ್ತದೆ. ಈ ರೀತಿ ಸುರಿದ ಮಳೆಯಿಂದ ಬೆಳೆಗಳು ಬೆಳೆದು ನಮ್ಮ ಆಹಾರವಾಗಿ ಜೀವಿಸಲು ನೆರವಾಗುತ್ತವೆ. ಮಳೆಯಿಂದ ಪಡೆದ ನೀರು ಕುಡಿಯಲು ಉಪಯೋಗವಾಗುತ್ತದೆ. ಹೀಗೆ ನಮ್ಮನ್ನು ಕಾಪಾಡುವ ನಿಜವಾದ ದೇವರೆಂದರೆ ಸೂರ್ಯದೇವೆನೆ" ಎಂದು ವಿವರಿಸಿದನು.
ಐದನೆಯ ಪಂಡಿತನು, "ಮನುಷ್ಯ ನಿಜವಾದ ಪ್ರಾಣ ಯಾವುದು? ಎಂದು ಕೇಳಿದನು. ಸುಜ್ಞಾನಿಯು, "ಪ್ರಾಣವೆಂದರೆ ಉಸಿರು. ಉಸಿರಾಟ ನಿಂತರೆ ಮನುಷ್ಯ ಸತ್ತಂತೆಯೇ. ಆದ್ದರಿಂದ ಮನುಷ್ಯ ನಿಜವಾದ ಪ್ರಾಣ ಎಂದರೆ ಉಸಿರಾಟವೇ ಆಗಿದೆ. ಅನುಲೋಮ - ವಿಲೋಮ ಕ್ರಿಯೆ ಹಾಗೂ ಕಪಾಲಭಾತಿ ಮೊದಲಾದ ಪ್ರಾಣಾಯಾಮ, ಯೋಗ ಕ್ರಿಯೆಗಳು ಆರೋಗ್ಯಪೂರ್ಣ ಜೀವನಕ್ಕೆ ಪಂಚ ಪ್ರಾಣವೆಂದು ತಿಳಿಯಬೇಕು" ಎಂದು ಹೇಳಿದನು. ರಾಜನೂ, ಆಸ್ಥಾನ ಪಂಡಿತರು ಸುಜ್ಞಾನಿ ಪಂಡಿತನ ವಾಕ್ ಚಾತುರ್ಯವನ್ನು ತುಂಬಾ ಮೆಚ್ಚಿಕೊಂಡರು. ಅವನಿಗೆ ಯೋಗ್ಯ ಕಾಣಿಕೆ ನೀಡಿ ಗೌರವಿಸಿದರು.
ಈ ಕಥೆಯನ್ನು ಓದಿದಾಗ ಅಲ್ಲಮಪ್ರಭುಗಳ ಕೆಳಕಂಡ ವಚನ ನೆನಪಾಗುತ್ತದೆ.
🇮🇳ಪೃಥ್ವಿ ಆಕಾಶದ ಕೊನೆಯ ಮೊನೆಯ ಮೇಲೆ, ಇಪ್ಪತ್ತೈದು ಗ್ರಾಮಂಗಳು, ಚೌಷಷ್ಟಿ ಪಟ್ಟಣ. ಛಪ್ಪನ್ನ ವೀಥಿಗಳ ದಾಂಟಿ,ಪುರದ ರಚನೆಯ ನೋಡಬಲ್ಲೆವೆಂಬರು, ತ್ರಿಕೋಣದ್ವಾರಮಂಟಪದ ಅಯ್ವೆತ್ತೆರಡಕ್ಷರದ, ಶಾಸನದ ಲಿಪಿಯಂ ತಿಳಿಯಲೋದಿ, ಎಂಬತ್ತುನಾಲ್ಕುಲಕ್ಷ ದ್ವಾರದೊಳಗೆ ಹೊಕ್ಕು ಹೊರವಡುವ ಜ