Sunday, August 31, 2025

ಎಂ ಎಂ ಕಲಬುರ್ಗಿ

 *"ಡಾ|| ಎಂ ಎಂ ಕಲಬುರ್ಗಿ ಎಂಬ ಬಯಲ ಬೆಳಕು"*

 - ಡಾ|| ಮೀನಾಕ್ಷಿ ಬಾಳಿ


ನಾಡು ಕಂಡ ಜೀವಪರ ಚಿಂತಕ ಡಾ| ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಹುತಾತ್ಮರಾಗಿ ಇಂದಿಗೆ 10 ವರ್ಷ..


ಮತೀಯವಾದಿಗಳು ಯಾವತ್ತೂ ವಿಚಾರಗಳಿಗೆ ಮಾತ್ರ ಹೆದರುತ್ತಾರೆ. ಹೌದು, ಕಲಬುರ್ಗಿಯವರ ಸತ್ಯದ ನಿಲುವುಗಳಿಂದ ವಿಚಲಿತರಾದ ಹೆಂಬೇಡಿಗಳು ವಿದ್ಯಾರ್ಥಿಗಳ ವೇಷದಲ್ಲಿ ಬಂದು ಗುಂಡಿಟ್ಟು ಕೊಂದರು. ಅವರು ವಿಚಾರ ಮಾಡುವ ಮೆದುಳಿಗೆ ಹೆದರಿಯೇ ಸರಿಯಾಗಿ ಹಣೆಗೆ ಹೊಡೆದರು . ಬಸವ ನಾಡಿನ ಕಪ್ಪು ಮಸಾರಿ ಮಣ್ಣಿನ ಬೆಳಕನ್ನು ಕೆಂಪು ಮಣ್ಣಿನ ಹೂ ಬನದಲ್ಲಿ ನಂದಿಸಲಾಯಿತು. ಧಾರವಾಡದ ಕೆಂಪು ಮಣ್ಣು ಎಂ ಎಂ ಕಲಬುರ್ಗಿಯವರ ರುಧಿರ ಧಾರೆಯಿಂದ ಇನ್ನಷ್ಟು ಕೆಂಪಾಗಿದೆಯೇ? ಕೆಂಪು ಜೀವಪರ ಹೋರಾಟದ ಸಂಕೇತವಲ್ಲವೇ.?

ಭಾರತವೆಂಬ ಭವ್ಯದೇಶದಲ್ಲಿ ಸತ್ಯ ಪ್ರತಿಪಾದನೆ ಮಾಡಿದ್ದಕ್ಕಾಗಿಯೇ ಪ್ರಾಣ ಕಳೆದುಕೊಂಡವರ ಪಟ್ಟಿಯೂ ದೊಡ್ಡದೆ ಇದೆ. ಪ್ರಾಚೀನ ಕಾಲದ ಮಾತಂತಿರಲಿ. ಸಂಪೂರ್ಣ ನಾಗರಿಕರಾಗಿದ್ದೇವೆ ಎಂಬ ಆಧುನಿಕ ಕಾಲಘಟ್ಟದ ಒಂದೇ ಶತಮಾನದ ಅವಧಿಯಲ್ಲಿ ಮಹಾತ್ಮಾ ಗಾಂಧಿಯಿಂದ ಆರಂಭಗೊಂಡು ಹಲವು ವಿಚಾರವಾದಿಗಳನ್ನು ದೇಶ ಬಲಿ ತೆಗೆದುಕೊಂಡಾಗಿದೆ. ಇವರನ್ನೆಲ್ಲ ಗಾಂಧಿಯನ್ನು ಕೊಲೆಗೈದ ಮೂಲಭೂತವಾದಿ ಕರ್ಮಠರೇ ಹುತಾತ್ಮರಾಗಿಸಿದ್ದು ಕಾಕತಾಳೀಯವೇನಲ್ಲ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನರಭಕ್ಷಕ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿ ಜೀವತೆತ್ತ ಅಮಾಯಕರಿಗಂತೂ ಲೆಕ್ಕವೇ ಇಲ್ಲ. ಆದರೂ ಈ ದೇಶ ಮಹಾನ್ ಎಂದು ಗುಡುಗಲಾಗುತ್ತಿದೆ. ಈ ದೇಶದಲ್ಲಿ ತಮ್ಮ ವಿಚಾರಗಳನ್ನು ಒಪ್ಪದವರ ಬಲಿ ಪಡೆಯುವುದನ್ನು ದೇಶಭಕ್ತಿ, ಧರ್ಮಬೀರುತ್ವ ಎಂದು ಕರೆಯಲಾಗುತ್ತಿದೆ.

'ಬಾಗಿದ ತಲೆ ಮುಗಿದ ಕೈಯಾಗಿರಿಸಯ್ಯಾ' ಎಂಬಂತೆ ಸರಳ ಸಜ್ಜನಿಕೆಯ ಮನುಷ್ಯರಾಗಿದ್ದ ಕಲಬುರ್ಗಿಯವರನ್ನು ಪಿಸ್ತೂಲು ಹಣೆಗೆ ಹಚ್ಚಿ ಭ್ರೂಮಧ್ಯಕ್ಕೆ ಗುರಿಯಿಟ್ಟು ಹೊಡೆಯುವಷ್ಟು ಕ್ರೌರ್ಯವನ್ನು ಮೆರೆದದ್ದಾರೂ ಏಕೆ? ಕಲಬುರ್ಗಿ ಉಗ್ರವಾದಿ ಹೋರಾಟಗಾರರಾಗಿದ್ದರೇ? ಅಥವಾ ಅಧಿಕಾರಕ್ಕಾಗಿ ಕುತಂತ್ರ ನಡೆಸಿದ ರಾಜಕಾರಣಿಯಾಗಿದ್ದರೇ? ಇಲ್ಲ. ಧನ ಸಂಪತ್ತು ಇತ್ಯಾದಿ ಭೌತಿಕ ದಾಹಕ್ಕಾಗಿ ಯಾರನ್ನಾದರೂ ಪೀಡಿಸಿದವರಾಗಿದ್ದರೇ? ಇಲ್ಲ. ಶಾಸನಗಳು, ಹಸ್ತಪ್ರತಿಗಳು, ಪುಸ್ತಕ, ಪೆನ್ನು, ವ್ಯಾಸಂಗ ಬಿಟ್ಟು ಒಂದಿಂಚೂ ಆಚೆ ಈಚೆ ಸುಳಿದಾಡಿರದ ಉದ್ದ ಮೂಗಿನ, ಸಪೂರ ದೇಹದ, ಹಿಡಿಯಷ್ಟು ಮಾಂಸ ಖಂಡ ಹೊಂದಿದ ಈ ಮನುಷ್ಯನನ್ನು ಬೆಳ್ಳಂಬೆಳಗಿನ ಜಾವದಲ್ಲಿ ಹಾಗೇ ಸುಮ್ಮನೆ ಪಿಕ್ನಿಕ್‌ಗೆ ಬಂದಷ್ಟು ಸರಳವಾಗಿ ಬಂದು ಹೊಡೆದು ಹೋದರಲ್ಲ! ಅದು ಹೇಗೆ ಸಾಧ್ಯವಾಯಿತು? ಅಷ್ಟಕ್ಕೂ ಜೀವಮಾನದುದ್ದಕ್ಕೂ ಈ ಮನುಷ್ಯ ಮಾಡಿದ್ದಾದರೂ ಏನು? ಸಕಲ ಜೀವಾತ್ಮರಿಗೆ ಲೇಸು ಬಯಸುವ ಕೂಡಲಸಂಗನ ಶರಣರ ಕುಲಜರಾಗಿದ್ದ ಕಲಬುರ್ಗಿಯವರು ಅಖಂಡ ಜೀವಪರ ಚಿಂತಕರಾಗಿದ್ದರು. ಮಾನವ ವಿರೋಧಿ ಎನಿಸುವ ಸ್ವಾರ್ಥ, ಕುತಂತ್ರ ಮೆರೆಯುವ ಎಲ್ಲ ಬಗೆಯ ಸಿದ್ಧಾಂತ ಮತ್ತು ನಡೆಗಳನ್ನು ಅವರು ವೈಚಾರಿಕ ಹತ್ಯಾರುಗಳಿಂದಲೇ ಖಂಡಿಸಿದ್ದರು.


*ಮಲ್ಲಪ್ಪ ಕಲಬುರ್ಗಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುಟ್ಟ ಹಳ್ಳಿ ಯರಗಲ್ ಎಂಬಲ್ಲಿ. ತಂದೆ ಮಡಿವಾಳಪ್ಪ, ತಾಯಿ ಗುರಮ್ಮ ದಿನಾಂಕ 28-11-1938* ರಂದು ತಾಯಿಯ ತವರು ಮನೆಯಾದ ಗುಬ್ಬೇವಾಡದಲ್ಲಿ ಹುಟ್ಟಿದ ಇವರು 1 ರಿಂದ 4 ನೇ ಇಯತ್ತೆವರೆಗೆ ಯರಗಲ್‌ದಲ್ಲಿ ಓದಿದ ಅಪ್ಪಟ ದೇಶಿ ಪ್ರತಿಭೆ. ಪ್ರೌಢ ವಿದ್ಯಾಭ್ಯಾಸವನ್ನು ಸಿಂದಗಿಯಲ್ಲಿ ಮುಗಿಸಿದರೆ ವಿಜಾಪುರದ ವಿಜಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಕೊಂಡರು.

ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ತೆರಳಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 1962ರಲ್ಲಿ ಕನ್ನಡ ಸಾಹಿತ್ಯದಲ್ಲಿ 'ಜಯಚಾಮರಾಜ ಒಡೆಯರ್ ಸ್ಮಾರಕ ಸುವರ್ಣ ಪದಕದೊಂದಿಗೆ' ಸ್ನಾತಕೋತ್ತರ ಪದವಿ ಪಡೆದುಕೊಂಡರು. ಎಂಎ ಪದವಿ ಪಡೆದ ದಿನದಿಂದಲೇ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಆ‌ರ್ ಸಿ ಹಿರೇಮಠರ ಗರಡಿಯಲ್ಲಿ ಸೇರಿಕೊಂಡರು. ಕನಡ ಅಧ್ಯಯನ ಪೀಠದ ಸಮಗ್ರ ವಚನ ವ್ಮಾಯ ಸಂಶೋಧನೆ, ಸಂಸ್ಕರಣ ಮತ್ತು ಪ್ರಕಟಣ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿ ಅಕ್ಷರದ ನೊಗ ಹೊತ್ತವರು ಕೊನೆ ಉಸಿರಿನವರೆಗೂ ನೊಗ ಬಿಚ್ಚಿರಲೇ ಇಲ್ಲ.

1962 ರಿಂದ 1966 ರವರೆಗೆ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಮುಂದೆ ಇವರ ಅಧ್ಯಯನ ಮತ್ತು ಅಧ್ಯಾಪನಾ ಆಸಕ್ತಿಯನ್ನು ಮನಗಂಡು 1966 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ನೇಮಿಸಿಕೊಳ್ಳಲಾಯಿತು.

1968 ರಲ್ಲಿ ತಮ್ಮ ಮೆಚ್ಚಿನ ಗುರುಗಳಾದ ಆರ್ ಸಿ ಹಿರೇಮಠರ ಮಾರ್ಗದರ್ಶನದಲ್ಲಿ *'ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ' ಎಂಬ ವಿಷಯ ಕುರಿತು ಸಂಶೋಧನೆಗೈಯ್ದು ಮಹಾಪ್ರಬಂಧವನ್ನು ಮಂಡಿಸಿದರು. ಇವತ್ತಿಗೂ ಸಂಶೋಧನಾ ವ್ಯಾಸಂಗದಲ್ಲಿ ಅದೊಂದು ಮೈಲಿಗಲ್ಲಾಗಿದೆ*. ಸಂಶೋಧನೆಯ ಶಿಸ್ತು ವಿಚಕ್ಷಣ ದೃಷ್ಟಿಕೋನ, ವಸ್ತುನಿಷ್ಠತೆ, ನಿಖರತೆ ಮುಂತಾದ ಅಂಶಗಳಿಗೆ ಕಲಬುರ್ಗಿಯವರ ಈ ಕೃತಿಯು ಮಾದರಿಯಾಗಿದ್ದನ್ನು ವಿದ್ವಾಂಸರಾರೂ ಅಲ್ಲಗೆಳೆಯಲಾರರು.

ನಿರಂತರ ಓದು ಮತ್ತು ಅದಮ್ಯ ಉತ್ಸಾಹ ಇವೆರಡೂ ಇವರ ಚಹರೆಗಳಾಗಿದ್ದವು. ಓದಲು ಮತ್ತು ಬರೆಯಲೆಂದೇ ಹುಟ್ಟಿದ ಮನುಷ್ಯನೇನೋ ಎಂಬಷ್ಟು ಹಟದಲ್ಲಿ ಮುಂದುವರಿದ ಇವರು *ಬರೆದ ಪುಸ್ತಕಗಳ ಸಂಖ್ಯೆ 115*. ಸುಮಾರು *700ಕ್ಕೂ ಹೆಚ್ಚು ಬಿಡಿಬರಹಗಳನ್ನು ಪ್ರಕಟಿಸಿದ್ದಾರೆ*. ಇನ್ನೂ ಬರೆಯಬಹುದಾಗಿದ್ದ ಅವೆಷ್ಟು ಕೃತಿಗಳು ಅಂತರ್‌ಧ್ಯಾನದಲ್ಲಿ ಲೀನವಾದವೊ? ಗೊತ್ತಿಲ್ಲ.


ಇವರ ಪ್ರಮುಖ ಆಸಕ್ತಿ *ವಚನ ಸಾಹಿತ್ಯ ಮತ್ತು ಶಾಸನ ಸಾಹಿತ್ಯ* ತುಂಬು ಹರೆಯದಲ್ಲಿಯೇ

* 1968ರಲ್ಲಿ 'ಶಾಸನಗಳಲ್ಲಿ ಶಿವಶರಣರು' ಎಂಬ ಕೃತಿಯನ್ನು ಹೊರ ತಂದರು. ಇದು ಇವತ್ತಿಗೂ ಶಾಸನಗಳ ಮೂಲಕ ಐತಿಹಾಸಿಕ ತಥ್ಯಗಳನ್ನು ಅನ್ವೇಷಣೆ ಮಾಡುವ ವಿಧಾನಕ್ಕೆ ಮಾದರಿಯಾಗಿದೆ. ಅದೇ ಹೊತ್ತಿಗೆ 12 ನೇ ಶತಮಾನದ ಶಿವಶರಣರ ಕುರಿತು ಚಾರಿತ್ರಿಕ ಸಂಗತಿಗಳನ್ನು ಕಂಡುಕೊಳ್ಳುವವರಿಗೆ ಆಕರವಾಗಿದೆ. ಆದ್ದರಿಂದ ಇದು ಶೋಧ ಮಾರ್ಗದ ಆಚಾರ ಕೃತಿಯಾಗಿದೆ.

* 1974ರಲ್ಲಿ 'ಶಾಸನ ವ್ಯಾಸಂಗ' ಕೃತಿ ಪ್ರಕಟಿಸಿ ಮುಂದೆ ಶಾಸನಗಳಲ್ಲಿ ಅಧ್ಯಯನ ಮಾಡುವವರಿಗೆ ಒಂದು ರಹದಾರಿಯನ್ನು ತೆರೆದು ತೋರಿಸಿದರು. ಈ ಕೃತಿಗೆ *'ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ'* ಯು ದಕ್ಕಿತು.


ಸಂಪಾದನೆ ಇವರ ಇನ್ನೊಂದು ಆಸಕ್ತಿ ಕ್ಷೇತ್ರ. ದಣಿವರಿಯದ ಈ ಸಂಪಾದಕ

* ಪ್ರಾಚೀನ ಸಾಹಿತ್ಯದ 34 ಕೃತಿಗಳನ್ನು ಸಂಪಾದಿಸಿದರೆ,

* ಆಧುನಿಕ ಸಾಹಿತ್ಯದ 10 ಕೃತಿಗಳನ್ನು ಸಂಪಾದಿಸಿದ್ದಾರೆ.

ಕನ್ನಡ ಗ್ರಂಥ ಸಂಪಾದನೆಯನ್ನು ಒಂದು ಅಧ್ಯಯನ ಶಿಸ್ತಾಗಿ ಅಭಿವೃದ್ಧಿಪಡಿಸುವಲ್ಲಿ ಕಲಬುರ್ಗಿ ವಹಿಸಿದ ಶ್ರಮ ಮತ್ತು ಎಚ್ಚರ ಇವೆರಡೂ ಚರಿತಾರ್ಹ, *1972 ರಲ್ಲಿ ಬರೆದ ಕನ್ನಡ ಗ್ರಂಥ ಸಂಪಾದನ ಶಾಸ್ತ್ರ ಕೃತಿಯು ಸಂಪಾದನಕಾರರ ಕೈಪಿಡಿಯೇ ಆಗಿದೆ*. ನಾಮವಿಜ್ಞಾನವು ಅವರ ಇನ್ನೊಂದು ಕುತೂಹಲದ ಕ್ಷೇತ್ರ, ಕನ್ನಡದಲ್ಲಿ ನಾಮವಿಜ್ಞಾನ ಕುರಿತು ಅವರಷ್ಟು ಸ್ವಾರಸ್ಯಪೂರ್ಣವಾಗಿ ಅಧ್ಯಯನ ಮಾಡಿದವರಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಮನೆಯ ಹೆಸರುಗಳ (ಅಡ್ಡಹೆಸರು) ಬಗೆಗೆ ಪ್ರಥಮ ಬಾರಿಗೆ ತುಂಬಾ ಕುತೂಹಲವಾದ ಅಂಶಗಳನ್ನು ನಮೂದಿಸಿದ್ದಾರೆ. ಇದರ ಪ್ರತಿಫಲವೆಂಬಂತೆ ಅವರು ತಮಿಳುನಾಡಿನ ತಂಜಾವೂರಿನಲ್ಲಿ ನಡೆದ *ಅಖಿಲ ಭಾರತ ನಾಮವಿಜ್ಞಾನ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು*. ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಜ್ಞಾನಶಾಖೆಗಳನ್ನು ಇವರು ಮುಟ್ಟಿ ಮೌಲಿಕ ಕೊಡುಗೆ ಇತ್ತಿದ್ದಾರೆ. *ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ ಅಲಂಕಾರ ಶಾಸ್ತ್ರ ಮೀಮಾಂಸೆ, ವಿಮರ್ಶೆ* ಮುಂತಾದ ಹಲವು ಕ್ಷೇತ್ರಗಳ ಹರಹಿನಲ್ಲಿ ಈಜಾಡಿ ಜಯಿಸಬಲ್ಲವರಾಗಿದ್ದರು.


ಸಾಹಿತ್ಯ ಮತ್ತು ಇತಿಹಾಸದ ಅಂತರ್‌ಸಂಬಂಧವನ್ನು ಮೂರ್ತರೂಪದಲ್ಲಿ ಸಾಕಾರಗೊಳಿಸಿದ ಇವರು ಸಾಂಸ್ಕೃತಿಕ ಶೋಧವು ಜನಾಂಗ ಬದುಕಿನ ಭಾವಕೋಶದ ಶೋಧವೇ ಆಗಿರುತ್ತವೆ ಎಂಬುದನ್ನು ಎತ್ತಿ ತೋರಿಸಿದರು.

*"ಕಲಬುರ್ಗಿ ಅವರ ಶೋಧಗಳು ಕನ್ನಡ ಸಾಹಿತ್ಯಕಷ್ಟೇ ಅಲ್ಲ ಕನ್ನಡ ನಾಡು, ನುಡಿ, ಸಂಸ್ಕೃತಿಯ ಶೋಧಗಳಿಗೂ ಮಾದರಿಯಾಗಿವೆ"*.

ಹೀಗೆಂದೇ *1991 ರಲ್ಲಿ ಬಳ್ಳಾರಿಯ ಸೊಂಡೂರಿನಲ್ಲಿ ನಡೆದ ಇತಿಹಾಸ ಸಮ್ಮೇಳನದ ಅಧ್ಯಕ್ಷತೆಗೂ ಭಾಜನರಾಗಿದ್ದರು*.


ಇವರು 

* ಶಾಸನ ಕುರಿತು 10 ಕೃತಿಗಳು.

* ಸಂಶೋಧನೆಗೆ ಸಂಬಂಧಪಟ್ಟಂತೆ 17 ಕೃತಿಗಳು.

* ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 6 ಕೃತಿಗಳು.

* 50 ಸಂಪಾದಿತ ಕೃತಿಗಳು.

* 4 ಅಭಿನಂದನಾ ಗ್ರಂಥಗಳ ಸಂಪಾದನೆ.

* 14 ವಿವಿಧ ಸ್ಮರಣಿಕೆ, ಪತ್ರಿಕೆ, ವಾಚಿಕೆ, ವಿಚಾರ ಸಂಕಿರಣಗಳ ಸಂಪಾದಿತ ಕೃತಿಗಳನ್ನು ಹೊರ ತಂದಿದ್ದಾರೆ.

* 2 ಜಾನಪದ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.

ಅಪಾರ ವಿದ್ವತ್ತು ಮತ್ತು ದಣಿವರಿಯದ ಶ್ರಮವನ್ನು ಬಯಸುವ ಸಂಶೋಧನೆ, ಸಂಪಾದನೆ ಮುಂತಾದ ಶಾಸ್ತ್ರ ಶೋಧದಲ್ಲಿ ಇವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದರಿಂದ ಸೃಜನ ಸಾಹಿತ್ಯದತ್ತ ಹೊರಳಲು ಅವಕಾಶವೇ ಸಿಗಲಿಲ್ಲವೇನೊ? ಆದರೆ ಸಂಶೋಧನೆಯು ಸೃಜನದ ಆತ್ಯಂತಿಕ ಸ್ಥಿತಿಯೆಂಬುದನ್ನು ಕಲಬುರ್ಗಿ ಮಾಸ್ತರ್ ವಿದ್ವತ್‌ ಲೋಕಕ್ಕೆ ತೆರೆದು ತೋರಿಸಿದರು. ಆದರೂ ಕಲಬುರ್ಗಿಯೊಳಗಿನ ಕವಿಮನ 'ಕೆಟ್ಟಿತ್ತು ಕಲ್ಯಾಣ'' ಖರೇ ಖರೇ ಸಂಗ್ಯಾಬಾಳ್ಯಾ ಎಂಬ ಎರಡು ನಾಟಕಗಳನ್ನು, 'ನೀರು ನೀರಡಿಸಿತ್ತು' ಎಂಬ ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿತು. ಈ ಮೂಲಕ ಕಲಬುರ್ಗಿ ತಾವೊಬ್ಬ ಸವ್ಯಸಾಚಿ ಎಂಬುದನ್ನು ಸಾಬೀತು ಪಡಿಸಿದರು. ಪ್ರಾಯಶಃ ವ್ಯಕ್ತಿಯೊಬ್ಬರ ಬದುಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಬರೆಯಬಹುದಾದದ್ದನ್ನು ಕಲಬುರ್ಗಿ ಬರೆದರು. ಆದರೆ ಅವರ ಕೃತಿಗಳು ಸಂಖ್ಯಾತ್ಮಕವಾಗಿ ಗಮನ ಸೆಳೆಯದೆ ಅವುಗಳ ಒಳಗಿನ ತಿರುಳು ಮತ್ತು ಸಾಹಿತ್ಯಕ ಮೌಲ್ಯದಿಂದಾಗಿ ಗಮನ ಸೆಳೆಯುತ್ತವೆ. ಹಲವು ಕೃತಿಗಳು ಬರೆದ ತೂಕದ ಸಾಹಿತಿಗಳು ಹಲವರಿರಬಹುದು. ಆದರೆ ಗಂಭೀರ ಶಾಸ್ತ್ರೀಯ ಅಧ್ಯಯನ ಕೈಕೊಂಡು ಕರಾರುವಾಕ್ಕಾದ ಫಲಿತಗಳನ್ನು ಕೊಡುವುದಿದೆಯಲ್ಲ ಅದಕ್ಕೆ ಕನ್ನಡದ ಮಹಾಕವಿ 'ರನ್ನ' ಹೇಳುವಂತೆ ಎಂಟೆದೈರ್ಯ ಬೇಕು. ಈ ಎದೆಗಾರಿಕೆಯಿಂದಾಗಿಯೇ ಕಲಬುರ್ಗಿಯವರು ಧರ್ಮಾಂಧರ ಮತ್ತು ಶಾಸ್ತ್ರಜ್ಞರ ವಿರೋಧವನ್ನು, ಮಾರಣಾಂತಿಕ ಹಲ್ಲೆಗಳನ್ನು ಎದುರಿಸಬೇಕಾಯಿತು. ಎಂತಲೇ ಅವರು ತಮ್ಮ ಕೃತಿಯೊಂದರ ಪ್ರಸ್ತಾವನೆಯಲ್ಲಿ *"ಭಾರತದಂಥ ಭಾವನಿಷ್ಟ ರಾಷ್ಟ್ರದಲ್ಲಿ ಸಂಶೋಧನೆ ಸರಳ ಹಾದಿಯಲ್ಲ. ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ. ಭಾರತೀಯ ಸಂಶೋಧಕ ಅನೇಕ ಅಗ್ನಿ ಕುಂಡಗಳನ್ನು ದಾಟಬೇಕಾಗುತ್ತದೆ"* ಎಂದು ಬರೆದರು. ಕಾರಣ ಕಲಬುರ್ಗಿಯವರು ವಚನಕಾರರಾದ 'ನೀಲಾಂಬಿಕೆ, 'ಚೆನ್ನಬಸವಣ್ಣ' ಬಸವಾದಿಗಳ ಕುರಿತು ಅನ್ವೇಷಿಸಿ ಬರೆದ ಕೆಲವು ಲೇಖನಗಳಿಂದಾಗಿ ವಿವಾದಕ್ಕೆ ಸಿಲುಕಿದ್ದರು. ಕರ್ಮಠ ಮಠೀಯವಾದಿಗಳಿಂದ ಕ್ರೂರ ದಬ್ಬಾಳಿಕೆ, ಪತಿರೋಧಕ್ಕೂ ಒಳಗಾಗಿದ್ದರು. ಆ ಸಂದರ್ಭದಲ್ಲಿ  ಅವರು ಅನುಭವಿಸಿದ ನೋವು, ಆಘಾತಗಳು ಅಸದಳವಾಗಿದ್ದವು.


ಕಲಬುರ್ಗಿ ಅಧ್ಯಯನಶೀಲರಷ್ಟೇ ಅಲ್ಲ ಅವರೊಬ್ಬ ಸಮರ್ಥ ಸಂಘಟಕರೂ ಆಗಿದ್ದರೆಂಬುದಕ್ಕೆ ಅವರು ಕಟ್ಟಿ ಬೆಳೆಸಿದ ಸಾಹಿತ್ಯಕ, ಸಾಂಸ್ಕೃತಿಕ ಸಂಘಟನೆಗಳೇ ಸಾಕ್ಷಿಯಾಗಿವೆ.

* 1975ರಲ್ಲಿ ಗದಗ ತೋಂಟದಾರ್ಯ ಮಠದಲ್ಲಿ 'ವೀರಶೈವ ಅಧ್ಯಯನ ಸಂಸ್ಥೆ'.

* 1991ರಲ್ಲಿ ನಾಗನೂರ ಮಠದಿಂದ 'ವೀರಶೈವ ಅಧ್ಯಯನ ಅಕಾಡಮಿ'.

* 1991 ರಲ್ಲಿ ಶಿವಮೊಗ್ಗದ ಆನಂದ ಮಠದಿಂದ 'ಮಲೆನಾಡ ವೀರಶೈವ ಅಧ್ಯಯನ ಸಂಸ್ಥೆ'.

* 1993ರಲ್ಲಿ ನಿಡಸೋಸಿ ಶಿವಲಿಂಗೇಶ್ವರ ಮಠದಿಂದ 'ಶರಣ ಸಂಸ್ಕೃತಿ ಅಕಾಡಮಿ'.

* 1994ರಲ್ಲಿ ಸಿಂದಗಿ ಸಾರಂಗ ಮಠದಿಂದ 'ಪೂಜ್ಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ'.

* 1996ರಲ್ಲಿ ಕೊಡೆಕಲ್ ಮಠದಿಂದ 'ಬಸವೇಶ್ವರ ಅಧ್ಯಯನ ಸಂಸ್ಥೆ'.

ಹೀಗೆ ಪುಂಖಾನುಪುಂಖವಾಗಿ ಸಂಸ್ಥೆಗಳನ್ನು ಸ್ಥಾಪಿಸಿ ಮಠಗಳಿಗೆ ಸಾಹಿತ್ಯಕ ಮೌಲ್ಯವನ್ನು ತಂದುಕೊಟ್ಟರು.


ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅವರು ಮಾಡಿದ ಪುಸ್ತಕ ವ್ಯವಸಾಯವಂತೂ ಚರಿತ್ರಾರ್ಹವೇ ಹೌದು. ಕಾಲಗರ್ಭದಲ್ಲಿ ಹೂತು ಹೋಗಬಹುದಾಗಿದ್ದ ಹಲವು ಅಮೂಲ್ಯ ಕೃತಿಗಳನ್ನು ಹುಡುಕಿಸಿ ಪ್ರಕಟಿಸಿ ಕ"ನ್ನಡ ವಿಶ್ವವಿದ್ಯಾನಿಲಯವೊಂದು ಮಾಡಬೇಕಾದ ಕೆಲಸಗಳಿಗೆ ದಿಕ್ಕೂಚಿ ಒದಗಿಸಿದರು".

ದೇಶಿ ಸಮ್ಮೇಳನಗಳನ್ನು ನಡೆಸಿ ಜಾನಪದಕ್ಕೆ ವಿಶಾಲ ನೆಲೆ ಒದಗಿಸಿದರು. ಅವರ ಸಾಹಿತ್ಯ ಕೈಂಕರ್ಯವನ್ನು ಅಲಕ್ಷಿಸುವುದು ಸಾಧ್ಯವೇ ಇರಲಿಲ್ಲ. ಹೀಗಾಗಿಯೇ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳಿಗೂ ಲೆಕ್ಕವಿಲ್ಲ. *ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಪಂಪ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಷ್ಟ್ರೀಯ ಬಸವ ಪುರಸ್ಕಾರ* ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಕಲಬುರ್ಗಿಯವರು ಮಾತ್ರ ಈ ಎಲ್ಲ ಪುರಸ್ಕಾರ ಪ್ರಶಸ್ತಿಗಳನ್ನು ಮೀರಿ ಶುದ್ಧ ಅಧ್ಯಯನ ದಾಹಿಯಾಗಿಯೇ ಮುಂದುವರಿದಿದ್ದರು.

ಶರಣರ ಕಾಯಕ ಪ್ರಜ್ಞೆಯೇ ಅವರಲ್ಲಿ ಘನೀಕೃತವಾಗಿತ್ತು..


ಸಮಕಾಲೀನ ಕನ್ನಡದ ಸಂದರ್ಭದಲ್ಲಿ ಅವರಷ್ಟು ಜ್ಞಾನದಾಹಿಗಳಾಗಿದ್ದವರನ್ನು ಕಾಣಲಾರೆವು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಕುರಿತು ಅವರು ಹೇಳಿದ ಕೆಲವು ಸತ್ಯಗಳನ್ನು ಸಂಪ್ರದಾಯವಾದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ವೈದಿಕ ಸಾಹಿತ್ಯ ತತ್ವಸಿದ್ಧಾಂತಗಳ ಮನುಷ್ಯ ವಿರೋಧಿ ನಿಲುವು ಮತ್ತು ತತ್ವಸಿದ್ಧಾಂತಗಳ ಮನುಷ್ಯ ವಿರೋಧಿ ನಿಲುವು ನೆಲೆಗಳನ್ನು ಅವರು ಯಾವ ಎಗ್ಗಿಲ್ಲದೆ ಬಟಾಬಯಲುಗೊಳಿಸಿದ್ದರು. ಇದು ವರ್ತಮಾನದ ಸಾಂಸ್ಕೃತಿಕ ರಾಜಕಾರಣಕ್ಕೆ ಅರಗದ ತುತ್ತಾಗಿತ್ತು..!


ಮತೀಯವಾದಿಗಳು ಯಾವತ್ತೂ ವಿಚಾರಗಳಿಗೆ ಮಾತ್ರ ಹೆದರುತ್ತಾರೆ. ಹೌದು, ಕಲಬುರ್ಗಿಯವರ ಸತ್ಯದ ನಿಲುವುಗಳಿಂದ ವಿಚಲಿತರಾದ ಹೆಂಬೇಡಿಗಳು ವಿದ್ಯಾರ್ಥಿಗಳ ವೇಷದಲ್ಲಿ ಬಂದು ಗುಂಡಿಟ್ಟು ಕೊಂದರು.! ಅವರು ವಿಚಾರ ಮಾಡುವ ಮೆದುಳಿಗೆ ಹೆದರಿಯೇ ಸರಿಯಾಗಿ ಹಣೆಗೆ ಹೊಡೆದರು. ಬಸವ ನಾಡಿನ ಕಪ್ಪು ಮಸಾರಿ ಮಣ್ಣಿನ ಬೆಳಕನ್ನು ಕೆಂಪು ಮಣ್ಣಿನ ಹೂ ಬನದಲ್ಲಿ ನಂದಿಸಲಾಯಿತು. ಧಾರವಾಡದ ಕೆಂಪು ಮಣ್ಣು ಎಂ ಎಂ ಕಲಬುರ್ಗಿಯವರ ರುಧಿರ ಧಾರೆಯಿಂದ ಇನ್ನಷ್ಟು ಕೆಂಪಾಗಿದೆಯೇ.? ಕೆಂಪು ಜೀವಪರ ಹೋರಾಟದ ಸಂಕೇತವಲ್ಲವೇ.?


ದೇಹಗಳನ್ನು ನಾಶ ಮಾಡುವುದರಿಂದ ವಿಚಾರಗಳನ್ನು ಕೊಲ್ಲಲಾಗದು ಎಂಬ ಸತ್ಯವು ಇತಿಹಾಸದಲ್ಲಿ ಮತ್ತೆ ಮತ್ತೆ ಸ್ಥಾಪಿತವಾಗುತ್ತಿದೆಯಾದರೂ ಸಂಪ್ರದಾಯವಾದಿಗಳು ಮಾತ್ರ ತಮ್ಮ ದುಷ್ಟ ಕಾರ್ಯಾಚರಣೆಯನ್ನು ನಿಲ್ಲಿಸುವುದೇ ಇಲ್ಲ. ವರ್ತಮಾನದ ಈ ಕ್ಷಣದ ಸಂಕಟವೇನೆಂದರೆ ಪ್ರಭುತ್ವವೇ ಹಿಂಸೆಯನ್ನು ತಾತ್ವಿಕಗೊಳಿಸುತ್ತಿರುವುದು. ಕಲಬುರ್ಗಿಯಂತಹ ಚಿಂತಕರ ಹತ್ಯೆಗಳು ನಾಗರಿಕತೆಯ ಬಗೆಗೆ ದೊಡ್ಡ ಪ್ರಶ್ನೆಗಳನ್ನು ಇದಿರು ನಿಲ್ಲಿಸುತ್ತಿವೆ..!???


(ಡಾ|| ರಾಜೇಂದ್ರ ಚೆನ್ನಿ, ಡಾ|| ರಹಮತ್ ತರೀಕೆರೆ, ಡಾ|| ಮೀನಾಕ್ಷಿ ಬಾಳಿ ಸಂಪಾದಿಸಿದ 'ನಾನು ಕಲಬುರ್ಗಿ' ಕೃತಿಯಲ್ಲಿನ ಆಯ್ದ ಭಾಗ)

ಹೊಸ ಕಥೆಗಳು 2025

 ಟಾಲ್‌ಸ್ಟಾಯ್‌ನ 'ಮನುಷ್ಯನಿಗೆಷ್ಟು ಭೂಮಿ ಬೇಕು' ಎಂಬ ಕಥೆ ಸಾಕಷ್ಟು ಜನಪ್ರಿಯ. ಈ ಕಥೆಯ ಹಂದರವೂ ಸರಳವಾಗಿದೆ.


ಒಂದೂರಿನಲ್ಲಿ ತನ್ನ ಮಿತಿಯಲ್ಲೇ ನೆಮ್ಮದಿಯಾಗಿರುವ ಒಂದು ರೈತ ಕುಟುಂಬ. ಅಲ್ಲೆಲ್ಲೋ ದೂರದ ಇನ್ನೊಂದು ಊರಿನಲ್ಲಿ ಎಷ್ಟು ಬೇಕಾದರೂ ಜಮೀನು ಕೊಡುತ್ತಾರೆ. ಅದೂ ಪುಕ್ಕಟೆ ಎಂದು ಕಿವಿಗೆ ಬಿದ್ದಾಗ, ರೈತನ ಆಸೆ ಗರಿಗೆದರುತ್ತದೆ. ಆತ ಬುತ್ತಿ ಕಟ್ಟಿಕೊಂಡು ಪ್ರಯಾಣ ಹೊರಟೇ ಬಿಡುತ್ತಾನೆ. ಅಲ್ಲಿ ಹೋದರೆ, ಅವನ ಕಿವಿಗೆ ಬಿದ್ದಿದ್ದಷ್ಟೂ ನಿಜ! ಎಷ್ಟು ಬೇಕಾದರೂ ಭೂಮಿ ಸಿಗುತ್ತೆ. ಆದರೆ ಒಂದು ಷರತ್ತು. ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಆತ ನಡೆಯಲು, ಓಡಲು ಆರಂಭಿಸಬೇಕು. ಸಂಜೆಯೊಳಗೆ ನಡಿಗೆಯಲ್ಲೇ ವಾಪಸ್‌ ಬಂದು ತಾನು ಹೊರಟ ತಾಣವನ್ನೇ ಮುಟ್ಟಬೇಕು. ಹಾಗಾದಾಗ ಅವನು ನಡಿಗೆಯಲ್ಲಿ ಕ್ರಮಿಸಿದ ಅಷ್ಟೂ ಭೂಮಿ ಅವನದೇ.


ಸರಿ, ಮಾರನೇ ಬೆಳಿಗ್ಗೆ ರೈತ ನಡೆಯತೊಡಗುತ್ತಾನೆ. ನಡಿಗೆ ಸಾಲದೆಂದು ಓಡತೊಡಗುತ್ತಾನೆ. ಊಟ, ತಿಂಡಿಗೆ ನಿಂತರೆ ಕಾಲಹರಣವೆಂದು ಎಲ್ಲೂ ವಿರಮಿಸದೆ ಸಾಧ್ಯವಾದಷ್ಟೂ ವೇಗವಾಗಿ ಗರಿಷ್ಠ ದೂರ ಕ್ರಮಿಸಲು ಉಧ್ಯುಕ್ತನಾಗುತ್ತಾನೆ. ಹಾಗೇ ನಡೆಯುತ್ತ, ಓಡುತ್ತ ಮಧ್ಯಾಹ್ನ ಕಳೆಯಿತು. ಸಂಜೆ ಸಮೀಪಿಸಿತು. ಈಗ ತಡವಾಗಿಹೋಯಿತೆಂಬ ಆತಂಕದಲ್ಲಿ, ಆರಂಭದ ಬಿಂದು ಮುಟ್ಟಲು ಶಕ್ತಿ ಮೀರಿ ಓಡುತ್ತಾನೆ.


ಕೊನೆಗೆ ಕರಾರುವಕ್ಕಾಗಿ ಸೂರ್ಯಾಸ್ತದ ಸಮಯಕ್ಕೆ ತಾನು ಹೊರಟಿದ್ದ ಜಾಗವನ್ನೇ ಬಂದು ತಲುಪುತ್ತಾನೆ. ಆದರೆ, ಅಲ್ಲಿ ಮುಟ್ಟಿದೊಡನೆ, ಆಯಾಸಕ್ಕೆ ಕುಸಿದು ಬಿದ್ದು ಸತ್ತೇ ಹೋಗುತ್ತಾನೆ. ಈಗ ಅವನನ್ನು ಆರಡಿ ಮೂರಡಿ ಗುಂಡಿಯಲ್ಲಿ ಹೂಳುತ್ತಾರೆ. ಕಡೆಗೆ ಅವನಿಗೆ ತನ್ನದಾಗಿ ದಕ್ಕಿದ ಭೂಮಿ ಅಷ್ಟೇ.


ಇದು ಕಥೆ. ಈ ಕಥೆಯನ್ನು ಲಂಕೇಶರು ಹಲವಾರು ಬಾರಿ ಉಲ್ಲೇಖಿಸಿ ಪತ್ರಿಕೆಯಲ್ಲಿ ಬರೆದರು. ಲಂಕೇಶ್ ಬೆಳೆಯುವ ಹಂತದಲ್ಲಿ, ಅದೂ ಅವರ ವ್ಯಕ್ತಿತ್ವ ರೂಪುಗೊಳ್ಳುವ ಘಟ್ಟದಲ್ಲಿ ಅವರ ಕೈಗೆ ಸಿಕ್ಕಿದ ಈ ಕಥೆ, ಸಾಹಿತ್ಯ ಲೋಕಕ್ಕೆ ಅವರ ಕಣ್ಣು ತೆರೆಯಿಸಿತು. ಅವರೊಳಗಿನ ಬರಹಗಾರನನ್ನೇ ಎಚ್ಚರಿಸಿತು. ತಮ್ಮ ಆತ್ಮಕಥೆ 'ಹುಳಿಮಾವಿನ ಮರ'ದಲ್ಲಿಯೂ ಲಂಕೇಶ್ ಈ ಕಥೆಯ ಪ್ರಸ್ತಾಪ ಮಾಡುವುದು ಹೀಗೆ:


"...ನಮ್ಮೂರ ವಯಸ್ಕರ ಶಿಕ್ಷಣದ ಪುಸ್ತಕ ಭಂಡಾರ ಉಪಯೋಗವಾದದ್ದು ನನಗೊಬ್ಬನಿಗೇ ಎಂದು ಕಾಣುತ್ತದೆ. ಆ ಲೈಬ್ರರಿಯಲ್ಲಿನ ಶಾಲು ಸಾಬಿ, ನಮಗೆಷ್ಟು ಭೂಮಿ ಬೇಕು, ಧ್ರುವ ಚರಿತ್ರೆ, ಚಂದ್ರಹಾಸ, ಗರುಡಗಂಬದ ದಾಸಯ್ಯ, ಮಂಕುತಿಮ್ಮನ ಕಗ್ಗ ಮುಂತಾದ ಪುಸ್ತಕಗಳು ನನಗೆ ಕೊಟ್ಟ ಕಾವು ಅಮೂಲ್ಯವಾದದ್ದು. ಇವತ್ತಿಗೂ ನನ್ನ ವ್ಯಕ್ತಿತ್ವದ ಭಾಗವಾಗಿರುವಂಥಾದ್ದು’.


ನನಗೆ ಕಥೆ ಎಂದರೆ ಏನು ಎಂದು ಗೊತ್ತಾದದ್ದೇ ಟಾಲ್‌ಸ್ಟಾಯ್‌ನ ನಮಗೆಷ್ಟು ಭೂಮಿ ಬೇಕು ಎಂಬುದನ್ನು ಓದಿದಾಗ. ಇದರ ಪ್ರಭಾವವನ್ನು ನೀವು ಇವತ್ತಿಗೂ ನನ್ನ ಬರಹಗಳಲ್ಲಿ ಕಾಣಬಹುದು. ಭೂಮಿಯ ಆಸೆಯಿಂದ ಮಾಯಾವಿಯೊಬ್ಬನ ಭರವಸೆಯನ್ನು ನೆಚ್ಚಿ ಹೋಗಿ ಅಸು ನೀಗಿದವನ ಕಥೆ ಇದು. ನೆಮ್ಮದಿಯ ಮಾತುಕತೆಯೊಂದಿಗೆ ಈ ಕಥೆ ಶುರುವಾಗುತ್ತದೆ. ಊಟ, ತಿಂಡಿ, ಪ್ರೀತಿ, ಸ್ನೇಹ ಇವೇ ಮುಖ್ಯ ಎಂಬಂತೆ ಶುರುವಾದ ಕಥೆ ದುರಾಶೆಯಿಂದಾದ ವಿನಾಶವನ್ನು ತೋರಿ ಮುಗಿಯುತ್ತದೆ. ಈ ಕಥೆ ನಿಜಕ್ಕೂ ಸಾಹಿತ್ಯಿಕ ಕೃತಿಯಲ್ಲ. ಬರೀ ತಾತ್ವಿಕ ಕಗ್ಗವೂ ಅಲ್ಲ. ಕಥೆ ಬರೆಯುವ ಗೀಳಿನಿಂದ ಬಂದದ್ದಲ್ಲ. ಈ ಬದುಕಿನಲ್ಲಿ ನೆಮ್ಮದಿ, ಶಾಂತಿ, ಪ್ರೇಮ, ಆಸ್ತಿ ಇವೆಲ್ಲವುಗಳ ಸ್ಥಾನವೇನು ಎಂದು ಕೇಳುತ್ತಲೇ ಈ ಬದುಕಿನ ಉದ್ದೇಶವೇನು? ಎಂದು ಈ ಕಥೆ ಪ್ರಶ್ನಿಸುತ್ತದೆ.


ಈ ಕಥೆ ನನ್ನಲ್ಲಿ ಬಿತ್ತಿದ ಬೀಜ ಮೊಳೆಯುತ್ತಲೇ ಹೋಯಿತು. ಇದರಿಂದಾಗಿ ನಾನು ಕಲಾವಿದನೆಂದುಕೊಂಡಾಗ ಆ ಬಗ್ಗೆ ಅಸಹ್ಯಪಡುವುದು, ತತ್ವಜ್ಞಾನಿಯೆಂದುಕೊಂಡಾಗ ಆ ಬಗ್ಗೆ ಗೇಲಿ ಮಾಡಿಕೊಳ್ಳುವುದು ಸಾಧ್ಯವಾಯಿತು. ಆಮೇಲೆ ಈ ಕಥೆಯ ಮೂಲಕ ಕ್ರಿಯಾಶೀಲ ಬರವಣಿಗೆ ಅತ್ಯಂತ ನೇರ, ಸರಳ ಎಂಬುದು ತಿಳಿಯಿತು. ನಾನು ಈ ಕಥೆಯಿಂದಾಗಿಯೇ ಇವತ್ತಿಗೂ ಅಮೂರ್ತದಲ್ಲಿ ಮುಳುಗಬಲ್ಲ ಬುದ್ಧಿಜೀವಿಯಲ್ಲ, ನನ್ನ ಮನಸ್ಸು ನಾನು ಕಂಡದ್ದನ್ನು ಅನುಸರಿಸಿ ಎಲ್ಲ ತಾಪ ಮತ್ತು ತಪವನ್ನು ಮುಟ್ಟಲು ಯತ್ನಿಸುತ್ತದೆ ಮತ್ತು ಈ ಕಥೆಯಿಂದಾಗಿ ಬರೆಯುವುದರ, ಬದುಕುವುದರ ಘನತೆ ತಿಳಿಯಿತು. ನನ್ನ ಒಳತೋಟಿಯನ್ನು ಒಳಗೊಳ್ಳದ ಘನತೆ ನಿಷ್ಪ್ರಯೋಜಕ. ಹಾಗೆಯೇ ಒಳತೋಟಿಯನ್ನೇ ನೆಚ್ಚಿ ಬಾಹ್ಯದ ಬಗ್ಗೆ ಕಾಳಜಿ ವಹಿಸದಿರುವುದೂ ಒಳ್ಳೆಯದಲ್ಲ. ಇಷ್ಟೆಲ್ಲ ಆಗ ಆಯಿತೆಂದು ನಾನು ಹೇಳುತ್ತಿಲ್ಲ. ಸಾಹಿತ್ಯದ ಯಕ್ಷಿಣಿ ಮತ್ತು ಲೌಕಿಕತೆ ನನ್ನನ್ನು ಮುಟ್ಟಿತ್ತು. ಮನುಷ್ಯರ ಕ್ರಿಯೆಗಳ ಸ್ವಾರಸ್ಯವನ್ನು ಅರಿಯುವುದರ ಬಗ್ಗೆ ಗಮನ ಹರಿಯಿತು..."


ಇದನ್ನು ಬರೆಯುತ್ತಿರುವ ಲಂಕೇಶ್, ಮುಕ್ಕಾಲು ಜೀವನವನ್ನು ಪೂರೈಸಿದ, ಮಾಗಿದ ಲಂಕೇಶ್ ಎಂಬುದನ್ನು ಮರೆಯದಿರೋಣ. ಇರಲಿ. ಈ ಕಥೆಗೆ ಸಂಬಂಧಿಸಿ ಇಲ್ಲಿ ಇನ್ನೊಂದು ಕುತೂಹಲದ ಅಡಿಟಿಪ್ಪಣಿಯಿದೆ.


"ಇಡೀ ವಿಶ್ವವನ್ನು ಜಯಿಸಿದ" ಅಲೆಕ್ಸಾಂಡರ್ ಭಾರತದ ಮೇಲೆ (ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ) ದಂಡೆತ್ತಿ ಬಂದಾಗಿನ ಸಂದರ್ಭ. ಇಲ್ಲಿ ತಾನು ಹೋದ ಬಂದ ಕಡೆ ಸ್ಥಳೀಯ ತತ್ವಜ್ಞಾನಿಗಳು, ಪಂಡಿತರನ್ನು ಕರೆಯಿಸಿ ಅವರೊಂದಿಗೆ ಜೀವನದ ಗಹನ ವಿಚಾರಗಳನ್ನು ಚರ್ಚಿಸುವುದು ಅವನ ಅಭ್ಯಾಸ. ಈ ಪ್ರಸಂಗವನ್ನು ಅಮರ್ತ್ಯ ಸೇನ್ ತಮ್ಮ 'ದಿ ಆರ್ಗ್ಯುಮೆಂಟೆಟೀವ್ ಇಂಡಿಯನ್' ಕೃತಿಯಲ್ಲಿ ನಿರೂಪಿಸಿದ್ದಾರೆ.


ಹಾಗೊಮ್ಮೆ ಅಲೆಕ್ಸಾಂಡರ್ ವಾಯವ್ಯ ಭಾರತದ ಜೈನ ಪಂಡಿತರನ್ನು ಭೇಟಿ ಮಾಡುವಾಗ ಅವರು ತನ್ನಂಥ ಮಹಾಯೋಧನಿಗೆ ತೋರುವ ನಿರ್ಲಕ್ಷ್ಯಕ್ಕೆ ಕಸಿವಿಸಿಗೊಂಡು ಅವರನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಜೈನ ತತ್ವವೇತ್ತರು ನೀಡಿದ ಉತ್ತರ ಕೌತುಕಮಯವಾಗಿದೆ.


ಅವರು ಹೇಳುತ್ತಾರೆ: "ಅಲೆಕ್ಸಾಂಡರ್ ದೊರೆಯೇ, ಪ್ರತಿಯೊಬ್ಬ ಮನುಷ್ಯನಿಗೂ ತಾನು ನಿಂತ ಜಾಗದಷ್ಟು ಭೂಮಿ ಮಾತ್ರ ಲಭ್ಯ. ನೀನೂ ನಮ್ಮಂತೆಯೇ ನರಮನುಷ್ಯ. ಏನೆಂದರೆ ನೀನು ಸದಾ ಗಡಿಬಿಡಿಯಲ್ಲಿರುತ್ತೀ. ಅದರಿಂದ ಏನೂ ಉಪಯೋಗವಿಲ್ಲ. ನಿನ್ನ ಊರಿನಿಂದ ಇಷ್ಟೊಂದು ದೂರ ಬಂದು ನಿನಗೂ ಹಿಂಸೆ, ಬೇರೆಯವರಿಗೂ ತೊಂದರೆ... ಶೀಘ್ರದಲ್ಲೇ ನೀನು ಮೃತನಾಗುತ್ತೀ. ಆಮೇಲೆ ನಿನ್ನನ್ನು ಹೂಳಲು ಎಷ್ಟು ಜಾಗ ಬೇಕೋ, ಅಷ್ಟು ಭೂಮಿಗೆ ಮಾತ್ರ ನೀನು ಒಡೆಯ..!"


ಎಂಥ ಆಶ್ಚರ್ಯವಿದು! ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಜೈನ ತತ್ವಜ್ಞಾನಿಗಳು ಬೋಧಿಸಿದ್ದೂ ಅದೇ, ಎರಡು ಶತಮಾನಗಳ ಹಿಂದೆ ಟಾಲ್‌ಸ್ಟಾಯ್ ಬರೆದ ಕಥೆಯ ಸಾರವೂ ಅದೇ. ಜೀವಪೋಷಕ ಜಿಜ್ಞಾಸೆಯೊಂದು ಹೀಗೆ ಶತಮಾನಗಳನ್ನು ಹಾಯ್ದು, ಖಂಡಾಂತರ ದಾಟಿ ಮತ್ತೆ ಪ್ರತಿಧ್ವನಿ ಪಡೆದದ್ದು ಎಂಥ ಸೋಜಿಗ!


-ಎನ್.ಎಸ್. ಶಂಕರ್

(ಪ್ರಜಾವಾಣಿ ಭಾನುವಾರದ ಪುರವಣಿ,

ಜನವರಿ 20, 2019)


ಕೃಪೆ: -'ಉಸಾಬರಿ: ಮತ್ತಷ್ಟು ಸಮಕಾಲೀನ ಬರಹಗಳು' (ಪುಟ: 155-157, 2019)

 

Shankar N Sondur

Tuesday, August 19, 2025

ದೇವಲಾಪುರ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ವಚನ ಪಾಠಶಾಲೆ ಉದ್ಘಾಟನೆ

 



ನಂಬಿ ಕರೆದಡೆ ಶಿವನು ಓಗೊಡುತ್ತಾನೆ ಎಂದು ದೇವನೂರು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠದ ಶ್ರೀ ಮಹಾಂತಸ್ವಾಮಿಗಳು ಹೇಳಿದರು. ದೇವಲಾಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ಪ್ರಥಮ ವಚನ ಪಾಠಶಾಲೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು



 ವಚನ ಸಾಹಿತ್ಯ ಅನುಭಾವಿಕ ಸಾಹಿತ್ಯವಾಗಿದ್ದು, ಶರಣರು ಮೇಲಾಗಲೊಲ್ಲದೆ ಕೀಳಾಗಿರುವೆನು ಎಂದು ಹೇಳಿ ಎಲ್ಲರಿಗಿಂತ ತಾನು ಮೇಲೆಂದು ಮೆರೆಯುವ ಅಹಂಕಾರವನ್ನು ಹತ್ತಿರ ಸುಳಿಯದಂತೆ ನೋಡಿಕೊಂಡು ಜನಸೇವೆ ಮಾಡುತ್ತಾ ಹಿಂದೆ ನಿಲ್ಲಬಯಸಿದುದರಿಂದ ೯೦೦ ವರ್ಷ ಕಳೆದರೂ ಅವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದರು.



ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿಸ್ವಾಮಿಗಳು ಮಾತನಾಡಿ ಮನದ ಮೈಲಿಗೆಯನ್ನು ಕಳೆಯಲು ಶರಣರ ವಚನಗಳು ಸಹಕಾರಿಯಾಗಿದ್ದು, ಇಂತಹ ವಚನ ಸಾಹಿತ್ಯದ ಅಭಿರುಚಿ ಬಾಲ್ಯದಲ್ಲಿಯೇ ಚಿಗುರೊಡೆದಾಗ ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹಾಯಕವಾಗುತ್ತದೆ ಎಂದರು.



ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್ ಗುರು ಇಂದಿನ ಕಾಲಘಟ್ಟದಲ್ಲಿ ಮನುಷ್ಯ ತಾನು ಮಾತ್ರ ಬದುಕಬೇಕು ಎಂಬ ಸ್ವಾರ್ಥ ಹೆಚ್ಚಾಗಿ ಸಮಾಜ ನೈತಿಕ ಅಧಃಪತನತ್ತ ವಾಲುತ್ತಿರುವುದು ನೋವಿನ ಸಂಗತಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸಲು ದೇವಲಾಪುರ ಮಠದಲ್ಲಿ ವಚನ ಪಾಠಶಾಲೆ ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.



ಶರಣರ ವಿಚಾರಧಾರೆ ವಿಷಯದ ಬಗ್ಗೆ ಪ್ರವಚನ ನೀಡಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಕಣ್ಮರೆಯಾಗುತ್ತಿದ್ದ ವಚನ ಸಾಹಿತ್ಯವನ್ನು ಗುರು ರೂಪದಲ್ಲಿ ಬೆಳಕಿಗೆ ತಂದ ಡಾ. ಫ.ಗು ಹಳಕಟ್ಟಿ, ಲಿಂಗ ಸ್ವರೂಪದಲ್ಲಿ ಸಂಶೋಧಿಸಿದ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಮತ್ತು ಜಂಗಮ ಸ್ವರೂಪವಾಗಿ ಪ್ರಚುರಪಡಿಸಿದ ಉತ್ತಂಗಿ ಚೆನ್ನಪ್ಪನವರನ್ನು ಪ್ರತಿಯೊಬ್ಬ ಸಾಹಿತ್ಯಾಭಿಮಾನಿಯೂ ಸ್ಮರಿಸಬೇಕು ಎಂದರು.



ವಚನ ಪಾಠಶಾಲೆ ಉದ್ಘಾಟಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಉಚ್ಛಾರ ಮಾಡಿದಾಗ ಒಂದೊAದು ಅಕ್ಷರದಲ್ಲಿಯೂ ವಚನಕಾರರು ಮತ್ತು ವಚನಗಳನ್ನು ಕಾಣಬೇಕು. ಅ ಎಂದರೆ ಅಲ್ಲಮಪ್ರಭು, ಆ ಎಂದರೆ ಆಯ್ದಕ್ಕಿ ಮಾರಯ್ಯ, ಇ ಎಂದರೆ ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳು ನೆನಪಾಗಬೇಕು ಎಂದು ವಚನ ವರ್ಣಮಾಲೆಯನ್ನು ಪರಿಚಯಿಸಿದರು.



ದೇವಲಾಪುರ ಶ್ರೀ ಗುರುಮಲ್ಲೇಶ್ವರಮಠದ ಶ್ರೀ ಜಡೇಸ್ವಾಮಿಗಳು ಮಾತನಾಡಿ ಶ್ರೀಮಠಕ್ಕೆ ಭಕ್ತರೇ ಆಸ್ತಿ. ಸಮಾಜಕ್ಕೆ ಶರಣರು ನೀಡಿರುವ ಅಮೂಲ್ಯವಾದ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ ಸಹಕಾರದೊಂದಿಗೆ ವಚನಪಾಠಶಾಲೆ ಪ್ರಾರಂಭಿಸುತ್ತಿದ್ದೇವೆ. ಭಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ನಿವೃತ್ತ ಗ್ರಾಮಲೆಕ್ಕಾಧಿಕಾರಿ ನಾಗರಾಜು ನಿರೂಪಿಸಿದರು.

 ದೇವಿಕಾ  ಪ್ರಾರ್ಥಿಸಿದರು. ವಿವಿಧ ಮಠಗಳ ಮಠಾಧೀಶರು ಮತ್ತು ಗ್ರಾಮಸ್ಥರು, ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.



Saturday, August 16, 2025

ಪ್ರಥಮ ವಚನ ಪಾಠಶಾಲೆ ಉದ್ಘಾಟನೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ

 ದೇವಲಾಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ಪ್ರಥಮ ವಚನ ಪಾಠಶಾಲೆ ಉದ್ಘಾಟನೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ




ಮೈಸೂರು ಜಿಲ್ಲೆ ದೇವಲಾಪುರ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ೧೮ ಆಗಸ್ಟ್ ೨೦೨೫ರಂದು ಸಂಜೆ ೬.೩೦ಕ್ಕೆ ಮೈಸೂರು ಜಿಲ್ಲೆಯಲ್ಲಿ ಪ್ರಥಮ ವಚನ ಪಾಠಶಾಲೆ ಉದ್ಘಾಟನೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ದೇವನೂರು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠಾಧ್ಯಕ್ಷರಾದ ಶ್ರೀ ಮಹಾಂತಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದು, ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿಸ್ವಾಮಿಗಳು ದಿವ್ಯಸಮ್ಮುಖ ವಹಿಸಲಿದ್ದಾರೆ. ಮೈಸೂರು ವಿ.ವಿ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್ ಗುರು ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಶರಣರ ವಿಚಾರ ಧಾರೆ ಬಗ್ಗೆ ಪ್ರವಚನ ನೀಡಲಿದ್ದಾರೆ. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ವಚನ ಪಾಠಶಾಲೆ ಉದ್ಘಾಟಿಸಲಿದ್ದಾರೆ. ೧೮ ಆಗಸ್ಟ್ ೨೦೨೫ರಿಂದ ೨೨ ಆಗಸ್ಟ್ ೨೦೨೫ರವರೆಗೆ ಪ್ರತಿದಿನ ಸಂಜೆ ೬.೩೦ಕ್ಕೆ ಪ್ರವಚನ ಕಾರ್ಯಕ್ರಮ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಭಕ್ತರು ಆಗಮಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದು ದೇವಲಾಪುರ ಶ್ರೀ ಗುರುಮಲ್ಲೇಶ್ವರ ಮಠದ ಶ್ರೀ ಜಡೇಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Thursday, August 7, 2025

ಕುಂತೂರಿನಲ್ಲಿ ನಡೆದ ಮಲೆ ಮಹದೇಶ್ವರರ ಜಯಂತಿ


 

ಮೈಸೂರು : ಕತ್ತಲೆ ರಾಜ್ಯದ ಮೌಢ್ಯವನ್ನು ಅಳಿಸಿ ಕೋಟ್ಯಂತರ ಜನರ ಆರಾಧ್ಯದೈವ ಆದವರು ಶ್ರೀ ಮಲೆ ಮಹದೇಶ್ವರರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಕುಂತೂರು ಶ್ರೀ ವೀರಸಿಂಹಾಸನ ಮಠದಲ್ಲಿ ನಡೆದ ಶ್ರೀ ಮಲೆ ಮಹದೇಶ್ವರ ಜಯಂತಿ, ಗುರುಗಳ ಪುಣ್ಯಸ್ಮರಣೆ, ಶ್ರಾವಣಮಾಸದ ಪೂಜಾನುಷ್ಠಾನ ಮತ್ತು ಗಡಿನಾಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಶ್ರೀಶೈಲದ ಚಂದ್ರಶೇಖರಮೂರ್ತಿ ಮತ್ತು ಉತ್ತರಾಜಮ್ಮರವರ ಸುಪುತ್ರರಾಗಿ ಜನಿಸಿದ ಮಹದೇಶ್ವರರು ನಂತರ ಭೀಮನಕೊಲ್ಲಿ, ಸುತ್ತೂರು, ವಾಟಾಳು ಮುಂತಾದ ಕಡೆ ಸಂಚರಿಸಿ ಅಂತಿಮವಾಗಿ ಇಂದಿನ ಮಹದೇಶ್ವರ ಬೆಟ್ಟದಲ್ಲಿ ಐಕ್ಯರಾಗುತ್ತಾರೆ. ಅಂದು ಹದಿನಾಲ್ಕನೇ ಶತಮಾನದಲ್ಲಿಯೇ ಸಾಲೂರು ಮಠದ ಶ್ರೀ ಮುಪ್ಪಿನ ಸ್ವಾಮಿಗಳು, ಕುಂತೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳೊಡನೆ ಮಹದೇಶ್ವರರು ಸಾಲೂರು ಮಠದಲ್ಲಿ ಸ್ಥಾಪಿಸಿದ ಮುಹೂರ್ತ ಕಂಬವನ್ನು ಇಂದಿಗೂ ಕಾಣಬಹುದು. ಸುತ್ತೂರಿನಲ್ಲಿ ಅಂದಿನ ಜಗದ್ಗುರುಗಳಾದ ಶ್ರೀ ಸಿದ್ಧನಂಜದೇಶಿಕೇಂದ್ರಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ರಾಗಿ ಕಲ್ಲನ್ನು ಬೀಸುವ ಮೂಲಕ ಕಾಯಕ ತತ್ವವನ್ನು ಎತ್ತಿಹಿಡಿದು, ಸುತ್ತೂರು ಮಠ ಸುಖ ಅಂತ ಬಂದ್ರೆ ಬೀಸೋಕೆ ಕುಕ್ಕೇಲಿ ರಾಗಿ ತುಂಬಿಟ್ರು ಎಂಬ ಗಾದೆ ಹುಟ್ಟುಕೊಳ್ಳಲು ಕಾರಣರಾದರು ಎಂದರು.


ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಮಹದೇಶ್ವರರು ಜಂಗಮಮೂರ್ತಿಯಾಗಿ ಕರ್ನಾಟಕದಾದ್ಯಂತ ಎಲ್ಲೆಡೆ ಸಂಚರಿಸಿ ಭಕ್ತರ ಮನ ಮತ್ತು ಮನೆದೈವವಾದುದರಿಂದ ಕೋಟ್ಯಂತರ ಭಕ್ತರನ್ನು ಹೊಂದಿದ್ದಾರೆ. ಮಹದೇಶ್ವರರು ಎಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಇಂದು ಮಹದೇಶ್ವರರ ದೇವಸ್ಥಾನ ನಿರ್ಮಾಣವಾಗಿರುವುದನ್ನು ಕಾಣಬಹುದು. ಕೆಳವರ್ಗದ ಜನರನ್ನು ಅತ್ಯಂತ ಪ್ರೀತಿಯಿಂದ ಕಂಡು ಅವರ ಹೃದಯದಲ್ಲಿ ಭಕ್ತಿಯ ಬೀಜವನ್ನು ಬಿತ್ತಿದುದರಿಂದ ಇಂದು ಶಿವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಜನರು ಕಾಲ್ನಡಿಗೆಯಲ್ಲಿ ಅವರ ದರ್ಶನ ಮಾಡಲು ಬರುವುದನ್ನು ಕಾಣಬಹುದು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀ ಚನ್ನಬಸವದೇಶಿಕೇಂದ್ರಸ್ವಾಮೀಜಿ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅರಿಷಡ್ವರ್ಗಗಳಿರುತ್ತವೆ. ಅವುಗಳನ್ನು ಗೆದ್ದಾಗ ಮಾನವ ಮಹಾದೇವನಾಗುತ್ತಾನೆ ಎಂದರು.


ನಂತರ ಮಲೆ ಮಹದೇವ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿ ಮಹದೇಶ್ವರರ ಬಗ್ಗೆ ಬೆಳಕು ಚೆಲ್ಲಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಪತ್ರಕರ್ತ ರಾಜಣ್ಣ ಮತ್ತು ಸಾವಯವ ಕೃಷಿಕ ಮಹೇಂದ್ರಕುಮಾರ್ ಅವರನ್ನು ಅಭಿನಂದಿಸಲಾಯಿತು.



ಕಾರ್ಯಕ್ರಮದಲ್ಲಿ ಕುಂತೂರು ಮಠದ ಶ್ರೀ ಶಿವಪ್ರಭುಸ್ವಾಮಿಗಳು, ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರುಲಿಂಗಸ್ವಾಮಿಗಳು, ಮಡಿವಾಳಸ್ವಾಮಿ ಮಠದ ಅಡವಿಸ್ವಾಮಿಗಳು, ನರಗ್ಯಾತನಹಳ್ಳಿ ಮಠದ ಶಿವಕುಮಾರಸ್ವಾಮೀಜಿ, ದಂಡಿಕೆರೆ ಮಠದ ಶ್ರೀ ಬಸವಲಿಂಗಸ್ವಾಮಿಗಳು, ಗೌಡಳ್ಳಿ ಮಠದ ಶ್ರೀಗಳು, ಬಸಳ್ಳಿಹುಂಡಿ ಮಠದ ಶ್ರೀ ಬಸವರಾಜಸ್ವಾಮಿಗಳು, ಕುರಿಹುಂಡಿ ಮಠದ ಶ್ರೀಗಳು, ಶಿಕ್ಷಕ ತೋಂಟದಾರ್ಯ, ಜಯಶಂಕರ್, ವಿನೋದ್ ಕುಮಾರ್, ನಾಗರಾಜಪ್ಪ, ವಿ, ಲಿಂಗಣ್ಣ,  ಉಪಸ್ಥಿತರಿದ್ದರು.