Tuesday, January 3, 2023

ಸಿದ್ಧೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

 

ಮೈಸೂರು : ಶತಮಾನ ಕಂಡ ಸದ್ಗುರು ಶ್ರೀ ಸಿದ್ಧೇಶ್ವರ ಶ್ರೀಗಳು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರಿನ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜ್ಞಾನಯೋಗಿ ಎಂದೇ ಹೆಸರಾದ ಸಿದ್ಧೇಶ್ವರಶ್ರೀಗಳ ಪ್ರವಚನಗಳು ಕಲ್ಲೆದೆಯಂತಹ ವ್ಯಕ್ತಿಗಳಲ್ಲೂ ಪರಿಮಳದ ಪುಷ್ಪವನ್ನು ಅರಳಿಸುತ್ತಿತ್ತು. ನಮ್ಮ ಸಂಪಾದನೆಯು ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷವನ್ನು ಕಾಣಲು ಕಾರಣವಾಗಬೇಕೆ ಹೊರತು ದುರಾಸೆಯನ್ನು ಹೆಚ್ಚಿಸಿ ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಬಾರದು ಎಂದು ತಮ್ಮ ಪ್ರವಚನದುದ್ದಕ್ಕೂ ಸರಳತೆಯ ನೀತಿಸಾರವನ್ನು ಉಣಬಡಿಸುತ್ತಿದ್ದ ಶ್ರೀಗಳು ಸ್ವತಃ ತಾವೇ  ಸರಳತೆಯ ಸಾಕಾರಮೂರ್ತಿಗಳಾಗಿ ಸದಾಕಾಲ ಬಿಳಿ ಉಡುಗೆ ಧರಿಸಿ ಇತರರಿಗೆ ಮಾದರಿಯಾಗಿದ್ದರು. ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಹೊಂದಿ, ಚಿಂತನೆಗಳನ್ನು ನಡೆಸಿ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆದ ಸಿದ್ಧೇಶ್ವರ ಸ್ವಾಮೀಜಿಗಳು ನಮ್ಮನ್ನು ಅಗಲಿರುವುದು ವಿಶ್ವದ ಆಧ್ಯಾತ್ಮಿಕ, ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ಮರಣವನ್ನು ಮಹಾನವಮಿಯನ್ನಾಗಿಸಿದ ಶ್ರೀಗಳು ಬದುಕಿನಲ್ಲಿ ಸೂರ್ಯನ ಕಿರಣದಂತೆ ಇರಬೇಕು ಎಂದು ತಿಳಿಸಿದರು. ಜ್ಞಾನದ ಖಣಿಗಳಾಗಿದ್ದ ಇವರು ಜೀವನ್ಮುಕ್ತಿಯನ್ನು ಹೊಂದಿ ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಅವರು ನಡೆ, ನುಡಿ ಒಂದಾಗಿ ನೀಡಿದ ಪ್ರವಚನಗಳ ಕೀರ್ತಿಗಳನ್ನು ಶೇಷರೂಪದಲ್ಲಿ ಬಿಟ್ಟು ಹೋಗಿದ್ದು ಸಂದರ್ಭಾನುಸಾರ ಅವುಗಳನ್ನು ಆಲಿಸುತ್ತ ಹೃದಯ ಶ್ರೀಮಂತಿಕೆಯನ್ನು ಸಂಪಾದಿಸಿಕೊಳ್ಳೋಣ ಎಂದರು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಮಾತನಾಡಿ ೮೨ ವರ್ಷಗಳ ಶ್ರೀಗಳ ಬದುಕು ಅರ್ಥಪೂರ್ಣವಾದದ್ದು, ತಾವು ಧರಿಸುತ್ತಿದ್ದ ಉಡುಪಿನಲ್ಲಿ ಕಿಸೆಯನ್ನೇ ಇಟ್ಟುಕೊಳ್ಳದೇ ಬದುಕಿ ತೋರಿಸಿದ ಇವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ತಿಳಿಸಿ ಅವರು ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅನಿತಾ ನಾಗರಾಜ್, ಕೇಂದ್ರೀಯ ಸಂಚಾಲಕರಾz ವಿ. ಲಿಂಗಣ್ಣ, ಮಂಜುಳ ಶಿವಪ್ರಸಾದ್, ನಾಗರಾಜ್, ವಚನ ನುಡಿನಮನ ಸಲ್ಲಿಸಿದರು.


No comments:

Post a Comment