Tuesday, January 3, 2023

ಶತಮಾನ ಕಂಡ ಸದ್ಗುರು ಪೂಜ್ಯ ಸಿದ್ಧೇಶ್ವರ ಶ್ರೀಗಳು

 


*ಶತಮಾನ ಕಂಡ ಸದ್ಗುರು ಪೂಜ್ಯ ಸಿದ್ಧೇಶ್ವರ ಶ್ರೀಗಳು*

ಬಯಲು ಬಯಲನೆ ಬಿತ್ತಿ 

ಬಯಲು ಬಯಲನೆ ಬೆಳೆದು 

ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 

ಬಯಲ ಜೀವನ ಬಯಲ ಭಾವನೆ

ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 

ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು 

ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.

ಅಲ್ಲಮಪ್ರಭುಗಳ ವಚನದಂತೆ ಬಯಲಿನಲ್ಲಿ ಬಯಲಾದ ಪೂಜ್ಯ ಸಿದ್ಧೇಶ್ವರ ಶ್ರೀಗಳು ಭೌತಿಕವಾಗಿ ದೂರವಾಗಿರುವುದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ.

ಜೀವನು ದೇಹ ಭಾವವನ್ನು ಮರೆತು ದೇವನನ್ನು ನೆನೆಯುತ್ತ ಅವನಲ್ಲೇ ಬೆರೆಯಬೇಕು! ಹೀಗೆ ದೇಹವನ್ನೂ, ದೇಹ ಸಂಬಂಧಿತ ಸಕಲ ಪ್ರಪಂಚವನ್ನೂ ಒಂದು ಕ್ಷಣ ಮರೆತು ದೇವನನ್ನು ನೆನೆಯುವುದೇ ಭಕ್ತಿ! ನೆನೆದ ದೇವನಲ್ಲಿ ಮನವೊಂದಾಗುವುದೇ ಯೋಗ, ಭಕ್ತಿಯೋಗ!

ಹೀಗೆ ದಾರ್ಶನಿಕರ ವಿಚಾರಧಾರೆಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಸರಿದೂಗಿಸಿ ಹೇಳುವ ನಿರ್ಮಲ ಮನಸ್ಸಿನ ಪ್ರವಚನ ಪರಮಾಚಾರ್ಯರಾದ ಪರಮಪೂಜ್ಯರ ಸರಳ ಸುಂದರ ಉಪದೇಶಗಳು ಕೇಳುಗರ ಹೃದಯದಲ್ಲಿ ಅಚ್ಚೊತ್ತಿ ನಿಲ್ಲುತ್ತವೆ.

ಜ್ಞಾನಯೋಗಿ ಎಂದೇ ಹೆಸರಾದ ಶ್ರೀಗಳ ಪ್ರವಚನಗಳು ಕಲ್ಲೆದೆಯಂತಹ ವ್ಯಕ್ತಿಗಳಲ್ಲೂ ಪರಿಮಳದ ಪುಷ್ಪವನ್ನು ಅರಳಿಸುವಂತೆ ಪರಿಣಾಮಕಾರಿಯಾಗಿರುತ್ತಿರುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಇವರ ಪ್ರವಚನವಿದೆ ಎಂದರೆ ಸಾವಿರಾರು ಜನರು ನೆರೆದು ಅವರ ಪ್ರವಚನ ಆಲಿಸಿ ಪುನೀತರಾಗುತ್ತಿದ್ದರು. ಅವರ ನುಡಿಗಳು ನೊಂದವರಿಗೆ ಸಾಂತ್ವನ ನೀಡಿ, ಆತ್ಮಸ್ಥೈರ್ಯ ಕಳೆದುಕೊಂಡವರಿಗೆ ಸಮಾಧಾನದ ಉಸಿರು ಬಿಡುವಂತೆ ಮಾಡಿ, ಜ್ಞಾನಿಗಳಿಗೆ ಮತ್ತಷ್ಟು ಸಾಧಿಸುವ ಹಂಬಲ ಹೆಚ್ಚಿಸಿ, ಸಾಧಕರಿಗೆ ಮತ್ತು ಅನುಭಾವಿಗಳಿಗೆ ಸಾಧನೆಯ ಮೆಟ್ಟಿಲುಗಳಾಗುತ್ತಿದ್ದವು. ಎಲ್ಲರಲ್ಲಿಯೂ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತಿದ್ದ ಇವರು ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುವುದರ ಮೂಲಕ ಸಾವಿರಾರು ಜ‌ನರ ಮನ ಪರಿವರ್ತನೆಗೆ ಪ್ರೇರಕ ಶಕ್ತಿಯಾಗಿದ್ದರು.

ಸೂಜಿಗಲ್ಲಿನಂತಹ ಸೆಳೆತದ ವ್ಯಕ್ತಿತ್ವ, ಅವರ ಕನ್ನಡ ಭಾಷೆಯ ಉಚ್ಛಾರಣೆಯ ಧಾಟಿ, ಅವರು ಬಳಕೆ ಮಾಡುತ್ತಿದ್ದ ಪದಪ್ರಯೋಗ, ನೀಡುತ್ತಿದ್ದ ಉದಾಹಣೆಗಳು, ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುತ್ತಿದ್ದ ರೀತಿಗೆ ಪ್ರತಿಯೊಬ್ಬರೂ ಆಕರ್ಷಿತರಾಗಿ ಮಂತ್ರಮುಗ್ಧರಾಗುತ್ತಿದ್ದರು. ಪ್ರಕೃತಿಯ ವಿವಿಧ ಅಂಶಗಳಾದ ಕಲ್ಲು, ಮಣ್ಣು, ಮರ, ಗಿಡ, ಹೂ, ಬಳ್ಳಿ, ಪ್ರಾಣಿ, ಪಕ್ಷಿಗಳಲ್ಲಿ  ಜೀವಚೈತನ್ಯವಿದೆ ಎಂಬ ಅಂಶವನ್ನು  ಅವರು ವರ್ಣಿಸುತ್ತಿದ್ದ ರೀತಿಯನ್ನು ಕೇಳುತ್ತಿದ್ದ ಕೇಳುಗರ ಕರ್ಣಗಳು ಪಾವನವಾಗುತ್ತಿದ್ದವು.

ನಮ್ಮ ಸಂಪಾದನೆಯು ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷವನ್ನು ಕಾಣಲು ಕಾರಣವಾಗಬೇಕೆ ಹೊರತು ದುರಾಸೆಯನ್ನು ಹೆಚ್ಚಿಸಿ ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಬಾರದು ಎಂದು ತಮ್ಮ ಪ್ರವಚನದುದ್ದಕ್ಕೂ ಸರಳತೆಯ ನೀತಿಸಾರವನ್ನು ಉಣಬಡಿಸುತ್ತಿದ್ದ ಶ್ರೀಗಳು ಸ್ವತಃ ತಾವೇ  ಸರಳತೆಯ ಸಾಕಾರಮೂರ್ತಿಗಳಾಗಿ ಸದಾಕಾಲ ಬಿಳಿ ಉಡುಗೆ ಧರಿಸಿ ಇತರರಿಗೆ ಮಾದರಿಯಾಗಿದ್ದರು.

ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಹೊಂದಿ, ಚಿಂತನೆಗಳನ್ನು ನಡೆಸಿ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನಮ್ಮನ್ನು ಅಗಲಿರುವುದು ವಿಶ್ವದ ಆಧ್ಯಾತ್ಮಿಕ, ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಕುದಿಯುವವರು ಕುದಿಯಲಿ..! ಉರಿಯುವವರು ಉರಿಯಲಿ..! "ನಿನ್ನ ಪಾಡಿಗೆ ನೀನಿರು..! ಕುದಿಯುವವರು ಆವಿಯಾಗುತ್ತಾರೆ..! ಉರಿಯುವವರು ಬೂದಿಯಗುತ್ತಾರೆ..!

     ಎಂದು ನಿಂದಕರ ನಿಂದನೆಯ ಮಾತುಗಳಿಗೆ ಕುಗ್ಗದೆ ಆತ್ಮಸ್ಥೆರ್ಯ ಹೆಚ್ಚಿಸಿಕೊಳ್ಳಲು ಶ್ರೀಗಳ ಮೇಲಿನ ನುಡಿಗಳು ಪ್ರತಿಯೊಬ್ಬರಿಗೂ ಸಹಾಯಕವಾಗಿದೆ.

ವಿದ್ಯಾ, ಬುದ್ಧಿ, ಶಕ್ತಿ, ಸಾಮರ್ಥ್ಯ, ಸಿರಿ, ಸಂಪದಗಳನ್ನು ದೇವನು ಕೆಲವರಿಗೆ ಕಡಿಮೆ ಕರುಣಿಸಿರಬಹುದು. ಆದರೆ ಸಕಲ ಜೀವರಾಶಿಗಳ ಹೃದಯದಲ್ಲಿ ಪ್ರೇಮಜ್ಯೋತಿಯನ್ನು ಮಾತ್ರ ಸಮನಾಗಿ ಬೆಳಗಿಸಿರುವನು. ಜೀವನ ರಸಪೂರ್ಣವಾಗಲು ಪ್ರೇಮಜ್ಯೋತಿಯೇ ಮುಖ್ಯ ಎಂದು ತಿಳಿಸಿದ ಶ್ರೀಗಳ ನುಡಿಗಳನ್ನು ಕೇಳುವ ಪ್ರತಿಯೊಬ್ಬರ ಹೃದಯವೂ ಗೆಲ್ಲುತ್ತದೆ.

ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. 

ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.

ಕೇಳು, ಕೂಡಲಸಂಗಮದೇವಾ,

ಮರಣವೆ ಮಹಾನವಮಿ.

ವಿಶ್ವಗುರು ಬಸವಣ್ಣನವರ ವಚನದಂತೆ ಮರಣವನ್ನು ಮಹಾನವಮಿಯನ್ನಾಗಿಸಿದ ಪೂಜ್ಯ ಶ್ರೀಗಳು ಕ್ರಿಯಾಯ್ಮಕವಾಗಿ ನಮ್ಮ ನಡುವೆ ಭೌತಿಕವಾಗಿ ಇಲ್ಲದಿದ್ದರೂ ಅವರ ನುಡಿಗಳು ಮತ್ತು ಸಾಹಿತ್ಯ ರೂಪದಲ್ಲಿ ನೀಡಿದ ಕೃತಿಗಳು ನಮ್ಮಲ್ಲಿ ಜ್ಞಾನ‌ ಜ್ಯೋತಿಯನ್ನು ಬೆಳಗಿಸುತ್ತವೆ.

"ಸತ್ಯವೂ ಇಲ್ಲ, ಅಸತ್ಯವೂ ಇಲ್ಲ,

ಸಹಜವೂ ಇಲ್ಲ, ಅಸಹಜವೂ ಇಲ್ಲ,

ನಾನೂ ಇಲ್ಲ, ನೀನೂ ಇಲ್ಲ.

`ಇಲ್ಲ' `ಇಲ್ಲ' ಎಂಬುದು ತಾನಿಲ್ಲ

ಗುಹೇಶ್ವರನೆಂಬುದು ತಾ ಬಯಲು

ಎಂದು ತಮ್ಮ ಅಂತಿಮ ಅಭಿವಂದನಾ ಪತ್ರದಲ್ಲಿ ಅಂತ್ಯ ಪ್ರಣಮಾಂಜಲಿ ತಿಳಿಸಿದ ಶ್ರೀಗಳು ಜ್ಞಾನದ ಖಣಿ. 

ಜೆ.ಎಸ್.ಎಸ್ ವತಿಯಿಂದ ಸುತ್ತೂರಿನಲ್ಲಿ ಏರ್ಪಡಿಸಿದ್ದ ಅನೇಕ ಶಿಬಿರಗಳಲ್ಲಿ ಸಂಚಾಲಕನಾಗಿದ್ದ ನಾನು ಅವರನ್ನು ಹತ್ತಿರದಿಂದ ಕಂಡು ಅವರ ನುಡಿಗಳಿಂದ ಪುನೀತನಾಗಿ ನನ್ನಲ್ಲೂ ಆಧ್ಯಾತ್ಮದ ಕುಸುಮ ಅರಳಲು ಕಾರಣಕರ್ತರು.

ಗಂಗಾಜಲ, ಕೃಷ್ಣಾಜಲ, ಕಾವೇರಿ ಜಲ, ವಿದೇಶಿ ಜಲ, ಸ್ವದೇಶಿ ಜಲ ಎಲ್ಲವೂ ಬೇರೆ ಬೇರೆ ಎಂದು ನಾವು ವಾದಿಸುತ್ತೇವೆ. ಈ ನಮ್ಮ ವಾದ ಕೇಳಿದ ಜಗಭರಿತ 'ಜಲ' ನಗದೇ ಇರದು! ದೇಶಕಾಲದತ್ತ ನೋಡದೆ ಜಲದತ್ತ ನೋಡಿದರೆ ಜಗದ ಜಲವೆಲ್ಲಾ ಒಂದೇ! ಜಗತ್ತಿನ ಸಮಸ್ತ ವಸ್ತುಗಳ ಹೊರಗೆ ತೋರಿದ ನಾಮ, ರೂಪಗಳ ಬಿಟ್ಟು ಒಳಗೆ ನೋಡಿದರೆ, ಇರುವ ಸತ್ಯವೂ ಒಂದೇ! ಈ ಪರಮ ಸತ್ಯದ ಪ್ರೇಮವೇ ಸ್ವರೂಪಭಕ್ತಿ! ಆದುದರಿಂದಲೇ ಜೀವನ್ಮುಕ್ತಿ!!

ಎಂದು ಹೇಳುತ್ತಿದ್ದ ಶ್ರೀಗಳು ಅವರು ಇಂದು ಜೀವನ್ಮುಕ್ತಿಯನ್ನು ಹೊಂದಿ ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಅವರು ನಡೆ, ನುಡಿ ಒಂದಾಗಿ ನೀಡಿದ ಪ್ರವಚನಗಳ ಕೀರ್ತಿಗಳನ್ನು ಶೇಷರೂಪದಲ್ಲಿ ಬಿಟ್ಟು ಹೋಗಿದ್ದು ಸಂದರ್ಭಾನುಸಾರ ಅವುಗಳನ್ನು ಆಲಿಸುತ್ತ ಹೃದಯ ಶ್ರೀಮಂತಿಕೆಯನ್ನು ಸಂಪಾದಿಸಿಕೊಳ್ಳೋಣ.


ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - 570026

ಮೊ. 9901137948

vachanakumaraswamy@gmail.com


No comments:

Post a Comment