Friday, December 23, 2022

ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ - 2022

                                     

 ಮೈಸೂರು : ವಿದ್ಯಾರ್ಥಿಗಳ ಚಿತ್ತವನ್ನು ದೇಶದತ್ತ ಹೊರಳಿಸಿ ಅವರಲ್ಲಿ ರಾಷ್ಟ್ರೀಯತೆಯ ಮೌಲ್ಯಗಳ ಬೀಜಗಳನ್ನು ಬಿತ್ತುವ ಜವಬ್ದಾರಿ ಶಿಕ್ಷಕರದು ಎಂದು ವಿಶ್ರಾಂತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ಹೊಸಮಠದ ನಟರಾಜ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು  ರಾಷ್ಟçದ ನಿರ್ಮಾಪಕರಾಗಲಿರುವ ಇಂದಿನ ವಿದ್ಯಾರ್ಥಿಗಳನ್ನು ಸತ್ಪçಜೆಗಳಾಗಿ ರೂಪಿಸುವ ಕಾಯಕದಲ್ಲಿ ಶಿಕ್ಷಕರು ನಿರತರಾಗಬೇಕು. ಭ್ರಷ್ಟಾಚಾರ, ಜಾತೀಯತೆ, ಅಪರಾಧಿಕತನ, ಅನೈತಿಕತೆ, ಅರಾಜಕತೆ ಮುಂತಾದ ಅಪಮೌಲ್ಯಗಳೇ ಮೌಲ್ಯಗಳಾಗಿ ದೇಶಾದ್ಯಂತ ವಿಜೃಂಬಿಸುತ್ತಿವೆ. ಇವುಗಳಿಂದ ಮುಕ್ತವಾಗದೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ. ನಮ್ಮ ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡುವುದು ಇಂದಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯವಾಗಲಿದ್ದು, ಪ್ರತಿಯೊಬ್ಬರೂ “ದೇಶಕ್ಕಾಗಿ ನಾನೇನು ಮಾಡಬಲ್ಲೆ” ಎಂದು ಯೋಚಿಸುವಂತೆ ಮಾಡುವ ಹೊಣೆಗಾರಿಕೆಯನ್ನು ಪೂರ್ಣಗೊಳಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು. ಮೈಸೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಸಿ.ಆರ್. ನಾಗರಾಜಯ್ಯ ಮಾತನಾಡಿ ಹನ್ನೆರಡನೆಯ ಶತಮಾನದಲ್ಲಿ ಜ್ಞಾನಕ್ಕೆ ಹೆಸರಾದ ಚನ್ನಬಸವಣ್ಣನವರ ಹೆಸರಿನಲ್ಲಿ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ. ಶಿಕ್ಷಕರು ಕೂಡಾ ಚಿನ್ಮಯಜ್ಞಾನಿಗಳಾಗಿ ಹೊರಹೊಮ್ಮಿ ಭವ್ಯ ಭಾರತದ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂದು ದಾರಿತಪ್ಪಲು ಅನೇಕ ಮಾರ್ಗಗಳಿದ್ದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ರೂಪಿಸಿ ಅವರು ಸರಿ ದಾರಿಯಲ್ಲಿ ಸಾಗಲು ಪ್ರೇರೇಪಿಸಬೇಕು ಎಂದರು. ನಂತರ ವಿವಿಧ ಜಿಲ್ಲೆಗಳ ೨೧ ಶಿಕ್ಷಕರಿಗೆ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಎನ್.ಜಿ.ಎಫ್ ನಿವೃತ್ತ ಮ್ಯಾನೇಜರ್ ಸಿದ್ಧರಾಮಣ್ಣನವರ್, ಎಸ್.ಎನ್.ಶಾರದಾ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಅಂತರ್ಜಾಲ ಸಂಚಾಲಕ ಪಿ.ವಿ.ರುದ್ರೇಶ್, ಸುಧಾ ಮೃತ್ಯುಂಜಯಪ್ಪ, ಮಂಗಳ ಮುದ್ದುಮಾದಪ್ಪ, ಮಂಜುಳ ಶಿವಪ್ರಸಾದ್, ಅನಿತಾ ನಾಗರಾಜ್, ಶಿವಪುರ ಉಮಾಪತಿ, ಮಮತ, ವಿ. ಲಿಂಗಣ್ಣ, ಕಣೇನೂರು ನಾಗೇಶಮೂರ್ತಿ, ಕಾವೇರಿ ವಾಜಂತ್ರಿ, ಜಗದೀಶ್, ನೀಲಾಂಬಿಕ, ಆನಗಟ್ಟಿ ಶಿವರುದ್ರಪ್ಪ, ಮಲ್ಲಿಕಾರ್ಜುನ, ಜಡೆ ಮಾದಪ್ಪ, ಓಂಕಾರಯ್ಯ ಉಪಸ್ಥಿತರಿದ್ದರು.

No comments:

Post a Comment