ರೂಪ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್
ಶ್ರೀಮತಿ ರೂಪಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಶ್ರೀಮತಿ ನಾಗರತ್ನ ಮತ್ತು ಶ್ರೀ ಬಸವರಾಜುರವರ ಸುಪುತ್ರಿಯಾಗಿ 8.1.1985ರಲ್ಲಿ ಬೆಂಗಳೂರಿನ ಉದಯನಗರದಲ್ಲಿ ಜನಿಸಿದರು. ಬೆಂಗಳೂರಿನ ಇಂದಿರಾನಗರದ ಐ.ಎನ್.ಪಿ.ಎಸ್ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರಾಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಮುಗಿಸಿ, ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಚಾಮನಹಳ್ಳಿ ಹುಂಡಿ ಗ್ರಾಮದ ಡಾ. ವಚನಕುಮಾರಸ್ವಾಮಿಯವರನ್ನು ವಿವಾಹವಾಗುತ್ತಾರೆ. ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಆಂಗ್ಲ ವಿಷಯದಲ್ಲಿ ಎಂ.ಎ., ಸ್ನಾತಕೋತ್ತರ ಪದವಿ ಪಡೆದು ಮೈಸೂರು ಮತ್ತು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ, ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪತಿಯವರೊಡಗೂಡಿ ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ಸ್ಥಾಪಿಸಿ, ಅದರ ಮುಖಾಂತರ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಲು ಶಾಲೆಗಳೆಡೆಗೆ ವಚನಗಳ ನಡಿಗೆ, ವಚನಗ್ರಾಮ, ಸಸ್ಯೋತ್ಸವ,ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ, ಅನಾಥಾಶ್ರಮಗಳೆಡೆಗೆ ವಚನಗಳ ನಡಿಗೆ, ಕಾಲೇಜಿನೆಡೆಗೆ ವಚನಗಳ ನಡಿಗೆ ಮುಂತಾದ ಹತ್ತು ಹಲವು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಹದಿನೈದು ದೇಶ ಹಾಗೂ ಹತ್ತು ರಾಜ್ಯಗಳಿಗೆ ಶರಣ ಸಾಹಿತ್ಯವನ್ನು ಅಂತರ್ಜಾಲದ ಮೂಲಕ ತಲುಪಿಸುತ್ತಿದ್ದಾರೆ. ಇದುವರೆಗೆ ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿರುತ್ತಾರೆ. ಇದುವರೆಗೆ ದೇವನೂರು ಶ್ರೀ ಗುರುಮಲ್ಲೇಶ್ವರರು, ಗದ್ಧಿಗೆ ಶ್ರೀ ಕೆಂಡಗಣ್ಣಸ್ವಾಮಿಗಳು ಮತ್ತು ಶ್ರೀ ಮಲೆ ಮಹದೇಶ್ವರರ ಸಾಕ್ಷ್ಯಚಿತ್ರ ಹೊರತಂದಿದ್ದು ಲಕ್ಷಾಂತರ ಜನರಿಗೆ ಶರಣರ ಜೀವನ ಚರಿತ್ರೆ ತರಲು ಕಾರಣರಾಗಿರುತ್ತಾರೆ. ಅಮೇರಿಕಾದ ವಿ.ಎಸ್.ಎನ್.ಎ ನಡೆಸಿದ ವಿಶ್ವ ಬಸವಜಯಂತಿ ಕಾಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ THE PIONEER OF THE ERA BASAVANNA ಎಂಬ ಸಾಕ್ಷ್ಯಚಿತ್ರವನ್ನು ಆಂಗ್ಲಭಾಷೆಯಲ್ಲಿ ನೀಡಿರುತ್ತಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು
ವಚನ ಜ್ಞಾನೋದಯ
ಕರುನಾಡಿನ ಪುಣ್ಯಸ್ತ್ರೀಯರು
ಬಸವಭಾನು
ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಕೂಡಲ ಸಂಗಮ ಕ್ಷೇತ್ರದ ಜಗದ್ಗುರು ಲಿಂಗೈಕ್ಯ ಪೂಜ್ಯ ಮಾತೆ ಮಹಾದೇವಿಯವರು ‘ಶರಣ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿರುತ್ತಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಸರಗೂರಿನ ಹೊಸಮಠದಿಂದ ಕಾಯಕರತ್ನ ಎಂಬ ಪ್ರಶಸ್ತಿ ನೀಡಿರುತ್ತಾರೆ.
ಅಲ್ಲದೆ ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿರುತ್ತವೆ.
ರೂಪ ಕುಮಾರಸ್ವಾಮಿಯವರ ವಚನ ಜ್ಞಾನೋದಯ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರಿನ ಹಿರಿಯ ಸಾಹಿತಿಗಳಾದ ಸಿ.ಪಿ.ಕೆ ರವರು ವಚನ ರೂಪಾ ಎಂದೇ ತಮ್ಮ ಹೆಸರು ಪ್ರಚಲಿತವಾಗಲಿ ಎಂದು ಹರಸಿರುತ್ತಾರೆ.
ಪ್ರಸ್ತುತ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾಗಿರುವ ಇವರಿಗೆ ಸಿ.ಕೆ ಗಿರಿಜೇಶ್ ಮತ್ತು ಸಿ.ಕೆ.ವಚನ ಎಂಬ ಮಕ್ಕಳಿದ್ದಾರೆ. ವಚನ ಸಾಹಿತ್ಯ ಪ್ರಸಾರಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿರುವ ಇವರು ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮೂಲಕ 49 ಅಂತರರಾಷ್ಷ್ರೀಯ ಅಂತರ್ಜಾಲ ಪ್ರವಚನ, 45 ಅಂತರ್ಜಾಲ ವಚನ ಮಾಧುರ್ಯ, 4 ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಜನಮಾನಸಕ್ಕೆ ಪ್ರವಚನದ ಸವಿಯನ್ನು ಉಣಬಡಿಸಿರುತ್ತಾರೆ.
ವಿಶ್ವಮಟ್ಟದಲ್ಲಿ ವಚನ ಸಾಹಿತ್ಯವನ್ನು ಪಸರಿಸುತ್ತಿರುವ ಇವರ ಸೇವಾ ಕೈಂಕರ್ಯ ಹೀಗೆ ಸಾಗಲಿ ಎಂದು ಮನತುಂಬಿ ಹಾರೈಸುತ್ತೇವೆ.

No comments:
Post a Comment