Wednesday, September 30, 2020

ಶ.ವಿ.ವ.ಫೌಂಡೇಷನ್ ಇತರೆ ಕಾರ್ಯಕ್ರಮಗಳು

                          ಶಿಕ್ಷಕರ ದಿನಾಚರಣೆ 5.9.2020

                          ಕನ್ನಡಪ್ರಭ ಪತ್ರಿಕೆ - 8.9.2020


                  




Tuesday, September 29, 2020

ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ - 18

 


ಮಾನವನಲ್ಲಿರುವ ಚೈತನ್ಯವೇ ದೇವರು ಎಂದು ಬೆಂಗಳೂರಿನ ಹಾಸ್ಯ ಸಾಹಿತಿ ಇಂದುಮತಿ ಸಾಲಿಮಠ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿನೆಂಟನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ದೇವರೆಲ್ಲಿದ್ದಾನೆ ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು ಶರಣರ ವಚನದಲ್ಲಿ ಬರುವ ತನ್ನ ತಾನರಿತು ತಾನಾರೆಂದು ತಿಳಿದರೆ ತಾನೇ ದೇವರು ಎಂಬ ಸಾಲು ಅಕ್ಷರಶಃ ಸತ್ಯ. ಹಾಲಿನಲ್ಲಿ ತುಪ್ಪ ಇರುವಂತೆ, ಗಾಳಿಯಲ್ಲಿ ಗಂಧ ಇರುವಂತೆ, ಹೂವಿನಲ್ಲಿ ಮಕರಂಧ ಇರುವಂತೆ ಪ್ರತಿಯೊಬ್ಬರ ಆತ್ಮದಲ್ಲಿಯೂ ದೇವನು ಇರುವನು. ಅಳುವ ಮಗುವಿನ ಕೆಂದುಟಿಯಲ್ಲಿ, ಅರಳಿದ ಹೂಗಳ ಸೌಗಂಧದಲ್ಲಿ, ಹರಿವ ನದಿಯಲಿ, ಸುರಿವ ಮಳೆಯಲಿ, ವಿವಿಧ ಬಗೆಯ ಮರ ಮತ್ತು ಪಕ್ಷಿಗಳಲ್ಲಿ ದೇವರ ಇರುವಿಕೆ ಕಂಡುಬರುತ್ತದೆ. ಅರಿತು ಹುಡುಕಿದರೆ ಪ್ರಕೃತಿಯ ಪ್ರತೀ ಅಂಶಗಳಲ್ಲಿಯೂ ದೇವಸ್ವರೂಪ ಗೋಚರವಾಗುತ್ತದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಮಾತನಾಡಿ ವಚನಗಳು ಮಹಾಲಿಂಗದ ಬೆಳಕು, ಶಿವಯೋಗಕ್ಕೆ ಸಾಧನ, ಪರಮಶಾಂತಿಯ ಪ್ರಕಾಶವಾಗಿವೆ. ವಚನಪ್ರಭೆಯನ್ನು ತಲುಪಿಸಲು ಕೋವಿಡ್‍ನ ಸಂದಿಗ್ಧ ಪರಿಸ್ಥಿಯಲ್ಲೂ ಅಂತರ್ಜಾಲದ ಮುಖಾಂತರ ಪ್ರತಿಯೊಬ್ಬರನ್ನೂ ಒಂದೆಡೆ ಸೇರಿಸಿ ಸತ್ಸಂಗ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂದರು.  ಕಾರ್ಯಕ್ರಮದಲ್ಲಿ ಮಾತೆ ಜಯದೇವಿತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯದರ್ಶಿ ಅನಿತಾ ನಾಗರಾಜ್, ಕೊಪ್ಪಳ ಜಿಲ್ಲಾಧ್ಯಕ್ಷೆ ಅರುಣ ನರೇಂದ್ರ, ಮಂಡ್ಯ ಅಧ್ಯಕ್ಷ ಮಹದೇವಪ್ಪ, ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ,  ವಿ. ಲಿಂಗಣ್ಣ, ಹವ್ಯಾಸಿ ಗಾಯಕ ಬಸವರಾಜು, ಬಹ್ರೈನ್ ಶಿವಾನಂದ ಪಾಟೀಲ್, ಮಸ್ಕತ್ ಭೀಮ್ ನೀಲಕಂಠರಾವ್ ಹಂಗರ್ಗೆ, ನಂದೀಶ್ವರ್ ನಂದು, ಇಟಲಿಯ ಜಯಮೂರ್ತಿ, ಎಚ್. ಕೆ. ಚನ್ನಪ್ಪ, ಡಾ. ಸುಮಂಗಳ ಆರ್, ವೀರೇಶಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಮಹಂತೇಶ್, ಸರಸ್ವತಿ ರಾಮಣ್ಣ, ನೀಲಾಂಬಿಕಾ ದೇವಿ ನಾಗರಾಜು, ಸುನಿತಾ ಅಂಗಡಿ ಕೊಡೇಕಲ್, ಪೂರ್ಣಿಮಾ, ಶ್ವೇತ ಅನುರಾಗ್, ಮಾರುತೇಶ್, ಜೆ. ಕವಿತ, ಅಶ್ವಿನಿ ಉಮೇಶ್, ದೀಪ ತೊಲಗಿ, ಭಾಗ್ಯ ತೆಗ್ಗಳ್ಳಿ, ಸಿದ್ಧಪ್ಪ ಬೋರಗಿ,  ಶಿವಪುತ್ರಪ್ಪ, ನಾಗನಗೌಡಪಾಟೀಲ್, ವೀರೇಶಮೂರ್ತಿ,  ಉಪಸ್ಥಿತರಿದ್ದರು.


Sunday, September 27, 2020

ಬಸವೇಶ್ವರ ವಚನ ದೀಪಿಕೆ

 ಬಸವೇಶ್ವರ ವಚನ ದೀಪಿಕೆ




ವಚನಗಳು ಮಹಾಲಿಂಗದ ಬೆಳಕು

ಶಿವಯೋಗದ ಸಾಧನ

ಪರಮಶಾಂತಿಯ ಪ್ರಕಾಶ

ಅನುಭಾವದ ನೆಲೆಯಲ್ಲಿ ಬರೆದಿರುವ ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿದಷ್ಟೂ ನಮ್ಮ ಸಂಸ್ಕಾರ ಪ್ರಕಾಶಮಾನವಾಗುವುದರ ಜೊತೆಗೆ  ಜ್ಞಾನ ದಾಹವನ್ನು ಹೋಗಲಾಡಿಸುತ್ತವೆ.


ಡಾ.ಎಚ್. ತಿಪ್ಪೇರುದ್ರಸ್ವಾಮಿರವರು ಬಸವಣ್ಣನವರ 959 ವಚನಗಳಿಗೆ ನಿರ್ವಚನ ಮಾಡಿದ್ದಾರೆ ಅಲ್ಲದೇ ವಚನಗಳಲ್ಲಿ ಬರುವ 71 ಸಾಂದರ್ಭಿಕ ಕಥೆಗಳ ವಿವರವನ್ನು ಕೊಡುವುದರ ಜೊತೆಗೆ, ವಿಶೇಷ ಪದಕೋಶ, ಕಠಿಣ ಶಬ್ದಕೋಶ,ವಿಶಿಷ್ಟ ಪದಸೂಚಿ, ವಚನಗಳ ಆಕಾರಾದಿಸೂಚಿ ಒಳಗೊಂಡಿದ್ದು  ಸಾಹಿತ್ಯಪ್ರಿಯರಿಗೆ ವಚನಾಸ್ವಾಧನೆಯನ್ನು ಉಂಟುಮಾಡುವ ಅತ್ಯುತ್ತಮ ಪುಸ್ತಕವಾಗಿದೆ.


 ಒಟ್ಟು 622 ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಮೈಸೂರಿನ ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿದ್ದು ಇದರ ಮುಖಬೆಲೆ ರೂ 300. ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.

 9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



Saturday, September 26, 2020

ಶಿವಶರಣೆಯರು



 ಶಿವಶರಣೆಯರು

೧೨ ನೇ ಶತಮಾನ ಹೆಣ್ಣಿನ ಬಾಳಿನಲ್ಲಿ ಪುಣ್ಯೋದಯವಾದ ಕಾಲ, ಅಳುವ ಕಂಗಳಲ್ಲಿ ನಗೆಯ  ಹೂ ಅರಳಿಸಿದ ಕಾಲ, ಹೆಣ್ಣ ಬಾಳ ಹೊನ್ನ ಬಾಳಾಗಿಸಿದ ಕಾಲ.  ಇದಕ್ಕೆಲ್ಲ ಕಾರಣ ಅಣ್ಣ ಬಸವಣ್ಣ ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರು ಕೂಡ ವಿಚಾರ ವಿನಿಮಯ ಮಾಡಲು ಅವಕಾಶ ಕಲ್ಪಿಸಿದ್ದರಿಂದಾಗಿ   ಪುರುಷರಿಗೆ ಸರಿಸಮಾನರಾಗಿ ಬದುಕು ಹಾಗೂ ಜ್ಞಾನ ಕಟ್ಟಿಕೊಳ್ಳಲು ಸಹಾಯಕವಾಯಿತು.


ರಾಜೇಂದ್ರ ಶಿಶು ಎಂಬ ಕಾವ್ಯನಾಮ ಹೊಂದಿರುವ ನಿವೃತ್ತ ಉಪನ್ಯಾಸಕರಾದ ಅಕ್ಕ ಎಂ. ಎ ನೀಲಾಂಬಿಕರವರು 38 ವಚನಕಾರ್ತಿಯರ ಪರಿಚಯ ಅವರು ರಚಿಸಿರುವ ವಚನಗಳು ಅವುಗಳ ಭಾವರ್ಥ ನೀಡುವುದರ ಜೊತೆಗೆ ಪ್ರತಿಯೊಬ್ಬ ವಚನಕಾರ್ತಿಯ ಜೀವನ ಚರಿತ್ರೆ ಯನ್ನು ಚಿತ್ರಿಸಿದ್ದಾರೆ ಜೊತೆಗೆ   ವಚನಗಳನ್ನು ಬರೆಯದ ಒಂಭತ್ತು ಕಾಯಕ ನಿರತ ಶರಣೆಯರನ್ನು ಪರಿಚಯಿಸಿದ್ದಾರೆ. 


228 ಪುಟಗಳನ್ನು ಹೊಂದಿರುವ ಈ ಕೃತಿಗೆ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾ ಸ್ವಾಮಿಗಳು ಶುಭ ಹಾರೈಕೆ ಮಾಡಿದ್ದು ದಾವಣಗೆರೆ ವಿಶ್ವವಿದ್ಯಾನಿಲಯದ  ವಿಶ್ರಾಂತ ಕುಲಪತಿಗಳಾದ ಎಸ್ ಇಂದುಮತಿರವರು ಮುನ್ನುಡಿ ಹಾಗೂ  ಲೇಖಕ ನಗರ್ಲೆ ಶಿವಕುಮಾರ ಬೆನ್ನುಡಿ ಬರೆದಿರುತ್ತಾರೆ.


ಮೈಸೂರಿನ ಕದಳಿ ಮಹಿಳಾ ವೇದಿಕೆ ಹೊರತಂದಿರುವ ಈ ಪುಸ್ತಕದ ಮುಖಬೆಲೆ  ರೂ 250.


ಪುಸ್ತಕ ಬೇಕಾದರೆ ಕೆಳಗಿನ  ಮೊಬೈಲ್ ನಂಬರ್ ಗೆ ವಾಟ್ಸ್ ಆಪ್ ಮಾಡಿ


8217081644


ಪುಸ್ತಕ ಪರಿಚಯಿಸಿದವರು

ರೂಪಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



Friday, September 25, 2020

ಎಸ್.ಪಿ.ಬಿ ನಿಧನಕ್ಕೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು‌ ರೂಪ ಕುಮಾರಸ್ವಾಮಿ ಸಂತಾಪ



 ಎಸ್.ಪಿ.ಬಿ ನಿಧನಕ್ಕೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಸಂತಾಪ

ನಕ್ಕರೇ ಅದೇ ಸ್ವರ್ಗ ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ಗೀತೆಯನ್ನು ಹಾಡಲು ಪ್ರಾರಂಭಿಸಿದ ಎಸ್.ಪಿ. ಬಾಲಸುಬ್ರಹ್ಮಣ್ಯಂರವರು ದೂರದರ್ಶನದಲ್ಲಿ ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದ ಪ್ರಾರಂಭದಲ್ಲಿ ಒಂದು ವಚನವನ್ನು ಗಾಯನ ಮಾಡುವುದರ ಮೂಲಕ ಕೋಟ್ಯಾಂತರ ಕನ್ನಡಾಭಿಮಾನಿಗಳ ಮನಸ್ಸನ್ನು ಗೆದ್ದವರು. ಪುಟ್ಟ ಮಕ್ಕಳಿಂದ ಹಿಡಿದು ಸಂಗೀತ ದಿಗ್ಗಜರವರೆಗೆ ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಗೌರವಯುತವಾಗಿ ಕಾಣುತ್ತಿದ್ದ ಇವರು ಸಂಗೀತ ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ, ಕಂಠದಾನ ಕಲಾವಿದರಾಗಿ ಅಪಾರ ಸಾಧನೆ ಮಾಡಿದ ಇವರ ಅಗಲಿಕೆ ಸಂಗೀತ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಇವರ ಗಾಯನದ ಕನ್ನಡ ಚಲನಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ ಹಾಗೂ ವಚನಗಳು ಸಂಗೀತಪ್ರಿಯರ ಮನದಂಗಳದಲ್ಲಿ ಶಾಶ್ವತವಾಗಿ ಉಳಿಯುವುದರ ಮೂಲಕ  ಕೀರ್ತಿಶೇಷರಾಗಿದ್ದಾರೆ. ಇವರಿಗೆ ಸದ್ಗತಿ ದೊರೆಯಲಿ ಇವರ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿಯನ್ನು ಪರಶಿವ ಕರುಣಿಸಲಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.



Tuesday, September 22, 2020

ತೋಂಟದ ಸಿದ್ಧಲಿಂಗಯತಿಗಳ ಷಟ್ಸ್ಥಲ ಜ್ಞಾನಸಾರಾಮೃತ ವ್ಯಾಖ್ಯಾನ

 


ತೋಂಟದ ಸಿದ್ಧಲಿಂಗಯತಿಗಳ ಷಟ್ಸ್ಥಲ ಜ್ಞಾನಸಾರಾಮೃತ ವ್ಯಾಖ್ಯಾನ

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಕ್ರಾಂತಿಯ ನಂತರ ವಚನ ರಚನೆ ನಿಂತು ಹೋಯಿತು. ಆ ನಂತರ ಸುಮಾರು ಮೂರು ಶತಮಾನಗಳ ನಂತರ ವಚನಗಳ ರಚನೆ ಪ್ರಾರಂಭವಾದುದು ಶ್ರೀ ಸಿದ್ಧಲಿಂಗ ಶಿವಯೋಗಿಗಳು ಮತ್ತು ಅವರ ಶಿಷ್ಯ ಪರಂಪರೆಯಿಂದ

ಡಾ. ಎನ್.ಜಿ.ಮಹಾದೇವಪ್ಪರವರು ಸಿದ್ಧಲಿಂಗೇಶ್ವರರ 701 ವಚನಗಳಿಗೆ ವ್ಯಾಖ್ಯಾನ  ಮಾಡಿರುವುದರ ಜೊತೆಗೆ ಅವರ ಸಂಕ್ಷಿಪ್ತ ಪರಿಚಯ ಮಾಡಿದ್ದಾರೆ.

ಒಂದು ವಚನದ ತಾತ್ಪರ್ಯ ಇಂತಿದೆ.

ನಿರವಯಂ ನಿರಾಮಯಂ ನಿರಾಕುಳಂ

ನಿರ್ದ್ವಂದ್ವಂ ನಿರ್ಮಳ ನಿಜಸ್ವರೂಪಂ

ನಿರ್ಭಾವ ನಿಃಪುರುಷ ನಿರಂಜನ ನಿಕಾರಂ

ನಿರಾವರಣ ನಿರುಪಮ ನಿರ್ಗುಣ ನಿರಾಧಾರ ನಿರಾಲಂಬಂ

ಸರ್ವಾಧಾರ ಸದಾಶಿವಂ ಅತ್ಯತಿಷ್ಠದ್ದಶಾಂಗುಲಂ ನಿತ್ಯನಿಶ್ಚಿತಂ

ನಿರ್ಮಲ ನಿರ್ಮಾಯ ನಿರಾಳಕಂ

ಹರ ಹರಾ ಶಿವಶಿವಾ ಜಯ ಜಯಾ ಜಯತು

ಶರಣ ಕರುಣಾಕರ ತ್ರಾಹಿಮಾಂ ಭಕ್ತವತ್ಸಲ ಮತ್ಪ್ರಾಣನಾಥ

ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ

 

ಭಾವ : ಸಿದ್ಧಲಿಂಗಯತಿಗಳು ಪರಶಿವನ ಸ್ವಭಾವವನ್ನು ಸ್ತುತಿಸುತ್ತಿದ್ದಾರೆ. ಪರಶಿವನು ನಿರವಯ ಅಂದರೆ ಅವನಿಗೆ ಯಾವ ಅಂಗಗಳೂ ಇಲ್ಲ. ನಿರಾಮಯ ಅಂದರೆ ಯಾವ ವ್ಯಾಧಿಯೂ ಇಲ್ಲದವನು. ನಿರಾಕುಳ ಅಂದರೆ ವ್ಯಾಕುಲವೂ ಇಲ್ಲದವನು. ಇರುವವನು ಅವನೊಬ್ಬನೇ ಆದುದರಿಂದ ಅವನು ನಿರ್ದ್ವಂದ್ವ: ನಿರ್ಮಲ ಅಂದರೆ ಪವಿತ್ರನಾದವನು. ನಿಜಸ್ವರೂಪ ಅಂದರೆ ಮೂಲದಲ್ಲಿ ಪ್ರಣವ ಸ್ವರೂಪಿಯಾದವನು. ನಿರ್ಭಾವ ಅವನು ಪುರುಷನಲ್ಲ. ಏಕೆಂದರೆ ಸಾಂಖ್ಯ ಮತ್ತು ಯೋಗದರ್ಶನಗಳ ಪ್ರಕಾರ ಪುರುಷ ಅಂದರೆ ಪ್ರತ್ಯೇಕ ಆತ್ಮ. ಜೀವಭಾವ ಉಳ್ಳ ಆತ್ಮ. ಪರಶಿವ ಜೀವಾತ್ಮನಲ್ಲ. ನಿರಂಜನ ಅವನಿಗೆ ಯಾವುದೇ ಸ್ಪಷ್ಟ ಆಕಾರವಿಲ್ಲದುದರಿಂದ ಅವನು ನಿರಾಕಾರ. ಅವನನ್ನು ಆವರಿಸಿಕೊಳ್ಳುವಷ್ಟು ವಿಶಾಲವಾದುದು ಯಾವುದೂ ಇಲ್ಲವಾದುದರಿಂದ ಅವನು ನಿರಾವರಣ. ಅವನನ್ನು ಹೋಲುವ ವ್ಯಕ್ತಿ ಮತ್ತೊಬ್ಬ ಇಲ್ಲವಾದುದರಿಂದ ನಿರುಪಮ. ಅವನು ನಿರ್ಗುಣ ಅಂದರೆ ಸತ್ವ. ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳಿಲ್ಲದವನು. ಅವನಿಗೆ ಯಾವ ಆಧಾರವೂ ಇಲ್ಲ. ಅವನು ಏನನ್ನೂ ಅವಲಂಬಿಸಿಲ್ಲವಾದುದರಿಂದ ಅವನು ನಿರಾಧಾರ, ನಿರಾಲಂಭ; ಅವನೇ ಎಲ್ಲಕ್ಕೂ ಆಧಾರ. ಒಳಿತಿನ ಮೂರ್ತಿ, ಎಲ್ಲವನ್ನೂ ಮೀರಿದವನು. ಅವನಿಗೆ ಯಾವ ಚಿಂತೆಯೂ ಇಲ್ಲ. ಮಾಯೆಗೆ ಒಳಗಾಗದವನು. ಪ್ರಾಕೃತಿಕ ಗುಣಗಳಿಲ್ಲದವನು.

 

ಈ ಕೃತಿಯು ವಚನಗಳ ಆಕಾರಾದಿಯನ್ನು ಹೊಂದಿದ್ದು ಕಠಿಣ ಪದಕೋಶ ಹಾಗೂ ಪಾರಿಭಾಷಿಕ ಪದಕೋಶಗಳನ್ನು ಹೊಂದಿರುತ್ತದೆ.666 ಪುಟಗಳನ್ನು ಹೊಂದಿರುವ ಈ ಹೊತ್ತಿಗೆಯನ್ನು ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿದ್ದು ಇದರ ಮುಖಬೆಲೆ ರೂ 300. ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ

 

9980393469

 

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

 

ಚನ್ನಬಸವಣ್ಣನವರ ವಚನ ವ್ಯಾಖ್ಯಾನ

 


ಚನ್ನಬಸವಣ್ಣನವರ ವಚನ ವ್ಯಾಖ್ಯಾನ

ಚನಗಳು ಮಹಾಲಿಂಗದ ಬೆಳಕಾಗಿವೆ. ಮಾನವನನ್ನು ಮಹಾದೇವನಲ್ಲಿ ಬೆರೆಸುವ ಮಾರ್ಗದರ್ಶಕವಾಗಿವೆ. ಶಿವಯೋಗಕ್ಕೆ ಸಾಧನಾವಾಗಿವೆ.

ವಿಶ್ವಗುರು ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರ 320 ವಚನಗಳನ್ನು ಡಾ.ಜಿ.ಎಸ್. ಕಾಪಸೆ ಸಂಪಾದಿಸಿದ್ದಾರೆ. ಶ್ರೀ ಸಿದ್ಧರಾಮೇಶ್ವರ ಶರಣರು ಬೆಲ್ದಾಳ ವ್ಯಾಖ್ಯಾನ ಮಾಡಿದ್ದಾರೆ.

 

ಒಂದು ವಚನದ ತಾತ್ಪರ್ಯ ಇಂತಿದೆ.

 

ಲಿಂಗಕ್ಕೆ ಕೊಟ್ಟುಕೊಂಡಡೆ ಪ್ರಸಾದಿ

ಜಂಗಮವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ

ಇದೇ ಪ್ರಸಾದದಾದಿ ಕಂಡಯ್ಯಾ.

ಆದಿಯ ಪ್ರಸಾದದಾದಿ ವೇದಿಸಬಲ್ಲಡೆ ಇದೆ ಕಂಡಯ್ಯಾ

ಜಂಗಮಕ್ಕೆ ನೀಡದೆ, ಲಿಂಗಕ್ಕೆ ಕೊಡದೆ ಕೊಂಡಡೆ

ಹುಳುಗೊಂಡದಲ್ಲಿಕ್ಕುವ ಕೂಡಲಚನ್ನಸಂಗಮದೇವ.

 

ಭಾವ : ಇಲ್ಲಿ ಭಕ್ತನು ಸಹಜವಾಗಿ ಪಡೆವ ಲಿಂಗ ಜಂಗಮ ಪ್ರಸಾದದ ವಿಧಾನವನರುಹಲಾಗಿದೆ. ಇಷ್ಟ ಪ್ರಾಣ ಭಾವಲಿಂಗಕ್ಕರ್ಪಿಸಿ ಸವಿದುದು ಲಿಂಗಪ್ರಸಾದ. ಚೇತನರೂಪಿ ಜಂಗಮಕ್ಕೆ ನೀಡಿ ತೃಪ್ತಿಗೊಳಿಸಿದ ಬಳಿಕ ುಳಿದುದು ಜಂಗಮಪ್ರಸಾದ. ಇದು ಪ್ರಸಾದದ ಮೂಲ. ಮೂಲಲಿಂಗದ ಮಹಾಪ್ರಸಾದದಲ್ಲಿ ಪ್ರವೇಶಿಸಬೇಕಾದರೆ ಇದು ಸುಲಭ ಸುಮಾರ್ಗ. ತಾನು ಸಂಪಾದಿಸಿದ್ದವರಲ್ಲಿ ಜಂಗಮ ಚೇತನಕ್ಕೆ ನೀಡದೆ ಲಿಂಗಾರ್ಪಿತ ಮಾಡದೆ ಅಶನ ವ್ಯಸನದಾಸೆಗೆ ಸವಿದರೆ ಅವಗುಣವೆಂಬ ಹುಳಗುಂಡದಲ್ಲಿ ದೇವನಿರಿಸುವನು.

 

ಈ ರೀತಿ ತಾತ್ಪರ್ಯ ಮಾಡಿದ್ದಾರೆ. ಮತ್ತೆ ಪ್ರತೀ ಸಾಲಿಗೂ ಭಾಷ್ಯ ಬರೆದಿದ್ದಾರೆ.

 

ಒಟ್ಟು 512 ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಮೈಸೂರಿನ ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿದ್ದು ಇದರ ಮುಖಬೆಲೆ ರೂ 300. ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.

 

9980393469

 

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

 

ಶ್ರೀ ಸಿದ್ಧಗಂಗಾ ಸಂಕ್ಷಿಪ್ತ ಪರಿಚಯ ಮತ್ತು ಶ್ರೀಗಳವರ ಸಾಧನೆಗಳು

 


ಶ್ರೀ ಸಿದ್ಧಗಂಗಾ ಸಂಕ್ಷಿಪ್ತ ಪರಿಚಯ ಮತ್ತು ಶ್ರೀಗಳವರ ಸಾಧನೆಗಳು

ವಚನಗಳ ಪಂಜುಗಳು ದಶದಿಕ್ಕು ಸಂಚರಿಸಿ

ಅಜ್ಞಾನ ಜನಮನಸ ಸುಜ್ಞಾನ ಮಾರ್ಪಡಿಸಿ

ದೇವಮಾನವನಾಗಿ ಸಂಗನಲಿ ಒಂದಾದೆ

ಮತ್ತೊಮ್ಮೆ ಹುಟ್ಟಿ ಬಾ ಶರಣು ಬಸವಣ್ಣ

ಎಂದು ಪ್ರಾರಂಭವಾಗುವ ಈ ಪುಸ್ತಕವು ಪೂಜ್ಯ ಡಾ. ಶ್ರೀ ಶಿವಕುಮಾರಮಹಾಸ್ವಾಮಿಗಳವರ ಸಂದೇಶ ಹೊಂದಿದ್ದು  ಶ್ರೀ ಸಿದ್ಧಗಂಗಾ ಕ್ಷೇತ್ರದ ಸಂಕ್ಷಿಪ್ತ ಪರಿಚಯ ಒಳಗೊಂಡಿದೆ. ಶ್ರೀ ಸಿದ್ಧಗಂಗಾ ಮಠದ ಗುರು ಪರಂಪರೆಯನ್ನು ಪರಿಚಯ ಮಾಡಿದ್ದು, ಶ್ರೀ ಶಿವಕುಮಾರಸ್ವಾಮಿಗಳವರ ದಿಟ್ಟ ಹೆಜ್ಜೆಯ ಗುರುತುಗಳನ್ನು ಹೊಂದಿದ್ದು, ಕ್ಷೇತ್ರದ ಬಗ್ಗೆ ಅನೇಕ ಗಣ್ಯರ ಅನಿಸಿಕೆಗಳು ಕೂಡಾ ಇವೆ.ಪುಷ್ಪಾಮಜಲಿ ಮತ್ತು ಜ್ಯೋತಿ ಬೆಳಗುತಿದೆ ಎಂಬ ಗೀತೆಯನ್ನು ಕೂಡಾ ಹೊಂದಿದೆ.

ರಾಜಶೇಖರಯ್ಯರವರು ಬರೆದಿರುವ ಈ ಕೃತಿಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ ಹೊರತಂದಿದ್ದು, 88 ಪುಟಗಳನ್ನು ಹೊಂದಿದೆ. ಇದರ ಮುಖ ಬೆಲೆ ರೂ 60.  ಪುಸ್ತಕ ಬೇಕಾದರೆ ಕೆಳಕಂಡ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.

9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

 

 

Monday, September 21, 2020

ಅಲ್ಲಮಪ್ರಭುದೇವರ ವಚನ ನಿರ್ವಚನ

 


ಅಲ್ಲಮಪ್ರಭುದೇವರ ವಚನ ನಿರ್ವಚನ

ಅಲ್ಲಮಪ್ರಭುಗಳ ವಚನಗಳು ಅನುಭಾವಿಕ ಪ್ರಪಂಚಕ್ಕೆ ದೊರೆತ ಅನರ್ಘ್ಯ ರತ್ನಗಳು. ಇವು ಮಾನವನ ಅಂತರ್ಯಾಮಿಯಾಗಿರುವ ಪರತತ್ವವನ್ನು ನಿರ್ದೇಶಿಸುತ್ತವೆ.

ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಬರೆದಿರುವ ಈ ಬೃಹತ್ ಕೃತಿ ಅಲ್ಲಮರ 694 ವಚನಗಳಿಗೆ ನಿರ್ವಚನ ಹೊಂದಿರುತ್ತದೆ. ವಿದ್ವಾಂಸರಿಗೂ ಸುಲಭಗ್ರಾಹ್ಯವಲ್ಲದ ಅಲ್ಲಮಪ್ರಭುಗಳ ಪರಮಾನುಭವದ ಪ್ರೋಜ್ವಲ ವಚನಗಳ ಅಧ್ಯಯನ ಚಿಂತನ ವ್ಯಾಖ್ಯಾನಗೋಷ್ಠಿಯ ಸೂತ್ರಧಾರರಾಗಿ ತಮ್ಮ ಅನುಭಾವಪೂರ್ಣವಾದ  ದಿವ್ಯದೀಪ್ತಿಯ ಭಾಷ್ಯವನ್ನು ಶ್ರೀಗಳು ನೀಡಿದ್ದಾರೆ.

ಒಂದು ವಚನದ ತಾತ್ಪರ್ಯ

ಅಲ್ಪಜ್ಞಾನಿ ಪ್ರಕೃತಿಸ್ವಭಾವಿ, ಮಧ್ಯಮಜ್ಞಾನಿ ವೇಷದಾರಿ,

ಅತೀತಜ್ಞಾನಿ ಆರೂಢ, ಆರೂಢನನಾರೂ ಅರಿಯಬಾರದಯ್ಯಾ

ಜ್ಞಾನವನರಿಯದಾತ ಅಜ್ಙಾನಿ, ನಾಮನಷ್ಟ

ಚತುರ್ವಿದದೊಳಗೆ ಆವಂಗವೂ ಅಲ್ಲ,

ಗುಹೇಶ್ವರಾ, ನಿಮ್ಮ ಶರಣ

ಭಾವ : ಜ್ಞಾನಿಗಳಲ್ಲಿ ನಾಲ್ಕು ವಿಧ. ಒಂದು ಅಲ್ಪಜ್ಞಾನಿ, ಲೌಕಿಕ ಜ್ಞಾನವುಳ್ಳವ. ಅವನದು ಪ್ರಾಕೃತಿಕ ಸ್ವಭಾವ. ದೇಹಾದಿಗಳಲ್ಲಿ ಅಭಿಮಾನ, ವಿಷಯಗಳಲ್ಲಿ ಆಸಕ್ತಿ, ಎರಡು-ಮಧ್ಯಮಜ್ಞಾನಿ: ಲೌಕಿಕ ಮತ್ತು ಅಲೌಕಿಕ ಎರಡನ್ನೂ ಅರಿತವ. ಅದೂ ಶಾಬ್ದಿಕವಾಗಿ ಅವನು ವೇಷದಾರಿ: ನೋಡಲು ಜ್ಞಾನಿ ಅನುಭಾವಿಯಲ್ಲ. ಮೂರು-ಅತೀತ ಜ್ಞಾನಿ ದೇಹ,ಮನ, ಬುದ್ಧಿಗಳ ಆಚೆಗೆ ಆತ್ಮತತ್ವವನ್ನು ಅರಿತವ. ಆತ್ಮಜ್ಞಾನಿ. ಅವನು ಜಾಗ್ರಾದಿ ಅವಸ್ಥೆಗಳನ್ನೆಲ್ಲ ಏರಿ ತುರೀಯ ಸ್ಥಿತಿಯಲ್ಲಿ ನಿಂತುದರಿಂದ ಆರೂಢ. ಅವನದು ಅವಸ್ಥಾತೀತ ನಿಲುವು. ಆದಯದರಿಂದ ಅವನನ್ನು ಅರಿಯುವುದು ಸುಲಭವಲ್ಲ. ನಾಲ್ಕು ಅಜ್ಞಾನಿ ತಾನು ಅನ್ಯ ಎಂಬ ಭೇದಜ್ಙಾನ ಇಲ್ಲದವ. ಆತ್ಮ ನಿಮಗ್ನ. ಅವನದು ನಾಮ ರೂಹುಗಳ ಭಾವವಿಲ್ಲದ ಒಂದು ಬಗೆಯ ಜ್ಞಾನೋನ್ಮತ್ತ  ಅವಸ್ಥೆ. ಈ ನಾಲ್ವರಲ್ಲಿ ಶರಣ ಯಾವನೂ ಅಲ್ಲ. ಶರಣ ಶರಣನೇ. ಅವನದು ಅರಿವು ಆನಂದದ ಸ್ಥಿತಿ.

 ಹೀಗೆ ತಾತ್ಪರ್ಯ ಮಾಡಿರುವುದರ ಜೊತೆಗೆ ಒಂದೊಂದು ಸಾಲಿಗೂ ಮತ್ತೆ ವಿವರವಾಗಿ ನಿರ್ವಚನ ಮಾಡಿದ್ದು ವಚನ ಸಾಹಿತ್ಯ ಅಭಿಮಾನಿಗಳಿಗೆ ವಚನಾನಂದವನ್ನು ಉಂಟುಮಾಡುತ್ತದೆ. ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿರುವ ಈ ಕೃತಿಯು 1116 ಪುಟಗಳನ್ನು ಹೊಂದಿರುತ್ತದೆ. ಮುಖ ಬೆಲೆ ರೂ. 750.  ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ

9980393469

 

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

ಶಿವಪದರತ್ನಕೋಶ

 


ಶಿವಪದರತ್ನಕೋಶ

ಶಿವಪದ ರತ್ನಕೋಶ ಶಿವ ಧರ್ಮ ಸಂಸ್ಕೃತಿಯನ್ನು ಪರಿಚಯಿಸುವ ಬೃಹತ್ ಪದ ಭಾಂಡಾರ. ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದ್ದು, ವೀರಶೈವ ಲಿಂಗಾಯತ ಪಾರಿಭಾಷಿಕ ಪದಗಳನ್ನು ಒಳಗೊಂಡಿದೆ. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶುಭ ಹಾರೈಕೆ ಮಾಡಿದ್ದು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳು ಬೆನ್ನುಡಿ ಬರೆದಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರು, ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳರವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿ.ಟಿ.ರವಿರವರು ಸಂದೇಶ ಬರೆದಿದ್ದಾರೆ. ಡಾ.ನಂದೀಶ್ ಹಂಚೆ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು, ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯ, ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿ, ಡಾ. ಎನ್.ಎಸ್.ತಾರಾನಾಥ್, ವಿದ್ವಾನ್ ಡಾ. ಎಚ್.ವಿ.ನಾಗರಾಜರಾವ್, ವಿದ್ವಾನ್ ಡಾ. ಸಿ. ಶಿವಕುಮಾರಸ್ವಾಮಿ, ಶ್ರೀ ಆರ್.ಎಸ್.ಪೂರ್ಣಾನಂದ ಸಂಪಾದಕ ಸಮಿತಿಯಲ್ಲಿದ್ದು ಕೃತಿ ರಚನೆಗೆ ಕಾರಣರಾಗಿದ್ದಾರೆ.

ಕೃತಿಯಲ್ಲಿ ಇರುವ ಕೆಲವು ಪದಗಳ ಅರ್ಥ ಇಂತಿರುತ್ತದೆ.

ಅಚೇತನಮೂರ್ತಿ : ಇಷ್ಟಲಿಂಗ, ಗುರುವು ಕೊಡುವ ಇಷ್ಟಲಿಂಗವು ಪರಶಿವನ ಕುರುಹು, ಅದು ಅಚೇತನ ಮೂರ್ತಿ, ಪರಶಿವನು ಚೇತನ ಮೂರ್ತಿ, ರೂಪಿನಲ್ಲಿ ಉಂಟೆಂದು ಹೋರುವಾಗ ಅದು ಅಚೇತನ ಮೂರ್ತಿ

ಅನುಕಲ್ಪ : ಕಲ್ಪ, ಅನುಕಲ್ಪ, ಉಪಕಲ್ಪ ಹಾಗೂ ಅಕಲ್ಪ ಎಂಬ ನಾಲ್ಕು ವಿಧ ಭಸ್ಮಗಳಲ್ಲಿ ಒಂದು. ಅರಣ್ಯದಲ್ಲಿ ಒಣಗಿದ ಹಸುವಿನ ಸಗಣಿಯನ್ನು ತಂದು ಪುಡಿ ಮಾಡಿ ಶಾಸ್ತ್ರೋಕ್ತವಾಗಿ ಸುಟ್ಟು ತಯಾರಿಸಿದ ಭಸ್ಮ

ಅಷ್ಟಶೀಲಗಳು : ಪಂಚಾಚಾರಗಳಲ್ಲಿ ಒಂದಾದ ಸದಾಚಾರಕ್ಕೆ ಸಂಬಂಧಿಸಿದ ಅಂಕುರಶೀಲ, ಉತ್ಪನ್ನಶೀಲ, ದ್ವಿದಲಶೀಲ, ಪ್ರವೃದ್ಧಶೀಲ, ಸಪ್ರಕಾಂಡಶೀಲ, ಸಶಾಖಶೀಲ, ಸಪುಷ್ಪಶೀಲ ಮತ್ತುಸಫಲಶೀಲ ಎಂಬ ಎಂಟು ಶೀಲಗಳು:  ಸಾಧಕನ ಆಧ್ಯಾತ್ಮ ಪ್ರಗತಿಯನ್ನು ಸೂಚಿಸುವ ಶೀಲಗಳು: ಇವುಗಳ ಪಾಲನೆಯಿಂದ ಇಷ್ಟವಾದ ಮಹತ್ಫಲದ ಪ್ರಾಪ್ತಿ.

ಈ ರೀತಿ ಅರ್ಥ ಹೊಂದಿರುವ ಈ ಬೃಹತ್ ಕೃತಿಯು ವಚನ ನಿರ್ವಚನ ಮಾಡಲು ತುಂಬಾ ಸಹಕಾರಿಯಾಗಿದ್ದು 896 ಪುಟಗಳನ್ನು ಹೊಂದಿದೆ. ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿರುವ ಇದರ ಮುಖಬೆಲೆ ರೂ 1000 ಈ ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ

9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು




Sunday, September 20, 2020

ವಚನ ಚಿಂತನ ಮಾಲೆ

 




ವಚನ ಚಿಂತನ ಮಾಲೆ

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ  ಶ್ರೀ ಬಸವ ಅಧ್ಯಯನ ಪೀಠವು ವಚನ ಚಿಂತನಮಾಲೆ ಎಂಬ ಹೆಸರಿನಲ್ಲಿ  ಪ್ರೊ. ಬರಗೂರು ರಾಮಚಂದ್ರಪ್ಪರವರ ಪ್ರಧಾನ ಸಂಪಾದಕತ್ವದಲ್ಲಿ ಪ್ರೊ. ಆರ್. ರಾಮಕೃಷ್ಣ, ಡಾ.ಎನ್.ಎಂ.ತಳವಾರ್, ಡಾ. ಜಿ.ಆರ್.ತಿಪ್ಪೇಸ್ವಾಮಿ, ಡಾ. ಎಂ.ನಂಜಯ್ಯ ಹೊಂಗನೂರು, ಡಾ.ಲೋಲಾಕ್ಷಿ ಎನ್.ಕೆ ಸಂಪಾದಕ ಮಂಡಳಿ ಒಳಗೊಂಡಂತೆ ಹನ್ನೆರಡನೆಯ ಶತಮಾನದ ಬಸವಣ್ಣ, ಅಲ್ಲಮ, ದಾಸಿಮಯ್ಯ, ಅಕ್ಕಮಹಾದೇವಿ ಮುಂತಾದವರ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಚರ್ಚೆಗೆ ಬಾರದ ಗಣನೆಗೆ ಬಾರದಿರುವ ವಚನಕಾರರನ್ನು ಕುರಿತು ವಿವಿಧ ವಿದ್ವಾಂಸರಿಂದ 31 ಶಿವಶರಣರ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ಆಯಾಮ ನೀಡಿದ್ದಾರೆ.

ಒಂದೊಂದು ಪುಸ್ತಕವು 64 ಪುಟ, 100 ಪುಟ, 132 ಪುಟ, 156 ಪುಟ ಹೀಗೆ ವೈವಿಧ್ಯಮಯವಾಗಿ ಹೊರಬಂದಿದ್ದು ವಚನ ಸಾಹಿತ್ಯಾಭಿಮಾನಿಗಳಿಗೆ ಹೇಳಿ ಮಾಡಿಸಿದಂತಹ ಪುಸ್ತಕಗಳಾಗಿವೆ.

31 ಪುಸ್ತಕಗಳ ಒಟ್ಟು ಬೆಲೆ ರೂ 2150

ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಬಹುದು.


9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

ಬಿ.ಪುಟ್ಟಸ್ವಾಮಯ್ಯರವರ ಆರು ಕಾದಂಬರಿಗಳು

 


ಬಿ.ಪುಟ್ಟಸ್ವಾಮಯ್ಯರವರ ಆರು ಕಾದಂಬರಿಗಳು

ಬಿ.ಪುಟ್ಟಸ್ವಾಮಯ್ಯರವರು ಬಸವಣ್ಣನವರನ್ನು ಕೇಂದ್ರವಾಗಿಟ್ಟುಕೊಂಡು ಹನ್ನೆರಡನೆಯ ಶತಮಾನದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಿಗೆ ತಮ್ಮ ಕಲ್ಪನೆಯ ರಂಗು ತುಂಬಿ

ಉದಯರವಿ(1959)

ರಾಜ್ಯಪಾಲ (1960)

ಕಲ್ಯಾಣೇಶ್ವರ(1960)

ನಾಗಬಂಧ(1962)

ಮುಗಿಯದ ಕನಸು(1962)

ಕ್ರಾಂತಿಕಲ್ಯಾಣ(1963)

ತಮ್ಮ ಕಲ್ಪನೆಯ ಪಾತ್ರಗಳು ವಾಸ್ತವವೆನ್ನುವಷ್ಟರಮಟ್ಟಿಗೆ ಆ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ಗುಣವನ್ನು ಕಟ್ಟಿಕೊಡುತ್ತವೆ.

ಆರು ಕಾದಂಬರಿಗಳ ಬಗ್ಗೆ ರಾಷ್ಟ್ರಕವಿ ಕುವೆಂಪುರವರ ನುಡಿಗಳು

12ನೆಯ ಶತಮಾನದಲ್ಲಿ ಜಾತಿವಿನಾಶ ಮಾಡಬೇಕೆಂದು ಹೇಳಿ ಬಸವೇಶ್ವರರು ಜಗತ್ತಿನಲ್ಲಿ ಯಾರೂ ಮಾಡದ ಪ್ರಯತ್ನ ಪ್ರಾರಂಭ ಮಾಡಿದರು. ಈ ಪುರೋಹಿತಶಾಹಿಗಳು ಅದನ್ನು ಕೂಡಾ ಹಿಮ್ಮೆಟ್ಟಿಸಿದರು. ಪುಟ್ಟಸ್ವಾಮಯ್ಯರವರು ಬರೆದಿರುವ ಕ್ರಾಂತಿಕಲ್ಯಾಣದಲ್ಲಿ ಕೊನೆಗೊಂಡಿರುವ ಆರು ಕಾದಂಬರಿಗಳನ್ನು ನೀವು ಸರಿಯಾಗಿ ಓದಿದರೆ ಅಲ್ಲಿ ನಿಮಗೆ ಗೊತ್ತಾಗುತ್ತದೆ.  ಹೇಗೆ ಈ ಪುರೋಹಿತವರ್ಗ ಈ ಕ್ರಾಂತಿಗಳನ್ನು ಹಿಮ್ಮೆಟ್ಟಿಸಿತು ಅಂತ. ಹೇಗೆ ತುಳಿಯಿತು? ಹೇಗೆ ಅನ್ಯಾಯ ಮಾಡಿತು? ಹೇಗೆ ಕೊಲೆ ಮಾಡಿತು? ಎಲ್ಲಾ ಮಾಡಿತು. ಅವು ಗೊತ್ತಾಗುತ್ತದೆ.

ಬಿ.ಪುಟ್ಟಸ್ವಾಮಯ್ಯರವರ ಕೊನೆಯ ಪುಸ್ತಕವನ್ನು ವಿವರವಾಗಿ ಪರಿಚಯಿಸುತ್ತಿರುವೆ.

 ಕ್ರಾಂತಿಕಲ್ಯಾಣ ಪುಸ್ತಕ ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷ ಯೋಜನೆಯಡಿಯಲ್ಲಿ ಖರೀದಿಸಿದ ಪುಸ್ತಕ

ಇದು ಮಹಾಮಾನವತಾವಾದಿ ಶ್ರೀ ಬಸವೇಶ್ವರರ ಜೀವನ ಸಾಧನೆಗಳನ್ನು ಪರಿಚಯಿಸುವ ಕಾದಂಬರಿ ಮಾಲಿಕೆಯಲ್ಲಿ ಆರನೆಯದು.

ಮುನ್ನುಡಿಯನ್ನು ಖ್ಯಾತ ಸಾಹಿತಿ ಮತ್ತು ವಿಮರ್ಶಕ ಎಸ್. ವಿದ್ಯಾಶಂಕರ್ ರವರು ಬರೆದಿದ್ದರೆ ಬೆನ್ನುಡಿಯನ್ನು ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪುರವರು ಬರೆದಿದ್ದಾರೆ.

1965ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿ ರಾಜಗೃಹದ ರಹಸ್ಯ, ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ, ಮಂಗಳವೇಡೆಯ ಅಗ್ನಿದಾಹ, ಮಾನವನು ದಾನವನಾದಾಗ, ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ, ಮಹಾಪ್ರಸ್ಥಾನ ಎಂಬ ಆರು ಅಧ್ಯಾಯಗಳನ್ನು ಒಳಗೊಂಡಿದ್ದು, ಅಂತಿಮವಾಗಿ ಉಪಸಂಹಾರ ಹೊಂದಿರುತ್ತದೆ.

ಕಾದಂಬರಿಯಲ್ಲಿ ಬರುವ ಎರಡು ಸಾಲು ಉಲ್ಲೇಖ

“ಜೀವಾತ್ಮ ಪರಮಾತ್ಮರು ಒಂದೇ ಎಂಬ ಭಾವದಿಂದ ನೆನಪು ಅಳಿದಾಗ ನೆನೆ ಎಂದರೆ ನಾನು ಯಾರನ್ನು ನೆನೆಯಲಿ, ಅರಿಯಬೇಕಾದ ವಸ್ತುವಾಗಲಿ, ಅರಿಯುವವನಾಗಲಿ ಇಲ್ಲದ್ದರಿಂದ ಈಗ ನನ್ನ ಕಾಯವೇ ಕೈಲಾಸ, ಮನಸ್ಸೇ ಲಿಂಗ, ತನುವೇ ಸಜ್ಜೆ, ನೆನೆಯುವ ವಸ್ತುವಿಲ್ಲ, ನೆನೆಯುವ ಭಕ್ತನಿಲ್ಲ, ಆತ್ಮನಲ್ಲಿ ಬ್ರಹ್ಮವು, ಬ್ರಹ್ಮನಲ್ಲಿ ಆತ್ಮವು ಬೆರೆತು, ಎರಡಾಗಿದ್ದು ಒಂದೇ ಆಯಿತು.

ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನ ಹೊರತಂದಿರುವ  ಆರು ಗಳ ಒಟ್ಟು ಬೆಲೆ ರೂ 1500

ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ ಪುಸ್ತಕ ತರಿಸಿಕೊಳ್ಳಬಹುದ

9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು



 

 

ಸ್ವಲೀಲ ಮಹಾತ್ಮ

 


ಸ್ವಲೀಲ ಮಹಾತ್ಮ

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಉಳಿಸಿ, ಬೆಳೆಸುವ ಮಹಾಮಣಿಹದ ಮಹಾಕಾರ್ಯವನ್ನು ಹೊತ್ತುಕೊಂಡು ಹಗಲಿರುಳೆನ್ನದೆ ಮೈಸೂರು ಪ್ರಾಂತ್ಯದ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಸಾವಿರಾರು ಭಿಕ್ಷದ ಮಠಗಳನ್ನು ಸ್ಥಾಪಿಸಿ, ತಮ್ಮ ಕಾಯವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಜ್ಞಾನದ ಬೆಳಕನ್ನು ಭಕ್ತರಿಗೆ ನೀಡಿದವರು ಶ್ರೀ ಗುರುಮಲ್ಲೇಶ್ವರರು.

ಅಂತಹ ಪೂಜ್ಯ ಗುರುಮಲ್ಲೇಶ್ವರರ ದಿವ್ಯ ಚರಿತೆಯನ್ನು ತುರಗನೂರು ಗುರುಬಸವಣ್ಣ ಯೋಗಕಮ್ಮಟದ ಶ್ರೀ ವಿಜಯಣ್ಣರವರು ಏಕಾಗ್ರತೆಯಿಂದ ತಮ್ಮ ಅಂತರಂಗದ ಕಣ್ಣನ್ನು ತೆರೆದು ಮನಮಟ್ಟುವಂತೆ, ಭಕ್ತಿ ಮೂಡುವಂತೆ ಬರೆದಿದ್ದಾರೆ.

ಸ್ವಲೀಲ ಮಹಾತ್ಮ ಹೊತ್ತಿಗೆಗೆ ತುರಗನೂರು ಗುರುಬಸವಣ್ಣ ಯೋಗಕಮ್ಮಟದ  ಕಮಲಕ್ಕರವರು ‘ನವ್ಯ ದರ್ಶನ ಎಂಬ  ಶೀರ್ಷಿಕೆಯಲ್ಲಿ ಮುನ್ನುಡಿ ಬರೆದಿದ್ದು, ಪ್ರತಿಯೊಂದು ಸಾಲುಗಳು ಕಣ್ಣಿಗೆ ಸದ್ಭಕ್ತಿ ಹಾಗೂ ಮನಸ್ಸಿಗೆ ಸದ್ಭಾವವನ್ನು ನೀಡುತ್ತದೆ.

ಪ್ರಾರಂಭದಲ್ಲಿ ‘ದಿವ್ಯದರ್ಶನ’ ಎಂಬ ಶೀರ್ಷಿಕೆಯಡಿಯಲ್ಲಿ ಇಡೀ ಪುಸ್ತಕದ ಪರಿಚಯವನ್ನು ಕೆಲವು ಪುಟಗಳಲ್ಲಿ ಮಾಡಿಕೊಟ್ಟಿದ್ದು, ಅಂತರಂಗದ ಹೃದಯ ತೆರೆದು ನೋಡಿದರೆ ಗುರುಮಲ್ಲೇಶ್ವರರ ಸದ್ಭಕ್ತಿ ಹೊಳೆಯಾಗಿ ಹರಿಯುತ್ತದೆ ಎಂಬ ಅವರ ಸಾಲುಗಳು ಗುರುಮಲ್ಲೇಶ್ವರರ ದಿವ್ಯ ದರ್ಶನವನ್ನು ,ಮಾಡಿಸುತ್ತದೆ.

ಒಟ್ಟು 58 ಅಧ್ಯಾಯಗಳನ್ನು ಹೊಂದಿರುವ 224 ಪುಟಗಳ ಕೃತಿಯನ್ನು ಗುರುಬಸವಣ್ಣ ಯೋಗಕಮ್ಮಟದಿಂದ ಹೊರತಂದಿರುತ್ತಾರೆ. ಅಧ್ಯಾಗಳ ಹೆಸರು


1.      ಮುಂಬೆಳಗು

2.     ಕಾರುಣ್ಯದ ಬೆಳಕು

3.     ಸೇವಾ ಮನೋಭಾವ

4.    ಸಂಗಮ

5.     ಹಾಗಲಕಾಯಿ

6.    ರೋಗದಿಂದ ಮುಕ್ತಿ

7.     ನಶ್ವರ ದೇಹ

8.     ಕರುಳಿನ ಪವಾಡ

9.    ಮೊಸರನ್ನ

10.   ಗಾಬರಿಯಾಗಬೇಡ

11.    ಮಹಾನವಮಿ

12.   ಪುನರ್ಜನ್ಮ

13.   ಶಿವಯೋಗದೆಡೆಗೆ

14.   ಸರಳತೆಯ ದರ್ಶನ

15.   ದೇವನೂರಿನತ್ತ

16.   ಬ್ರಹ್ಮಪಿಶಾಚಿ

17.    ನಾಲ್ಕಾಣೆ

18.   ಉರಿಯುಂಡ ಕರ್ಪೂರ

19.   ಜೋಳದ ಬಿತ್ತನೆ

20.  ನೀನೊಬ್ಬನೇ ಬಾ

21.   ಭ್ರಮಾಲೋಕ

22.  ಮೌಲಾನಾ ಪೀರ

 ರಕ್ತದ ಹೋಳಿಗೆ

ಹೀಗೇ 58 ಅಧ್ಯಾಯಗಳನ್ನು ಹೊಂದಿದ್ದು ಪ್ರತೀ ಆಧ್ಯಾಯವು ಒಂದೊಂದು ವಚನವನ್ನು ಹೊಂದಿದ್ದು ಸಾಹಿತ್ಯಾಭಿಮಾನಿಗಳಿಗೆ ಹಾಗೂ ವಚನಾಭಿಮಾನಿಗಳಿಗೆ ರಸದೌತಣವನ್ನು ನೀಡುತ್ತದೆ.

ಶರಣು ವಿಶ್ವವಚನ ಫೌಂಡೇಷನ್ ಶ್ರೀ ಗುರುಮಲ್ಲೇಶ್ವರರ ಜೀವನ ಚರಿತ್ರೆ ಎಂಬ ಹೆಸರಿನಲ್ಲಿ 60 ಎಪಿಸೋಡ್ ಗಳ ಚಲನಚಿತ್ರ ಮಾಡಿದ್ದು ಕೆಳಗಿನ ಲಿಂಕ್ ಪ್ರೆಸ್ ಮಾಡಿ ನೋಡಬಹುದು.

https://www.youtube.com/playlist?list=PLCR1-sYQLBYlI40ICG7E7OVn62jNwxjZy

ಓದುಗರನ್ನು ಭಕ್ತಿಯ ಲೋಕಕ್ಕೆ ಕೊಂಡೊಯ್ಯುವ ಈ ಹೊತ್ತಿಗೆಯ ಬೆಲೆ ರೂ 150 ಆಸಕ್ತರು ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಬಹುದು.

9980393469

ಪುಸ್ತಕ ಪರಿಚಯಿಸುತ್ತಿರುವವರು

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್, ಮೈಸೂರು