Sunday, April 27, 2025

ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ

 



ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರನ್ನು ಶರಣ ಬಹುರೂಪಿ ಚೌಡಯ್ಯನವರು  ತಮ್ಮ ಅನೇಕ ವಚನಗಳಲ್ಲಿ ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ”  ಎಂದು ಕೊಂಡಾಡಿದ್ದಾರೆ. ಈ ವಾಕ್ಯ ಅಕ್ಷರಶಃ ಸತ್ಯವಾದದ್ದು ಏಕೆಂದರೆ ಅದುವರೆಗೆ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ವಾಕ್ಯ ಎಲ್ಲರನ್ನೂ ಆಶೀರ್ವದಿಸುವ ವಾಕ್ಯವಾಗಿ ಜನಮನ್ನಣೆ ಪಡೆದಿತ್ತು . ಆದರೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು” ಎಂಬ ವಾಕ್ಯವನ್ನು ಪ್ರಯೋಗ ಮಾಡುವುದರ ಮೂಲಕ ವಿಶ್ವದ ಭೂಪಟದಲ್ಲಿ ಶಾಶ್ವತವಾದ ಸ್ಥಾನ ಪಡೆದರು. ಬಸವಣ್ಣನವರು ಜೀವವಿರುವ ಪ್ರತಿಯೊಂದು ಜೀವಿಗೂ ಲೇಸನ್ನು ಬಯಸಿದುದರ ಪರಿಣಾಮ ಬಹುರೂಪಿ ಚೌಡಯ್ಯನವರು ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ”  ಎಂದು ತಮ್ಮ ವಚನಗಳಲ್ಲಿ ಉಲ್ಲೇಖಿಸಿರುವುದು ಸಮಂಜಸವಾಗಿದೆ. ಬಸವಣ್ಣನವರು ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿಮ್ಮೈಸಿರಿ ಹಾರಿ ಹೋಹುದೆ? ಕುಳ್ಳಿರೆಂದಡೆ ನೆಲ ಕುಳಿಹೋಹುದೆ? ಎಂದು ಹೇಳುವುದರ ಮೂಲಕ ಹಾಗೂ “ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ, ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ” ಎಂಬ ವಚನದ ಮೂಲಕ ಅವರು ತಮ್ಮನ್ನೇ ತಾವು ಪಾಠವಾಗಿಸಿಕೊಂಡು, ಪಠ್ಯವಾಗಿಸಿಕೊಂಡು, ಪ್ರಯೋಗಶಾಲೆಯನ್ನಾಗಿಸಿಕೊಂಡು ನಮಗೆಲ್ಲ ಬದುಕಲು ಕಲಿಸಿಕೊಟ್ಟರು.

     ಕಲ್ಯಾಣದಲ್ಲಿ ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಭಂಡಾರ ಮಂತ್ರಿಯಾಗಿದ್ದರೂ ಕೂಡಾ “ಬಾಗಿದ ತಲೆ ಮುಗಿದ ಕೈಯಾಗಿರಿಸು ಕೂಡಲಸಂಗಮದೇವಾಎಂದು ಹೇಳುವುದರ ಮೂಲಕ “ಗೊನೆ ಹೊತ್ತ ಬಾಳೆ ಬಾಗುತ್ತದೆ, ತೆನೆ ಹೊತ್ತ ದಂಟು ಬಾಗುತ್ತದೆ, ಏನೇನೂ ಇಲ್ಲದುದು ಬೀಗುತ್ತದೆ ಎಂಬ ಕವಿ ಸಿದ್ಧಯ್ಯ ಪುರಾಣಿಕರವರ ಕವಿತೆಯ ಸಾಲಿನಂತೆ ನಾನು ಬೀಗುವುದಿಲ್ಲ ಬಾಗುತ್ತೇನೆ ಎಂಬ ಆದರ್ಶವನ್ನು ನಮಗೆ ಮಾದರಿಯಾಗಿ ಬಿಟ್ಟು ಹೋಗಿದ್ದಾರೆ.

ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು

ವಿದ್ಯಾಸಾಧಕರೆಲ್ಲ ಬುದ್ಧಿಗೆಟ್ಟರು

ತತ್ವಸಾಧಕರೆಲ್ಲ ಭಕ್ತಿಹೀನರಾದರು.

ಲಿಂಗಸಾಧಕರೆಲ್ಲ ಭೂಭಾರಕರಾದರು.

ಕೂಡಲಚೆನ್ನಸಂಗಮದೇವಾ ನಿಮ್ಮ ಬಸವಣ್ಣ

ಜಂಗಮಸಾಧಕನಾಗಿ ಸ್ವಯಂಲಿಂಗವಾದನು

ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಈ ವಚನ ಬಸವಣ್ಣನವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರು ದೇಶ, ಕಾಲ ಮೀರಿ ಅದು ಹೇಗೆ ಜಗಜ್ಯೋತಿಯಾದರು ಎಂಬುದನ್ನು ಸೂಚಿಸುತ್ತದೆ.

      ಅಸಮಾನತೆಯ ವಿರುದ್ಧ ಶಾಲೆಯಲ್ಲಿ, ಕಛೇರಿಗಳಲ್ಲಿ, ಸಮಾಜದ ವಿವಿಧ ಸಂಸ್ಥೆಗಳಲ್ಲಿ ಧ್ವನಿ ಎತ್ತಿರುವ ಸಮಾಜ ಸುಧಾರಕರನ್ನು ನೋಡಿದ್ದೇವೆ ಹಾಗೂ ಅವರ ಬಗ್ಗೆ ಇದುವರೆಗೆ ಕೇಳಿದ್ದೇವೆ. ತಮ್ಮ ಮನೆಯಲ್ಲಿಯೇ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು ತಿರಸ್ಕರಿಸಿ ಮನೆಯನ್ನು ತ್ಯಜಿಸಿದ ಬಸವಣ್ಣನವರು ಸಮಾಜ ಸುಧಾರಕರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ.

      ವಿಶ್ವದ ಅನೇಕ ಧರ್ಮಗಳನ್ನು ಅಧ್ಯಯನ ಮಾಡಿದಾಗ ಹಿಂದಿನಿಂದಲೂ ಹೆಣ್ಣು ಅನಾದರಣೆಗೆ, ಅನೇಕ ಪುರುಷರ ಅವಕೃಪೆಗೆ ಒಳಗಾಗಿರುವುದನ್ನು ನೋಡಿದ್ದೇವೆ. ಬಹುತೇಕ ಧರ್ಮಗಳು ಸ್ತ್ರೀಗೆ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ರಾಜಕೀಯ ಹೀಗೆ ಯಾವುದೇ ರಂಗದಲ್ಲೂ ಗುರುತರವಾದ ಸ್ಥಾನಮಾನ ನೀಡಿರುವುದು ವಿರಳ. ಹನ್ನೆರಡನೇ ಶತಮಾನದವರೆಗೂ ಭಾರತದಲ್ಲಂತೂ ಹೆಣ್ಣು ಶೂದ್ರಳು, ಯಾವುದೇ ಸಂಸ್ಕಾರಕ್ಕೆ ಅನರ್ಹಳು ಎಂದು ಅತ್ಯಂತ ಶೋಚನೀಯವಾಗಿ ನಡೆಸಿಕೊಂಡು ಬರಲಾಗುತ್ತಿತ್ತು.  ಇದಕ್ಕೆ ಅಪವಾದವೆಂಬಂತೆ ಹನ್ನೆರಡನೇ ಶತಮಾನದಲ್ಲಿ ಕನ್ನಡನಾಡಿನಲ್ಲಿ ಗುರು ಬಸವಣ್ಣನವರು ತಮ್ಮ ಅಕ್ಕನಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಲಿಂಗತಾರತಮ್ಯವನ್ನು ಸಂಪೂರ್ಣ ಕಿತ್ತೆಸೆಯುವುದರ ಜೊತೆಗೆ ಸ್ತ್ರೀಯರಿಗೆ ಹಿಂದೆಂದೂ ಸಿಗದಂಥಾ ಅಭೂತಪೂರ್ವ ಸ್ಥಾನಮಾನ ಕಲ್ಪಿಸಿಕೊಟ್ಟರು. ಇದರ ಪರಿಣಾಮವೇ ಅಕ್ಕ ನಾಗಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ಮುಕ್ತಾಯಕ್ಕ, ಲಿಂಗಮ್ಮ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವೆ ಮೊದಲುಗೊಂಡು 33 ಸ್ತ್ರೀಯರು ಶರಣೆಯರಾಗಿ ರೂಪುಗೊಂಡು ಅನುಭಾವಿಕ ವಚನಗಳನ್ನು ರಚಿಸಿದರು.

   ಬಸವಣ್ಣನವರು ಕಲ್ಯಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದುದರ ಪರಿಣಾಮ ಕಲ್ಯಾಣ ಇಂದು ಬಸವಕಲ್ಯಾಣವಾಗಿರುವುದನ್ನು ನಾವು ಕಾಣಬಹುದು. ಬಸವಣ್ಣನವರು ಇಷ್ಟಲಿಂಗ ದೀಕ್ಷ, ಕಾಯಕ ಮತ್ತು ದಾಸೋಹ ತತ್ವದ ಮೂಲಕ ಸಮಾನತೆಯ ತತ್ವಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಬಸವಣ್ಣನವರಿಗಿಂತ ಮುಂಚೆಯೇ ಇಷ್ಟಲಿಂಗ ಇತ್ತು ಎಂದು ಅಂತೆ ಕಂತೆ ಎಂಬ ತರ್ಕವಾದವನ್ನು ಇಂದಿಗೂ ಮಾಡುತ್ತಿರುವುದನ್ನು ನಾವು ಕಾಣಬಹುದು. ಬಸವಣ್ಣನವರ ಸಮಕಾಲೀನರ ವಚನಗಳನ್ನು ಅಧ್ಯಯನ ಮಾಡಿದಾಗ ಅದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ. ಅನುಭವಮಂಟಪದ ದ್ವೀತಿಯ ಅಧ್ಯಕ್ಷರಾದ ಚೆನ್ನಬಸವಣ್ಣನವರ ಒಂದು ವಚನ ಇಂತಿದೆ.

ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,

ಹುಸಿ ಹುಸಿ ನುಡಿಯ ಕೇಳಲಾಗದು.

ಆದಿ ಲಿಂಗ, ಅನಾದಿ ಬಸವಣ್ಣನು!

ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,

ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,

ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.

ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ

ಕೂಡಲಚೆನ್ನಸಂಗಮದೇವಾ.

 

ಎಂದು ಹೇಳುವುದರ ಮೂಲಕ ವಿಶ್ವಗುರು ಬಸವಣ್ಣನವರೇ ಇಷ್ಟಲಿಂಗ ಜನಕ ಎಂದು ಹೇಳುವುದರ ಮೂಲಕ ಆ ಕಾಲಘಟ್ಟದಲ್ಲಿಯೇ ಚೆನ್ನಬಸವಣ್ಣನವರು ಸಂದೇಹ ವ್ಯಕ್ತಪಡಿಸಿರುವವರ ಬಾಯಿ ಮುಚ್ಚಿಸಿರುವುದನ್ನು ನಾವು ಕಾಣಬಹುದು. ತುಳಿತಕ್ಕೊಳಗಾದ ಜನರಿಗೆ ದೇವರು ಆ ಸಂದರ್ಭದಲ್ಲಿ ಗಗನ ಕುಸುಮವಾಗಿತ್ತು. ಆಗ ಬಸವಣ್ಣನವರು ಅವರಿಗೆ ಇಷ್ಟಲಿಂಗ ದೀಕ್ಷೆ ನೀಡುವುವುದರ ಮೂಲಕ ಮುಖ್ಯವಾಹಿನಿಗೆ ತಂದರು. ಜನಸಾಮಾನ್ಯರೊಡನೆ ಅದರಲ್ಲೂ ಅತ್ಯಂತ ಕೆಳಸ್ಥರದಲ್ಲಿದ್ದು ತುಳಿತಕ್ಕೊಳಗಾದ ಜನರೊಡನೆ ತಮ್ಮನ್ನು ಏಕೀಭವಿಸಿಕೊಳ್ಳುವುದರಲ್ಲಿ ಬಸವಣ್ಣನವರ ಅಸಾಧಾರಣ ಮಾನವೀಯ ಅನುಕಂಪ ಅಸದೃಶವಾದುದು.

 

ಚೆನ್ನಯ್ಯನ ಮನೆಯ ದಾಸನ ಮಗನು,

ಕಕ್ಕಯ್ಯನ ಮನೆಯ ದಾಸಿಯ ಮಗಳು,

ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.

ಇವರಿಬ್ಬರಿಗೆ ಹುಟ್ಟಿದ ಮಗ ನಾನು,

ಕೂಡಲಸಂಗಮದೇವ ಸಾಕ್ಷಿಯಾಗಿ.

 

ಎಂದು ಹೇಳಿಕೊಳ್ಳುವುದರ ಮೂಲಕ ಹುಟ್ಟಿನ ಅಹಂಕಾರವನ್ನು ನಿರಾಕರಿಸಿಕೊಳ್ಳುವುದರಲ್ಲಿ ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂಬುದನ್ನು ಕಾಣಬಹುದು.ಈ ಸಂದರ್ಭದಲ್ಲಿ ಅವರು ಚೆನ್ನಯ್ಯ ಕಕ್ಕಯ್ಯ ಮುಂತಾದ ಕೆಳವರ್ಗದ ಜನರಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಅವರನ್ನು ಶರಣರನ್ನಾಗಿ ರೂಪಿಸಿದರು. ಬಸವಣ್ಣನವರು ಕೆಳವರ್ಗದವರಿಂದಲೂ ಸಲಹೆಗಳನ್ನು ಸ್ವೀಕರಿಸುವ ಮನೋಭಾವವಿತ್ತು. ಅವರು ಶಂಕರ ಪದವಿಗೇರಿದರೂ ತಮ್ಮನ್ನು ತಾವು ಕಿಂಕರರೆಂದೇ ಗುರುತಿಸಿಕೊಳ್ಳುವುದನ್ನು ಮತ್ತೊಂದು ವಚನದಲ್ಲಿ ಕಾಣಬಹುದು.

 

ಭಕ್ತಿಯಿಲ್ಲದ ಬಡವ ನಾನಯ್ಯಾ: ಕಕ್ಕಯ್ಯನ ಮನೆಯಲ್ಲೂ ಬೇಡಿದೆ,

ಚೆನ್ನಯ್ಯನ ಮನೆಯಲ್ಲೂ ಬೇಡಿದೆ. ದಾಸಯ್ಯನ ಮನೆಯಲ್ಲೂ ಬೇಡಿದೆ.

ಎಲ್ಲಾ ಪುರಾತನರು ನೆನೆದು ಭಕ್ತಿಭಿಕ್ಷವನಿಕ್ಕಿದಡೆ

ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.

 

ಈ ವಚನದಲ್ಲಿ ಬಸವಣ್ಣನವರ ಭಕ್ತಿ ರಹಸ್ಯ ಅಡಗಿದ್ದು ಅಹಂಕಾರವನ್ನು ಅಳಿದು ಸಮಷ್ಟಿಗೆ ತಮ್ಮನ್ನು ಅರ್ಪಿಸಿಕೊಳ್ಳುವ ಭೃತ್ಯಾಚಾರ ಮನೋಭಾವವನ್ನು ಕಾಣಬಹುದು. ಮರ್ತ್ಯಲೋಕದಲ್ಲಿ ಭಕ್ತರುಂಟೆ ಎಂದು ಯಾರಾದರೂ ಪ್ರಶ್ನಿಸಿದರೆ ನಾನೊಬ್ಬನೇ ಭಕ್ತ ಉಳಿದವರೆಲ್ಲ ಲಿಂಗ ಜಂಗಮ ಸ್ವರೂಪ ಎಂದು ಹೇಳಿದ ಬಸವಣ್ಣನವರ ಭಕ್ತಿ ಶ್ರೀಮಂತಿಕೆ ಎಂತಹದು ಎಂಬುದು ತಿಳಿಯುತ್ತದೆ. ತನ್ನ ಭಕ್ತಿಯಲ್ಲಿ ಪರಿಪಕ್ವತೆಯನ್ನು ರೂಢಿಸಿಕೊಳ್ಳಲು ತಮ್ಮ ಸಮಕಾಲೀನರಾದ ಕಕ್ಕಯ್ಯ, ಚೆನ್ನಯ್ಯ ಮತ್ತು ದಾಸಯ್ಯನ ಮನೆಯಲ್ಲಿ ಕೂಡಾ ಬೇಡಲು ಸಿದ್ಧ ಎನ್ನುವ ಅವರು ಎಲ್ಲಾ ಪುರಾತನರು ಪಾತ್ರೆಗೆ ಭಕ್ತಿಯನ್ನು ತುಂಬಿದರೆ ನಾನು ಪರಿಪೂರ್ಣ ಭಕ್ತನಾಗಬಹುದೆಂಬ ಆಶಯ ಮನೋಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಸವಣ್ಣನವರು ಕಾಯಕ ಮತ್ತು ದಾಸೋಹ ವ್ಯವಸ್ಥೆಯನ್ನು ಜಾರಿಗೆ ತಂದುದರಿಂದ ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ ಎಂಬಂತೆ ಅಲ್ಲಿನ ಪ್ರಜೆಗಳು ಆರ್ಥಿಕವಾಗಿ ಸ್ವಾವಲಂಬಿಯಾದರು. ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ವಚನ ಸಾಹಿತ್ಯವನ್ನು ರಚನೆ ಮಾಡುವುದರ ಮೂಲಕ ತುರುಗಾಹಿ ರಾಮಣ್ಣನಂತಹವರೂ ಕೂಡಾ ವಚನ ರಚಿಸಲು ಪ್ರೇರಣೆಯಾಗಿ ಸಾಕ್ಷರತೆಯ ಬೀಜ ನೆಟ್ಟರು. ದೇಹವೇ ದೇವಾಲಯ ಎಂಬ ತತ್ವದ ಮೂಲಕ ಮಾನವನು ಮಹಾದೇವನಾಗಬಹುದು ಎಂಬುದನ್ನು ಸ್ವತಃ ಆಚರಿಸಿ ಇತರರಿಗೆ ಬೋಧಿಸಿದರು.

ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪ ವಿಶ್ವದಲ್ಲಿಯೇ ಪ್ರಥಮ ಸಂಸತ್ತು ಎಂದೇ ಬಿಂಬಿತವಾಗಿದೆ. ಅನುಭವಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ ವಿಭಿನ್ನವಾದದ್ದು. ಅನುಭಾವಿಕ ಹಿನ್ನೆಲೆಯಲ್ಲಿ ಶರಣರು ಆಡುತ್ತಿದ್ದ ಮಾತುಗಳೇ ವಚನಗಳಾದವು. ಅಂದಿನ ಅನುಭವಮಂಟಪದ ಪ್ರಭಾವ ಎಷ್ಟಿತ್ತೆಂದರೆ ಅಂದು ಯಾವುದೇ ಪತ್ರಿಕಾ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳಿಲ್ಲದಿದ್ದರೂ ಅದರ ಕೀರ್ತಿ ದೇಶ ವಿದೇಶಗಳಿಗೆ ಹರಡಿತ್ತು. ಅನುಭವ ಮಂಟಪದ ಕೀರ್ತಿ ವಾರ್ತೆ ಕೇಳಿ ಆಫ್ಘಾನಿಸ್ಥಾನದಿಂದ ಮರುಳ ಶಂಕರದೇವರು, ಕಾಶ್ಮೀರದಿಂದ ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಉತ್ತರಪ್ರದೇಶದಿಂದ ಶಿವಲೆಂಕ ಮಂಚಣ್ಣ, ಮಹಾರಾಷ್ಟ್ರದಿಂದ ಸಿದ್ಧರಾಮೇಶ್ವರ, ಆಂಧ್ರಪ್ರದೇಶದಿಂದ ಉರಿಲಿಂಗದೇವ ಮತ್ತು ಉರಿಲಿಂಗಪೆದ್ದಿ, ಗುಜರಾತ್‌ನಿಂದ ಆದಯ್ಯ ಕಲ್ಯಾಣದಲ್ಲಿ ನೆಲೆನಿಂತು ಶರಣರಾಗಿ ರೂಪುಗೊಂಡರು. ಅನುಭವಮಂಟಪದಲ್ಲಿ 770 ಅಮರಗಣಂಗಳು ಚರ್ಚೆ ಮಾಡುತ್ತಿದ್ದರು ಮತ್ತು ಏಕಕಾಲದಲ್ಲಿ 196000 ಶರಣರು ದಾಸೋಹ ಮಾಡುತ್ತಿದ್ದರು ಎಂಬುದನ್ನು ಅನೇಕ ವಚನಗಳು ಉಲ್ಲೇಖಿಸುತ್ತವೆ.

ಬಸವಣ್ಣನವರು ಪ್ರತಿಪಾದಿಸಿದ ಜಾತಿ ಮತ್ತು ವರ್ಗರಹಿತ ಸಮಾಜ, ಕಾಯಕ ತತ್ವ, ಮಾನವ ಕುಲದ ಕಲ್ಯಾಣಕ್ಕೆ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ದಾರಿದೀಪವಾಗಿರುವುದನ್ನು ಮನಗಂಡು ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸಮಾನತೆಯ ತತ್ವಕ್ಕೆ ಮುನ್ನುಡಿ ಬರೆದಂತಾಗಿದೆ.

ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - 570026

ಮೊ. 9901137948

vachanakumaraswamy@gmail.com

 

ಬಸವತತ್ವ





 ಬಸವತತ್ವ


ಬಸವನ ಬೆಳಕೆ ಎಲ್ಲಾಡಿ ಬಂದೆ

ಭಾರತವೆಲ್ಲಾ ಸುತ್ತಾಡಿ ಬಂದೆ.


ನಿಟ್ಟುಸಿರೆದೆಯನು ಬೆಳಗಿಸಿ ಬಂದೆ

ನಿರಾಸೆಯದೆಯನು ತೊಳಗಿಸಿ ಬಂದೆ

ಹೆಣ್ಣಿನ ಕಂಬನಿ ಬತ್ತಿಸ ಬಂದೆ

ಆಶಾ ಜ್ಯೋತಿಯ ಹೊತ್ತಿಸ ಬಂದೆ

ದೀನರ ಬಾಳನು ಮುಸುಕಿದ ಕಾಲವ

ಕಬಳಿಸಿ ಬಂದೆ ಧವಳಿಸಿ ಬಂದೆ

ಕನ್ನಡ ವನದಲ್ಲಿ ಕುಣಿದಾಡಿ ಬಂದೆ.


ಎಂಬ ಸಿದ್ದಯ್ಯ ಪುರಾಣಿಕ ಅವರ ಕವಿತೆ ಕೇಳುತ್ತಿದ್ದರೆ ಬಸವ ತತ್ವದ ಪರಿಚಯವಾಗುತ್ತದೆ.


12 ನೇ ಶತಮಾನದ ವರೆಗೆ ಎಲ್ಲಾ ಧಾರ್ಮಿಕ ನಾಯಕರು ಕೇವಲ ದೇವರ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಆದರೆ ಬಸವಣ್ಣನವರು ಮಾನವರ ಬಗ್ಗೆ ಮಾತನಾಡಿ ಮಾನವನು ಮಹಾದೇವನಾಗಬಹುದು ಎಂಬುದನ್ನು ತೋರಿಸಿಕೊಟ್ಟರು.


ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವಕುಲ ಎಂದು ಘೋಷಣೆ ಮಾಡಿದಂತಹ ಧರ್ಮ ಯಾವುದಾದರೂ ವಿಶ್ವದಲ್ಲಿ ಇದ್ದರೆ ಅದು ಬಸವಧರ್ಮ.


ಇವನಾರವ, ಇವನಾರವ,

ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ,

ಇವನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ.


ಎಂಬ ವಚನದಂತೆ ಜಗತ್ತಿನ ಎಲ್ಲಾ ದೇಶಗಳ ಎಲ್ಲಾ ಜನಾಂಗಗಳನ್ನು ಎಲ್ಲಾ ವರ್ಗಗಳ ಜನರನ್ನು ಸ್ವೀಕರಿಸುವ ಅಪ್ಪಿಕೊಳ್ಳುವ ಧರ್ಮ ಅದು ಬಸವಧರ್ಮ.


ಬಸವತತ್ವದಲ್ಲಿ ಕಾಯಕ ಮತ್ತು ದಾಸೋಹ ಎರಡು ಪ್ರಮುಖ ತತ್ವಗಳು.


ಬಸವಣ್ಣನವರ ಈ ಎರಡು ತತ್ವಗಳಿಂದ ಕರ್ನಾಟಕದ ಕಲ್ಯಾಣ ವಿಶ್ವದಾದ್ಯಂತ ಪರಿಚಯವಾಯಿತು. ಈ ತತ್ವಗಳಿಂದ ಆಕರ್ಷಿತರಾಗಿ ಆಫ್ಘಾನಿಸ್ತಾನದಿಂದ ಮರುಳಶಂಕರದೇವ, ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ಗುಜರಾತ್ ನಿಂದ ಆದಯ್ಯ, ಮಧ್ಯಪ್ರದೇಶದಿಂದ ಡೋಹರ ಕಕ್ಕಯ್ಯ ಬಂದು ಕಲ್ಯಾಣದಲ್ಲಿ ನೆಲೆಸಿದರು.


ಬಸವತತ್ವವು ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪದ ಮೂಲಕ  ವಿಶೇಷವಾಗಿ ಪ್ರತಿಪಾದಿಸಲ್ಪಟ್ಟಿತು‌. ಅಲ್ಲಮಪ್ರಭು ಅಧ್ಯಕ್ಷರಾದ ಅನುಭವಮಂಟಪದಲ್ಲಿ 770 ಅಮರಗಣಂಗಳು ಚರ್ಚೆಯಲ್ಲಿ ಭಾಗವಹಿಸಿರುವುದಕ್ಕೆ ಹಾಗೂ 1 ಲಕ್ಷದ 96 ಸಾವಿರ ಜನರು ಏಕಕಾಲದಲ್ಲಿ ದಾಸೋಹ ಮಾಡುತ್ತಿದ್ದರೆಂಬುದಕ್ಕೆ ವಚನಗಳ ಆಧಾರವಿದೆ.


ಬಸವತತ್ವದಲ್ಲಿ ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದಗಳು ಅಂಗವಾದರೆ, ಪಂಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳು ಪ್ರಾಣವಾಗಿದ್ದು,  ಷಟ್ಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ  ಮತ್ತು ಐಕ್ಯಗಳು ಆತ್ಮವಾಗಿವೆ.


ಬಸವತತ್ವವನ್ನು ಆಚರಿಸುವುದರಿಂದ ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಎಲ್ಲರೂ ಬಸವತತ್ವವನ್ನು ಒಪ್ಪಿ ಅಪ್ಪಿಕೊಳ್ಳೋಣ ಬನ್ನಿ.



Until 12th century no religious leader spoke about human being . They only spoke about God . The only person in the world who spoke about human being and said Human being can become God was Vishwaguru Basavanna. Basava philosophy led by Basavanna and other sharanas changed the environment of the society .


Why do youths need Basava philosophy? Now both men and women have equal rights. 

What is the essential of this philosophy?  

If we grow tree today atleast it will longlast for 60 to 80 years and give  fruits till end. Similarly following Basava philosophy will give us fruits in the form of moral values which makes us a good citizen and successful person for the society for many years and if this is followed by next generation they also get the benefit. 


Basava philosophy inculcated in correct age gives us a foundation for our future . We can build a building of our wish. Mainly youths are tomorrow’s citizen and Basava philosophy followed by them make them more strong, brighter with spiritual knowledge , scientific and creative skill with mainly moral values which is essential for leading a good life.

ಇಷ್ಟಲಿಂಗ

 



ಇಷ್ಟಲಿಂಗ


ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ

ಕೂಡಲಸಂಗಮದೇವಯ್ಯಾ

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.


ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಈ ವಚನ ಇಷ್ಡಲಿಂಗದ ವ್ಯಾಪ್ತಿಯನ್ನು ತಿಳಿಸುತ್ತದೆ.


ವ್ಯಕ್ತಿಯು ಜಾತಿಯಿಂದ ದೊಡ್ಡವನಾಗದೆ ಆತ್ಮಜ್ಯೋತಿಯಿಂದ ಮಾತ್ರ ದೊಡ್ಡವನಾಗುತ್ತಾನೆ. ಅಂತಹ‌ ಆತ್ಮಜ್ಯೋತಿಯನ್ನು ಸಂಕೇತಿಸುವ ಕುರುಹು ಇಷ್ಟಲಿಂಗ.


ಭಾರತದ ರಾಷ್ಟ್ರಧ್ವಜವು ಹೇಗೆ ಯಾವುದೇ ಜಾತಿಮತದ ಕುರುಹಾಗದೆ, ಸ್ವತಂತ್ರ ಪ್ರಜಾಪ್ರಭುತ್ವವಾದಿ ರಾಷ್ಟ್ರದ ಸಾರ್ವಭೌಮತ್ವವನ್ನು ಸಾರುವ ಪ್ರತೀಕವೋ ಹಾಗೆ ಇಷ್ಟಲಿಂಗವು ಜಾತ್ಯಾತೀತ, ಧರ್ಮಸಹಿತ, ಸಮಾಜವಾದಿ ದೇಶವನ್ನು ಕಟ್ಟುವುದರ ಸಂಕೇತವಾಗಿದೆ.


ಧಾರ್ಮಿಕ ಚಟುವಟಿಕೆಗಳು ಸ್ತ್ರೀಯರಿಗೆ ನಿಷಿದ್ಧವಾಗಿದ್ದ ಕಾಲದಲ್ಲಿ ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿ ತಮ್ಮ ಸಹೋದರಿ ನಾಗಲಾಂಬಿಕೆಯವರಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಮಹಿಳೆಯರು ಕೂಡಾ ಧಾರ್ಮಿಕ ಸ್ವಾತಂತ್ರ್ಯ ನೀಡಿದುದರ ಫಲವಾಗಿ ಅಕ್ಕ ನಾಗಲಾಂಬಿಕೆ ವಿಶ್ವದ ಪ್ರಥಮ ಲಿಂಗಾಯತ ಮಹಿಳೆಯಾದರು.


ಇಷ್ಟಲಿಂಗ ದೀಕ್ಷೆ ಮೂಲಕ ಲಿಂಗಾಯತ ಧರ್ಮವು ಎಲ್ಲಾ ಜಾತಿಗಳ ಮತ್ತು ಎಲ್ಲಾ ಉದ್ಯೋಗಗಳ ಜನರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ವಿಶ್ವದಲ್ಲಿಯೇ ವಿಶಿಷ್ಟ ಧರ್ಮವಾಗಿ ರೂಪುಗೊಂಡಿದೆ.


ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ

ಸಕಲವಿಸ್ತಾರದ ರೂಹು ನೀನೇ ದೇವಾ

`ವಿಶ್ವತಶ್ಚಕ್ಷು' ನೀನೆ ದೇವಾ

`ವಿಶ್ವತೋಮುಖ' ನೀನೆ ದೇವಾ

`ವಿಶ್ವತೋಬಾಹು' ನೀನೇ ದೇವಾ

`ವಿಶ್ವತಃಪಾದ' ನೀನೆ ದೇವಾ

ಕೂಡಲಸಂಗಮದೇವಾ.


ಎಂಬ ವಿಶ್ವಗುರು ಬಸವಣ್ಣನವರ ವಚನದಂತೆ ಪರಶಿವನನ್ನು ಇಷ್ಟಲಿಂಗ ರೂಪದಲ್ಲಿ ಕಂಡು ದೇಹವನ್ನೇ ದೇವಾಲಯವನ್ನಾಗಿ ರೂಪಿಸುವ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧರಿಸೋಣ. ಇಷ್ಟಲಿಂಗ ತತ್ವವನ್ನು ಎತ್ತಿ ಹಿಡಿಯೋಣ.


Ishtalinga  takes second place in Astavarna. Mainly  Lingayath devotee consider Ishtalinga as a " living, moving " divinity.


Every day, the devotee removes the ishtalinga from its box, which they tie on their chest and  places it the in left palm, offers puja with shiva mantra and then meditates about becoming one with the linga, i.e., the person who perform Ishtalinga pooja considered as sharana sati and lshtalinga as Linga pathi.


This is one of the mighty and spiritual journey a person who performs Ishtalinga Pooja undergoes. He/ she gets supernatural energy with positive potentialities which reaches them to a peak.


No religion gets the opportunities to carry God along with them. But Lingayath community gets this. When a person dies he cannot  take money or wealth along with him, but has the opportunity of taking linga with him it means get united with Shiva after the death.

ರುದ್ರಾಕ್ಷಿ

 



ರುದ್ರಾಕ್ಷಿ


ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು 

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು 

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ 

ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು. ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ ಪಂಚಮುಖದ ರುದ್ರಾಕ್ಷಿಗಳಾದವಾಗಿ 

ಅಯ್ಯಾ ಕೂಡಲಸಂಗಮದೇವಯ್ಯಾ 

ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ.


ಎಂಬಂತೆ ರುದ್ರಾಕ್ಷಿಯ ಮಹತ್ವ ಕುರಿತು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ತಮ್ಮ ವಚನದಲ್ಲಿ ತಿಳಿಸಿದ್ದಾರೆ.


ರುದ್ರಾಕ್ಷಿ ಧಾರಣೆಯಿಂದ ಆಧ್ಯಾತ್ಮಿಕತೆ ಹೆಚ್ಚಾಗುತ್ತದೆ. ಜಪ ಮಾಡಲು ರುದ್ರಾಕ್ಷಿಯನ್ನು ಬಳಸಲಾಗುತ್ತದೆ.


What is this Rudrakshi ? 

Rudrakshi is one among Ashtavarna . It is a seed of the Elaeocarpus ganitrus tree and has various benefits likely in performing pooja and also medically proved with various research that it is very helpful to cure heart diseases and mental illness. People wear this on neck and also as a bracelet which gives supernatural energy to them.


ರುದ್ರಾಕ್ಷಿಯನ್ನು ಧರಿಸುವುದರಿಂದ ಹೃದ್ರೋಗಗಳು ಮತ್ತು ಮಾನಸಿಕ ರೋಗಗಳು ಬರುವುದಿಲ್ಲವೆಂದು ಅನೇಕ ವಿಜ್ಞಾನಿಗಳು ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.


ರುದ್ರಾಕ್ಷಿಯನ್ನು ರಾತ್ರಿ ವೇಳೆ ಒಂದು ಕಪ್ಪು ನೀರಿನಲ್ಲಿ ನೆನೆಯಿಟ್ಟು ಬೆಳಗ್ಗೆ ಹೊಟ್ಟೆಗೆ ಏನು ತೆಗೆದುಕೊಳ್ಳದೆ ರುದ್ರಾಕ್ಷಿ ನೆನೆಯಿಸಿದ ನೀರನ್ನು ಕುಡಿದು ಒಂದು ಗಂಟೆ ಏನನ್ನು ತೆಗೆದುಕೊಳ್ಳದೆ ಇರಬೇಕು. ಹೀಗೆ 41 ದಿನ ತೆಗೆದುಕೊಳ್ಳುವ ಪರಿಪಾಠವಿದೆ. ಈ ಕ್ರಮ ಅನುಸರಿಸುವುದರಿಂದ ಹೃದಯಾಘಾತದಿಂದ ದೂರವಿರಲು ಸಾಧ್ಯ ಎಂದು‌ ಅನುಭಾವಿಗಳು ಹೇಳಿದ್ದಾರೆ.


ಸಾಮಾನ್ಯವಾಗಿ ಐದು ಮುಖದ  ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. ಅದು ಪರಮಾತ್ಮನ ಸತ್, ಚಿತ್, ಆನಂದ, ನಿತ್ಯ ಮತ್ತು ಪರಿಪೂರ್ಣ ಎಂಬ ಐದು ತತ್ವಗಳನ್ನು ಸಂಕೇತಿಸುತ್ತದೆ.


ಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲಿ 


ಅಯ್ಯಾ, ರುದ್ರಾಕ್ಷಿಯಿಂದ ಹರಿದೆನು ಭವಪಾಶಂಗಳ,

ಅಯ್ಯಾ, ರುದ್ರಾಕ್ಷಿಯಿಂದ ಮುರಿದೆನು ತನುಗುಣಾದಿಗಳ,

ಅಯ್ಯಾ, ರುದ್ರಾಕ್ಷಿಯಿಂದ ಒರೆಸಿದೆನು ಮಹಾಮಾಯೆಯ,

ಅಯ್ಯಾ, ರುದ್ರಾಕ್ಷಿಯಿಂದ ಕಳೆದೆನು ಪಂಚಮಹಾಪಾತಕವ.

ಅಯ್ಯಾ ಕೂಡಲಸಂಗಮದೇವಾ,

ಶ್ರೀಮಹಾರುದ್ರಾಕ್ಷಿಯಿಂದ ಗೆಲಿದೆನಯ್ಯಾ ಸಕಲದುರಿತಂಗಳನು.

ಎಂದು ಹೇಳಿದ್ದಾರೆ.


ಆದುದರಿಂದ ಎಲ್ಲರೂ ಎದೆಯ ಮೇಲೆ ರುದ್ರಾಕ್ಷಿಯನ್ನು ಸದಾಕಾಲ ಧರಿಸಿಕೊಂಡು ಆರೋಗ್ಯದಿಂದ ಇರೋಣ.

ವಿಭೂತಿ

 



ವಿಭೂತಿ ಮಹಿಮೆ


ಅಯ್ಯಾ ಎನಗೆ ವಿಭೂತಿಯೆ ಕುಲದೈವ; ಅಯ್ಯಾ ಎನಗೆ ವಿಭೂತಿಯೆ ಮನೆದೈವ; ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ; ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ; ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ; ಅಯ್ಯಾ ಕೂಡಲಚೆನ್ನಸಂಗಮದೇವಾ ಶ್ರೀಮಹಾಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ

ಎನಗೆ ವಿಭೂತಿಯೆ ಸರ್ವಸಾಧನ


ಎಂಬಂತೆ ವಿಭೂತಿಯ ಮಹಿಮೆಯ ಬಗ್ಗೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಹೇಳಿದ್ದಾರೆ.


ವಿಭೂತಿ ಧಾರಣೆಯು ಪ್ರತಿಯೊಬ್ಬ ಲಿಂಗವಂತರ ಲಕ್ಷಣ. ವಿಭೂತಿಯನ್ನು ಆಕಳ ಸಗಣಿಯಿಂದ ತಯಾರಿಸಲಾಗುತ್ತದೆ. ಏಕೆಂದರೆ ಅದಕ್ಕೆ ಕ್ರಿಮಿನಾಶಕ ಶಕ್ತಿ ಅಂದರೆ ರೋಗಾಣವನ್ನು ಕೊಲ್ಲುವಂತಹ ಶಕ್ತಿ ಇರುವುದನ್ನು ಸಂಶೋಧನೆಯ ಮೂಲಕ ಕಂಡುಕೊಂಡಿದ್ದಾರೆ. ವಿಭೂತಿಯು ದೇಹದ ಉಷ್ಣಾಂಶವನ್ನು ಹೊರಕ್ಕೆ ಬಿಡದೆ ಹಾಗೆಯೇ ಹೊರಗಿನ ತೇವಾಂಶ ದೇಹದೊಳಕ್ಕೆ ಪ್ರವೇಶಿಸದಂತೆ ತಡೆಗಟ್ಟುತ್ತದೆ. ವಿಭೂತಿ ಧರಿಸಲು ಗಂಡು ಹೆಣ್ಣು ಎಂಬ ಭೇದವಿಲ್ಲ. ಎಲ್ಲರೂ ಧರಿಸಬಾಹುದು.

Does Vibhuti holds such an importance in Astavarna.

Yes, 

Vibhuti, or sacred ash, holds profound spiritual significance  symbolizing purity, divine energy, and a reminder of mortality, often applied to the forehead or other parts of the body as a mark of devotion and spiritual protection. Everyone can apply this on their forehead ,regardless of gender.


ಬಸವ ಬಸವಾ ಎಂದು ಭಸಿತಮಂ ಧರಿಸಿದರೆ 

ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ

ಬಸವ ಷಟಸ್ಥಲ‌ ಚನ್ನಬಸವ ಪ್ರಭು ಮುಖ್ಯರು

ಭಸಿತಮಂ ಧರಿಸಿ ಬಯಲಾದರಯ್ಯ


ಎಂಬ ಬಾಲಲೀಲ ಮಹಾಂತ ಶಿವಯೋಗಿಗಳ ಭಸಿತ ಗೀತೆ ವಿಭೂತಿಯ ಮಹತ್ವವನ್ನು ಬಿಂಬಿಸುತ್ತದೆ.


ವಿಭೂತಿಯ ಉಪಯೋಗಗಳು

1. ಸಾತ್ವಿಕ ಕಳೆ ವೃದ್ಧಿಯಾಗುತ್ತದೆ.

2. ಮನೆಯಲ್ಲಿ ಪ್ರಶಾಂತ ವಾತಾವರಣ ಇರುತ್ತದೆ.

3. ಆಧ್ಯಾತ್ಮಿಕ ಸಾಧಕನಿಗೆ ವಿಭೂತಿ ಧಾರಣೆಯು ಮುಖ್ಯವಾದದ್ದು.

4. ವಿಭೂತಿಯನ್ನು 24*7 ಯಾವಾಗಲೂ ಧರಿಸಬಹುದು.

5. ಗೌರವ ಭಾವನೆ ತಂದುಕೊಡುತ್ತದೆ.

6. ಮುಖದಲ್ಲಿ ಚಿತ್ಕಳೆ ವೃದ್ಧಿಯಾಗುತ್ತದೆ.

7. ವಿಭೂತಿ ಅಷ್ಟಾವರಣಗಳಲ್ಲಿ ಒಂದು ಪ್ರಮುಖ ಸಾಧನ

8. ವಿಭೂತಿ ಧಾರಣದಿಂದ ಜ್ಞಾನ ನೇತ್ರ ಪಡೆಯಲು ಸಾಧ್ಯ


*ಬನ್ನಿ ಪ್ರತಿನಿತ್ಯ ವಿಭೂತಿಯನ್ನು ಧರಿಸಿ ಪರಶಿವನ ಕೃಪೆಗೆ ಪಾತ್ರರಾಗೋಣ*