Wednesday, March 8, 2023

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ

 

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ

(ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ?)


ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು

ತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತು

ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಗೆಯನೇರಿತ್ತು

ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು

ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!

ಶಿವಯೋಗಿ ಸಿದ್ಧರಾಮೇಶ್ವರರು ಈ ವಚನದಲ್ಲಿ ಹೆಣ್ಣಿನ ಹಿರಿಮೆಯನ್ನು ಕೊಂಡಾಡಿದ್ದಾರೆ. ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿ ಶಿವನಾದ. ನಾಲಗೆಯನ್ನೇರಿ ಬ್ರಹ್ಮನಾದ. ಎದೆಯಲ್ಲಿ ನೆಲೆಸಿ ನಾರಾಯಣನಾದ. ಹೆಣ್ಣನ್ನು ಕೇವಲ ಹೆಣ್ಣಾಗಿ ಮತ್ತು ರಾಕ್ಷಸಿಯಾಗಿ ನೋಡುವುದು ತಪ್ಪು. ಹೆಣ್ಣು ನಮ್ಮ ಕಣ್ಣಿಗೆ ಕಾಣುವ ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಹೆಣ್ಣಿಗೆ ದೈವ ಸ್ವರೂಪ ನೀಡಿದ್ದಾರೆ. ಈ ವಚನವನ್ನು ಅರಿತು ಪ್ರತಿಯೊಬ್ಬರೂ ಹೆಣ್ಣಿಗೆ ಮಹತ್ವದ ಸ್ಥಾನ ನೀಡಿದಾಗ ಹೆಣ್ಣಿಂದ ಜನ್ಮ ಪಡೆದು ಈ ಭುವಿಯಲ್ಲಿ ನಾವು ಜನಿಸಿರುವುದು ಸಾರ್ಥಕ ರೂಪ ಪಡೆದುಕೊಳ್ಳುತ್ತದೆ.

 ಜರ್ಮನಿಯ ಕ್ಲಾರಾ ಜೆಟ್‌ಕಿನ್ಅಂತರರಾಷ್ಟ್ರೀಯ ಮಹಿಳಾ ಸೆಕ್ರಟೇರಿಯಟ್ ಮುಖ್ಯಸ್ಥೆಯಾಗಿದ್ದ ಸಂದರ್ಭದಲ್ಲಿ ಮಾರ್ಚ್ ೮ನ್ನು ಮಹಿಳಾ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ವಿವಿಧ ರಾಷ್ಟçಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಅಂದಿನಿAದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು. ಇಂದು ೧೧೩ನೇ ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

   ಪ್ರತೀ ವರ್ಷ ಮಾರ್ಚ್ ೮ ಬಂದ ಕೂಡಲೇ ಆ ದಿನ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಂತರ್ಜಾಲದ ವಿವಿಧ ಮಾಧ್ಯಮಗಳಾದ ವಾಟ್ಸ್ಆಪ್, ಫೇಸ್‌ಬುಕ್, ಟ್ವಿಟರ್, ಇನ್ಸಾ÷್ಟಗ್ರಾಂ ಮುಂತಾದವುಗಳ ಮೂಲಕ ಶುಭಾಶಯಗಳನ್ನು ತಿಳಿಸಿ ಕೇವಲ ಆಚರಣೆಗೆ ಮಾತ್ರ ಸೀಮಿತರಾಗಿಬಿಡುತ್ತಿದ್ದೇವೆ. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೇ ಹೆಣ್ಣಿನ ಹಿಂದಿನ ಸ್ಥಿತಿಗತಿಗಳು ಮತ್ತು ಇಂದಿನ ಪರಿಸ್ಥಿತಿಗಳನ್ನು ಅವಲೋಕಿಸಿ ಅವರ ಏಳಿಗೆಗೆ ಪ್ರತಿಯೊಬ್ಬರೂ ಅವಕಾಶ ಕಲ್ಪಿಸಿಕೊಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

  ಕರ್ನಾಟಕದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಹೇಳುವುದಾದರೆ ಹನ್ನೆರಡನೇ ಶತಮಾನದ ಮೊದಲು ಹೆಣ್ಣಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಅವಕಾಶಗಳನ್ನು ಕಿತ್ತುಕೊಂಡು ಅವರನ್ನು ಅಸ್ಪೃಶ್ಯರ ರೀತಿ ಕಡೆಗಣಿಸಿ, ಉಸಿರುಗಟ್ಟುವ ವಾತಾವರಣವನ್ನು ನಿರ್ಮಿಸಿ ಅಬಲೆಯರನ್ನಾಗಿ ಮಾಡಲಾಗಿತ್ತು. ಹೀಗೆ ಧ್ವನಿಯಿದ್ದರೂ ನಿರ್ಜೀವ ಗೊಂಬೆಗಳಂತೆ ಬದುಕುತ್ತಿದ್ದ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆ ಮೂಡಿಸಿ ಅವರಿಗೆ ಅಕ್ಷರದ ಅರಿವು ಉಂಟುಮಾಡಿ ಮುಖ್ಯವಾಹಿನಿಗೆ ತಂದವರು ಕಲ್ಯಾಣ ರಾಜ್ಯ ನಿರ್ಮಾಣದ ಅಡಿಪಾಯದ ರೂವಾರಿ ವಿಶ್ವಗುರು ಬಸವಣ್ಣನವರು. ಅವರು ರಚಿಸಿದ ಅನುಭವ ಮಂಟಪದಲ್ಲಿ ಸಾವಿರಾರು ಮಹಿಳೆಯರು ಚರ್ಚೆಯಲ್ಲಿ ಪಾಲ್ಗೊಂಡು ಅನುಭಾವಿಕ ಹಿನ್ನೆಲೆಯಲ್ಲಿ ಪುರುಷರಿಗೆ ಸಮಾನಾಗಿ ಚರ್ಚಿಸುತ್ತಿದ್ದರು. ನೂರಾರು ಮಹಿಳೆಯರು ವಚನಗಳನ್ನು ರಚಿಸಿರುವ ಸಾಧ್ಯತೆಯಿದೆ. ಆದರೆ ಅಂದು ನಡೆದ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅನೇಕ ವಚನಕಾರರ ವಚನಗಳನ್ನು ಸುಟ್ಟು ಹಾಕಲಾಯಿತು. ಮತ್ತೆ ಕೆಲವರ ವಚನಗಳು ಕಾಲಗರ್ಭದಲ್ಲಿ ಹುದುಗಿಹೋದವು. ನಾವು ಎಷ್ಟೇ ಅನ್ಯಾಯ, ಆತ್ಮವಂಚನೆ, ಅಕ್ರಮಗಳನ್ನು ಮಾಡಿದರೂ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬಂತೆ ನಮಗೆ ೩೩ ಮಹಿಳಾ ವಚನಕಾರ್ತಿಯರಾದ ಅಕ್ಕಮಹಾದೇವಿ, ಅಕ್ಕಮ್ಮ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಮಸಣಮ್ಮ, ರೆಮ್ಮವ್ವೆ, ರೇಮಮ್ಮ, ರೇಚವ್ವೆ, ಕಾಮಮ್ಮ, ಲಕ್ಷಮ್ಮ, ಸೋಮಮ್ಮ, ಗಂಗಾಂಬಿಕೆ, ಕೇತಲದೇವಿ, ಗೊಗ್ಗವ್ವೆ, ವೀರಮ್ಮ, ದುಗ್ಗಳೆ, ನಾಗಲಾಂಬಿಕೆ, ನೀಲಮ್ಮ, ಗುಡ್ಡವ್ವೆ, ಬೊಂತಾದೇವಿ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ರಾಯಮ್ಮ, ರೇಕಮ್ಮ, ಸತ್ಯಕ್ಕ, ಸೂಳೆ ಸಂಕವ್ವೆ, ಲಿಂಗಮ್ಮ, ಗಂಗಮ್ಮ ಮುಂತಾದ ವಚನಕಾರ್ತಿಯರ  ೧೩೪೯ ವಚನಗಳು ದೊರೆತಿದ್ದು, ವಿಶ್ವಸಾಹಿತ್ಯಕ್ಕೆ ಕನ್ನಡದ ಮಹಿಳೆಯರ ಕೊಡುಗೆಯನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತಾಯಿತು. ಜಗನ್ಮಾತೆ ಅಕ್ಮಹಾದೇವಿ ಕನ್ನಡದ ಮೊಟ್ಟಮೊದಲ ಕವಯತ್ರಿಯಾಗಿ ಹೊರಹೊಮ್ಮಿದಳು. ಅಲ್ಲದೇ ಪುರುಷನ ಅನಾಗರೀಕ ವರ್ತನೆಯನ್ನು ಪ್ರತಿಭಟಿಸುವ ಮೊಟ್ಟಮೊದಲ ಕನ್ನಡದ ಪ್ರತಿಭಟನಾಕಾರ್ತಿಯಾಗಿ ರೂಪುತಳೆದರು. ಅಂದಿನಿಂದ ಮಹಿಳೆಯರ ಆಂತರ್ಯದಲ್ಲಿ ಹುದುಗಿದ್ದ ಪ್ರತಿಭೆ ಪ್ರಕಾಶಿಸಲು ಪ್ರಾರಂಭಿಸಿತು. ಶರಣರು ಸ್ತ್ರೀಯರಿಗೆ ಸ್ವಾತಂತ್ರ್ಯ ಪಡೆಯಲು ಅನರ್ಹಳು ಎಂದು ಹೇಳುತ್ತಿದ್ದ ಕಾಲದಲ್ಲಿ ಅವರನ್ನು ಪುಣ್ಯಸ್ತ್ರೀ ಎಂದು ಕರೆದು ಅವರಿಗೆ ಮಹತ್ವದ ಸ್ಥಾನ ನೀಡಿದರು. 

ಮೊಲೆ ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು 

ನಡುವೆ ಸುಳಿವ ಆತ್ಮನು 

ಹೆಣ್ಣೂ ಅಲ್ಲ. ಗಂಡೂ ಅಲ್ಲ ಕಾಣಾ ರಾಮನಾಥ. ಎಂದು ಜೇಡರ ದಾಸಿಮಯ್ಯನವರು ಹೇಳುವುದರ ಮೂಲಕ ಹೆಣ್ಣು ಮತ್ತು ಗಂಡು ಇಬ್ಬರಿಗೂ ಶಾರೀರಕ ಬದಲಾವಣೆ ಹೊರತು ಪಡಿಸಿದರೆ ಇಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಿದರು.

  ಹನ್ನೆರಡನೆಯ ಶತಮಾನದ ನಂತರ ಕೃತಿ ರಚನೆಯ ನಿದರ್ಶನಗಳು ಕಂಡು ಬರುವುದು ಮೈಸೂರಿನ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ. ಸಂಚಿಯ ಊಳಿಗದಲ್ಲಿದ್ದ ಸಂಚಿಯ ಹೊನ್ನಮ್ಮ ಮೈಸೂರು ಜಿಲ್ಲೆಯ ಯಳಂದೂರಿನವಳು. ಚಿಕ್ಕದೇವರಾಜರ ಪಟ್ಟದರಸಿ ದೇವರಾಜಮ್ಮಣಿಯ ಬಾಲ್ಯ ಸ್ನೇಹಿತೆಯಾಗಿದ್ದಳು. ಆಕೆ ಹದಿಬದೆಯ ಧರ್ಮ ಎಂಬ ಕೃತಿಯಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ ಪುರುಷರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಪೆಣ್ಣಲ್ಲವೆ ತಮ್ಮನ್ನೆಲ್ಲ ಪಡೆದ ತಾಯಿ

ಪೆಣ್ಣಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು. ಎಂದು ಪರಂಪರಾನುಗತವಾಗಿ ಹೆಣ್ಣಿನ ಬಗ್ಗೆ ಇದ್ದ ಕೀಳು ಭಾವನೆಯನ್ನು ಖಂಡಿಸಿದ್ದಾಳೆ.

 ಇಂದಿನ ಆಧುನಿಕ ಯುಗದಲ್ಲಿ ಮಹಿಳೆರಿಗೆ ಹೆಚ್ಚು ಸ್ವಾತಂತ್ರ ನೀಡಲಾಗಿದ್ದು, ಅವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಪುರುಷ ಕವಿಗಳು ಕೂಡಾ ಮಹಿಳೆಯರ ಬಗ್ಗೆ ಕವಿತೆಗಳನ್ನು ರಚಿಸುವುದರ ಮೂಲಕ ಗೌರವವನ್ನು ನೀಡಿದ್ದಾರೆ. ಕನ್ನಡದ ಹೆಸರಾಂತ ಕವಿ ಜಿ.ಎಸ್ ಶಿವರುದ್ದರಪ್ಪರವರು

ಮನೆಮನೆಯಲಿ ದೀಪ ಮುಡಿಸಿ

ಹೊತ್ತು ಹೊತ್ತಿಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ?

ಸ್ತ್ರೀ ಎಂದರೆ ಅಷ್ಟೇ ಸಾಕೆ? ಕವಿತೆಯ ಈ ಸಾಲುಗಳು ಹೆಣ್ಣಿನ ಗೌರವ ಸೂಚಕವಾಗಿವೆ. 

  ಸ್ವಾತಂತ್ರ್ಯ ಹೋರಾಟದಲ್ಲಿ ಕೂಡಾ ಅನೇಕ ಕರ್ನಾಟಕದ ಮಹಿಳೆಯರು ಭಾಗವಹಿಸಿ ತ್ಯಾಗ ಮತ್ತು ಹೋರಾಟದಲ್ಲಿ ಹೆಸರುವಾಸಿಯಾಗಿರುವುದನ್ನು ಕಾಣಬಹುದು. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ಸರೋಜಿನಿ ನಾಯ್ಡು, ರಾಣಿ ಅಬ್ಬಕ್ಕದೇವಿ, ಕಮಲ ಚಟ್ಟೋಪಾಧ್ಯಾಯ ಮುಂತಾದವರ ಧೈರ್ಯ ಮತ್ತು ಸಾಹಸ ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಆಧುನಿಕ ಕವಯತ್ರಿ ಲಲಿತಾ ಕೆ. ಹೊಸಪ್ಯಾಟಿರವರು ಅವ್ವ ಎಂಬ ಕವಿತೆಯಲ್ಲಿ

ಬೊಗಸೆ ತುಂಬ ಹೂವ ತಂದು

ಪಾದಕಮಲಕೆರಗುವೆ

ನಿನ್ನ ಅಡಿಗೆ ಮಣಿದು ಮತ್ತೆ

ಭಾಗ್ಯವನ್ನೆ ಬೇಡುವೆ.

ನೋವ ನಂಬಿ ನನ್ನ ನಂಬಿ 

ಹಾಲ ನೀನು ಕುಡಿಸಿದೆ

ಕಣ್ಣ ನೀರ ಒರೆಸಿ ನೀನು

ಎದೆಗವಚಿ ರಮಿಸಿದೆ. ಈ ಕವಿತೆ ತಾಯಿಯ ಮಾತೃವಾತ್ಸಲ್ಯದ ನೀತಿಯನ್ನು ಸಾರುತ್ತಿದ್ದು, ನಾವು ಆಕೆಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರಿಗೆ ಗೌರವ ಕೊಡಬೇಕಾಗುತ್ತದೆ.

   ಇಂದು ೨೧ನೇ ಶತಮಾನದ ಆಧುನಿಕ, ತಾಂತ್ರಿಕ ಮತ್ತು ಅಂತರ್ಜಾಲದ ಯುಗದಲ್ಲಿ ಇದ್ದೇವೆ. ಇಂದಿಗೂ ಅನೇಕ ಅನಿಷ್ಟ ಆಚರಣೆಗಳ ಮೂಲಕ ಮಹಿಳೆಯರಿಗೆ ನೋವನ್ನುಂಟುಮಾಡುತ್ತಿದ್ದೇವೆ. ಗಂಡ ತೀರಿಹೋದರೆ ಆಕೆಯ ಕುಂಕುಮ, ತಾಳಿ, ಹೂವು, ಬಳೆ ಮತ್ತು ಕಾಲುಂಗುರ ತೆಗೆದು ಆಕೆಯನ್ನು ವಿಲಕ್ಷಣ ಮಾಡುತ್ತಿದ್ದೇವೆ. ಹೆಂಡತಿ ತೀರಿ ಹೋದರೆ ಪುರುಷರು ಹೇಗೆ ಇರುತ್ತಾರೋ ಹಾಗೆಯೇ ಗಂಡ ತೀರಿ ಹೋದ ಹೆಂಗಸು ಕೂಡಾ ಮೊದಲು ಹೇಗೆ ಇದ್ದಳೋ ಅದೇ ರೀತಿ ಇರುವ ಮತ್ತು ಬದುಕುವ ಅವಕಾಶವನ್ನು ನಾವು ಸೃಷ್ಟಿಸಿಕೊಟ್ಟಿದ್ದೇ ಆದರೆ ಅದೇ ನಾವು ಹೆಣ್ಣಿಗೆ ಕೊಡುವ ಗೌರವ ಎಂದು ಭಾವಿಸುತ್ತಾ ಇಂತಹ ಅನೇಕ ಅನಿಷ್ಟ ಆಚರಣೆಗಳಿಗೆ ಇಂದೇ ತಿಲಾಂಜಲಿ ಹೇಳಿದ್ದೇ ಆದರೆ ಇಂದಿನ  ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತದೆ.

ಡಾ. ವಚನ ಕುಮಾರಸ್ವಾಮಿ

ಸಂಸ್ಥಾಪಕರು

ಶರಣು ವಿಶ್ವವಚನ ಫೌಂಡೇಷನ್

#೪೩೧, ೭ನೇ ಮುಖ್ಯರಸ್ತೆ, ೧೪ ನೇ ಅಡ್ಡರಸ್ತೆ

ಶಾರದಾನಗರ ರೈಲ್ವೆ ಬಡಾವಣೆ, ಬೋಗಾದಿ, ಮೈಸೂರು - ೫೭೦೦೨೬

ಮೊ. ೯೯೦೧೧೩೭೯೪೮




  

  


 


No comments:

Post a Comment