Wednesday, April 24, 2019

ಶರಣರ ದಿನಾಚರಣೆಗಳು


ಮೈಸೂರು:- ಸುತ್ತೂರು ಧರ್ಮಪೀಠಕ್ಕೆ ಸಿದ್ಧಿಯ ಪುಷ್ಪ ಮೂಡಿಸಿದವರು  ರಾಜೇಂದ್ರಶ್ರೀಗಳು ಎಂದು ಸಾಹಿತಿ ನಗರ್ಲೆ ಶಿವಕುಮಾರ ಹೇಳಿದರು.  ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರು ಆರ್ಟ್‍ಗ್ಯಾಲರಿಯಲ್ಲಿ ರಾಜೇಂದ್ರ ಶ್ರೀಗಳ 102ನೆಯ ಜಯಂತಿ ಮಹೋತ್ಸವದಲ್ಲಿ “ಕಾಯಕತಪಸ್ವಿ ರಾಜೇಂದ್ರ ಶ್ರೀಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ಸುತ್ತೂರು ಮಠದ ಸಾಧನೆಯ ಹಿಂದೆ ರಾಜೇಂದ್ರಶ್ರೀಗಳ ಬೆವರಿನ ಶ್ರಮವಿದೆ, ಕಣ್ಣೀರಿನ ನೋವಿದೆ, ಪಟ್ಟ ಪಾಡಿನ ಪಯಣವಿದೆ. ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ಕಷ್ಟ-ನಷ್ಟಗಳು ಅಗಾಧ. ಹಳ್ಳಿಹಳ್ಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಉಳ್ಳವರ ಬಳಿ ಭಿಕ್ಷಾ ಜೋಳಿಗೆ ಹಿಡಿದು ಸಂಗ್ರಹಿಸಿ ತಂದು ಲೆಕ್ಕವಿಲ್ಲದಷ್ಟು ಸಂಖ್ಯೆಯ ಮಕ್ಕಳಿಗೆ ರಕ್ಷಣೆ ಒದಗಿಸಿದರು. ಅವರು ವಿದ್ಯಾರ್ಥಿನಿಲಯ ಸ್ಥಾಪಿಸಿದ ಪರಿಣಾಮವಾಗಿ ಗ್ರಾಮಾಂತರ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ನೆರವಾಗಿ ಸಾವಿರಾರು ಮಕ್ಕಳ ಉನ್ನತ ವ್ಯಾಸಂಗಕ್ಕೆ ಕಾರಣವಾಯಿತು ಎಂದರು. ಮಕ್ಕಳಿಗೆ ಪ್ರಸಾದ ವ್ಯವಸ್ಥೆ ಮಾಡಲು ತೊಂದರೆಯಾದಾಗ ತಮ್ಮ ಕೊರಳಲಿದ್ದ ಬಂಗಾರದ ಕರಡಿಗೆಯನ್ನೇ ಮಾರಿ ಮಕ್ಕಳಿಗೆ ಪ್ರಸಾದ ವ್ಯವಸ್ಥೆ ಮಾಡಿದರು ಎಂದರು.  ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜೇಂದ್ರಶ್ರೀಗಳು ಶ್ರಮದ ದುಡಿಮೆಯ ಕಾಯಕ, ಸಮಾನಹಂಚಿಕೆಯ ದಾಸೋಹ, ಅಂತರಂಗ ಚಿಂತನೆಯ ಅನುಭಾವಕ್ಕೆ ಆದ್ಯತೆ ನೀಡಿದರು. ಅವರು ಬಸವಣ್ಣನ ಭಕ್ತಿಗೆ ಬೆರಗಾದವರು, ಅಕ್ಕಮಹಾದೇವಿಯ ವೈರಾಗ್ಯಕ್ಕೆ ಮಂತ್ರಮುಗ್ಧರಾದವರು, ಅಲ್ಲಮಪ್ರಭುವಿನ ಆತ್ಮಜ್ಞಾನಕ್ಕೆ ಶರಣಾದವರು. ಸಮಾಜದ ದುಸ್ಥಿತಿಗೆ ಮಮ್ಮಲ ಮರುಗಿ ಸಮುದಾಯದ ಜಾಗೃತಿಗೆ ದನಿ ನೀಡಿದರು ಎಂದರು. ನೀಲಕಂಠಸ್ವಾಮಿ ಮಠದ ಸಿದ್ಧಮಲ್ಲಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ ರಾಜೇಂದ್ರಶ್ರೀಗಳು ಮಣ್ಣಾಗಿದ್ದವರನ್ನು ಮಡಕೆ ಮಾಡಿದರು, ಕಲ್ಲಾಗಿದ್ದವರನ್ನು ಕಟೆದು ಮೂರ್ತಿಯನ್ನಾಗಿ ಮಾಡಿದರು, ಬೀಜವಾಗಿದ್ದನ್ನು ಬಿತ್ತಿ ಬೆಳೆದರು, ಕಸವಾಗಿದ್ದನ್ನು ರಸವನ್ನಾಗಿ ಪರಿವರ್ತಿಸಿದರು.  ವಚನಗಳ ಆಶಯದಂತೆ ನಡೆದು ಸಾಧನೆ ಮಾಡಿದ ಶ್ರೀಗಳು ನೀಡಿದ ಕೊಡುಗೆಗಳು ಅವರು ಜೀವಂತವಾಗಿಲ್ಲದಿದ್ದರೂ ನೆನಪಿಸಿ ಅವರ ಬಗ್ಗೆ ಭಕ್ತಿ ಭಾವನೆಯನ್ನು ಮೂಡಿಸುತ್ತದೆ ಎಂದರು. ಮೈಸೂರು ಆರ್ಟ್‍ಗ್ಯಾಲರಿಯ ಎಲ್.ಶಿವಲಿಂಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ  ಶರಣು ವಿಶ್ವವಚನ ಫೌಂಡೇಶನ್  ಮೈಸೂರು ನಗರ ಘಟಕದ ಅಧ್ಯಕ್ಷ ಶ್ರೀಕಂಠಮೂರ್ತಿ, ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪ ಕುಮಾರಸ್ವಾಮಿ, ಶರಣು ವಿಶ್ವವಚನ ಫೌಂಡೇಶನ್ ಉಪಾಧ್ಯಕ್ಷೆ ಪೂರ್ಣಿಮ ನಾಗೇಂದ್ರ ಗೌರಾವಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಪಂಪಾಪತಿ, ಸುಜಾತ ದುರ್ಗೇಶ್, ಉಮಾದೇವಿ, ಚಿನ್ನಸ್ವಾಮಿ,  ಅನ್ನಪೂರ್ಣ, ಪರಿಮಳ, ಚೂಡಾಮಣಿ, ನಾಗೇಶ್, ನಂಜುಂಡಸ್ವಾಮಿ, ಮಹದೇವಪ್ಪ, ಉಪಸ್ಥಿತರಿದ್ದರು.
====================================================================




ಎಚ್.ಡಿ.ಕೋಟೆ : ಅಲ್ಲಮಪ್ರಭುಗಳ ವಚನಗಳು ಅನುಭಾವಿಕ ಪ್ರಪಂಚಕ್ಕೆ ದೊರೆತ ಅನಘ್ರ್ಯ ರತ್ನಗಳಂತಿವೆ ಎಂದು ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಹೆಗ್ಗಡದೇವನಕೋಟೆ ತಾಲ್ಲೂಕಿನ ಚಂದ್ರಮೌಳೇಶ್ವರಮಠದಲ್ಲಿ ಅಲ್ಲಮಪ್ರಭುದೇವರ ಜಯಂತಿ ಆಚರಣೆಯ ಸಂದರ್ಭದಲ್ಲಿ  ಉಪನ್ಯಾಸ ನೀಡಿ ಮಾತನಾಡಿದ ಅವರು ಗುಹೇಶ್ವರ ಎಂಬ ಅಂಕಿತ ಸ್ಥಾವರಲಿಂಗವನ್ನು ನಿರ್ದೇಶಿಸದೆ ಮಾನವನ ಹೃದಯದಲ್ಲಿ ಅಂತರ್ಯಾಮಿಯಾಗಿರುವ ಪರತತ್ವವನ್ನು ನಿರ್ದೇಶಿಸುತ್ತದೆ. ಎತ್ತನೇರಿ ಎತ್ತನರಸುವರು ಎತ್ತಹೋದರೈ ಗುಹೇಶ್ವರ ಎಂಬ ಅಲ್ಲಮರ ವಚನ ಕಸ್ತೂರಿ ಮೃಗವು ತಾನು ಆಘ್ರಾಣಿಸುವ ಸುಗಂಧವು ತನ್ನಿಂದಲೇ ಮೂಡಿಬರುತ್ತದೆ ಎಂಬ ರಹಸ್ಯವನ್ನರಿಯದೆ ಕಂಡ ಕಂಡ ಗಿಡಮರಗಳೆಲ್ಲವನ್ನೂ ಮೂಸುತ್ತಾ ಹೋಗುವಂತೆ ಮನುಜರ ಪಾಡಾಗಿದೆ. ಎಲ್ಲರೂ ದೇಹವೇ ದೇವಾಲಯ ಎಂಬುದನ್ನು ಅರಿಯಬೇಕು ಎಂದರು. ತದನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಲ್ಲಮಪ್ರಭು 12ನೇ ಶತಮಾನದ ಬಸವಯುಗದ ಮಹಾಪ್ರಭೆ,  ಅಲ್ಲಮರ ಪ್ರವೇಶದಿಂದ ಕಲ್ಯಾಣದಲ್ಲಿ ಬಸವಣ್ಣನವರ ದಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಗೆ ಹೊಸ ಕಳೆ ಪ್ರಾಪ್ತವಾಗುತ್ತದೆ. ಜ್ಞಾನ ಮತ್ತು ವೈರಾಗ್ಯಗಳ ಸಾಕಾರಮೂರ್ತಿಯಂತಿದ್ದ ಇವರನ್ನು ಬಸವಣ್ಣ ಅನುಭವಮಂಟಪದ ಅಧ್ಯಕ್ಷರನ್ನಾಗಿ ಆರಿಸಿದ ನಂತರ ಶರಣರ ಚಿಂತನೆ, ಸಾಧನೆ, ಅನುಭಾವ ಮತ್ತು ಅಭಿವ್ಯಕ್ತಿಗೆ ನಿರ್ದೇಶನ ನೀಡಿದರು. ಅನಿಮಿಷಯೋಗಿಯಿಂದ ಲಿಂಗವನ್ನು ಪಡೆದುಕೊಂಡು ಆ ಲಿಂಗದ ಅನುಸಂಧಾನದ ಮೂಲಕ ತಮ್ಮ ನಿಜಸ್ವರೂಪವನ್ನು ಅರಿತು ಮಹಾನುಭಾವಿಯಾಗಿ, ಶಿವಯೋಗಿಯಾಗಿ ರೂಪುಗೊಳ್ಳುತ್ತಾರೆ. ವಚನಕಾರರಾದ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ ಮುಂತಾದವರು ಅಲ್ಲಮರಿಂದ ಜ್ಞಾನದ ಮೇರುಪರ್ವತ ಏರಿದರು. ಎಂದರು. ನಂತರ ಆಶೀರ್ವಚನ ನೀಡಿದ ಮಾದಾಪುರ ಚಂದ್ರಮೌಳೇಶ್ವರ ಮಠದ ಮಲ್ಲಿಕಾರ್ಜುನಸ್ವಾಮೀಜಿ ಹೆಣ್ಣು, ಹೊನ್ನು ಮತ್ತು ಮಣ್ಣು ಮಾಯೆ ಎಂದು ಹೇಳುತ್ತಾರೆ ಆದರೆ ಇವು ಯಾವುದೇ ಮಾಯವಲ್ಲ ಮನದ ಮುಂದಣ ಆಸೆಯೇ ಮಾಯೆ ಎಂದು ಅಲ್ಲಮರು ಹೇಳುತ್ತಾರೆ ಆದುದರಿಂದ ನಾವು ಲೌಕಿಕ ಆಸೆಗೆ ಹೆಚ್ಚು ಜೋತುಬೀಳದೆ ಪಾರಮಾರ್ಥಿಕತೆಗೆ ಹೆಚ್ಚು ಒತ್ತು ನೀಡುವುದರ ಮುಖಾಂತರ ಧರ್ಮ ರಕ್ಷಣೆಗೆ ಒತ್ತು ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಕಸ್ತೂರಿ ಮಹೇಶ್, ಸರಗೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದಡದಹಳ್ಳಿ ಗುರುಸ್ವಾಮಿ, ನಾಗಣ್ಣ, ನಂಜುಂಡಸ್ವಾ
ಮಿ, ಸುಮಮಹೇಶ್, ನಾಗರತ್ನ, ದೊರೆಸ್ವಾಮಿ, ರಾಜಣ್ಣ, ಶಿವರುದ್ರಪ್ಪ, ಮಹೇಶ್, ಗಿರಿಜೇಶ್, ವಚನ, ರಶ್ಮಿತ ಉಪಸ್ಥಿತರಿದ್ದರು.
====================================================================


ಎಚ್.ಡಿ.ಕೋಟೆ: ಯಾವುದೇ ಸದ್ದುಗದ್ದಲವಿರದೆ ಸಾಧನೆ ಮಾಡಿ ಗದ್ದುಗೆ ಏರಿರುವ ಶಿವಕುಮಾರಮಹಾಸ್ವಾಮಿಗಳು ಲಕ್ಷಾಂತರ ಬಡವಿದ್ಯಾರ್ಥಿಗಳಿಗೆ ಆಶಾಕಿರಣವಾಗಿ ಈ ಶತಮಾನದ ಯುಗದ ಉತ್ಸಾಹವಾಗಿದ್ದಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಹೆಗ್ಗಡದೇವನಕೋಟೆ ತಾಲ್ಲೂಕು ಪುರ ಗ್ರಾಮಸ್ಥರು ಆಯೋಜಿಸಿದ್ದ ಶಿವಕುಮಾರಮಹಾಸ್ವಾಮಿಗಳ 111ನೇ ವರ್ಷದ ಜನುಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  ಶ್ರೀಗಳು ಇರುವಂತಹ ಕಾಲಘಟ್ಟದಲ್ಲಿ ನಾವು ಬದುಕಿರುವುದು ನಮ್ಮ ಪುಣ್ಯ. ಅವರ ದಣಿವರಿಯದ ದುಡಿಮೆಯಿಂದ ನಮ್ಮ ಕರ್ನಾಟಕದ ಕಡೆ ಇಡೀ ವಿಶ್ವವೇ ಬಂದು ನೋಡುವಂತಹ ಮಾದರಿ ವ್ಯಕ್ತಿತ್ವ ಅವರದಾಗಿದೆ ಸಮಾಜದ ಎಷ್ಟೋ ಗಣ್ಯರ ಬಾಲ್ಯಜೀವನಗಳ ಪರಿವರ್ತನೆಗೆ ಕಾರಣರಾಗಿದ್ದಾರೆ. ದಾಸೋಹಕ್ಕೆ ಮಹತ್ವ ನೀಡುತ್ತಿರುವ ಶ್ರೀಗಳು ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ ಆದುದರಿಂದ ಪ್ರಸಾದ ಮಾಡುವಾಗ ವ್ಯರ್ಥ ಮಾಡುವುದು ಯೋಗ್ಯವಲ್ಲ ಎಂದು ಹೇಳಿದ್ದಾರೆ ಅವರ ಆಶೀರ್ವಚನವನ್ನು ನಾವು ಪಾಲಿಸಿದಾಗ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು. ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಎಲ್ಲಾ ಬೀದಿಗಳಲ್ಲಿ ಪೂರ್ಣಕುಂಭ ಕಳಸದ ಮೂಲಕ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪಕುಮಾರಸ್ವಾಮಿ, ಬಸವಣ್ಣಶ್ರೀಗಳು, ಪಿ.ಆರ್.ಸಿದ್ಧರಾಮಪ್ಪ, ಗೌಡಿಕೆ ಸಿದ್ಧರಾಮಪ್ಪ, ರುದ್ರಸ್ವಾಮಿ, ತಮ್ಮಯ್ಯಪ್ಪ, ಸಿದ್ದಣ್ಣ, ಎನ್.ಮಹೇಶ್, ಪಿ.ಬಸವಣ್ಣ, ಪಿ.ಎಸ್.ಲೋಕೇಶ್, ಡಿ.ಮಹದೇವಸ್ವಾಮಿ, ಅಡುಗೆ ಸ್ವಾಮಿ, ಸತೀಷ್, ವೃಷಿ, ಕೆಂಚ, ಕೀರ್ತಿ, ಮಹದೇವಸ್ವಾಮಿ, ರಾಜೇಶ್, ಗಿರಿಜೇಶ್, ವಚನ ಮತ್ತು ಬಸವೇಶ್ವರ ಶರಣರ ಸಂಘದ ಸದಸ್ಯರುಗಳು, ಗದರಾಮಸ್ಥರು ಉಪಸ್ಥಿತರಿದ್ದರು.

=======================================================================


ಮೈಸೂರು: ಜನಮನದ ಮಾಲಿನ್ಯ ತೊಳೆಯುವ ಅದ್ಭುತ ಶಕ್ತಿ ಬಸವಣ್ಣನವರ ವಚನಗಳಲ್ಲಿವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ ಹೇಳಿದರು. ಮೈಸೂರಿನ ಸಿ.ಎಫ್.ಟಿ.ಆರ್.ಐ ಬಡಾವಣೆಯಲ್ಲಿನ ಹವಿಕ ಭವನದಲ್ಲಿ ಪತಂಜಲಿ ಯೋಗಶಿಕ್ಷಣ ಸಮಿತಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದ ಅವರು ಬಸವಣ್ಣನವರ ಜೀವನ ಬಹುಮುಖಿಯಾದುದು. ಅವರು ಒಂದೆಡೆ ಸಾಧಕರು, ಮತ್ತೊಂದಡೆ ಸಮಾಜ ನಿರ್ಮಾಪಕರು. ವರ್ಣ, ವರ್ಗ, ಲಿಂಗ ಭೇದವಿಲ್ಲದೇ ಶೋಷಣೆಯಿಂದ ಮುಕ್ತವಾದ ಸಮಾಜವನ್ನು ಕಟ್ಟವುದು ಅವರ ಗುರಿಯಾಗಿತ್ತು. ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದು ಅವರ ಬದುಕಿನ ದಾರಿಯಾಗಿತ್ತು. ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣ ಸಾಧಿಸಿದ ಬಸವಣ್ಣನವರು ತಮ್ಮ ಗುರಿಯನ್ನು ಸಾಧಿಸಲು ಬಳಸಿಕೊಂಡ ಮಾಧ್ಯಮವೇ ವಚನಗಳು. ಅಂತಹ ವಚನ ರಚಿಸಿದ ಎಲ್ಲಾ ವಚನಕಾರರು ನಮ್ಮ ಕನ್ನಡ ನಾಡು ಕಂಡ ಶ್ರೇಷ್ಠ ಅನುಭಾವಿಗಳು. ಅಂತಹ ಅನುಭಾವಿಗಳ ವಚನಗಳನ್ನು ಅಧ್ಯಯನ ಮಾಡುವುದರ ಮುಖಾಂತರ ನಮ್ಮ ಜೀವನವನ್ನು ಸುಸಂಸ್ಕøತವಾಗಿ ಮಾರ್ಪಡಿಸಿಕೊಳ್ಳೋಣ. ಬಸವಣ್ಣನವರ ವಚನಗಳಲ್ಲಿ ಏಸು, ಮಹಮ್ಮದ್ ಪೈಗಂಬರ್, ಗುರುನಾನಕ್, ತಿರುವಳ್ಳವರ್, ಮಹಾವೀರ, ಬುದ್ಧ, ಕಾರ್ಲ್‍ಮಾಕ್ರ್ಸ ಮುಂತಾದ ಸಮಾಜ ಸುಧಾರಕರ ತತ್ವಗಳು ಅಡಕವಾಗಿದ್ದು ವಿಶ್ವಕ್ಕೆ ಮಾದರಿಯಾದ ಸಾಹಿತ್ಯ ವಚನ ಸಾಹಿತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ಲಿಂಗಣ್ಣ, ಯೋಗಶಿಕ್ಷಕಿ ಸ್ವರ್ಣಲತಾ, ಮೀನಾಕ್ಷಿ, ಅಕ್ಕಮಹಾದೇವಿ, ಗೀತ, ಮಹಾಲಕ್ಷ್ಮಿ, ಕವಿತ, ಜಾನಕಿ, ಪ್ರಾನ್ ಮುತ್ತಣ್ಣ, ಭಾರತಿ. ಲತಾ, ಪುಷ್ಪಲತಾ, ಭಾಗ್ಯ, ನಿರ್ಮಲ, ಶಶಿಕಲಾ, ಶೇಷಾದ್ರಿ, ಬಕುಳಕ್ಕ, ಸಿಂದುಕನ್ಯ, ಸವಿತ ಉಪಸ್ಥಿತರಿದ್ದರು.
========================================================================


ಮೈಸೂರು: ಬಸವಣ್ಣನವರು ಎಲ್ಲಾ ಯುಗದ ಉತ್ಸಾಹ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕಿ ರೂಪ ಕುಮಾರಸ್ವಾಮಿ ಹೇಳಿದರು. ಮೈಸೂರು ಜಿಲ್ಲಾ ರಾಷ್ಟ್ರೀಯ ಬಸವದಳ ರೇಣುಕಾಮಂದಿರದಲ್ಲಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು  ಅನುಭವಮಂಟಪದ ಪ್ರಥಮ ಅದ್ಯಕ್ಷರಾದ ಅಲ್ಲಮಪ್ರಭುಗಳು ಬಸವಣ್ಣನನ್ನು  ಕುರಿತು 12ನೇ ಶತಮಾನದ ಯುಗದ ಉತ್ಸಾಹ ಎಂದು ಕರೆದಿದ್ದರು ಆದರೆ ಅವರು ಸಮಾನತೆಗೆ ನೀಡಿದ ಮಹತ್ವ, ಕಾಯಕಕ್ಕೆ ಕೊಟ್ಟ ಗೌರವ ನೋಡಿದರೆ ಅವರು ಎಲ್ಲಾ ಕಾಲದಲ್ಲಿಯೂ ಯುಗದ ಉತ್ಸಾಹವಾಗಿ ಹೊರಹೊಮ್ಮುವುದು ಮಾತ್ರವಲ್ಲದೇ ಕನ್ನಡದ ಸಾಂಸ್ಕøತಿಕ ನಾಯಕರಾಗಿ ಹೊರಹೊಮ್ಮುತ್ತಾರೆ. ಜನಮಾನಸದಲ್ಲಿದ್ದ ಅಂಧಶ್ರದ್ಧೆ. ಮೂಢನಂಬಿಕೆ, ಲಿಂಗಭೇದವನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವನೆಯನ್ನು ಅಂದಿನ ಶತಮಾನದಲ್ಲಿಯೇ ಮೂಡಿಸಲು ಪ್ರಯತ್ನ ಪಟ್ಟರು. ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿದ್ದೇ ಆದರೆ ವೈಯಕ್ತಿಕ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಸಾಮಾಜಿಕ ಸಾಮರಸ್ಯ ಹಾಗೂ ದೇಶದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಅವರ ವಚನಗಳನ್ನು ಹನ್ನೆರಡನೇ ಶತಮಾನದಿಂದ ಇಲ್ಲಿಯವರೆಗೆ ಸರಿಯಾಗಿ ಪ್ರಸಾರಮಾಡಿದ್ದೇ ಆಗಿದ್ದರೆ ಕೇವಲ ರಾಜ್ಯ, ದೇಶ ಮಾತ್ರವಲ್ಲಾ ಇಡೀ ವಿಶ್ವವೇ ವಚನಪ್ರಪಂಚವಾಗುತ್ತಿದ್ದುದರಲ್ಲಿ ಯಾವುದೇ ಸಂಶಯವಿರುತ್ತಿರಲಿಲ್ಲ ಎಂದರು. ಸಾವಿತ್ರಮ್ಮಗೋಪಾಲ ಅಧ್ಯಕ್ಷತೆ ವಹಿಸಿದ್ದರು. ರಾಣಿಲಿಂಗಣ್ಣ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ ಅಧ್ಯಕ್ಷ ಪ್ರೊ.ಗಂಗಾಧರಸ್ವಾಮಿ, ಕಾರ್ಯದರ್ಶಿ ಸರೋಜಮ್ಮನಾಗರಾಜ್, ರತ್ನಮ್ಮಜಯಣ್ಣ, ಶಕುಂತಲಾಚಂದ್ರಶೇಖರ್, ನಾಗರತ್ನ, ಸುಮಿತ್ರಮ್ಮ, ವಿಜಿಯಮ್ಮ, ನಾಗಲಾಂಬರವಿಕುಮಾರ್, ನಾಗಮ್ಮ, ಸುಧಾಕುಮಾರ್, ನೇತ್ರಾವತಿಜಯಣ್ಣ, ಶೋಭರಮೇಶ್, ಅಕ್ಕ ನೀಲಾಂಬಿಕ, ನಗರ್ಲೆ ಶಿವಕುಮಾರ್ ಉಪಸ್ಥಿತರಿದ್ದರು.
======================================================================

  • ಮೈಸೂರು: ವಿಶ್ವದ ಪ್ರಥಮ ಸಂಸತ್ತಿನ ಅಧ್ಯಕ್ಷರಾಗಿ ಯುಗದ ಪ್ರಭೆಯಾಗಿ ಬೆಳಗಿದವರು ಅಲ್ಲಮಪ್ರಭುಗಳು ಎಂದು ನಿವೃತ್ತ ಮುಖ್ಯೋಪಾದ್ಯಾಯಿನಿ ಆರ್.ಶಾರದಾ ಶಿವಲಿಂಗಸ್ವಾಮಿ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು  ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಅಲ್ಲಮಪ್ರಭು ಜಯಂತಿ ಪ್ರಯುಕ್ತ ಉಪನ್ಯಾಸ ನೀಡಿ ಮಾತನಾಡಿದ ಅವರು ಅಲ್ಲಮ ಶಿವಮೊಗ್ಗದಿಂದ ಬಸವಕಲ್ಯಾಣದೆಡೆಗೆ ಹೊರಟು ಸಾಧಕರನ್ನು ಪತ್ತೆಹಚ್ಚಿ ಅವರಿಗೆ ಆಧ್ಯಾತ್ಮ ಹಾಗೂ ಸಾತ್ವಿಕ ಚಿಂತನೆಯನ್ನು ನೀಡಿದರು. ಚಾಮರಸನ ಪ್ರಭುಲಿಂಗಲೀಲೆ, ಹರಿಹರನ ಪ್ರಭುದೇವರಗಳೆ, ಎಚ್. ತಿಪ್ಪೇರುದ್ರಸ್ವಾಮಿರವರ ಪರಿಪೂರ್ಣದೆಡೆಗೆ ಕೃತಿಗಳಲ್ಲಿ ಅಲ್ಲಮರ ಸಂಪೂರ್ಣ ವ್ಯಕ್ತಿತ್ವವನ್ನು ಕಾಣಬಹುದು. ಇವರ ವಚನಗಳಲ್ಲಿ ಆಧ್ಯಾತ್ಮಿಕ ಹಾಗೂ ತಾತ್ವಿಕ ವಿಚಾರಗಳಿದ್ದು ಅನುಭಾವದ ದೃಷ್ಟಿಯಲ್ಲಿ ಅಧ್ಯಯನ ಮಾಡುವವರು ವಚನಗಳ ಮಹತ್ವವನ್ನು ಅರಿಯಬಲ್ಲರು ಎಂದರು. ಹೊಳೆನರಸೀಪುರ ತಾಲ್ಲೂಕು ದೇವರಮುದ್ದನಹಳ್ಳಿ ಪ್ರಾಂಶುಪಾಲರಾದ ಎಚ್.ಬಿ. ಓಂಕಾರಯ್ಯ ಶರಣು ವಿಶ್ವವಚನ ಫೌಂಡೇಷನ್ ಹೊರತಂದಿರುವ ವಿಶ್ವವಚನ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿ ಕರ್ನಾಟಕದಲ್ಲಿ 4600ಕ್ಕೂ ಹೆಚ್ಚು ಮಠಗಳು ಇದ್ದು ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಠಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮರೆತು ನಿರ್ಲಿಪ್ತತೆಯಿಂದ ಕೂಡಿರುವುದು ವಿಷಾದದ ಸಂಗತಿ. ಜಂಗಮಮುಖಿಯಾಗಿರಬೇಕಿದ್ದ ಮಠಗಳು ಚಲನೆಯನ್ನು ಕಳೆದುಕೊಂಡು ತಟಸ್ಥವಾಗಿವೆ ಇದಕ್ಕೆ ವ್ಯತಿರಿಕ್ತವಾಗಿ ಶರಣು ವಿಶ್ವವಚನ ಫೌಂಡೇಷನ್ ನಿದೇಶಕರಾದ ರೂಪ ಕುಮಾರಸ್ವಾಮಿರವರು ತಮ್ಮ ಉಪನ್ಯಾಸಕ ಹುದ್ದೇಯನ್ನೇ ತೆರೆದು ವಿವಿಧ ಕಾರ್ಯಕ್ರಮಗಳ ಮುಖಾಂತರ ಶರಣರ ಚಿಂತನೆಗಳನ್ನು ಜನಸಾಮಾನ್ಯರಲ್ಲಿ ಬಿತ್ತಲು ಮುಂದಾಗಿರುವುದು ಸ್ತುತ್ಯಾರ್ಹವಾದ ಕೆಲಸ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ವೈ.ಡಿ.ರಾಜಣ್ಣ ಮಾತನಾಡಿ ಶರಣರ ವಚನಗಳು ಎಲ್ಲಾ ಕಾ¯ಕ್ಕೂ ಪ್ರಸ್ತುತವಾಗಿರುತ್ತವೆ. ಇವು ಕನ್ನಡ ಸಾಹಿತ್ಯದ ಅನಘ್ರ್ಯ ರತ್ನಗಳಾಗಿದ್ದು ಸುಸಂಸ್ಕøತ ಸಮಾಜದ ನಿರ್ಮಾಣದಲ್ಲಿ ಸಹಾಯಕವಾಗಿವೆ ಎಂದರು. ಆ್ಯಪ್ ನಿರ್ಮಾತೃ ಪಿ.ವಿ.ರುದ್ರೇಶ್ ಮಾತನಾಡಿ ಪರಿಸರ ಸಂರಕ್ಷಣೆ ಶರಣರ ಕಾಳಜಿಯಾಗಿದ್ದು ಅದಕ್ಕೆ ಪೂರಕವಾಗಿ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ವಿಷಯ ಒಳಗೊಂಡ ಆಯಪ್ ಅನ್ನು ಸಿದ್ದಪಡಿಸಿದ್ದು ಇದರಿಂದ ಮರಗಳ ರಕ್ಷಣೆಯಾದಂತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮುಡಿಗುಂಡ ಪುಟ್ಟಪ್ಪ, ವೀಣಾಮುದ್ದುಮಾದಪ್ಪ,  ಪ್ರೇಮಪ್ರಭುಸ್ವಾಮಿ, ಮಮತಬಾಲಚಂದ್ರ, ಗಿರಿಜಾಸಿದ್ದಪ್ಪಾಜಿ, ಬಿ.ಎನ್.ಮಾರುತಿಪ್ರಸನ್ನ, ಪಾರ್ವತಿಶಂಕರ್, ನೀಲಾಂಬಿಕಾನಾಗರಾಜಪ್ಪ, ಶ್ರೀಕಂಠೇಶ್, ನಟೇಶ್‍ಬೆಣಗನಹಳ್ಳಿ, ಕೆರೊಡಿ ಎಂ.ಲೋಲಾಕ್ಷಿ, ಶೋಭರಾಣಿ, ಡಾ.ವಿನೋದ, ವಿ.ಲಿಂಗಣ್ಣ, ನಾಗರತ್ನಶಿವಕುಮಾರಸ್ವಾಮಿ ಅಲ್ಲಮಪ್ರಭುದೇವರ ವಚನ ಗಾಯನ ಮತ್ತು ತಾತ್ಪರ್ಯ ಮಾಡಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಆ್ಯಪ್ ನಿರ್ಮಾತೃ ಪಿ.ವಿ.ರುದ್ರೇಶ್, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಉಪಾಧ್ಯಕ್ಷರಾದ ಮುಡಿಗುಂಡ ಪುಟ್ಟಪ್ಪ, ಪ್ರೇಮಪ್ರಭುಸ್ವಾಮಿ  ಉಪಸ್ಥಿತರಿದ್ದರು.
..........


ಮೈಸೂರು: ರೋಗಿಗಳ ಹಾರೈಕೆಯಲ್ಲಿ ಭಗವಂತನನ್ನು ಕಾಣುತ್ತಿದ್ದೇನೆ ಎಂದು ಸ್ನೇಹಬಂಧು ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಮೇರಿ ಲೋಬೋ ಹೇಳಿದರು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಜಗನ್ಮಾತೆ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ನೀಡಿದ ಕಾಯಕಯೋಗಿಗೆ ಶರಣು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಶರಣರು ಯಾವುದೇ ಜಾತಿ, ಲಿಂಗ ಭೇದ ಮಾಡದೇ ಮಾನವೀಯ ಮೌಲ್ಯಗಳಿಗೆ ಮಹತ್ವಕೊಟ್ಟರು. ಶರಣರ ಆಚಾರ ವಿಚಾರಗಳನ್ನು ಪ್ರಸಾರ ಮಾಡಲು ಸ್ಥಾಪಿತವಾಗಿರುವ ಸಂಸ್ಥೆಯಾದ ಶರಣು ವಿಶ್ವವಚನ ಫೌಂಡೇಷನ್ ಅನ್ಯ ಧರ್ಮದವಳಾದ ನನ್ನನ್ನು ಸೇವೆಯ ಆಧಾರದ ಮೇಲೆ ಗುರುತಿಸಿ ಪ್ರಶಸ್ತಿ ನೀಡಿರುವುದು ನನ್ನ ಜೀವನದಲ್ಲಿ ಮರೆಯಲಾರದ ಕ್ಷಣ. ನಾನು ಕ್ರೈಸ್ಥ ಧರ್ಮದವಳಾದರೂ ರೋಗಿಯು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ್ದರೂ ಅವರನ್ನು ನನ್ನ ಆಶ್ರಮಕ್ಕೆ ಸೇರಿಸಿಕೊಂಡು ಅವರ ಆರೈಕೆಯಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದೇನೆ. ಯಾವುದೇ ರೋಗಿಗಳು ಮನೆಯವರಿಂದ ಅಥವಾ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ ನನಗೆ ತಿಳಿಸಿದರೆ ಅಂತಹವರಿಗೆ ನಾನು ಆಶ್ರಯ ನೀಡುತ್ತೇನೆ ಎಂದರು. ಸ್ಪಂದನಾ ಮಹಿಳಾ ಬಳಗದ ಅಧ್ಯಕ್ಷೆ ಗೀತಾ ಈಶ್ವರ್ ಮಾತನಾಡಿ ಅಕ್ಕಮಹಾದೇವಿ ಅನುಭವಮಂಟಪದಲ್ಲಿ ವಿಚಾರ ಮಂಡಿಸಲು ಅವಕಾಶ ಮಾಡಿಕೊಡುವುದರ ಮುಖಾಂತರ ಶರಣರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಅಕ್ಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ನಿವಾರಿಸುವ ಪ್ರಯತ್ನ ಮಾಡಿ ದಿಟ್ಟಮಹಿಳೆ ಎನಿಸಿಕೊಂಡಳು. ಆಕೆ ಸಾಮಾಜಿಕ, ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ತಮ್ಮ ವಚನಗಳಲ್ಲಿ ಪ್ರಸ್ಥಾಪಿಸುವುದರ ಮುಖಾಂತರ ವ್ಯಕ್ತಿ ಪರಿಪೂರ್ಣತೆಗೆ ಅವಕಾಶ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಶ್ರವಣದೋಷವುಳ್ಳ ಮಕ್ಕಳ ಮುಖದಲ್ಲಿ ಕೂಡಾ ನಗುವನ್ನು ಕಾಣುವ ಉದ್ದೇಶದಿಂದ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ಅಗತ್ಯಗಳನ್ನು ಮನಗಂಡು ಅವರಿಗೆ ಬೇಕಾದ ಅಗತ್ಯವಸ್ತುಗಳನ್ನು ವಿತರಿಸುವುದರ ಮುಖಾಂತರ ಅವರನ್ನು ಮುಖ್ಯವಾಹಿನಿಗೆ ತರುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಬೆಂಗಳೂರು ಬಿ.ಎಂ.ಟಿ.ಸಿ ನಿರ್ವಾಹಕ ಮಹದೇವಪ್ರಸಾದ್, ನಾಗರತ್ನ, ಗುಂಡಪ್ಪ, ಸ್ನೇಹ ಬಂಧು ಚಾರಿಟಬಲ್ ಟ್ರಸ್ಟ್ ನಿರ್ದೇಶಕ ರವಿಕುಮಾರ್, ಖಜಾಂಚಿ ಗಿರಿಜಾಂಬ, ಈಶ್ವರ್, ವೀರಪ್ಪಾಜಿ, ಶೋಭ, ಮಂಜುಳ, ರೂಪ, ಮಣಿ, ಮಂಜುನಾಥ್, ದಿನೇಶ್, ಮುತ್ತಮ್ಮ, ಚಂದ್ರು, ಗೋಮತಿ, ಗಿರಿಜೇಶ್, ವಚನ, ಇಶಾಂತ್ ಉಪಸ್ಥಿತರಿದ್ದರು.
        ----------------------------------------------------------------------------------------------------------


ಚಿತ್ರಸುದ್ಧಿ:- ಶರಣು ವಿಶ್ವವಚನ ಫೌಂಡೇಷನ್  ಮಡಿವಾಳ ಮಾಚಿದೇವರ ಜಯಂತಿ ಪ್ರಯುಕ್ತ  25 ಮೇ 2019ರಂದು ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಚನ ವಾಚನ ಮತ್ತು ತಾತ್ಪರ್ಯ ಮಾಡಿದವರಿಗೆ ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ಆರ್ಟ್ ಗ್ಯಾಲರಿ ಸಂಸ್ಥಾಪಕ ಎಲ್. ಶಿವಲಿಂಗಪ್ಪ, ಶಕ್ತಿನಗರ ಬಸವಬಳಗ ಮಹಿಳಾ ವೇದಿಕೆ ಅಧ್ಯಕ್ಷೆ ಅನಿತಾ ನಾಗರಾಜ್, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ,  ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಭ.ಪಂಪಾಪತಿ, ಸಹಕಾರ್ಯದರ್ಶಿ ಪೂರ್ಣಿಮಾ ನಾಗೇಂದ್ರ, ಪ್ರಭುಸ್ವಾಮಿ, ಕೆ.ಗಣೇಶ್, ಗಿರಿಜಾ ಸಿದ್ದಪ್ಪಾಜಿ, ಡಾ.ಪ್ರಸನ್ನ ಕುಮಾರ್, ಕೆ.ಎಸ್.ರಾಜೇಶ್ವರಿ ಮಲ್ಲಿಕಾರ್ಜುನ್, ಮೀನಾದೇವ್, ಶ್ಯಾಮಲಾ ಭಟ್, ಶಾಂತಾಮಣಿ, ದೀಪು, ವಚನ, ಧಾರ್ಮಿಕ್ ಉಪಸ್ಥಿತರಿದ್ದರು.


ಮೈಸೂರು : ವಚನ ಸಾಹಿತ್ಯ ರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು ಬಹಳ ಪ್ರಮುಖವಾದ ಪಾತ್ರ ವಹಿಸಿದರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್  ಮಡಿವಾಳ ಮಾಚಿದೇವರ ಜಯಂತಿ ಪ್ರಯುಕ್ತ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಚನ ವಾಚನ ಮತ್ತು ತಾತ್ಪರ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಚಿದೇವರು ಶುದ್ಧ ಮತ್ತು ಸಿದ್ಧ ಬದುಕಿನ ಶರಣ, ಸಾಮಾಜಿಕ ಸುಧಾರಣಾ ಚಳುವಳಿಯ ದಂಡನಾಯಕನಾಗಿ ಸಾಮಾಜಿಕ ಹೊಣೆ ನಿರ್ವಹಿಸಿದ ಗಣಾಚಾರ ಸಂಪನ್ನ, ಶರಣರನ್ನು ಮತ್ತು ವಚನ ಸಾಹಿತ್ಯವನ್ನು ರಕ್ಷಿಸಿದ ವೀರಶರಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಮಾತ್ರವಲ್ಲದೇ ಅಪಾರ ಜ್ಞಾನಸಂಪನ್ನರಾಗಿದ್ದರು ಎಂದರು. ಇದೇ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಬಗ್ಗೆ ವಚನ ವಾಚನ ಮತ್ತು ತಾತ್ಪರ್ಯ ಮಾಡಿದವರಿಗೆ ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ಆರ್ಟ್ ಗ್ಯಾಲರಿ ಸಂಸ್ಥಾಪಕ ಎಲ್. ಶಿವಲಿಂಗಪ್ಪ, ಶಕ್ತಿನಗರ ಬಸವಬಳಗ ಮಹಿಳಾ ವೇದಿಕೆ ಅಧ್ಯಕ್ಷೆ ಅನಿತಾ ನಾಗರಾಜ್, ಸಂಸ್ಥಾಪಕ ನಿರ್ದೇಶಕಿ ರೂಪಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಭ.ಪಂಪಾಪತಿ, ಸಹಕಾರ್ಯದರ್ಶಿ ಪೂರ್ಣಿಮಾ ನಾಗೇಂದ್ರ, ಪ್ರಭುಸ್ವಾಮಿ, ಕೆ.ಗಣೇಶ್, ಗಿರಿಜಾ ಸಿದ್ದಪ್ಪಾಜಿ, ಡಾ.ಪ್ರಸನ್ನ ಕುಮಾರ್, ಕೆ.ಎಸ್.ರಾಜೇಶ್ವರಿ ಮಲ್ಲಿಕಾರ್ಜುನ್, ಮೀನಾದೇವ್, ಶ್ಯಾಮಲಾ ಭಟ್, ಶಾಂತಾಮಣಿ, ದೀಪು, ವಚನ, ಧಾರ್ಮಿಕ್ ಉಪಸ್ಥಿತರಿದ್ದರು.
                           ----------------------------------------------------------------------



No comments:

Post a Comment